ಗ್ರಾಮೀಣ ವಿಕಾಸದ ಉದ್ಧೇಶ ಇಟ್ಟುಕೊಂಡು ಸ್ಥಾಪಿತವಾದ ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಕೃಷಿ ವ್ಯವಸಾಯ ಅಭಿವೃದ್ಧಿಗೆ ಒತ್ತು ನೀಡಬೇಕು ಎಂದು ಕರ್ನಾಟಕ ರಾಜ್ಯದ ರಾಜ್ಯಪಾಲ ಹಾಗೂ ವಿಶ್ವವಿದ್ಯಾಲಯದ ಕುಲಾಧಿಪತಿ ಥಾವರ್ ಚಂದ್ ಗೆಹ್ಲೋಟ್ ಹೇಳಿದರು.
ಬೀದರನ ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ನಡೆದ 13ನೇ ಘಟಿಕೋತ್ಸವದ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
“ಭಾರತ ಕೃಷಿ ಪ್ರಧಾನ ದೇಶವಾಗಿದ್ದು, ಇದರ ಆರ್ಥಿಕ ಪ್ರಗತಿಗೆ ಒತ್ತು ನೀಡುವದು ಅತ್ಯವಶ್ಯಕವಾಗಿದ್ದು. ಆತ್ಮ ನಿರ್ಭರ ಭಾರತ, ಏಕ ಭಾರತ ಶ್ರೇಷ್ಠ ಭಾರತ ಮಾಡುವಲ್ಲಿ ಯುವಕರ ಪಾತ್ರ ಬಹಳ ಮುಖ್ಯವಾಗಿದೆ. ಗ್ರಾಮೀಣ ವಿಕಾಸದ ಗುರಿ ಇಟ್ಟುಕೊಂಡು ಸ್ಥಾಪಿತವಾದ ಬೀದರ ಪಶು ವಿಶ್ವವಿದ್ಯಾಲಯವು ಆ ಉದ್ದೇಶವನ್ನು ಪೂರ್ತಿ ಮಾಡಲು ಶ್ರಮಿಸುತ್ತಿದೆ. ಇದು ಪಶು, ಮೀನುಗಾರಿಕೆ, ಹೈನುಗಾರಿಕೆ ಅಭಿವೃದ್ಧಿಗೆ ಒತ್ತು ನೀಡುತ್ತಿದ್ದು ಇದರಿಂದ ರೈತರ ಆರ್ಥಿಕ ಅಭಿವೃದ್ಧಿಗೆ ಸಹಕಾರಿಯಾಗಲಿದೆ” ಎಂದರು.
“ಪದವಿಗಳನ್ನು ಸ್ವೀಕರಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಪಶುಗಳಿಗೆ ರೋಗ ಮುಕ್ತ ಮಾಡಲು ಶ್ರಮವಹಿಸಿ, ಇಂದಿನ ಯುಗದಲ್ಲಿ ವೈಜ್ಞಾನಿಕ ರೀತಿಯಲ್ಲಿ ಹಲವಾರು ಸಂಶೋಧನೆಗಳನ್ನು ಮಾಡುವ ಮೂಲಕ ಕೃಷಿಕ ಸಮುದಾಯದಲ್ಲಿ ಪರಿವರ್ತನೆ ತರಬೇಕಾಗಿದೆ. ತಾವು ನೌಕರಿ ಹುಡುಕುವ ಬದಲು ಇತರರಿಗೆ ನೌಕರಿ ಕೊಡುವವರಾಗಬೇಕು. ದೇಶವು ಇಂದು ಪ್ರತಿ ಕ್ಷೇತ್ರದಲ್ಲಿ ಆರ್ಥಿಕ ಪ್ರಗತಿಯಾಗುತ್ತಿದೆ” ಸಲಹೆ ನೀಡಿದರು.
“ನಮ್ಮಲ್ಲಿ ಮತ್ತೊಂದು ದೊಡ್ಡ ಸವಾಲಿದೆ ಅದು ಪರಿಸರದಲ್ಲಿ ಹೆಚ್ಚಾಗುತ್ತಿರುವ ಉಷ್ಣತೆ. ಜಲ, ವನ, ವಾಯು ಭೂಮಿಯ ರಕ್ಷಣೆ ಮಾಡಲು ಜನರಲ್ಲಿ ಜಾಗೃತಿ ಮೂಡಿಸುವುದು ಅತಿ ಅವಶ್ಯಕವಾಗಿದೆ. ಬೀದರ ಪಶು ವಿಶ್ವವಿದ್ಯಾನಿಲಯ ದೇಶಿ ಪಶು ತಳಿಗಳ ಸಂರಕ್ಷಣೆ, ಪಾಲನೆ, ವೃದ್ಧಿ ಮಾಡುವ ಒಳ್ಳೆಯ ಕೆಲಸಗಳನ್ನು ಮಾಡುತ್ತಿರುವುದು ಪ್ರಶಂಸನೀಯವಾಗಿದೆ. ಇಂದು ಪದವಿ ಪಡೆದ ಎಲ್ಲಾ ವಿದ್ಯಾರ್ಥಿಗಳಿಗೆ ಸಂತೋಷದ ದಿನವಾಗಿದ್ದು ಮುಂದಿನ ದಿನಗಳಲ್ಲಿ ತಮ್ಮ ಸೇವೆ ಸಾಮಾಜಿಕ ಕ್ಷೇತ್ರದ ಅಭಿವೃದ್ಧಿಗೆ ಸದುಪಯೋಗವಾಗಲಿ” ಎಂದು ಹಾರೈಸಿದರು.
ನಮ್ಮದು ಶೇ.65 ರಷ್ಟು ಯುವಕರನ್ನು ಹೊಂದಿದ ದೇಶ :
ನವ ದೆಹಲಿ ಭಾರತೀಯ ಕೃಷಿ ಅನುಸಂಧಾನ (ಕೃಷಿ ಶಿಕ್ಷಣ) ಪರಿಷತ್ತು ಉಪ ಮಹಾ ನಿರ್ದೇಶಕ ಡಾ. ಆರ್.ಸಿ. ಅಗ್ರವಾಲ್ ಮಾತನಾಡಿ, “ನವರಾತ್ರಿಯ ಈ ಶುಭ ಸಂದರ್ಭದಲ್ಲಿ ಪದವಿಗಳನ್ನು ಪಡೆಯುತ್ತಿರುವ ಪಶು ವಿವಿಯ ವಿದ್ಯಾರ್ಥಿಗಳು ಅದೃಷ್ಠಶಾಲಿಗಳಾಗಿದ್ದು. ತಮ್ಮ ಸೇವೆ ಮುಂಬರುವ ದಿನಗಳಲ್ಲಿ ಸಮಾಜಕ್ಕೆ ಅತ್ಯವಶ್ಯಕವಾಗಿದೆ. ಕೊವೀಡ್ ಸಂದರ್ಭದಲ್ಲಿಯೂ ನ್ಯೂಟ್ರೀಶನ್ ಆಹಾರದ ಅವಶ್ಯಕತೆ ಇತ್ತು. ಇಂತಹ ಕ್ಷೇತ್ರದಲ್ಲಿ ತಾವು ಪದವಿ ಪಡೆಯುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ದೇಶದಲ್ಲಿ ಕೃಷಿ, ತೋಟಗಾರಿಕೆ, ಪಶು ವಿವಿಗಳು ಸೇರಿದಂತೆ ಒಟ್ಟು 76 ವಿಶ್ವವಿದ್ಯಾಲಯಗಳು ಭಾರತದಲ್ಲಿದ್ದು. ಶೇ.65 ಪ್ರತಿಶತ ಯುವಕರನ್ನು ಹೊಂದಿದ ದೇಶ ನಮ್ಮದಾಗಿದೆ” ಎಂದರು.
“ಪ್ರತಿ ಹತ್ತು ವರ್ಷಗಳಿಗೆ ಒಂದು ಬಿಲಿಯನ್ ವಿಶ್ವದ ಜನಸಂಖ್ಯೆ ಹೆಚ್ಚಾಗುತ್ತಿದ್ದು ಅವರಿಗೆ ನ್ಯೂಟ್ರೀಶನ್ ಆಹಾರವು ಕೊಡುವ ಅವಶ್ಯಕತೆ ಇದೆ. ಇಂದು ಪದವಿಗಳನ್ನು ಪಡೆದಿರುವದರಿಂದ ಇಲ್ಲಿಗೆ ತಮ್ಮ ಕಲಿಕೆ ಮುಗಿದಂತೆ ಅಲ್ಲ, ಅದು ಈಗ ಆರಂಭ. ಬೀದರ ಪಶು ವಿಶ್ವವಿದ್ಯಾಲಯ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಮಕ್ಕಳಿಗೆ ನೀಡುವ ಮೂಲಕ ವಿಶ್ವವಿದ್ಯಾನಿಲಯದ ರ್ಯಾಕಿಂಗ್ ಮಟ್ಟವನ್ನು ಹೆಚ್ಚಿಸುವದರ ಜೊತೆಗೆ ಇಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಪ್ರವೇಶಗಳನ್ನು ಪಡೆದು ಕಲಿಯುವಂತಾಗಬೇಕು ಮತ್ತು ಖಾಸಗಿ ಹಾಗೂ ಸಾರ್ವಜನಿಕ ಸಹಭಾಗಿತ್ವದಲ್ಲಿ ಹಲವಾರು ಯೋಜನೆಗಳನ್ನು ರೂಪಿಸಿ ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡಬೇಕೆಂದು” ಹೇಳಿದರು.
ಪಶು ಸಂಗೋಪನೆ ಹಾಗೂ ರೇಷ್ಮೆ ಇಲಾಖೆ ಸಚಿವರು ಹಾಗೂ ಬೀದರ ವಿಶ್ವವಿದ್ಯಾಲಯದ ಸಹಕುಲಾಧಿಪತಿ ಕೆ.ವೆಂಕಟೇಶ್ ಮಾತನಾಡಿ, “2006 ರಲ್ಲಿ ಸ್ಥಾಪನೆಯಾದ ಈ ವಿಶ್ವವಿದ್ಯಾನಿಲಯವು ಇಂದು 13ನೇ ಘಟಿಕೋತ್ಸವ ಆಚರಿಸುತ್ತಿರುವುದು ಸಂತೋಷದ ಸಂಗತಿಯಾಗಿದ್ದು, ಈ ವಿಶ್ವವಿದ್ಯಾಲಯವು ಹಸು, ಮೀನು, ಕೋಳಿ, ಹೈನುಗಾರಿಕೆ ಸೇರಿದಂತೆ ಗ್ರಾಮೀಣ ಕ್ಷೇತ್ರದ ಆರ್ಥಿಕತೆಗೆ ಒತ್ತು ನೀಡುತ್ತಿದೆ. ನಮ್ಮ ರಾಜ್ಯದಲ್ಲಿ 25 ಲಕ್ಷಕ್ಕೂ ಹೆಚ್ಚು ಕುಟುಂಬಗಳು ಮೀನುಗಾರಿಕೆಯ ಮೇಲೆ ಅವಲಂಬಿತವಾಗಿವೆ. ಇಂದು ಪದವಿ ಪಡೆದ ಅಭ್ಯರ್ಥಿಗಳು ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಒತ್ತು ನೀಡುವ ಮೂಲಕ ರೈತರ ಆರ್ಥಿಕ ಪ್ರಗತಿಗೆ ಸಹಕಾರಿಯಾಗಬೇಕೆಂದು” ಹೇಳಿದರು.
837 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ:
ಬೀದರ್ ಹೊರವಲಯದ ನಂದಿನಗರದಲ್ಲಿರುವ ವಿಶ್ವವಿದ್ಯಾಲಯದಲ್ಲಿ ಸೋಮವಾರ ಜರುಗಿದ 13ನೇ ಘಟಿಕೋತ್ಸವದಲ್ಲಿ 445 ಅಭ್ಯರ್ಥಿಗಳಿಗೆ ಸ್ನಾತಕ ಪದವಿ, 333 ಅಭ್ಯರ್ಥಿಗಳಿಗೆ ಸ್ನಾತಕೋತ್ತರ ಪದವಿ ಹಾಗೂ 59 ಜನರಿಗೆ ಡಾಕ್ಟರೇಟ್ ಪದವಿಗಳನ್ನು ನೀಡಲಾಯಿತು. ಈ ಪೈಕಿ 70 ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಚಿನ್ನದ ಪದಕಗಳನ್ನು ನೀಡಿ ಗೌರವಿಸಲಾಯಿತು. ಅದರಲ್ಲಿ 61 ಪಶು ವಿಶ್ವವಿದ್ಯಾಲಯದ ಚಿನ್ನದ ಪದಕಗಳು ಮತ್ತು 67 ಪ್ರಾಯೋಜಿತ ಚಿನ್ನದ ಪದಕಗಳನ್ನು ರಾಜ್ಯಪಾಲರು ಪ್ರದಾನ ಮಾಡಿದರು.
16 ಚಿನ್ನದ ಪದಕ ಮುಡಿಗೇರಿಕೊಂಡ ರಾಘವೇಶ ಎ.ಎನ್ :
ಗದಗ ಪಶುವೈದ್ಯಕೀಯ ಮಹಾವಿದ್ಯಾಲಯದಲ್ಲಿ ಬಿ.ವಿ.ಎಸ್ಸಿ. ಮತ್ತು ಎ.ಎಚ್. ಮುಗಿಸಿದ ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ಅವಸರದಳ್ಳಿಯ ರಾಘವೇಶ, ಎ.ಎನ್ ಇವರು 16 ಚಿನ್ನದ ಪದಕಗಳನ್ನು ಪಡೆಯುವ ಮೂಲಕ ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ 13ನೇ ಘಟಿಕೋತ್ಸವದಲ್ಲಿ ಅತಿ ಹೆಚ್ಚು ಪದಕಗಳನ್ನು ಪಡೆದು ಎಲ್ಲರ ಗಮನ ಸೆಳೆದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಪ್ರಜಾಪ್ರಭುತ್ವದ ವ್ಯಾಖ್ಯಾನ ಬದಲಿಸಿದ ಕಾಂಚಾಣ
ಸಮಾರಂಭದಲ್ಲಿ ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಬೀದರನ ಕುಲಪತಿ ಪ್ರೊ. ಕೆ.ಸಿ ವೀರಣ್ಣ ಅವರು ಸ್ವಾಗತ ಭಾಷಣ ಮತ್ತು ಸಂಕ್ಷಿಪ್ತ ವರದಿ ವಾಚಿಸಿದರು. ಕುಲಸಚಿವ ಶಿವಶಂಕರ್ ಎಸ್, ಸಂಶೋಧನಾ ನಿರ್ದೇಶಕ ಡಾ. ಬಿ.ವಿ ಶಿವಪ್ರಕಾಶ, ವಿಸ್ತರ್ಣಾ ನಿರ್ದೇಶಕ ಡಾ.ಎನ್.ಎ ಪಾಟೀಲ್, ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ.ಎಂ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್., ಆಡಳಿತ ಮಂಡಳಿಯ ಸದಸ್ಯರು, ಅಕಾಡೆಮಿಕ್ ಕೌನ್ಸಿಲ್ ಸದಸ್ಯರು, ವಿಶ್ವವಿದ್ಯಾಲಯದ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.