- ‘ಎಂ ಬಿ ಪಾಟೀಲ ಮುಖ್ಯಮಂತ್ರಿ ಆಗಬೇಕು ಅಂದರೆ ಆಗಲ್ಲ’
- ‘ಶರಣಪ್ರಕಾಶ್ ಪಾಟೀಲ್ ಒಬ್ಬ ಬದ್ಧತೆ, ಪರಿಶುದ್ಧತೆ ವ್ಯಕ್ತಿ’
ಎಂ ಬಿ ಪಾಟೀಲ ಮುಖ್ಯಮಂತ್ರಿ ಆಗಬೇಕು ಅಂದರೆ ಆಗಲ್ಲ, ಜನರು ಬಯಸಬೇಕು, ಪಕ್ಷ ಅಧಿಕಾರಕ್ಕೆ ಬರಬೇಕು, ಈಗ ಪಕ್ಷ ಅಧಿಕಾರಕ್ಕೆ ಬಂದಿದೆ. ನಮ್ಮ ಪಾರ್ಟಿಯಲ್ಲಿ ಯಾವುದೇ ನಿರ್ಧಾರ ಮಾಡಿದರೂ ಹೈಕಮಾಂಡ್ ಅಂತಿಮ ತೀರ್ಮಾನ ಮಾಡುತ್ತಾರೆ ಎಂದು ಸಚಿವ ಎಂ ಬಿ ಪಾಟೀಲ ಹೇಳಿದರು.
ರಾಯಚೂರು ಜಿಲ್ಲೆಯ ಲಿಂಗಸುಗೂರು ಪಟ್ಟಣದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, “ನಮ್ಮಲ್ಲಿ ಪಕ್ಷದ ವರಿಷ್ಠರು ಮುಖ್ಯಮಂತ್ರಿ ಯಾರು ಆಗಬೇಕು ಎಂದು ನಿರ್ಧಾರ ಮಾಡುತ್ತಾರೋ ಅವರು ಆಗುತ್ತಾರೆ” ಎಂದು ಹೇಳಿದರು.
ಕಾಂಗ್ರೆಸ್ನಲ್ಲಿ ಏನು ಮಾಡಬೇಕು, ಏನು ಮಾಡಬಾರದು ಎನ್ನುವುದು ಎಂ ಬಿ ಪಾಟೀಲ್ ಆಗಲಿ ಅಥವಾ ಅಶೋಕ ಪಟ್ಟಣ ಆಗಲಿ ನಿರ್ಧಾರ ಮಾಡುವುದಿಲ್ಲ. ಎಐಸಿಸಿ ಅಧ್ಯಕ್ಷ ಖರ್ಗೆಯವರು, ಸೋನಿಯಾಗಾಂಧಿ, ರಾಹುಲ್ ಗಾಂಧಿ ಎಲ್ಲರೂ ಸೇರಿ ನಿರ್ಧಾರ ಮಾಡುತ್ತಾರೆ. ಯಾವ ಕಾಲದಲ್ಲಿ ಏನು ಆಗಬೇಕು ಎಂಬುದು ಅವರ ವಿವೇಚನೆಗೆ ಬಿಟ್ಟಿದ್ದು” ಎಂದರು.
ನಾನು ಮುಖ್ಯಮಂತ್ರಿ ಆಗುತ್ತೇನೆ ಅಂದರೆ ಮುಖ್ಯಮಂತ್ರಿ ಆಗಿ ಬಿಡುತ್ತೇನಾ? ಹಂಗೆ ಅಂದುಕೊಂಡರೆ ಬಹಳ ಜನರು ಮುಖ್ಯಮಂತ್ರಿ ಆಗಿ ಹೋಗುತ್ತಿದ್ದರು. ಯಾರು ಮುಖ್ಯಮಂತ್ರಿ ಆಗಬೇಕು, ಯಾರನ್ನು ಸಚಿವರನ್ನಾಗಿ ಮಾಡಬೇಕು ಎನ್ನುವುದು ಹೈಕಮಾಂಡ್ ನಾಯಕರು ನಿರ್ಧರಿಸುತ್ತಾರೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಪ್ರಸವ ಅಥವಾ ಗರ್ಭಪಾತ; ಮಹಿಳೆಯ ಆಯ್ಕೆಯೇ ಅಂತಿಮ
ಈಶ್ವರಪ್ಪ ಕಾಂಗ್ರೆಸ್ ಸೇರಿದರೆ ಅಚ್ಚರಿ ಇಲ್ಲ
ಲೋಕಸಭಾ ಚುನಾವಣೆ ಮುಂಚೆ ಸರ್ಕಾರ ಬಿದ್ದು ಹೋಗುತ್ತದೆ ಎನ್ನುವ ಈಶ್ವರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿ, “ಬಿಜೆಪಿ ನಾಯಕರೇ ನಮ್ಮ ಪಕ್ಷಕ್ಕೆ ಬರುತ್ತಿದ್ದಾರೆ, ಲೋಕಸಭಾ ಚುನಾವಣೆವರೆಗೂ ಈಶ್ವರಪ್ಪ ನೋಡಲಿ, ಈಶ್ವರಪ್ಪ ಸಹ ಕಾಂಗ್ರೆಸ್ ಸೇರಿದರೆ ಅಚ್ಚರಿಪಡಬೇಕಿಲ್ಲ” ಎಂದರು.
“ಕೆ ಎಸ್ ಈಶ್ವರಪ್ಪ ಅವರು ಬಹಳ ದೊಡ್ಡ ಮೇಧಾವಿಗಳು. ಡಿಕೆ ಶಿವಕುಮಾರ್ ಬಗ್ಗೆ ಹೇಳಿರುವ ಮಾತಿಗೆ ನಾನು ಉತ್ತರ ಕೊಡಲ್ಲ. ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಒಬ್ಬ ಬದ್ಧತೆ, ಪರಿಶುದ್ಧತೆ ಹೊಂದಿರುವ ರಾಜಕಾರಣಿಯಾಗಿದ್ದಾರೆ. ಅವರ ಮೇಲೆ ಆರೋಪದ ಪ್ರಕರಣದ ಕುರಿತು ತನಿಖೆಗೆ ಸಿಐಡಿಗೆ ನೀಡುವ ಅವಶ್ಯ ಇರಲಿಲ್ಲ. ಆದರೂ, ನಮ್ಮ ಸರ್ಕಾರ ಸಿಐಡಿ ತನಿಖೆಗೆ ನೀಡಿದೆ” ಎಂದು ಹೇಳಿದರು.