ಸ್ವಾತಂತ್ರ್ಯ, ಸಮಾನತೆ, ಪ್ರೀತಿ, ಭ್ರಾತೃತ್ವ ಮತ್ತು ಸಹೋದರತ್ವದ ಮೂಲಕ ಮಾತ್ರ ಒಂದು ದೇಶ ಪ್ರಜಾಪ್ರಭುತ್ವ ದೇಶವಾಗಿ ಉಳಿಯಲು ಸಾಧ್ಯ ಇದರ ಹೊರತು ಯಾವುದೇ ದೇಶ ಪ್ರಜಾಪ್ರಭುತ್ವ ದೇಶವಾಗಿ ಉಳಿಯಲು ಸಾಧ್ಯವಿಲ್ಲ. ಗಾಂಧೀಜಿ, ಅಂಬೇಡ್ಕರ್ ಮುಂತಾದವರ ಹೋರಾಟದ ಉದ್ದೇಶವು ಇದೇ ಆಗಿತ್ತು. ನಮ್ಮ ಸಂವಿಧಾನದ ಮೂಲ ಆಶಯವೂ ಇದೇ ಆಗಿದೆ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಉಡುಪಿ ಜಿಲ್ಲಾಧ್ಯಕ್ಷ ಅಜೀಜ್ ಉದ್ಯಾವರ್ ಹೇಳಿದರು.
ಉಡುಪಿ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. “ಭಾರತ ದೇಶ ಬಹುಸಂಸ್ಕೃತಿಯ, ಬಹುಭಾಷೆ, ವಿಚಾರ ಮತ್ತು ಹಲವು ಧಾರ್ಮಿಕ ಹಿನ್ನಲೆಯುಳ್ಳ ವೈವಿಧ್ಯಮಯ ದೇಶ. ಈ ವೈವಿಧ್ಯಮಯ ಶಕ್ತಿಯು ನಮ್ಮ ದೇಶವನ್ನು ಅಭಿವೃದ್ದಿಯೆಡೆಗೆ ಕೊಂಡೊಯ್ಯುವಲ್ಲಿ ಬಹಳ ಮುಖ್ಯ ಪಾತ್ರವಹಿಸಿದೆ” ಎಂದರು.
“ಇತ್ತೀಚಿನ ಕೆಲವು ವರ್ಷಗಳಲ್ಲಿ ಜನರ ನಡುವೆ ಧರ್ಮದ ಹೆಸರಲ್ಲಿ ದ್ವೇಷ ಹುಟ್ಟಿಸುವ ಮತ್ತು ಸುಳ್ಳು ಸುದ್ದಿಗಳನ್ನು ಹರಡಿಸಿ ಜನರ ನೆಮ್ಮದಿ ಕೆಡಿಸುವ ಕಾರ್ಯ ಎಗ್ಗಿಲ್ಲದೆ ನಿರಂತರ ನಡೆಯುತ್ತಿದೆ. ಕೆಲವು ಸ್ವಾರ್ಥ ರಾಜಕಾರಣಿಗಳು ತಮ್ಮ ಅಧಿಕಾರವನ್ನು ಭದ್ರಪಡಿಸಲು ದ್ವೇಷವನ್ನೇ ಮೆಟ್ಟಿಲನ್ನಾಗಿಸಿ ಜನರ ನಡುವೆ ಕಿಚ್ಚು ಹಚ್ಚುವ ಪ್ರಯತ್ನದಲ್ಲಿ ತೊಡಗಿಸಿಕೊಂಡಿದ್ದಾರೆ. ಇದಕ್ಕೆ ದೇಶದಲ್ಲಿ ಮತ್ತು ರಾಜ್ಯದಲ್ಲಿ ದಾರಾಳ ಉದಾಹರಣೆಗಳಿವೆ” ಎಂದು ತಿಳಿಸಿದರು.
“ಸರ್ವಜನಾಂಗದ ಶಾಂತಿಯ ತೋಟವಾಗಿದ್ದ ನಮ್ಮ ಕನ್ನಡನಾಡಿನಲ್ಲಿ ಪ್ರಚೋದನಕಾರಿ ಭಾಷಣಗಳು ಇತ್ತೀಚೆಗೆ ವ್ಯಾಪಕವಾಗಿ ನಡೆಯುತ್ತಿವೆ. ಇದರ ಪರಿಣಾಮವಾಗಿ ಜಾತಿ ನಿಂದನೆ, ಜಾತಿ ಸಂಘರ್ಷ, ಕೋಮುಗಲಭೆ ನಡೆದು ಅಮಾಯಕರ ಕೊಲೆಯಲ್ಲಿ ಮುಕ್ತಾಯವಾಗುತ್ತಿವೆ. ಇದು ರಾಜ್ಯದ ಸೌಹಾರ್ದ ವಾತಾವರಣ ಮತ್ತು ಅಭಿವೃದ್ಧಿಗೆ ಮಾರಕ ಎಂಬುದು ನಿಸ್ಸಂಶಯ. ಇದು ಎಲ್ಲ ರೀತಿಯಲ್ಲಿಯೂ ಹಾನಿಕಾರಕ” ಎಂದರು.
“ಸಮಾಜದಲ್ಲಿ ಅಶಾಂತಿಯ ವಾತಾವರಣ ಇದ್ದರೆ ಕನ್ನಡಿಗರು ಒಟ್ಟಾಗಿ ನೆಮ್ಮದಿಯಿಂದ ಬದುಕಲು ಸಾಧ್ಯವೇ? ಖಂಡಿತವಾಗಿಯೂ ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಪರಿಸ್ಥಿತಿಯ ಗಾಂಭೀರ್ಯತೆ ಮನಗಂಡು ರಾಜ್ಯದಲ್ಲಿ ಶಾಂತಿ, ಸೌಹಾರ್ದತೆ ನೆಲೆಯೂರಲಿ ಎಂಬ ಸದಾಶಯದೊಂದಿಗೆ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ಘಟಕವು ನವೆಂಬರ್ 1ರಿಂದ ನವೆಂಬರ್ ಹತ್ತರವರೆಗೆ ʼದ್ವೇಷ ಅಳಿಸೋಣ ದೇಶ ಉಳಿಸೋಣʼ ಎಂಬ ಶೀರ್ಷಿಕೆಯಲ್ಲಿ ಹತ್ತು ದಿನಗಳ ಅಭಿಯಾನವನ್ನು ಹಮ್ಮಿಕೊಂಡಿದೆ” ಎಂದು ತಿಳಿಸಿದರು.
“ರಾಜ್ಯದ ನಾಗರಿಕರಲ್ಲಿ ದ್ವೇಷ ರಾಜಕೀಯದ ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವುದು,
ಅಲ್ಪಸಂಖ್ಯಾತ ಮತ್ತು ಹಿಂದುಳಿದ ವರ್ಗಗಳಲ್ಲಿ ಕುಗ್ಗುತ್ತಿರುವ ರಾಜಕೀಯ ಪ್ರತಿನಿಧಿತ್ವ ಮತ್ತು ಅದರ ಪರಿಣಾಮಗಳ ಬಗ್ಗೆ ಜಾಗ್ರತಿ ಮೂಡಿಸುವುದು, ಪ್ರಸ್ತುತ ಸನ್ನಿವೇಶದಲ್ಲಿ ಮೌಲ್ಯಾಧಾರಿತ ರಾಜಕೀಯದ ಮಹತ್ವದ ಬಗ್ಗೆ ಅರಿವು ಮೂಡಿಸುವುದು ಮತ್ತು ಪ್ರೀತಿ, ಶಾಂತಿ, ಸಹೋದರತೆ ಬಯಸುವ ನಾಗರಿಕರಿಗೆ ದ್ವೇಷ ಮತ್ತು ಸುಳ್ಳಿನ ರಾಜಕೀಯದ ವಿರುದ್ಧ ಧ್ವನಿ ಎತ್ತಲು ಪ್ರೇರೇಪಿಸುವುದು ಅಭಿಯಾನದ ಉದ್ದೇಶವಾಗಿದೆ” ಎಂದು ಹೇಳಿದರು.
“ನವೆಂಬರ್ 1ರಂದು ರಾಜ್ಯ ಕಚೇರಿ ಮತ್ತು ರಾಜ್ಯದ ಎಲ್ಲ ಘಟಕಗಳಲ್ಲಿ ಕರ್ನಾಟಕ ರಾಜ್ಯೋತ್ಸವದ ಧ್ವಜಾರೋಹಣದ ಮೂಲಕ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಅಭಿಯಾನದ ಸಂದರ್ಭದಲ್ಲಿ ಭಿತ್ತಿಪತ್ರ ಬಿಡುಗಡೆ, ಪತ್ರಿಕಾಗೋಷ್ಠಿ, ಅಭಿಯಾನದ ಕುರಿತು ವೀಡಿಯೋ ಬಿಡುಗಡೆ, ವಿಚಾರಗೋಷ್ಠಿ, ಕಾರ್ನರ್ ಮೀಟಿಂಗ್, ಮಾನವ ಸರಪಳಿ, ಸಾರ್ವಜನಿಕ ಸಭೆ, ಜಾಥಾ, ಬೈಕ್ ರ್ಯಾಲಿ, ರಾಷ್ಟ್ರಪತಿಗೆ ಮನವಿ ಸೇರಿದಂತೆ ಮುಂತಾದ ಕಾರ್ಯಕ್ರಮಗಳನ್ನು ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗಿದೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ಮಲೆನಾಡಿನ ಜನಮಾನಸದಲ್ಲಿ ಬಂಗಾರಪ್ಪ ಉಸಿರಾಡುತ್ತಲೇ ಇದ್ದಾರೆ
ಉಡುಪಿ ಜಿಲ್ಲೆಯಲ್ಲೂ ವಿಚಾರಗೋಷ್ಠಿ, ಕಾರ್ನರ್ ಮೀಟಿಂಗ್, ಮಾನವ ಸರಪಳಿ, ಸಾರ್ವಜನಿಕ ಸಭೆ, ರಾಷ್ಟ್ರಪತಿಗೆ ಮನವಿ, ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ವೆಲ್ಫೇರ್ ಪಾರ್ಟಿ ಜಿಲ್ಲಾ ಸಮಿತಿಯ ಅನ್ವರ್ ಅಲಿ ಕಾಪು, ರಿಯಾಜ್ ಕುಕ್ಕಿಕಟ್ಟೆ, ಶಹಜಹಾನ್ ತೋನ್ಸೆ ಇದ್ದರು.