ಸಾಣೇಹಳ್ಳಿ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರ ಮೇಲೆ ಮನುವಾದದ ಪ್ರತಿಪಾದಕರು ನಡೆಸುತ್ತಿರುವ ದ್ವೇಷದ ಅಭಿಯಾನವನ್ನು ಖಂಡಿಸಿ ಮತ್ತು ಶ್ರೀಗಳ ನಿಲುವನ್ನು ಬೆಂಬಲಿಸಿ ನಾಡಿನ ಹಲವು ಲಿಂಗಾಯತ ಸ್ವಾಮೀಜಿಗಳು, ಪ್ರಗತಿಪರ ಧರ್ಮಗುರುಗಳು ಪ್ರತಿಕ್ರಿಯಿಸಿದ್ದಾರೆ.
ಬಸವ ಕಲ್ಯಾಣ ಅನುಭವ ಮಂಟಪದ ಅಧ್ಯಕ್ಷರಾದ ಡಾ.ಬಸವಲಿಂಗ ಪಟ್ಟದೇವರು ಪ್ರತಿಕ್ರಿಯಿಸಿ, “ಹನ್ನೆರಡನೇ ಶತಮಾನದಲ್ಲಿ ಶರಣರು ಮಾತನಾಡಿದ್ದು ಸಮಾಜದಲ್ಲಿ ತುಂಬಿದ್ದ ಮೌಢ್ಯ ಆಚರಣೆಗಳ ವಿರುದ್ಧವಾಗಿದೆ. ಅವರ ಪ್ರಗತಿಪರ ವಿಚಾರಗಳನ್ನು ಲಿಂಗಾಯತ ಪರಂಪರೆಯ ಮಠಾಧೀಶರು, ಧರ್ಮಗುರುಗಳು ಅಂದಿನಿಂದಲೂ ಹೇಳುತ್ತಲೇ ಬಂದಿದ್ದಾರೆ. ಅದನ್ನೇ ಈಗ ಪೂಜ್ಯ ಪಂಡಿತಾರಾಧ್ಯ ಸ್ವಾಮಿಗಳು ಹೇಳಿದ್ದಾರೆ” ಎಂದು ತಿಳಿಸಿದ್ದಾರೆ.
ಮುಂದುವರಿದು, “ನಾವು ಯಾವ ದೇವರ- ಧರ್ಮದ ವಿರುದ್ಧ ಇಲ್ಲ. ಆದರೆ ನಾವು ನಮ್ಮ ಧರ್ಮ ತತ್ವಗಳನ್ನು ಹೇಳಿದರೆ ಅದನ್ನು ಧರ್ಮದ್ರೋಹ ಎಂದು ಸಾಮಾನ್ಯ ಮುಗ್ಧ ಜನರಲ್ಲಿ ಬಿಂಬಿಸುವುದು ಒಳ್ಳೆಯ ಬೆಳವಣಿಗೆ ಅಲ್ಲ. ನಮ್ಮ ಧರ್ಮದ ನಿಜತತ್ವಗಳನ್ನು ನಮ್ಮ ಜನರಿಗೆ ನಾವು ಹೇಳಿದರೆ ಅದಕ್ಕೆ ಅನ್ಯಧರ್ಮೀಯರು ಆತಂಕ ಪಡುವುದೇಕೆ? ಈ ದೇಶದಲ್ಲಿ ತಮ್ಮ ಧರ್ಮತತ್ವಗಳನ್ನು ನಿರ್ಭಯವಾಗಿ ಹೇಳುವ ಹಾಗೂ ಆಚರಿಸುವ ಸ್ವಾತಂತ್ರ್ಯ ಲಿಂಗಾಯತರಿಗೆ ಇಲ್ಲವೇ? ನ್ಯಾಯ ನಿಷ್ಠುರವಾಗಿ ಬಸವತತ್ವ ಹೇಳುವ ಸಾಣೆಹಳ್ಳಿಯ ಸ್ವಾಮೀಜಿಯವರಿಗೆ ನಮ್ಮ ಸಂಪೂರ್ಣ ಬೆಂಬಲ ಇದೆ” ಎಂದು ಘೋಷಿಸಿದ್ದಾರೆ.
ಭಾಲ್ಕಿ ಹಿರೇಮಠ ಸಂಸ್ಥಾನದ ಗುರುಬಸವ ಪಟ್ಟದೇವರು ಪ್ರತಿಕ್ರಿಯಿಸಿದ್ದಾರೆ. “ನಾವು ಲಿಂಗಾಯತ ಧರ್ಮದ ಗುರುಗಳು; ನಾವಿರುವುದೇ ಲಿಂಗಾಯತ ತತ್ವಗಳನ್ನು ಪ್ರಚಾರ ಮಾಡಲು. ನಾವು ಬಸವ ತತ್ವವಲ್ಲದೆ ಬೇರೆ ಇನ್ಯಾವ ತತ್ವ ಪ್ರಚಾರ ಮಾಡಬೇಕು? ಅಷ್ಟಕ್ಕೂ ಸಾಣೇಹಳ್ಳಿ ಶ್ರೀಗಳು ಹೊಸದಾಗಿ ಏನು ಹೇಳಿಲ್ಲ. ಬಸವಾದಿ ಶರಣರು, ಅನೇಕ ಮಠಾಧೀಶರು ಹಾಗೂ ಬಸವ ವಿಚಾರಧಾರೆಯ ವ್ಯಕ್ತಿಗಳು ಹೇಳಿದ್ದನ್ನೇ ಅವರೂ ಹೇಳಿದ್ದಾರೆ ಅಷ್ಟೇ. ಮೇಲಾಗಿ ಅವರೇನು ಇದೇ ಮೊದಲ ಬಾರಿಗೆ ಬಸವ ಮಾತುಗಳನ್ನು ಆಡಿಲ್ಲ. ಈ ಹಿಂದೆಯೂ ಸಾವಿರಾರು ಸಲ ಆಡಿದ್ದಾರೆ. ಅವರ ಮಾತಿನಲ್ಲಿ ಯಾವಾಗಲೂ ಕಠೋರ ಸತ್ಯ ಮತ್ತು ತತ್ವನಿಷ್ಠೆ ಇರುತ್ತದೆ. ಬಸವಣ್ಣನವರೇ ತನ್ನ ಗುರು, ಮಂತ್ರ, ಸಿದ್ಧಾಂತ ಎಂದು ನಂಬಿ, ವಚನ ಚಳವಳಿಯ ಆಶಯಗಳನ್ನು ಜನಮಾನಸಕ್ಕೆ ತಲುಪಿಸುತ್ತಿರುವ ಸಾಣೇಹಳ್ಳಿ ಪೂಜ್ಯರ ಮಾತುಗಳನ್ನು ನಾವು ಬೆಂಬಲಿಸುತ್ತೇವೆ ಮತ್ತು ಸದಾ ಅವರೊಂದಿಗೆ ಇದ್ದೇವೆ” ಎಂದು ಹೇಳಿದ್ದಾರೆ.
ಕೂಡಲಸಂಗಮದ ಬಸವ ಧರ್ಮ ಪೀಠದ ಅಧ್ಯಕ್ಷರಾದ ಡಾ.ಮಾತೆ ಗಂಗಾದೇವಿ ಮಾತನಾಡಿದ್ದು, “ಸಾಣೇಹಳ್ಳಿ ಸ್ವಾಮೀಜಿಯವರು ಹೇಳಿರುವುದು ಸತ್ಯವಾಗಿದೆ. ಎಲ್ಲ ಲಿಂಗಾಯತರು ವಚನ ಪಠಿಸುವುದನ್ನು ರೂಢಿಸಿಕೊಳ್ಳಬೇಕು. ಲಿಂಗಾಯತ ಧರ್ಮದಲ್ಲಿ ಕಾಲ್ಪನಿಕ ದೇವರು ಇಲ್ಲ. ಶರಣರ ಆಶಯದಂತೆ ಎಲ್ಲ ಲಿಂಗಾಯತರು ಬದುಕಬೇಕು. ಮೂಢನಂಬಿಕೆಗಳಿಗೆ ಒಳಗಾಗಬಾರದು. ಲಿಂಗಾಯತ ಧರ್ಮ, ಹಿಂದೂ ಧರ್ಮಗಳ ನಡುವೆ ಬಹಳ ವ್ಯತ್ಯಾಸ ಇದೆ. ಈ ವ್ಯತ್ಯಾಸಗಳನ್ನು ತಿಳಿಯುವ ಕೆಲಸವನ್ನು ಪ್ರತಿಯೊಬ್ಬ ಲಿಂಗಾಯತರು ಮಾಡಬೇಕು” ಎಂದು ಕರೆ ನೀಡಿದ್ದಾರೆ.
ಬಸವಕಲ್ಯಾಣ ಬಸವ ಮಹಾಮನೆಯ ಸತ್ಯಕ್ಕ ತಾಯಿ ಪ್ರತಿಕ್ರಿಯಿಸಿದ್ದು, “ಸಾಣೆಹಳ್ಳಿ ಶ್ರೀಗಳ ಮಾತು ಅಕ್ಷರಶಃ ಸತ್ಯ. ಇದು ಅವರ ಮಾತಲ್ಲ, ಹನ್ನೆರಡನೇ ಶತಮಾನದಲ್ಲೆ ಬಸವಾದಿ ಶರಣರು ತಮ್ಮ ವಚನಗಳ ಮೂಲಕ ಮೂಢ ನಂಬಿಕೆಗಳ ವಿರುದ್ಧ ಎಚ್ಚರಿಸಿದ್ದಾರೆ. ಮಾನವ ಪರವಾದ ಬಸವಾದಿ ಶರಣರ ವಿಚಾರಧಾರೆಗಳನ್ನು ಮೈಗೂಡಿಸಿಕೊಂಡು, ಅದೇ ಹಾದಿಯಲ್ಲಿ ನಡೆಯುತ್ತಿರುವ ಶ್ರೀಗಳು ತಮ್ಮ ಧರ್ಮೀಯರಿಗೆ ತಮ್ಮ ಧರ್ಮದ ನಿಜಾಚರಣೆಗಳ ತಿಳಿವು ಮೂಡಿಸಿದರೆ ತಪ್ಪೇನು?” ಎಂದು ಪ್ರಶ್ನಿಸಿದ್ದಾರೆ.
ಮಹಾರಾಷ್ಟ್ರ ಕೋರಣೇಶ್ವರ ಸ್ವಾಮೀಜಿಯವರು ಮಾತನಾಡಿದ್ದು, “ವಿಶ್ವೇಶ್ವರ ಭಟ್ಟರೇ, ನಮ್ಮ ತಂಟೆಗೆ ಬರಬೇಡಿ. ನಿಮ್ಮ (ಗಣಪತಿ) ದೇವರ ಬಗ್ಗೆ ನೀವು ಅಭಿಮಾನ ಇಟ್ಟುಕೊಳ್ಳಿ. ಅದಕ್ಕೂ ಮೊದಲು ನಿಮ್ಮ ಸ್ವಜಾತಿಯ ಯು.ಆರ್.ಅನಂತಮೂರ್ತಿ, ಗಿರೀಶ್ ಕಾರ್ನಾಡ್ ಮತ್ತು ಎ.ಎನ್.ಮೂರ್ತಿರಾವ್ ಅವರು ಈ ಕುರಿತು ಏನು ಹೇಳಿದ್ದಾರೆಂದು ಒಮ್ಮೆ ಓದಿ. ನಿಮ್ಮ ಗಣಪತಿ ದೇವರಿಗೂ ನಮಗೂ (ಲಿಂಗಾಯತ) ಯಾವ ಸಂಬಂಧವೂ ಇಲ್ಲ. ಸಾಣೇಹಳ್ಳಿ ಶ್ರೀಗಳು ನಿಜವನ್ನೇ ನುಡಿದಿದ್ದಾರೆ. ನಾವೆಲ್ಲರೂ ಶ್ರೀಗಳ ಬಸವ ಪರ ಮಾತುಗಳನ್ನು ಬೆಂಬಲಿಸುತ್ತೇವೆ” ಎಂದಿದ್ದಾರೆ.
ಬಸವ ಕಲ್ಯಾಣದ ಬಸವಪ್ರಭು ಸ್ವಾಮೀಜಿ ಪ್ರತಿಕ್ರಿಯಿಸಿದ್ದು, “ಹಿಂದೂ ಸಂಸ್ಕೃತಿಗೂ, ಶರಣ ಸಂಸ್ಕೃತಿಗೂ ಅಜಗಜಾಂತರ ವ್ಯತ್ಯಾಸವಿದೆ. ಲಿಂಗಾಯತ ತತ್ವಗಳನ್ನು ಲಿಂಗಾಯತರು ನಡೆಯಲ್ಲಿ ತರಬೇಕೆಂದು ಬಸವಾದಿ ಪ್ರಥಮರ ವಚನಗಳ ಆದೇಶವಿದೆ. ಅದನ್ನೇ ಸಾಣೆಹಳ್ಳಿ ಶ್ರೀಗಳು ಪುನರುಚ್ಚರಿಸಿದ್ದಾರೆ. ಬಸವಾದಿ ಪ್ರಥಮರ ವಿಚಾರಗಳಿಗೆ ಕೊಳ್ಳಿ ಇಡುವ ಕೊಂಡಿ ಮಂಚಣ್ಣ ಸಂತತಿಗಳು ಆಗಲೂ ಇದ್ದರು, ವಿಶ್ವೇಶ್ವರ ಭಟ್ ನಂತರ ಕೊಂಡಿ ಮಂಚಣ್ಣಗಳು ಈಗಲೂ ಇದ್ದಾರೆ” ಎಂದು ಎಚ್ಚರಿಸಿದ್ದಾರೆ.
ಮೈಸೂರಿನ ಉರಿಲಿಂಗಿಪೆದ್ದಿಮಠದ ಜ್ಞಾನಪ್ರಕಾಶ ಸ್ವಾಮೀಜಿ ಮಾತನಾಡಿದ್ದು, “ಮತ್ತೆ ಕಲ್ಯಾಣದ ಕ್ರಾಂತಿ! ನಮ್ಮ ನಾಡಿನ ವಿಚಾರ ಕ್ರಾಂತಿಯ ದಿಟ್ಟ ಬಸವ ಬೆಳಕಾದ ಸಾಣೇಹಳ್ಳಿಯ ಪೂಜ್ಯರಿಗೆ ನಮ್ಮ ಬೆಂಬಲವಿದೆ” ಎಂದು ಹೇಳಿದ್ದಾರೆ.
ಹಲವು ಸ್ವಾಮೀಜಿಗಳು ನೀಡಿರುವ ಹೇಳಿಕೆಗಳಿಗೆ ಸಂಬಂಧಿಸಿದ ಪೋಸ್ಟರ್ಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿವೆ.
ಇದನ್ನೂ ಓದಿರಿ: ಧರ್ಮದ ಮಾರಾಟಗಾರರ ಎಡಬಿಡಂಗಿತನದ ಅನಾವರಣ: ಸಾಣೇಹಳ್ಳಿ ಶ್ರೀಗಳ ಲೇಖನ