ಇಂದಿನ ಎಲ್ಲಾ ಕ್ಷೇತ್ರದ ಮಹಿಳೆಯರ ಸಾಧನೆಗೆ 12ನೇ ಶತಮಾನದ ಶರಣರ ಕ್ರಾಂತಿ ಪ್ರೇರಣೆಯಾಗಿದೆ. ಅನ್ನ, ಅಕ್ಷರ, ಅರಿವೆ ನೀಡುವಲ್ಲಿ ಯಾರಿಗೂ ತಾರತಮ್ಯ ಮಾಡಬಾರದು ಎಂದು ಬೆಂಗಳೂರು ಅದಮ್ಯ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷೆ ಡಾ. ತೇಜಸ್ವಿನಿ ಅನಂತಕುಮಾರ ನುಡಿದರು.
ಬಸವಕಲ್ಯಾಣ ನಗರದ ಹರಳಯ್ಯ ಗವಿಯಲ್ಲಿ ಅಂತರಾಷ್ಟ್ರೀಯ ಲಿಂಗಾಯತ ಧರ್ಮ ಕೇಂದ್ರ ಹಾಗೂ ಅಖಿಲ ಭಾರತ ಲಿಂಗವಂತ ಹರಳಯ್ಯ ಪೀಠ ಸಹಯೋಗದಲ್ಲಿ ನಡೆಯುತ್ತಿರುವ ಶರಣ ವಿಜಯೋತ್ಸವ ನಾಡಹಬ್ಬ ಹುತಾತ್ಮ ದಿನಾಚರಣೆಯ ಮಹಾಶಕ್ತಿಕೂಟಗಳ ಸಮಾವೇಶ ಉದ್ಘಾಟಿಸಿ ಮಾತನಾಡಿ, “ವಿಶ್ವಕ್ಕೆ ಪ್ರಜಾಪ್ರಭುತ್ವದ ಕಲ್ಪನೆ ನೀಡಿದ ಪುಣ್ಯಭೂಮಿ ಬಸವಕಲ್ಯಾಣ, ಸಂಸತ್ತಿನ ಮುಂದೆ ಬಸವಣ್ಣನವರ ಪ್ರತಿಮೆ ಸ್ಥಾಪಿಸಲು ಪತಿ ಅನಂತಕುಮಾರ ಅವರು ಸಾರಥ್ಯ ವಹಿಸಿದರು” ಎಂದು ಸ್ಮರಿಸಿದರು.
“ನಮ್ಮ ಅದಮ್ಯ ಸಂಸ್ಥೆ ಕೈಗೊಳ್ಳುತ್ತಿರುವ ಅನ್ನ ದಾಸೋಹಕ್ಕೆ ಶರಣರ ದಾಸೋಹ ತತ್ವದ ಪರಿಕಲ್ಪನೆ ಕಾರಣವಾಗಿದೆ. ಅಡುಗೆ ಮನೆಯಲ್ಲಿ ಬರುವ ತ್ಯಾಜ್ಯವನ್ನು ಹಾಗೂ ಪ್ಲಾಸ್ಟಿಕ್ಗಳನ್ನು ಪುನರ್ ಬಳಕೆ ಮಾಡಬೇಕು. ಅಡುಗೆ ಮನೆಯಲ್ಲಿ ಸಣ್ಣ ಸಣ್ಣ ಬದಲಾವಣೆಗಳನ್ನು ಮಾಡುವುದರ ಮೂಲಕ ಸಮಾಜ ಹಾಗೂ ದೇಶದಲ್ಲಿ ಮಹತ್ತರ ಕ್ರಾಂತಿಕಾರಕ ಬದಲಾವಣೆ ಮಾಡಬಹುದು” ಎಂದು ಸಲಹೆ ನೀಡಿದರು.
ಸಮಾರಂಭದ ನೇತೃತ್ವ ವಹಿಸಿಕೊಂಡಿದ್ದ ಡಾ. ಗಂಗಾಂಬಿಕಾ ಅಕ್ಕ ಮಾತನಾಡಿ, “ಹೆಣ್ಣು ಹೆಣ್ಣಲ್ಲ, ಹೆಣ್ಣು ಸಾಕ್ಷಾತ್ ಕಪಿಲಸಿದ್ಧಮಲ್ಲಿಕಾರ್ಜುನ ಎಂದು ಹೇಳಿದವರು ಶರಣರು. ಪರಮಾತ್ಮನಿಗೆ ಮಹಾಲಿಂಗ ಎಂದು ಕರೆಯುತ್ತಾರೆ. ಮಹಾಲಿಂಗ ಎಂದರೆ ಮಹಾಶಕ್ತಿ ಎಂದರ್ಥ. ಮಹಿಳೆಯರಲ್ಲಿ ಮಹಾಶಕ್ತಿ ಇದೆ. ಸ್ತ್ರೀ ಮುಂದಾಳತ್ವದ ಪ್ರಗತಿಗೆ ಅನುಭವ ಮಂಟಪದ 33 ಶರಣೆಯರ ಪ್ರೇರಣೆಯೇ ಕಾರಣ, ಜಗತ್ತಿನಲ್ಲಿಯೇ
ಮಾನವನ ಉನ್ನತಿಕ್ಕಾಗಿ ಮೊದಲ ನಡೆದ ಕ್ರಾಂತಿ ಕಲ್ಯಾಣ ಕ್ರಾಂತಿಯಾಗಿದೆ. ಅರಿವಿನಲ್ಲಿ ಹೆಣ್ಣು-ಗಂಡು ಬೇಧವಿಲ್ಲ. ಶರಣ ಸಂಸ್ಸೃತಿಯನ್ನು ಮನೆಯಲ್ಲಿ ಮನದಲ್ಲಿ ಬೆಳೆಸಿಕೊಂಡು ಮೌಢ್ಯತೆಯಿಂದ ಹೊರಬಂದು ವೈಜ್ಞಾನಿಕವಾಗಿ ಬದುಕಬೇಕು ನಮ್ಮ ಮನೆಗಳೆಲ್ಲಾ ಮಹಾಮನೆಗಳಾಬೇಕು. ಮಹಾಶಕ್ತಿಕೂಟಗಳ ಸದಸ್ಯರು ಸಾಮಾಜಿಕ, ರಾಜಕೀಯ, ಧಾರ್ಮಿಕ ಮತ್ತು ಸ್ವಯಂ ಆರ್ಥಿಕವಾಗಿ ಸ್ವಾವಲಂಬಿಯಾಗಬೇಕು” ಎಂದು
ಕರೆ ನೀಡಿದರು.
ದಿವ್ಯಸಾನಿಧ್ಯ ವಹಿಸಿಕೊಂಡಿದ್ದ ಕೂಡಲಸಂಗಮ ಬಸವಧರ್ಮ ಪೀಠದ ಪೀಠಾಧ್ಯಕ್ಷ ಪೂಜ್ಯ ಡಾ. ಗಂಗಾಮಾತಾಜಿ ಆಶಿರ್ವವಚನ ನೀಡಿ, “12ನೇ ಶತಮಾನದ ಕಲ್ಯಾಣ ಕೈಲಾಸವನ್ನು ನಾಚಿಸುವಂತಿತ್ತು. ಕಲ್ಯಾಣ ಕ್ರಾಂತಿಯ ನಂತರ ಶರಣರು ಎಲ್ಲಾ ಕಡೆ ಚದುರಿದರು, ಮತ್ತೇ 21 ನೇ ಶತಮಾನದಲ್ಲಿ 12ನೇ ಶತಮಾನದ ಕಲ್ಯಾಣದ ಗತವೈಭವ ಕಾಣಬಹುದು ಎಂದು ಕಾಲಜ್ಞಾನ ವಚನದಲ್ಲಿ ಕಾಣುತ್ತೇವೆ. ಅದರಂತೆ ಇಂದು ನಡೆಯತ್ತಿರುವ ಶರಣ ಕಾರ್ಯಕ್ರಮಗಳು ನೋಡಿದರೆ ಅತಿ ಸಂತೋಷವಾಗಿದೆ. ಹರಳಯ್ಯ, ಮಧುರಸ, ಶೀಲವಂತ ಈ ಮೂವರು ಲಿಂಗಾಯತ ಧರ್ಮದ ಅನರ್ಘ್ಯ ರತ್ನಗಳು. ಶರಣರು ನೀಡಿದ ಸಂದೇಶ ಜೀವನದಲ್ಲಿ ಅಳವಡಿಸಿಕೊಳ್ಳಲು ಇಂತಹ ಕಾರ್ಯಕ್ರಮಗಳು ಸಹಕಾರಿ” ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಕಲಬುರಗಿ ಮಹಾನಗರ ಪಾಲಿಕೆ ರಿಯಲ್ ಎಸ್ಟೆಟ್ ಅಧಿಕಾರಿ ಸಾವಿತ್ರಿ ಸಲಗರ ಹಾಗೂ ಅಧ್ಯಕ್ಷತೆ ವಹಿಸಿಕೊಂಡಿದ್ದ ಬಿಡಿಪಿಸಿ ನಿರ್ದೇಶಕಿ ವಿಜಯಲಕ್ಷ್ಮೀ ಗಡ್ಡೆ ಮಾತನಾಡಿದರು.
ಕಾರ್ಯಕ್ರಮದಲ್ಲಿ ಡಾ. ಇಂದುಮತಿ ಪಾಟೀಲ, ನೀಲಮ್ಮ ರೂಗನ, ಅಶ್ವಿನಿ ಮೂಲಗೆ, ಲತಾ ಹಾರಕೂಡೆ, ಮಹಾದೇವಿ ಶೆಟಕಾರ, ಪ್ರಭಾವತಿ ಅವಸೆ, ಜ್ಞಾನದೇವಿ ಬಬಛೇಡೆ, ಜಯಶ್ರೀ ಪಾಟೀಲ, ಸವಿತಾ ಆಲಗೂಡ, ಕವಿತಾ ಮೂಲಗೆ, ಸೋನಾಲಿ ಜಾಧವ, ಶ್ರೀದೇವಿ ಮಡಿವಾಳ ಇತರರಿದ್ದರು.
ಈ ಸುದ್ದಿ ಓದಿದ್ದೀರಾ? ಬೀದರ್ | 82ರ ಇಳಿ ವಯಸ್ಸಿನಲ್ಲೂ ಆರದ ಉತ್ಸಾಹ; ಸ್ವತಃ ಖರ್ಚಿನಲ್ಲೇ ಊರಿನ ರಸ್ತೆ ದುರಸ್ತಿ
ಕಾವೇರಿ ಮತ್ತು ತಂಡದವರು ವಚನ ನೃತ್ಯ ನಡೆಸಿಕೊಟ್ಟರು, ಸೋನಾಲಿ ನಿಲಕಂಠೆ, ಕವಿತಾ ಸಜ್ಜನ, ಸುಮಿತ್ರಾ ಡಾವಣಗಾಂವೆ ಅವರಿಂದ ವಚನ ಉಗ್ಘಡನೆಗಳು ಆಕರ್ಷಣೆಯಾಗಿ ಮೂಡಿಬಂದವು. ಅಕ್ಕಮಹಾದೇವಿ ತಂಡ ಮಂಠಾಳ ಅವರು ವಚನ ಭಜನೆ ನಡೆಸಿಕೊಟ್ಟರು. ಶ್ರೀದೇವಿ ಕಾಕನಾಳೆ ಸ್ವಾಗತಿಸಿದರೆ ರೇಖಾ ಗುದಗೆ ನಿರೂಪಿಸಿದರು.