ರೈಲ್ವೆ ಕಾಯಿದೆಯ ಸೆಕ್ಷನ್ 167ರ ಅಡಿಯಲ್ಲಿ ರೈಲು ಅಥವಾ ರೈಲ್ವೆ ಆವರಣದಲ್ಲಿ ಧೂಮಪಾನ ಮಾಡಿದ್ದಕ್ಕಾಗಿ 258 ಪ್ರಕರಣಗಳನ್ನು ದಾಖಲಿಸಲಾಗಿದೆ. ಜತೆಗೆ, ಬೆಂಗಳೂರು ವಿಭಾಗದಾದ್ಯಂತ ವ್ಯಾಪಕ ಅಗ್ನಿ ಸುರಕ್ಷತೆ ಜಾಗೃತಿ ಅಭಿಯಾನವನ್ನು ನಡೆಸಲಾಗಿದೆ ಎಂದು ಬೆಂಗಳೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಯೋಗೇಶ್ ಮೋಹನ್ ತಿಳಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, “ಈ ವರ್ಷದ ಏಪ್ರಿಲ್ ಮತ್ತು ಅಕ್ಟೋಬರ್ ನಡುವೆ ರೈಲುಗಳಲ್ಲಿ ಪಟಾಕಿ ಮತ್ತು ಬೆಂಕಿಯಿಡುವ ವಸ್ತುಗಳನ್ನು ಸಾಗಿಸುವ ವ್ಯಕ್ತಿಗಳ ವಿರುದ್ಧ ರೈಲ್ವೆ ಕಾಯ್ದೆಯಡಿ ಐದು ಪ್ರಕರಣಗಳನ್ನು ದಾಖಲಿಸಲಾಗಿದೆ” ಎಂದು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಶುಲ್ಕ ತಪ್ಪಿಸಲು ಹೋಗಿ ಟೋಲ್ ಸಿಬ್ಬಂದಿಗೆ ಕಾರು ಗುದ್ದಿದ ಚಾಲಕ
“ಒಟ್ಟು 30 ನಿಲ್ದಾಣಗಳ ಅಭಿಯಾನ ನಡೆಸಲಾಗಿದ್ದು, 191 ರೈಲುಗಳಲ್ಲಿ ತಪಾಸಣೆ ಮಾಡಲಾಗಿದೆ. 3,000 ರೈಲ್ವೆ ಸಿಬ್ಬಂದಿ ಮತ್ತು 5,056 ಪ್ರಯಾಣಿಕರಿಗೆ ಸುರಕ್ಷತಾ ಕ್ರಮಗಳ ಕುರಿತು ಕೌನ್ಸೆಲಿಂಗ್ ನೀಡಲಾಯಿತು. 90 ಕ್ಕೂ ಹೆಚ್ಚು ಪ್ರಯಾಣಿಕರಿಗೆ ಅಗ್ನಿಶಾಮಕ ಸಾಧನಗಳನ್ನು ಬಳಸುವ ಕುರಿತು ತರಬೇತಿ ನೀಡಲಾಗಿದೆ. 10000 ಕ್ಕೂ ಹೆಚ್ಚು ಎಸ್ಎಮ್ಎಸ್ ಕಳುಹಿಸಲಾಗಿದೆ. 3,500 ಕರಪತ್ರಗಳನ್ನು ವಿತರಿಸಲಾಗಿದೆ. 11 ರೈಲು ನಿಲ್ದಾಣಗಳಲ್ಲಿ ನಾಟಕಗಳನ್ನು ಪ್ರದರ್ಶಿಸಲಾಗಿದೆ” ಎಂದು ತಿಳಿಸಿದ್ದಾರೆ.