ಹಿಂದುತ್ವಕ್ಕೂ ಭ್ರಷ್ಟಾಚಾರಕ್ಕೂ, ಹಿಂದುತ್ವಕ್ಕೂ ಬಂಡವಾಳಶಾಹಿ ವ್ಯವಸ್ಥೆಗೂ ಇರುವ ಮೈತ್ರಿ ಹೊಸ ವಿಚಾರವೇನೂ ಅಲ್ಲ. ಮಂಗಳೂರು ವಿಶೇಷ ಆರ್ಥಿಕ ವಲಯ (ಎಸ್ಇಜೆ಼ಡ್) ಸಂಬಂಧ ನಡೆದ ಹೋರಾಟದ ಕಾಲದಿಂದಲೂ ಹಿಂದುತ್ವ ನಾಯಕರ ಮುಖವಾಡ ಮತ್ತೆ ಮತ್ತೆ ಕಳಚಿ ಬಿದ್ದದ್ದು ಉಂಟು.
ಕಾರ್ಕಳದ ಬೈಲೂರಿನಲ್ಲಿ ನಿರ್ಮಿಸಲಾಗಿದ್ದ ಪರಶುರಾಮನ ‘ಥೀಮ್ ಪಾರ್ಕ್’ ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ರಾಜ್ಯ ಚುನಾವಣೆ ಹೊಸ್ತಿಲಲ್ಲಿ ಅಂದಿನ ಬಿಜೆಪಿ ಸರ್ಕಾರ ಜನವರಿ 27ರಂದು ಥೀಮ್ ಪಾರ್ಕ್ ಉದ್ಘಾಟಿಸಿತ್ತು. ಅಲ್ಲಿ ನಿರ್ಮಿಸಲಾಗಿರುವ ಪರಶುರಾಮನ ಕಂಚಿನ ಪ್ರತಿಮೆಯ ಉದ್ದ 33 ಅಡಿ, ತೂಕ 15 ಟನ್ ಎಂದು ಪ್ರಚಾರ ಮಾಡಲಾಗಿತ್ತು. 15 ಕೋಟಿ ರೂ. ವೆಚ್ಚದಲ್ಲಿ ಥೀಮ್ ಪಾರ್ಕ್ ನಿರ್ಮಾಣವಾಗಲಿದೆ ಎಂದಿದ್ದ ಬಿಜೆಪಿ ಈಗ ಪೇಚಿಗೆ ಸಿಲುಕಿದೆ. ಕಂಚಿನದ್ದು ಎಂದು ಪ್ರಚಾರ ನೀಡಲಾದ ಪ್ರತಿಮೆ ‘ಫೈಬರ್’ನಿಂದ ನಿರ್ಮಿಸಲ್ಪಟ್ಟಿದೆ ಎಂಬುದು ಬೆಳಕಿಗೆ ಬಂದಿದೆ. ಅಲ್ಲದೆ ಪರಶುರಾಮನ ಪ್ರತಿಮೆಯನ್ನು ರಾತ್ರೋರಾತ್ರಿ ಮಾಯಮಾಡಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಕರಾವಳಿ ಕರ್ನಾಟಕ ಕೋಮು ಪ್ರಯೋಗಶಾಲೆಯಾಗಿ ರೂಪುಗೊಂಡು ದಶಕಗಳೇ ಕಳೆದವು. ಇದನ್ನೇ ಬಂಡವಾಳ ಮಾಡಿಕೊಂಡು, ಜನರನ್ನು ಕೋಮು ದ್ವೇಷಕ್ಕೆ ದೂಡಿ ಬೆಚ್ಚಗಿದ್ದವರು ಇಂದು ಅಡಗಿ ಕೂರುವಂತಾಗಿರುವುದು ವಿಪರ್ಯಾಸ. ಧರ್ಮದ ಹೆಸರಲ್ಲಿ ನಡೆಯುತ್ತಿರುವ ಹಗರಣಗಳು ಜನಕ್ಕೆ ನಿಧಾನಕ್ಕೆ ಅರ್ಥವಾದಂತೆ ಕಾಣುತ್ತಿದೆ. ಈ ಥೀಮ್ ಪಾರ್ಕ್ ನಿರ್ಮಾಣದ ಮುಂಚೂಣಿಯಲ್ಲಿದ್ದ ಅಂದಿನ ಸಚಿವ, ಕಾರ್ಕಳದ ಹಾಲಿ ಶಾಸಕ ವಿ.ಸುನೀಲ್ ಕುಮಾರ್ ವಿರುದ್ಧ ಜನಾಕ್ರೋಶ ವ್ಯಕ್ತವಾಗುತ್ತಿದೆ. ಹಿಂದುತ್ವ, ಧಾರ್ಮಿಕ ಭಾವನೆ ಎಂಬುದು ಹಣ ದೋಚಲು ಅವಕಾಶ ನೀಡುತ್ತಿದೆಯೇ ಎಂಬ ಪ್ರಶ್ನೆ ಮುನ್ನಲೆಗೆ ಬಂದಿದೆ.
ಕುಂದಾಪುರ ಮೂಲದ ಚೈತ್ರಾ ಎಂಬವರು ಹಿಂದುತ್ವ ಚಟುವಟಿಕೆಗಳಲ್ಲಿ ಸಕ್ರಿಯವಾಗಿದ್ದರು. ಉದ್ಯಮಿ ಗೋವಿಂದ ಬಾಬು ಪೂಜಾರಿಯವರಿಗೆ ಬೈಂದೂರು ವಿಧಾನಸಭಾ ಕ್ಷೇತ್ರದಿಂದ ಬಿಜೆಪಿಯ ಟಿಕೆಟ್ ಕೊಡಿಸುವುದಾಗಿ ನಂಬಿಸಿ ಕೋಟ್ಯಂತರ ರೂಪಾಯಿ ವಂಚಿಸಿದ ಪ್ರಕರಣ ಇತ್ತೀಚೆಗೆ ಬೆಳಕಿಗೆ ಬಂದಿತ್ತು. ವಿಜಯನಗರ ಜಿಲ್ಲೆ ಹಿರೇಹಡಗಲಿಯ ಹಾಲ ಸಂಸ್ಥಾನ ಮಠದ ಅಭಿನವ ಹಾಲಸ್ವಾಮೀಜಿ ಈ ಪ್ರಕರಣದ ಭಾಗವಾಗಿದ್ದರು. ಸಂಸಾರಿ ಮಠವೆಂದೇ ಖ್ಯಾತವಾಗಿದ್ದ ಹಾಲಮಠವು ಲಿಂಗಾಯತ ಪರಂಪರೆಗೆ ದ್ಯೋತಕವಾಗಿತ್ತು. ಆದರೆ ಅಭಿನವ ಸ್ವಾಮೀಜಿಯವರು ಮಠದ ಹಿನ್ನೆಲೆಯನ್ನು ಬದಿಗೊತ್ತಿ ಹಿಂದುತ್ವ ಚಟುವಟಿಕೆಯಲ್ಲಿ ಗುರುತಿಸಿಕೊಂಡಿರುವ ಚಕ್ರವರ್ತಿ ಸೂಲಿಬೆಲೆಯವರಂತಹ ಸಖ್ಯ ಬೆಳೆಸಿಕೊಂಡು ವಿವಾದಗಳನ್ನು ಸೃಷ್ಟಿಸುತ್ತಿದ್ದರು. ಈಗ ಚೈತ್ರಾ ಅವರೊಂದಿಗೆ ಶಾಮೀಲಾಗಿ ವಂಚಿಸಿ ಸಿಕ್ಕಿಬಿದ್ದಿದ್ದಾರೆ.
ಹಿಂದುತ್ವಕ್ಕೂ ಭ್ರಷ್ಟಾಚಾರಕ್ಕೂ, ಹಿಂದುತ್ವಕ್ಕೂ ಬಂಡವಾಳಶಾಹಿ ವ್ಯವಸ್ಥೆಗೂ ಇರುವ ಮೈತ್ರಿ ಹೊಸ ವಿಚಾರವೇನೂ ಅಲ್ಲ. ಮಂಗಳೂರು ವಿಶೇಷ ಆರ್ಥಿಕ ವಲಯ (ಎಸ್ಇಜೆ಼ಡ್) ಸಂಬಂಧ ನಡೆದ ಹೋರಾಟದ ಕಾಲದಿಂದಲೂ ಹಿಂದುತ್ವ ನಾಯಕರ ಮುಖವಾಡ ಮತ್ತೆ ಮತ್ತೆ ಕಳಚಿ ಬಿದ್ದದ್ದು ಉಂಟು. ಎಸ್ಇಜೆ಼ಡ್ಗಾಗಿ 2035 ಎಕರೆ ಭೂಮಿಯನ್ನು ಸ್ವಾಧೀನಪಡಿಸಲು ಸರ್ಕಾರ ನಿರ್ಧರಿಸಿತ್ತು. ವಿದ್ಯಾ ದಿನಕರ್ ನೇತೃತ್ವದಲ್ಲಿ ಹೋರಾಟ ಆರಂಭವಾಗಿತ್ತು. ಪೇಜಾವರ ಮೂಲ ಮಠದ ಎಕರೆಗಟ್ಟಲೆ ಭೂಮಿಯಲ್ಲಿದ್ದ ಕೃಷಿಕರೂ ಬೀದಿಗೆ ಬರಬೇಕಾದ್ದರಿಂದ ಮಠದ ವಿಶ್ವೇಶತೀರ್ಥ ಸ್ವಾಮೀಜಿಯವರಿಗೂ ಈ ಹೋರಾಟದೊಂದಿಗೆ ಭಾವನಾತ್ಮಕ ಸಂಬಂಧ ಇತ್ತು. ಕುಡುಬಿ ಸಮುದಾಯದ ಕೃಷಿಕರ ಭೂಮಿಯನ್ನು ಬಲವಂತವಾಗಿ ಸ್ವಾಧೀನ ಪಡಿಸಿಕೊಳ್ಳುತ್ತಿದ್ದಾಗ ಹೋರಾಟದ ಸ್ಥಳಕ್ಕೆ ಬಂದಿದ್ದ ಪೇಜಾವರ ಶ್ರೀಗಳ ಮೇಲೆಯೇ ಕಂಪನಿ ಗೂಂಡಾಗಳು ಅರ್ಥಾತ್ ಹಿಂದುತ್ವ ಸಂಘಟನೆಯಲ್ಲಿ ಮತೀಯ ಗೂಂಡಾಗಿರಿ ಮಾಡಿಕೊಂಡಿದ್ದವರು ಹಲ್ಲೆ ನಡೆಸಲು ಯತ್ನಿಸಿದ್ದನ್ನು ಮತ್ತು ಅಂದು ಜಮಾಅತೆ ಇಸ್ಲಾಮಿ ಹಿಂದ್ ಎಂಬ ಮುಸ್ಲಿಂ ಸಂಘಟನೆಯ ಯುವಕರು ಸ್ವಾಮೀಜಿಯವರನ್ನು ರಕ್ಷಿಸಿದ್ದನ್ನು ’ನೇತ್ರಾವತಿಯ ನೆತ್ತರು’ ಕೃತಿಯಲ್ಲಿ ಪತ್ರಕರ್ತ ನವೀನ್ ಸೂರಿಂಜೆ ದಾಖಲಿಸುತ್ತಾರೆ. ರೈತರನ್ನು ಎತ್ತಂಗಡಿ ಮಾಡುವ ಈ ಕ್ರೌರ್ಯದಲ್ಲಿ ಕಾರ್ಪೊರೇಟ್ ಪರ ನಿಂತು ಕೆಲಸ ಮಾಡಿದವರು ಹಿಂದುತ್ವ ಸಂಘಟನೆಯ ಮುಂಚೂಣಿಯಲ್ಲಿದ್ದವರು!
2012ರ ಮೇ 25ರಂದು ಎಸ್ಇಜೆ಼ಡ್ನ ಅಧಿಕಾರಿಗಳು ಬಜಪೆಯ ನೆಲ್ಲದಡಿ ಗುತ್ತುಮನೆಯನ್ನು ದೈವಸ್ಥಾನ ಸಮೇತ ನೆಲಸಮ ಮಾಡಲು ಆಗಮಿಸಿರುತ್ತಾರೆ. ದೊಡ್ಡ ದೊಡ್ಡ ಜೆಸಿಬಿಗಳು ಇರುತ್ತವೆ. ಅವರೊಂದಿಗೆ ಒಂದು ಹಿಂದುತ್ವ ಪಡೆಯೂ ಇರುತ್ತದೆ. ಅಲ್ಲಿನ ಧರ್ಮಾಧಿಕಾರಿ (ಗುತ್ತಿನಾರ್) ಲಕ್ಷ್ಮಣ್ ಚೌಟ ದೈವಸ್ಥಾನ ರಕ್ಷಣೆಗೆ ಮುಂದಾಗುತ್ತಾರೆ. ಆಗ ಮಧ್ಯಪ್ರವೇಶಿಸಿ ಲಕ್ಷ್ಮಣ್ ಚೌಟ ಅವರ ಕುಟುಂಬದ ಮೇಲೆ ಹಲ್ಲೆ ನಡೆಸಿದ್ದೇ ಹಿಂದೂ ಜಾಗರಣಾ ವೇದಿಕೆಯ ಸುಭಾಷ್ ಪಡೀಲ್ ಎಂಬುದನ್ನು ಮರೆಯಲಾಗದು. ಹಿಂದುತ್ವ ಎಂಬುದು ಕಾರ್ಪೋರೇಟ್ ಶಕ್ತಿಗಳ ಕೈಗೊಂಬೆ ಎಂಬುದಕ್ಕೆ ಇದೊಂದು ಚಿಕ್ಕ ಉದಾಹರಣೆ. ಹೀಗಾಗಿ ಧರ್ಮ ರಕ್ಷಣೆಯ ಸೋಗು ಹಾಕುವ ರಾಜಕೀಯ ಶಕ್ತಿಗಳ ಉದ್ದೇಶವೇ ಹಣದಾಹ ಎಂಬುದು ಸಾಕಷ್ಟು ಸಲ ಸ್ಪಷ್ಟವಾಗಿದೆ. ಇದನ್ನು ನಿಧಾನಕ್ಕೆ ಜನರು ಅರ್ಥಮಾಡಿಕೊಳ್ಳುತ್ತಿದ್ದಂತೆ ಕಾಣುತ್ತಿದೆ.
ಪರಶುರಾಮ ಥೀಮ್ ಪಾರ್ಕ್ ವಿಚಾರವಾಗಿ ದಕ್ಷಿಣ ಕನ್ನಡ, ಉಡುಪಿಯ ಜನತೆ ಸುನೀಲ್ ಕುಮಾರ್ ಅವರನ್ನು ಖಾರವಾಗಿ ಪ್ರಶ್ನಿಸುತ್ತಿದ್ದಾರೆ. ಆದರೆ ರಾಜ್ಯ ಮಟ್ಟದಲ್ಲಿ ಕಾಂಗ್ರೆಸ್ ನಾಯಕರು ನಿಷ್ಕ್ರಿಯರಾದಂತೆ ತೋರುತ್ತಿದೆ. ಜನರ ಧಾರ್ಮಿಕ ಭಾವನೆಗಳೊಂದಿಗೆ ಆಟವಾಡಿ ಅಧಿಕಾರ ಹಿಡಿಯುವವರ ನಿಜಬಣ್ಣವನ್ನು ಬಯಲು ಮಾಡುವುದಕ್ಕೆ ಕಾಂಗ್ರೆಸ್ ಆಸಕ್ತಿ ತೋರದಿರುವುದು ಸೋಜಿಗವೇ ಸರಿ. ಜನಾಂದೋಲನವೇ ರೂಪುಗೊಂಡು ಈ ಕುರಿತು ಗಂಭೀರ ತನಿಖೆ ನಡೆಯಬೇಕಿದೆ.
Good article
ಧರ್ಮವನ್ನು ಮುಂದಿಟ್ಟುಕೊಂಡು , ಧರ್ಮದ ಹೆಸರಿನಲ್ಲಿ , ಧರ್ಮದ ಉಳಿವಿಗಾಗಿ ಹೋರಾಡುವ ಧರ್ಮ ರಕ್ಷಕರು (?) ಧರ್ಮದ ಹೆಸರಿನಲ್ಲಿ ಹಣ ಸಂಗ್ರಹಿಸುವುದು , ಹಣ ಲಪಟಾಯಿಸುವುದನ್ನು ದೇಶದೆಲ್ಲೆಡೆ ಇಂದು ನಾವು ಕಾಣುತ್ತಿದ್ದೇವೆ. ಧರ್ಮೋದ್ಧಾರಕರು ಆಗರ್ಭ ಶ್ರೀಮಂತರಾಗುವುದನ್ನೂ ನಾವು ಕಾಣುತ್ತಿದ್ದೇವೆ.
ದೇವಸ್ಥಾನಗಳಲ್ಲಿ ದೇವರಿಗೆ ಭಕ್ತರು ಅರ್ಪಿಸಿದ ಚಿನ್ನ , ಬೆಳ್ಳಿ , ಹಣ ದೇವರಿಗೆ ಸೇರದೆ , ವ್ಯವಸ್ಥಿತವಾಗಿ ಮುಖ್ಯಸ್ಥರು ಮತ್ತು ಇತರರ ಪಾಲಿಗೆ ಹೋಗುತ್ತಿರುವುದು ಇಂದು ಸರ್ವೇಸಾಮಾನ್ಯವಾದ , ಎಲ್ಲರಿಗೂ ತಿಳಿದ ವಿಷಯವೆ ಆಗಿದೆ. ಗಣೇಶೋತ್ಸವ , ಧರ್ಮ ಸಂರಕ್ಷಣೆ , ಸಮಾಜೋತ್ಸವದ ಹೆಸರಲ್ಲೂ ಜನರಿಂದ ಒತ್ತಾಯ ಪೂರ್ವಕ ಹಣ ಸಂಗ್ರಹಿಸುವುದು ರೂಢಿಯಾಗಿ ಬಿಟ್ಟಿದೆ.
ಧರ್ಮದ ಹೆಸರಲ್ಲಿ ಅಧರ್ಮ ನಡೆಯುತ್ತಿದೆ. ಆಗಬಾರದ್ದು ಆಗುತ್ತಿದೆ. ಆಗಬೇಕಾದ್ದು ಆಗುತ್ತಿಲ್ಲ. ಧರ್ಮವನ್ನು ರಕ್ಷಿಸಬೇಕು ನಿಜ ; ಆದರೆ , ಧರ್ಮದ ಹೆಸರಿನಲ್ಲಾಗುತ್ತಿರುವ ಅಧರ್ಮವನ್ನು ಕಂಡೂ ಕಾಣದಂತೆ ಮಾಡದೆ, ನಾವು ತಡೆದು ನಿಲ್ಲಿಸಬೇಕಾಗಿದೆ.