ದೇಶದಲ್ಲಿ ಸಂಘ ಪರಿವಾರವು ಜಾತಿ, ಧರ್ಮದ ನಡುವೆ ವಿಷಬೀಜ ಬಿತ್ತಿ ರಾಜಕೀಯ ಅಧಿಕಾರ ಮತ್ತು ಆರ್ಥಿಕ ಸಂಪತ್ತನ್ನು ತಮ್ಮ ಹಿಡಿತದಲ್ಲಿಟ್ಟುಕೊಂಡು ಬಹುಜನರಿಗೆ ಗುಲಾಮರನ್ನಾಗಿ ಮಾಡಿದ್ದಾರೆ ಎಂದು ಜನರ ಧ್ವನಿ ಸಂಘಟನೆ ಸಂಸ್ಥಾಪಕ ರಾಜಾಧ್ಯಕ್ಷ ಅಂಕುಶ್ ಗೋಖಲೆ ಹೇಳಿದರು.
ಬಸವಕಲ್ಯಾಣ ಹೊರವಲಯದ ಬಿಕೆಡಿಬಿ ಸಭಾಭವನದಲ್ಲಿ ಜನರ ಧ್ವನಿ ಸಂಘಟನೆ ತಾಲೂಕು ಘಟಕದ ಪದಾಧಿಕಾರಿಗಳ ನೇಮಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
“ಬೀದರ ಜಿಲ್ಲೆಯಲ್ಲಿ ಪಾಟೀಲ್, ಖಂಡ್ರೆ , ನಾಗಮಾರಪಳ್ಳಿ ಹಾಗೂ ಖೂಬಾ ಪರಿವಾರಗಳು ಜಿಲ್ಲೆಯ ಎಲ್ಲಾ ರೀತಿಯ ರಾಜಕೀಯ ಅಧಿಕಾರ ತಮ್ಮ ಹಿಡಿತದಲ್ಲಿಟ್ಟುಕೊಂಡು ಜಿಲ್ಲೆಯನ್ನು ಲೂಟಿ ಹೊಡೆಯುತ್ತಿದ್ದಾರೆ. ತಮ್ಮ ಕಟುಂಬದ ಸದಸ್ಯರಿಗೆ ರಾಜಕೀಯವಾಗಿ ಬೆಳೆಯಲು ಜಿಲ್ಲೆಯ ಬಹುಜನರಿಗೆ ಗುಲಾಮರಂತೆ ಬಳಸಿಕೊಳ್ಳುತ್ತಿದ್ದಾರೆ. ಆದ್ದರಿಂದ ದೇಶದ ಸಂಘ ಪರಿವಾರದ ವಿರುದ್ಧ ಮತ್ತು ಜಿಲ್ಲೆಯ ಪರಿವಾರ ಸಂಘದ ವಿರುದ್ಧ ನಾವು ಹೋರಾಡಬೇಕಾಗಿದೆ. ಜನರ ಧ್ವನಿ ಸಂಘಟನೆ ಮೂಲಕ ಜಿಲ್ಲೆಯ ಪ್ರತಿ ಹಳ್ಳಿಯ ಯುವಕರಿಗೆ ಬುದ್ಧ, ಬಸವ, ಫುಲೆ, ರಾಹು, ಅಂಬೇಡ್ಕರ ಅವರ ವಿಚಾರಧಾರೆ ತಲುಪಿಸಲು ಮುಂದಾಗಬೇಕು” ಎಂದು ಕರೆ ನೀಡಿದರು.
ಜನರ ಧ್ವನಿ ಸಂಘಟನೆ ಬೀದರ್ ಜಿಲ್ಲಾಧ್ಯಕ್ಷ ರಾಜಕುಮಾರ ಸಿಂಧೆ ಮಾತನಾಡಿ, “ಹಲವು ವರ್ಷಗಳಿಂದ ಜಿಲ್ಲೆಯಲ್ಲಿ ನೂರಾರು ಸಂಘಟನೆಗಳು ಬರೀ ಸಂಘಟನೆಗಳಾಗಿಯೇ ಉಳಿದಿವೆ. ಆದರೆ, ಇಲ್ಲಿಯವರೆಗೆ ಬಾಬಾಸಾಹೇಬರ ಆಶಯದಂತೆ ರಾಜಕೀಯ ಅಧಿಕಾರ ದಕ್ಕಿಸಿಕೊಳ್ಳುವ ಪ್ರಯತ್ನ ಯಾವುದೇ ಸಂಘಟನೆಗಳು ಮಾಡಿಲಿಲ್ಲ. ಹೀಗಾಗಿ ನಮ್ಮ ಜನರ ಧ್ವನಿ ಸಂಘಟನೆಯು ಮುಂಬರುವ ದಿನಗಳಲ್ಲಿ ಜಿಲ್ಲೆಯಲ್ಲಿ ರಾಜಕೀಯ ಶಕ್ತಿಯಾಗಿ ಹೊರಹುಮ್ಮಲಿದೆ” ಎಂದರು.
ತಾಲೂಕು ಪದಾಧಿಕಾರಿಗಳ ನೇಮಕ:
ಇದೇ ಸಂದರ್ಭದಲ್ಲಿ ಜನರ ಧ್ವನಿ ಸಂಘಟನೆಯ ಬಸವಕಲ್ಯಾಣ ತಾಲೂಕು ಪದಾಧಿಕಾರಿಗಳ ಸಮಿತಿ ರಚನೆ ಮಾಡಲಾಯಿತು. ಮಾರುತಿ ಕಾಂಬಳೆ (ಅಧ್ಯಕ್ಷ), ರತ್ನದೀಪ ಗಾಯಕವಾಡ (ಉಪಾಧ್ಯಕ್ಷ), ಸೋಮನಾಥ ಮೂಡಬಿಕರ್ (ಪ್ರಧಾನ ಕಾರ್ಯದರ್ಶಿ), ಅವಿನಾಶ ಫುಲಬನೆ (ಕಾರ್ಯದರ್ಶಿ) ಇವರನ್ನು ಆಯ್ಕೆ ಮಾಡಲಾಗಿದೆ ಎಂದು ರಾಜ್ಯಧ್ಯಕ್ಷ ಅಂಕುಶ ಗೋಖಲೆ, ಜಿಲ್ಲಾಧ್ಯಕ್ಷ ರಾಜಕುಮಾರ ಸಿಂಧೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ಧೀರಾ? ಬೀದರ್ | ಕನ್ನಡ ಭಾಷೆ ಶ್ರೀಮಂತಿಕೆಯ ಶ್ರೇಯಸ್ಸು ಶರಣರಿಗೆ ಸಲ್ಲುತ್ತದೆ : ಸುರೇಶ ಚನ್ನಶೆಟ್ಟಿ
ಕಾರ್ಯಕ್ರಮದಲ್ಲಿ ಜನರ ಧ್ವನಿ ಸಂಘಟನೆಯ ಹಿರಿಯ ಮುಖಂಡರಾದ ತಿಪ್ಪಣ್ಣ ವಾಲಿ, ಜಮೀಲ್ ಅಹ್ಮದ ಖಾನ್, ಜಿಲ್ಲಾ ಉಪಾಧ್ಯಕ್ಷ ಅರವಿಂದ ಮಾಶೆಟ್ಟಿ, ಬೀದರ ತಾಲೂಕಾ ಅಧ್ಯಕ್ಷ ರವಿ ಕೋಟೆರ್, ಹುಮನಾಬಾದ ತಾಲೂಕಾ ಪ್ರಧಾನ ಕಾರ್ಯದರ್ಶಿ ಪ್ರಭು, ಸಕರೆ ಹಾಗೂ ಸಂಘಟನೆಯ ಪ್ರಮುಖರಾದ ಅಶೋಕ ಪಾಂಡೆ, ಭರತ ಮೋಳಕೆರಾ, ಕುಮಾರ ಗಾಯಕವಾಡ, ಅಕ್ಷಯ ಗಾಯಕವಾಡ, ದೀಪಕ ಶಿಂದೆ, ಕೃಷ್ಣ ವಾಡೇಕರ, ಸುಮೀತ ಕಾಂಬಳೆ, ಅನೀಶ, ಆಶೀಶ ಸೇರಿದಂತೆ ಇತರರಿದ್ದರು.