ದೇಶದ ಯುವಕರನ್ನು ದಾರಿತಪ್ಪಿಸಲು ಕೇಂದ್ರ ಸರ್ಕಾರ ಮಾದಕ ವಸ್ತುಗಳನ್ನು ಸಾಧನವಾಗಿ ಬಳಸುತ್ತಿದೆ ಎಂದು ಕಾಂಗ್ರೆಸ್ ನಾಯಕ ಕನ್ನಯ್ಯ ಕುಮಾರ್ ಆರೋಪಿಸಿದ್ದಾರೆ.
ಇಂದು (ಅಕ್ಟೋಬರ್ 29) ಮುಂಬೈ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ದೇಶದ ಹಲವಾರು ಬಂದರುಗಳಲ್ಲಿ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗುತ್ತಿದೆ. ಆದರೆ ದೊಡ್ಡ ಪ್ರಮಾಣದ ಸರಕುಗಳು ಪತ್ತೆಯಾಗದಿರುವುದು ಯುವಕರು ಮತ್ತು ದೇಶಕ್ಕೆ ಗಂಭೀರ ಪ್ರಶ್ನೆಯಾಗಿದೆ’ ಎಂದರು.
“ಯುವಕರನ್ನು ದಾರಿತಪ್ಪಿಸಲು ಹಲವಾರು ಸಾಧನಗಳಿವೆ. ಅವುಗಳಲ್ಲಿ ಮಾದಕ ವಸ್ತು ಪ್ರಮುಖವಾದದು. ಯುವಕರು ಮಾದಕ ವ್ಯಸನದಲ್ಲಿ ಸಿಕ್ಕಿಬಿದ್ದಿದ್ದಾರೆ. ಅವರ ಸಮುದಾಯಕ್ಕೆ ಏನು ಮಾಡಲಾಗುತ್ತಿದೆ ಎಂದು ತಿಳಿಯದಂತೆ ಭ್ರಮೆಯ ಸ್ಥಿತಿಗೆ ತಳ್ಳಲಾಗುತ್ತಿದೆ. ಮಾದಕ ವ್ಯಸನದಿಂದ ಅವರ ಭವಿಷ್ಯ ಮತ್ತು ಇಡೀ ದೇಶಕ್ಕೆ ಏನು ಮಾಡಲಾಗುತ್ತಿದೆ ಎಂಬುದನ್ನು ತಿಳಿಯಲು ಸಾಧ್ಯವಾಗುತ್ತಿಲ್ಲ” ಎಂದು ಕನ್ನಯ್ಯ ಕುಮಾರ್ ಹೇಳಿದರು.
ಪಕ್ಷದ ವಿದ್ಯಾರ್ಥಿ ಘಟಕವಾದ ಎನ್ಎಸ್ಯುಐ ಉಸ್ತುವಾರಿಯಾಗಿ ನೇಮಕಗೊಂಡ ನಂತರ ಮಹಾನಗರಕ್ಕೆ ನೀಡಿದ ತಮ್ಮ ಮೊದಲ ಭೇಟಿಯಲ್ಲಿ ಕನ್ನಯ್ಯ ಕುಮಾರ್ ಅವರು ಪ್ರಧಾನಿ ನರೇಂದ್ರ ಮೋದಿಯವರ ‘ಸಬ್ಕಾ ಸಾಥ್, ಸಬ್ಕಾ ವಿಕಾಸ್’ ಘೋಷಣೆಯನ್ನು ಟೀಕಿಸಿದರು ಮತ್ತು ಸಾವಿರಾರು ಜನರನ್ನು ಏಕೆ ನಿರ್ಲಕ್ಷಿಸಲಾಗುತ್ತಿದೆ ಮತ್ತು ಅವರ ಹಕ್ಕುಗಳಿಂದ ದೂರ ಇಡಲಾಗಿದೆ ಎಂದು ಪ್ರಶ್ನಿಸಿದರು.
ಈ ಸುದ್ದಿ ಓದಿದ್ದೀರಾ? ಹಿಂದೂ ಧಾರ್ಮಿಕ ಸ್ಥಳಗಳಲ್ಲಿ ಕಾಣಿಸಿಕೊಳ್ಳುವ ಗಡ್ಡಧಾರಿ-ಟೋಪಿಧಾರಿ ವ್ಯಕ್ತಿಗಳಿಗೆ ಥಳಿಸಿ ಎಂದ ಬಿಜೆಪಿ ಶಾಸಕ
“ನಿರುದ್ಯೋಗ ಸಮಸ್ಯೆಯು ನಿರ್ಣಾಯಕವಾಗಿರುವ ಸಮಯದಲ್ಲಿ ಪ್ರಧಾನ ಮಂತ್ರಿ ವಿದ್ಯಾರ್ಥಿಗಳಿಗಾಗಿ ವಿಶೇಷ ಅಪ್ಲಿಕೇಶನ್ ಅನ್ನು ಪ್ರಾರಂಭಿಸುತ್ತಿದ್ದಾರೆ. ಇಂತಹ ಘೋಷಣೆಗಳನ್ನು ಮಾಡುವ ಬದಲು, ಅವರು ಪ್ರತಿ ವರ್ಷ ಎರಡು ಕೋಟಿ ಉದ್ಯೋಗಗಳ ತಮ್ಮ ಹಳೆಯ ಭರವಸೆಯನ್ನು ಈಡೇರಿಸಬೇಕಾಗಿದೆ. ಅವರ 9 ವರ್ಷಗಳ ಅಧಿಕಾರಾವಧಿಯಲ್ಲಿ, 18 ಕೋಟಿ ಉದ್ಯೋಗಗಳು ಎಲ್ಲಿ ಹೋದವು? ಭಾರತದ ಒಟ್ಟು ಬಜೆಟ್ನಲ್ಲಿ ಶೇ.10 ರಷ್ಟನ್ನೂ ಶಿಕ್ಷಣಕ್ಕಾಗಿ ಖರ್ಚು ಮಾಡಲಾಗಿಲ್ಲ. ಶಿಕ್ಷಣವನ್ನು ಖಾಸಗೀಕರಣಗೊಳಿಸಲು ಸರ್ಕಾರ ಬಯಸುತ್ತಿದೆ ಎಂಬುದು ಸ್ಪಷ್ಟವಾಗಿದೆ” ಎಂದು ಹೇಳಿದರು.
“ಸಾಮಾನ್ಯ ಜನರು ತಮ್ಮ ಇಡೀ ಜೀವನವನ್ನು ಮಕ್ಕಳ ಶಾಲಾ ಶುಲ್ಕ, ಸಮವಸ್ತ್ರ, ಪಠ್ಯಪುಸ್ತಕ ಮತ್ತು ಇತರ ವೆಚ್ಚಗಳನ್ನು ಸರಿದೂಗಿಸುವುದರಲ್ಲಿಯೇ ಕಾಲ ಕಳೆಯಬೇಕಾಗಿದೆ. ಇನ್ನೊಂದೆಡೆ ನಿರುದ್ಯೋಗದಿಂದ ವಿದ್ಯಾರ್ಥಿಗಳು ತೀವ್ರ ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ಇಂದು ದೇಶದಲ್ಲಿ ಪ್ರತಿ ಗಂಟೆಗೆ ಒಬ್ಬ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಪ್ರಧಾನಿಯವರು ನೀಡಿದ ಭರವಸೆಗಳಲ್ಲಿ ಶೇಕಡಾ 5 ರಷ್ಟು ಈಡೇರಿದ್ದರೂ ದೇಶದ ಜನರು ಉತ್ತಮ ಸ್ಥಿತಿಯಲ್ಲಿದ್ದಾರೆ ಎಂದು ಸುಳ್ಳು ಹೇಳುತ್ತಿದ್ದಾರೆ. ಇಡೀ ದೇಶದಲ್ಲಿ ಎಲ್ಲಿಯೂ ದುರ್ಬೀನು ಹಾಕಿ ಹುಡುಕಿದರೂ ಒಳ್ಳೆಯ ದಿನಗಳ ನೋಡಲಾಗದ ಪರಿಸ್ಥಿತಿ ಇದೆ” ಎಂದು ಕೇಂದ್ರದ ವಿರುದ್ಧ ಕನ್ನಯ್ಯ ಅವರು ಕಿಡಿ ಕಾರಿದರು.
“ ಪ್ರಧಾನಿಯವರು ಸದ್ಯ ಮನ್ ಕಿ ಬಾತ್ಗಿಂತ ‘ಜನ್ ಕಿ ಬಾತ್’ (ಜನರ ಬೇಡಿಕೆಗಳು ಮತ್ತು ಆಸೆಗಳು) ಮಾಡಬೇಕಿದೆ” ಎಂದು ಕನ್ನಯ್ಯಾ ಕುಮಾರ್ ಹೇಳಿದರು.