ಯಾವುದೇ ಸಿದ್ಧಾಂತ ನಿರ್ಮೂಲನೆ ಮಾಡಲು ಸಭೆ ನಡೆಸುವ ಹಕ್ಕು ದೇಶದಲ್ಲಿ ಯಾರಿಗೂ ಇಲ್ಲ ಎಂದು ಇತ್ತೀಚಿಗೆ ತಿಳಿಸಿರುವ ಮದ್ರಾಸ್ ಹೈಕೋರ್ಟ್ “ದ್ರಾವಿಡ ಸಿದ್ಧಾಂತ ನಿರ್ಮೂಲನೆ” ಕುರಿತು ಸಮಾವೇಶ ನಡೆಸಲು ಅನುಮತಿ ನೀಡಲು ನಿರಾಕರಿಸಿತು.
“ಸನಾತನ ಧರ್ಮದ ನಿರ್ಮೂಲನೆ” ಕುರಿತು ಈ ಹಿಂದೆ ನಡೆದ ಸಮಾವೇಶದಲ್ಲಿ ಉದ್ರೇಕಕಾರಿ ಭಾಷಣ ಮಾಡಿದ ಡಿಎಂಕೆ ಸದಸ್ಯರ ವಿರುದ್ಧ ಕ್ರಮಕೈಗೊಳ್ಳದ ತಮಿಳುನಾಡು ಪೊಲೀಸರನ್ನು ಕೂಡ ನ್ಯಾಯಾಲಯ ಇದೇ ವೇಳೆ ದೂಷಿಸಿದ್ದು ಪೊಲೀಸರ ನಿಷ್ಕ್ರಿಯತೆಯನ್ನು ʼಕರ್ತವ್ಯ ಲೋಪʼ ಎಂದು ಅದು ಬಣ್ಣಿಸಿದೆ.
ʼಬಹು ಸಿದ್ಧಾಂತಗಳ ಅಸ್ತಿತ್ವʼ ಭಾರತದ ಅಸ್ಮಿತೆಯ ಭಾಗವಾಗಿದ್ದು ಅಧಿಕಾರದಲ್ಲಿರುವವರು ವಿಭಜಕ ವಿಚಾರ ಪ್ರಚಾರ ಮಾಡುವುದನ್ನು ತಡೆಯಬೇಕು ಎಂದು ನ್ಯಾಯಮೂರ್ತಿ ಜಿ ಜಯಚಂದ್ರನ್ ಹೇಳಿದರು.
ಚೆನ್ನೈನಲ್ಲಿ “ದ್ರಾವಿಡ ಸಿದ್ಧಾಂತಗಳ ನಿರ್ಮೂಲನೆ” ಕುರಿತು ಸಭೆ ನಡೆಸಲು ಪೊಲೀಸರ ಅನುಮತಿ ಕೋರಿ ಮಗೇಶ್ ಕಾರ್ತಿಕೇಯನ್ ಎಂಬವರು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ಮದ್ರಾಸ್ ಹೈಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿತು.
“ಸಾರ್ವಜನಿಕರಲ್ಲಿ ಕೆಟ್ಟ ಇಚ್ಛೆಯನ್ನು ಉಂಟುಮಾಡುವ ವಿಚಾರಗಳನ್ನು ಪ್ರಚಾರ ಮಾಡಲು ನ್ಯಾಯಾಲಯಗಳು ಸಹಾಯ ಮಾಡುತ್ತವೆ ಎಂದು ಯಾರೂ ನಿರೀಕ್ಷಿಸುವಂತಿಲ್ಲ. ಸನಾತನ ಧರ್ಮ ನಿರ್ಮೂಲನೆಗಾಗಿ ನಡೆದ ಸಭೆಯಲ್ಲಿ ಆಡಳಿತ ಪಕ್ಷದ ಕೆಲವು ಸದಸ್ಯರು ಮತ್ತು ಸಚಿವರು ಭಾಗವಹಿಸಿದ್ದು ಅವರ ವಿರುದ್ಧ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ, ಇದು ಪೊಲೀಸರ ಕರ್ತವ್ಯ ಲೋಪವಾಗಿದೆ ಎಂದು ನ್ಯಾಯಾಲಯ ತಿಳಿಸಿದೆ.
ಈ ಸುದ್ದಿ ಓದಿದ್ದೀರಾ? ಅದಾನಿ ಹಿಂಡನ್ಬರ್ಗ್ ಪ್ರಕರಣ: ನ. 8ಕ್ಕೆ ಅಂತಿಮ ದಾಖಲೆ ಸಲ್ಲಿಸುವಂತೆ ಸುಪ್ರೀಂಕೋರ್ಟ್ ಆದೇಶ
ಅರ್ಜಿದಾರರ ಮನವಿಯನ್ನು ಅಂಗೀಕರಿಸಿದರೆ, ಅದು ಪ್ರಮಾಣವಚನ ಸ್ವೀಕರಿಸಿದ ಕೆಲವರು ವಚನಭ್ರಷ್ಟರಾಗಿ ಹಿಡಿದಿರುವ ಮಾರ್ಗದಿಂದ ಈಗಾಗಲೇ ಬೇಸತ್ತಿರುವ ಸಾರ್ವಜನಿಕರ ಶಾಂತಿ ಮತ್ತು ನೆಮ್ಮದಿಗೆ ಭಂಗ ಉಂಟಾಗುತ್ತದೆ. ದ್ರಾವಿಡ ಸಿದ್ಧಾಂತ ನಿರ್ಮೂಲನೆ ಮಾಡಲು ಸಮಾವೇಶ ನಡೆಸುವುದಕ್ಕಾಗಿ ಅರ್ಜಿದಾರರಿಗೆ ಅನುಮತಿ ನೀಡುವ ಮೂಲಕ ಈ ನ್ಯಾಯಾಲಯ ಅಪರಾಧ ಎಸಗದು ಎಂದು ನ್ಯಾಯಮೂರ್ತಿ ಜಯಚಂದ್ರನ್ ಹೇಳಿದರು.
ಅಧಿಕಾರ ಹಿಡಿದವರು ಜವಾಬ್ದಾರಿಯುತವಾಗಿ ವರ್ತಿಸಬೇಕು. ಸಿದ್ಧಾಂತ, ಜಾತಿ ಮತ್ತು ಧರ್ಮದ ಮೂಲಕ ಜನರನ್ನು ವಿಭಜಿಸುವ ಯಾವುದೇ ಕೆಲಸದಿಂದ ದೂರವಿರಬೇಕು ಎಂದು ನ್ಯಾಯಾಧೀಶರು ಹೇಳಿದರು.
ಅಧಿಕಾರದಲ್ಲಿರುವ ವ್ಯಕ್ತಿ ಭಾಷಣದ ಅಪಾಯ ಅರಿತು ಜವಾಬ್ದಾರಿಯುತವಾಗಿ ವರ್ತಿಸಬೇಕು. ಸಿದ್ಧಾಂತ, ಜಾತಿ ಮತ್ತು ಧರ್ಮದ ಹೆಸರಿನಲ್ಲಿ ಜನರನ್ನು ವಿಭಜಿಸುವ ದೃಷ್ಟಿಕೋನಗಳನ್ನು ಪ್ರಚಾರ ಮಾಡುವುದರಿಂದ ತಮ್ಮನ್ನು ತಾವು ದೂರವಿರುವಂತೆ ನೋಡಿಕೊಳ್ಳಬೇಕು. ಬದಲಿಗೆ ಅವರು ಆರೋಗ್ಯ, ಭ್ರಷ್ಟಾಚಾರ, ಅಸ್ಪೃಶ್ಯತೆ ಮತ್ತು ಇತರ ಸಾಮಾಜಿಕ ಅನಿಷ್ಟಗಳು, ಆರೋಗ್ಯಕ್ಕೆ ಹಾನಿಕಾರಕವಾದ ಮಾದಕ ಪಾನೀಯಗಳು ಮತ್ತು ಮಾದಕ ದ್ರವ್ಯಗಳ ನಿರ್ಮೂಲನೆ ಮಾಡುವತ್ತ ಗಮನಹರಿಸಬೇಕೆಂದು ಎಂದು ನ್ಯಾಯಾಧೀಶರು ತಿಳಿಸಿದರು.