ರಾಯಚೂರು ಜಿಲ್ಲೆಯ ಹಟ್ಟಿ ಪಟ್ಟಣದಲ್ಲಿ ಮಹಿಳಾ ಲ್ಯಾಬ್ ಟೆಕ್ನಿಷಿಯನ್ ಕೊಲೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಮಂಗಳವಾರ (ನ.14) ಇಬ್ಬರು ಯುವಕರನ್ನು ಬಂಧಿಸಿದ್ದಾರೆ. ಸಮೀರ್ ಸೊಹೈಲ್ ಮತ್ತು ಮೊಹಮ್ಮದ್ ಕೈಫ್ ಬಂಧಿತ ಆರೋಪಿಗಳು.
ಮಂಜುಳಾ ಅವರನ್ನು ಅಕ್ಟೋಬರ್ 26ರಂದು ಕೊಲೆ ಮಾಡಲಾಗಿತ್ತು. ಆಕೆಯ ಮನೆಯ ಬಳಿಯೇ ಆಕೆಯ ಶವ ಸುಟ್ಟಸ್ಥಿತಿಯಲ್ಲಿ ಪತ್ತೆಯಾಗಿತ್ತು. ಕೃತ್ಯ ಎಸಗಿದ ನಂತರ ಆರೋಪಿಗಳು ಸಂತ್ರಸ್ತೆ ಮನೆಯಿಂದ 10ಲಕ್ಷ ರೂಪಾಯಿ ನಗದು ಮತ್ತು ಚಿನ್ನಾಭರಣಗಳನ್ನು ದೋಚಿ ಮೊಹಮ್ಮದ್ ಕೈಫ್ನ ಕಾರಿನಲ್ಲಿ ಪರಾರಿಯಾಗಿದ್ದರು. ಮೊದಲು ಇದು ನರಬಲಿ ಪ್ರಕರಣ ಎಂದು ಶಂಕಿಸಲಾಗಿತ್ತು. ಆದರೆ, ಸಂತ್ರಸ್ತ ಮಹಿಳೆಗೆ ಇಬ್ಬರು ಕೊಲೆಗಾರರಲ್ಲಿ ಒಬ್ಬಾತನ ಜೊತೆ ಸಂಬಂಧ ಇರುವುದು, ತನಿಖೆಯಲ್ಲಿ ಬಹಿರಂಗವಾಗಿತ್ತು.
ಮಂಜುಳಾ ಕೆಲವು ಕಾಯಿಲೆಗಳಿಂದ ಬಳಲುತ್ತಿದ್ದು, ಸೊಹೈಲ್ನ ಸಹಾಯ ಕೇಳಿದ್ದರು. ಇದರ ಲಾಭ ಪಡೆದ ಆರೋಪಿಗಳು, ಪೂಜೆಯ ನೆಪದಲ್ಲಿ ಆಕೆಯನ್ನು ಪ್ರತ್ಯೇಕ ಸ್ಥಳಕ್ಕೆ ಕರೆಸಿಕೊಂಡಿದ್ದರು. ಅವರ ನಿರ್ದೇಶನದಂತೆ ಆಕೆ ತನ್ನ ಚಿನ್ನಾಭರಣಗಳನ್ನು ತೆಗೆದುಕೊಂಡು ಹೋಗಿದ್ದರು. ನಂತರ ಅವರು ನಗದು ಮತ್ತು ಆಭರಣಗಳ ಮೇಲೆ ಸಿಂಧೂರ ಮತ್ತು ಅರಿಶಿನವನ್ನು ಹಚ್ಚಿದರು ಮತ್ತು ಆಕೆಯನ್ನು ಪ್ರಾರ್ಥಿಸುವಂತೆ ಹೇಳಿದ್ದಾರೆ. ಆಕೆ ಪ್ರಾರ್ಥನೆಯಲ್ಲಿ ಮುಳುಗಿದ್ದಾಗ, ಇಬ್ಬರೂ ಸೇರಿ ಆಕೆಯನ್ನು ಕೊಲೆಮಾಡಿದ್ದಾರೆ. ನಂತರ ಆಕೆಯ ಮನೆಬಳಿ ಸುಟ್ಟು ಹಾಕಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು, ಕೃತ್ಯಕ್ಕೆ ಬಳಸಿದ್ದ ಕಾರು, ಬೈಕ್ ಜೊತೆಗೆ 7.49 ಲಕ್ಷ ನಗದು, 163ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ. ಆದರೆ, ಆಕೆ ಬ್ಯಾಂಕ್ನಿಂದ ತಂದಿದ ಸಾಲ 10ಲಕ್ಷ ರೂಪಾಯಿ ಮತ್ತು ಬ್ಯಾಂಕ್ನಿಂದ ಹಿಂಪಡೆದಿದ್ದ ಎಲ್ಲಾ ಚಿನ್ನಾಭರಣಗಳು ನಾಪತ್ತೆಯಾಗಿದ್ದರಿಂದ, ಅವರ ಮಗ ಅನುಮಾನ ವ್ಯಕ್ತಪಡಿಸಿದ್ದ. ಪ್ರಕರಣ ದಾಖಲಿಸಿಕೊಂಡಿದ್ದ, ಹಟ್ಟಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.