“ಬೆಂಗಳೂರಿನ ಜಯನಗರ ವಾಣಿಜ್ಯ ಸಂಕೀರ್ಣ ಹಾಗೂ ಸಂಕೀರ್ಣಕ್ಕೆ ಹೊಂದಿಕೊಂಡಂತಿರುವ ಸುತ್ತ-ಮುತ್ತಲಿನ ಪ್ರದೇಶದಲ್ಲಿ ವ್ಯಾಪಾರ ನಡೆಸುತ್ತಿರುವ ಮಳಿಗೆದಾರರು ಅನಧಿಕೃತವಾಗಿ ಪಾದಚಾರಿ ಮಾರ್ಗವನ್ನು ಒತ್ತುವರಿಪಡಿಸಿಕೊಂಡಿದ್ದಾರೆ. ಇದರಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿದೆ. ಹಾಗಾಗಿ, ಕೂಡಲೇ ಒತ್ತುವರಿಯನ್ನು ತೆರವುಗೊಳಿಸಿ” ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಯನಗರ ವಾಣಿಜ್ಯ ಸಂಕೀರ್ಣ ಮತ್ತು ಸುತ್ತಮುತ್ತಲಿನ ಪ್ರದೇಶವನ್ನು ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಬುಧವಾರ ಪರಿಶೀಲನೆ ನಡೆಸಿದರು.
ಈ ವೇಳೆ, “ಜಯನಗರ ವಾಣಿಜ್ಯ ಸಂಕೀರ್ಣದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೀದಿ ಬದಿಯ ವ್ಯಾಪಾರಿಗಳು ರಸ್ತೆ ಹಾಗೂ ಪಾದಚಾರಿ ಮಾರ್ಗವನ್ನು ಒತ್ತುವರಿಪಡಿಸಿಕೊಂಡಿರುವುದರಿಂದ, ಒತ್ತುವರಿಯನ್ನು ತೆರವುಗೊಳಿಸಲು ಹಾಗೂ ಅನಧಿಕೃತವಾಗಿ ವ್ಯಾಪಾರ ವಹಿವಾಟು ನಡೆಸುತ್ತಿರುವವರನ್ನು ಗುರುತಿಸಿ, ಜತೆಗೆ ಅನಧಿಕೃತವಾಗಿ ನಿರ್ಮಿಸಿಕೊಂಡಿರುವ ಮಳಿಗೆಗಳನ್ನು ತೆರವುಗೊಳಿಸಲು ಕ್ರಮವಹಿಸಿ” ಎಂದು ಅಧಿಕಾರಿಗಳಿಗೆ ಹೇಳಿದರು.
“ಮುಂದಿನ ದಿನಗಳಲ್ಲಿ ಜಯನಗರ ವಾಣಿಜ್ಯ ಸಂಕೀರ್ಣದ ಒಳಭಾಗದಲ್ಲಿ ಹಾಗೂ ಹೊರಗಿನ ಪ್ರದೇಶಗಳಲ್ಲಿ ರಸ್ತೆ ಹಾಗೂ ಪಾದಚಾರಿ ಮಾರ್ಗಗಳು ವ್ಯಾಪಾರಸ್ಥರಿಂದಾಗಲಿ ಹಾಗೂ ಬೀದಿ ಬದಿಯ ವ್ಯಾಪಾರಿಗಳಿಂದಾಗಲಿ ಒತ್ತುವರಿಯಾಗದಂತೆ ಕ್ರಮವಹಿಸಿ” ಎಂದು ಗಸ್ತಿನಲ್ಲಿರುವ ಮಾರ್ಷಲ್ಗಳಿಗೆ ಸೂಚಿಸಿದರು.
“ಜಯನಗರ ವಾಣಿಜ್ಯ ಸಂಕೀರ್ಣದ ಮೀನು ಮಾರುಕಟ್ಟೆಯ ಸುತ್ತಲಿನ ಪ್ರದೇಶದಲ್ಲಿ ವಿದ್ಯುತ್ ದೀಪ ವ್ಯವಸ್ಥೆ ಇಲ್ಲ. ಕೂಡಲೇ ವಿದ್ಯುತ್ ದೀಪಗಳನ್ನು ಅಳವಡಿಸಿ, ಅನಧಿಕೃತವಾಗಿ ಒಳಬಾರದಂತೆ ಪ್ರವೇಶ ನಿರ್ಬಂಧಗೊಳಿಸಿ. ಸಂಕೀರ್ಣದ ಬಳಿ ನಿರ್ಮಿಸಬೇಕಾಗಿರುವ ಬ್ಲಾಕ್-2, 3 & 4 ಕಟ್ಟಡದ ಸ್ಥಳವನ್ನು ಪರಿಶೀಲಿಸಿ, ಕಾಮಗಾರಿಯು ಪ್ರಾರಂಭವಾಗದೇ ಇರುವ ಹಿನ್ನಲೆಯಲ್ಲಿ ಬಿಡಿಎ ಅವರೊಂದಿಗೆ ಸಮಾಲೋಚನೆ ಕೈಗೊಂಡು ವರದಿಯನ್ನು ಸಲ್ಲಿಸುವಂತೆ ಸೂಚಿಸಿದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಮೂರು ದಿನವಾದರೂ ಬೋನಿಗೆ ಬೀಳದ ಚಿರತೆ; ವೈದ್ಯ ಸೇರಿದಂತೆ ಮೂವರ ಮೇಲೆ ದಾಳಿ
ಈ ವೇಳೆ ಶಾಸಕರಾದ ಸಿ.ಕೆ.ರಾಮಮೂರ್ತಿ, ದಕ್ಷಿಣ ವಲಯದ ವಲಯ ಆಯುಕ್ತಾದ ವಿನೋತ್ ಪ್ರಿಯಾ, ಜಂಟಿ ಆಯುಕ್ತರಾದ ಡಾ. ಕೆ. ಜಗದೀಶ್ ನಾಯ್ಕ್, ಮುಖ್ಯ ಅಭಿಯಂತರರಾದ ರಾಜೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.