- ‘ಪಟಾಕಿ ವ್ಯಾಪಾರ ಮತ್ತು ಸಂಗ್ರಹ ವಸತಿ ಪ್ರದೇಶದಿಂದ ದೂರದಲ್ಲಿರಬೇಕು’
- ‘ಪರವಾನಿಗೆ ನೀಡುವ ಸಂದರ್ಭದಲ್ಲಿ ಎಚ್ಚರಿಕೆ ವಹಿಸಲು ಇದು ಸಕಾಲ’
600 ಕೆಜಿಗೂ ಹೆಚ್ಚು ತೂಕದ ಪಟಾಕಿ ಸಂಗ್ರಹ ಹಾಗೂ ಮಾರಾಟಕ್ಕೆ ಜಿಲ್ಲಾಧಿಕಾರಿಗಳು ಪಟಾಕಿ ವ್ಯಾಪಾರಸ್ಥರಿಗೆ ಪರವಾನಗಿ ನೀಡಬಾರದು ಎಂದು ಹೈಕೋರ್ಟ್ ಆದೇಶಿಸಿದೆ.
“ಪಟಾಕಿ ಮಾರಾಟಕ್ಕೆ ಪರವಾನಿಗೆ ನೀಡುವ ಸಂದರ್ಭದಲ್ಲಿ ಸ್ಫೋಟಕಗಳ ಕಾಯಿದೆಯಲ್ಲಿ ಉಲ್ಲೇಖಿಸಿರುವಂತೆ ಪಟಾಕಿ ಸಂಗ್ರಹಾಗಾರಗಳು ವಸತಿ ಪ್ರದೇಶದಿಂದ ದೂರದಲ್ಲಿರಬೇಕು. ಅಗ್ನಿ ಶಾಮಕಗಳು ಲಭ್ಯ ಇರಬೇಕು. ಪಟಾಕಿ ಸಂಗ್ರಹಾಗಾರಗಳಲ್ಲಿ ನೀರಿನ ಬಕೆಟ್ಗಳ ಸಂಗ್ರಹವೂ ಇರಬೇಕಿದ್ದು ಪರವಾನಗಿ ಪಡೆದ ಅಂಗಡಿಗಳಲ್ಲಿ ನಿಯಮ ಹಾಗೂ ಸುರಕ್ಷತಾ ಕ್ರಮ ಉಲ್ಲಂಘನೆಯಾಗಿದ್ದಲ್ಲಿ ಕಾಲಕಾಲಕ್ಕೆ ಪರಿಶೀಲನೆ ನಡೆಸಿ ಅಂತಹ ಪರವಾನಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಬೇಕು” ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
ಇತ್ತೀಚೆಗೆ ಅತ್ತಿಬೆಲೆಯಲ್ಲಿ ಅಗ್ನಿ ದುರಂತ ನಡೆದು ಹಲವು ಮಂದಿ ಸಾವನ್ನಪ್ಪಿದ್ದ ಹಿನ್ನೆಲೆಯಲ್ಲಿ ತಮ್ಮ ಪರವಾನಗಿ ರದ್ದುಪಡಿಸಿದ್ದ ಕ್ರಮ ಪ್ರಶ್ನಿಸಿ ಬೆಂಗಳೂರು ಪೂರ್ವ ತಾಲೂಕಿನ ಬಿದರಹಳ್ಳಿ ಹೋಬಳಿಯ ವೀರನಹಳ್ಳಿ ಗ್ರಾಮದ ನಿವಾಸಿ ಕಲಾವತಿ ಎಂಬುವವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಈ ಆದೇಶ ನೀಡಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಉರಿದು ಉಳಿದ ಮಣ್ಣಿನ ಹಣತೆಯಲ್ಲಿ ಎಣ್ಣೆ ಹೆಕ್ಕುವ ಬಡವರು ಮತ್ತು ವಿಶ್ವಗುರು
“ಪಟಾಕಿ ಸಂಗ್ರಹ ಮಾಡುವಲ್ಲಿ ಸ್ವಲ್ಪ ನಿರ್ಲಕ್ಷ್ಯ ವಹಿಸಿದರೂ ಬೆಂಕಿಯ ಕಿಡಿ ಕಟ್ಟಡವನ್ನೇ ದಹಿಸಬಹುದಾಗಿದೆ. ಹೀಗಾಗಿ, ಪರವಾನಿಗೆ ನೀಡುವ ಸಂದರ್ಭದಲ್ಲಿ ಎಚ್ಚರಿಕೆ ವಹಿಸಲು ಇದು ಸಕಾಲ ಎಂದು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠ ಹೇಳಿದೆ.
“600 ಕೆಜಿ ಪಟಾಕಿ ಸಂಗ್ರಹಿಸುವ ಸ್ಥಳದಲ್ಲಿ 1000 ಕೆಜಿ ತೂಕದ ಪಟಾಕಿ ಸಂಗ್ರಹಿಸಿ ಮಾರಾಟ ಮಾಡುವುದಕ್ಕೆ ಅರ್ಜಿದಾರರಿಗೆ ಜಿಲ್ಲಾಧಿಕಾರಿಗಳು ಪರವಾನಿಗೆ ನೀಡಿರುವುದಕ್ಕೆ ಪೀಠ ಅಚ್ಚರಿ ವ್ಯಕ್ತಪಡಿಸಿದೆ. ಅರ್ಜಿದಾರರಿಗೆ 1000 ಕೆಜಿಗೂ ಹೆಚ್ಚು ಪಟಾಕಿ ಸಂಗ್ರಹ ಮತ್ತು ಮಾರಾಟಕ್ಕೆ ಅವಕಾಶ ನೀಡಿರುವುದು ಕಾನೂನಿನ ವಿರುದ್ಧವಾಗಿದೆ” ಎಂದು ಪೀಠ ಹೇಳಿದೆ.