ಆಧಾರ್ ತಿದ್ದುಪಡಿ, ನವೀಕರಣ ಅರ್ಜಿ ನಮೂನೆಯ ಪತ್ರಾಂಕಿತ ಅಧಿಕಾರಿಯಂತೆ ಸೀಲು ಮತ್ತು ಸಹಿ ನಕಲು ಮಾಡಿಕೊಡುತ್ತಿದ್ದ ಆರೋಪಿಯನ್ನು, ದಾವಣಗೆಯ ಬಸವನಗರ ಪೊಲೀಸರು ಬಂಧಿಸಿದ್ದಾರೆ.
ನ.7ರಂದು ದಾವಣಗೆರೆ ಪ್ರಧಾನ ಅಂಚೆ ಕಚೇರಿಯ ಮುಖ್ಯ ಅಂಚೆ ಪಾಲಕ ಸದ್ಯೋಜಾತಪ್ಪ ಅವರು ಕರ್ತವ್ಯದಲ್ಲಿದ್ದಾಗ ಮಧ್ಯಾಹ್ನ 12ಕ್ಕೆ ಅಂಚೆ ಕಚೇರಿ ಆಧಾರ್ ಸೇವಾ ಕೇಂದ್ರದಲ್ಲಿ ಆಧಾರ್ ವಿಳಾಸ ಮತ್ತು ವಯಸ್ಸು ತಿದ್ದುಪಡಿ ಮಾಡಿಕೊಡಲು ಗ್ರಾಹಕರು ಸಲ್ಲಿಸಿದ ನಿಗದಿತ ಅರ್ಜಿ ನಮೂನೆಯಲ್ಲಿ ಪತ್ರಾಂಕಿತ ಅಧಿಕಾರಿಯು ದೃಢೀಕರಣ ಸಹಿ ಮಾಡಬೇಕಾಗಿತ್ತು.
ಪತ್ರಾಂಕಿತ ಅಧಿಕಾರಿಯ ಸಹಿ ಮತ್ತು ಸೀಲು ಹಾಕುವ ಸ್ಥಳದಲ್ಲಿ ಪತ್ರಾಂಕಿತ ಅಧಿಕಾರಿಯು, ʼಹಿರಿಯ ತಜ್ಞರು ಸಿ.ಜಿ. ಎಚ್. ದಾವಣಗೆರೆʼ ಎಂದು ನಕಲು ಸೀಲನ್ನು ಸೃಷ್ಟಿ ಮಾಡಿಕೊಂಡು ಪತ್ರಾಂಕಿತ ಅಧಿಕಾರಿ ಎಂದು ಹಸಿರು ಶಾಯಿಯಿಂದ ನಕಲು ಸಹಿ ಮಾಡಿರುವುದು ಕಂಡು ಬಂದಿದೆ.
ನಕಲು ಸಹಿ ಮಾಡಿದ ವ್ಯಕ್ತಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಪ್ರಕರಣದಲ್ಲಿ ಭಾಗಿಯಾದ್ದ ಆರೋಪಿ ಬಸವರಾಜಪ್ಪ ಅಲಿಯಾಸ್ ಬಸವಂತಪ್ಪರನ್ನು ವಶಕ್ಕೆ ಪಡೆದು, ನಕಲಿ ಪರಿಕರಗಳನ್ನು ವಶಕ್ಕೆ ಪಡೆದಿದ್ದಾರೆ.
ಆರೋಪಿಯನ್ನು ವಿಚಾರಣೆ ಮಾಡಿದಾಗ, ಆರೋಪಿ ದಾವಣಗೆರೆ ಪ್ರಧಾನ ಅಂಚೆ ಕಚೇರಿಯ ಮುಂಭಾಗದಲ್ಲಿ ಆಧಾರ್ ತಿದ್ದುಪಡಿ ಅರ್ಜಿ ನಮೂನೆಯಲ್ಲಿನ ಪತ್ರಾಂಕಿತ ಅಧಿಕಾರಿಯ ದೃಢೀಕರಣ ಮಾಡುವ ಪತ್ರಾಂಕಿತ ಅಧಿಕಾರಿಯ ಸಹಿ ಮತ್ತು ಸೀಲು ಹಾಕುವ ಸ್ಥಳದಲ್ಲಿ ತಾನು ಸೃಷ್ಟಿಸಿಕೊಂಡ ʼಹಿರಿಯ ತಜ್ಞರು. ಸಿ.ಜಿ.ಎಚ್, ದಾವಣಗೆರೆ,ʼ ಅಂತಾ ನಕಲು ಸೀಲನ್ನು ಹಾಕಿ ನಾನೇ ಪತ್ರಾಂಕಿತ ಅಧಿಕಾರಿ ಎಂದು ಹಸಿರು ಶಾಯಿಯಿಂದ ನಕಲು ಸಹಿ ಮಾಡಿರುತ್ತೇನೆ ಎಂದು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.