- ತುಮಕೂರು ಜಿಲ್ಲೆಯ ದುಂಡ ಗ್ರಾಮದಲ್ಲಿ 2008ರಲ್ಲಿ ನಡೆದಿದ್ದ ದಲಿತ ದೌರ್ಜನ್ಯ ಪ್ರಕರಣ
- ವಿಚಾರಣಾ ನ್ಯಾಯಾಲಯದ ಆದೇಶ ರದ್ದುಗೊಳಿಸಿದ್ದ ಹೈಕೋರ್ಟ್ ನ್ಯಾ. ಜೆ ಎಂ ಖಾಝಿ
ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ದುಂಡ ಗ್ರಾಮದಲ್ಲಿ 2008ರಲ್ಲಿ ಹಿಂದೆ ನಡೆದಿದ್ದ ದಲಿತ ದೌರ್ಜನ್ಯ ಪ್ರಕರಣದ ಆರೋಪಿಗಳನ್ನು ಇತ್ತೀಚೆಗೆ ಅಪರಾಧಿಗಳೆಂದು ಘೋಷಿಸಿದ್ದ ಹೈಕೋರ್ಟ್, ನ.16ರಂದು ಶಿಕ್ಷೆಯ ಪ್ರಮಾಣ ಪ್ರಕಟಿಸಿದೆ.
ಪರಿಶಿಷ್ಟ ಜಾತಿ ಮತ್ತು ಪಂಗಡ (ದೌರ್ಜನ್ಯ ತಡೆ) ಕಾಯಿದೆ ಅಡಿಯಲ್ಲಿ ಎಲ್ಲ 10 ಆರೋಪಿಗಳಿಗೆ ಒಂದು ವರ್ಷ ಜೈಲು ಶಿಕ್ಷೆ ಮತ್ತು 3 ಸಾವಿರ ರೂ.ಗಳ ದಂಡ ವಿಧಿಸಿದೆ. ಜತೆಗೆ, ಐಪಿಸಿಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಮಾಡಲಾದ ಆರೋಪಗಳಿಗೆ ವಿವಿಧ ಹಂತದ (ತಿಂಗಳುಗಳಲ್ಲಿ) ಶಿಕ್ಷೆ ವಿಧಿಸಿ ಒಟ್ಟು 85 ಸಾವಿರ ರೂ.ಗಳ ದಂಡ ವಿಧಿಸಿ ಆದೇಶಿಸಿದೆ.
ಪ್ರಕರಣದಲ್ಲಿ ಅಪರಾಧಿಗಳಾಗಿ ಸುದೀಪ್(ಎ1), ಜಯಮ್ಮ(ಎ2), ನಟರಾಜ್(ಎ3), ಶ್ರೀನಿವಾಸ್(ಎ4) ಶಂಕರಯ್ಯ(ಎ5), ಶಿವಕುಮಾರ್(ಎ6), ಹರ್ಷಾ(ಎ7), ಶಿವಲಿಂಗಯ್ಯ(ಎ8), ಪ್ರಕಾಶ್(ಎ9), ಗೌರಮ್ಮ(ಎ10), ಕಲ್ಪನಾ(ಎ11) ಎಂಬವರು ಅಪರಾಧಿಗಳು ಎಂದು ನ.1ರಂದು ಹೈಕೋರ್ಟ್ ತೀರ್ಪು ನೀಡಿತ್ತು. ನ.16ರಂದು ಶಿಕ್ಷೆಯ ಪ್ರಮಾಣ ಪ್ರಕಟಿಸಿದೆ. ಆದರೆ, ಪ್ರಕರಣದ 8ನೇ ಆರೋಪಿಯಾಗಿದ್ದ ಶಿವಲಿಂಗಯ್ಯ ಎಂಬುವವರು ಅರ್ಜಿ ವಿಚಾರಣೆ ನಡುವೆ ಮೃತಪಟ್ಟಿರುವುದರಿಂದ ಅವರ ವಿರುದ್ಧದ ಪ್ರಕರಣ ಹಿಂಪಡೆಯಲಾಗಿದೆ.
ಇದನ್ನು ಓದಿದ್ದೀರಾ? ವಿದ್ಯುತ್ ವ್ಯತ್ಯಯಕ್ಕೆ ಕೇರಳದಲ್ಲೊಂದು ವಿಚಿತ್ರ ಪ್ರತೀಕಾರ: 10 ಸಾವಿರದ ನಾಣ್ಯ ನೀಡಿ ಅಧಿಕಾರಿಗಳಿಗೆ ಕೆಲಸ ಕೊಟ್ಟ ವಾರ್ಡ್ ಸದಸ್ಯ!
ಎ1ರಿಂದ 6ರವರೆಗಿನ ಅಪರಾಧಿಗಳು ಒಕ್ಕಲಿಗ ಹಾಗೂ ಎ7ರಿಂದ ಎ11ರವರೆಗಿನ ಅಪರಾಧಿಗಳು ಲಿಂಗಾಯತ ಸಮುದಾಯದವರಾಗಿದ್ದಾರೆ ಎಂದು ನ್ಯಾಯಾಲಯದ ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ.
2011ರಲ್ಲಿ ವಿಚಾರಣಾ ನ್ಯಾಯಾಲಯವು ಸಾಕ್ಷ್ಯಾಧಾರಗಳ ಕೊರತೆಯ ಹಿನ್ನೆಲೆಯಲ್ಲಿ ಆರೋಪಿಗಳನ್ನು ಖುಲಾಸೆಗೊಳಿಸಿ ಆದೇಶಿಸಿತ್ತು. ವಿಚಾರಣಾ ನ್ಯಾಯಾಲಯದ ಈ ಆದೇಶ ಪ್ರಶ್ನಿಸಿ ಪ್ರಕರಣದ ಸಂತ್ರಸ್ತೆಯಾಗಿರುವ ಲಕ್ಷ್ಮಮ್ಮ ಎಂಬುವವರು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜೈಬುನ್ನೀಸಾ ಮೊಹಿದ್ದೀನ್ ಖಾಝಿ ಅವರಿದ್ದ ನ್ಯಾಯಪೀಠ ನ.1ರಂದು ಅಪರಾಧಿಗಳೆಂದು ಆದೇಶ ನೀಡಿತ್ತಲ್ಲದೇ, ಅವರನ್ನು ಕೂಡಲೇ ಬಂಧಿಸುವಂತೆ ಪೊಲೀಸರಿಗೆ ಸೂಚಿಸಿತ್ತು. ನ.16ರಂದು ಶಿಕ್ಷೆಯ ಪ್ರಮಾಣ ಪ್ರಕಟಿಸಿದ್ದು, ದಂಡದ ಜೊತೆಗೆ ಎಲ್ಲ 10 ಆರೋಪಿಗಳಿಗೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿದೆ.
ವಿಚಾರಣಾ ನ್ಯಾಯಾಲಯ ಪ್ರಕರಣದಲ್ಲಿ ಪ್ರಾಸಿಕ್ಯೂಷನ್ ಸಾಕ್ಷ್ಯಾಧಾರಗಳು ಅನುಮಾನಾಸ್ಪದವಾಗಿವೆ ಎಂದು ಹೇಳಿ ಆರೋಪಿಗಳನ್ನು ಖುಲಾಸೆಗೊಳಿಸಿತ್ತು. ಆದರೆ, ಪ್ರತ್ಯಕ್ಷ್ಯದರ್ಶಿಗಳ ಸಾಕ್ಷ್ಯಗಳನ್ನು ಪರಿಶೀಲನೆ ನಡೆಸಿಲ್ಲ. ಆ ಮೂಲಕ ಆರೋಪಿಗಳನ್ನು ಖುಲಾಸೆಗೊಳಿಸಿ ಆದೇಶಿಸಿದೆ ಎಂದು ಪೀಠ ಅಭಿಪ್ರಾಯ ಪಟ್ಟಿತ್ತು.
ಏನಿದು ಪ್ರಕರಣ?
ತುಮಕೂರು ಜಿಲ್ಲೆ ತುರುವೇಕೆರೆ ತಾಲೂಕಿನ ದುಂಡ ಗ್ರಾಮದಲ್ಲಿ 14.08.2008ರಂದು ಬಲವಂತವಾಗಿ ದಲಿತ ಕೇರಿಗೆ ನುಗ್ಗಿ ದಲಿತ ಸಮುದಾಯಕ್ಕೆ ಸೇರಿದ ವ್ಯಕ್ತಿಗಳ ಜಾತಿ ಪ್ರಸ್ತಾಪಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ ಪ್ರಕರಣ ನಡೆದಿತ್ತು. ಜೊತೆಗೆ ಅಲ್ಲಿದ್ದವರ ಮೇಲೆ ತೀವ್ರ ದೈಹಿಕ ಹಲ್ಲೆ ನಡೆಸಲಾಗಿತ್ತು.
ಗೋವಿಂದರಾಜು, ನರಸಿಂಹಮೂರ್ತಿ, ಕೆಂಪ ಓಬಳಯ್ಯ, ದೊಡ್ಡಯ್ಯನ ಕೆಂಪ ಓಬಳಯ್ಯ, ವೆಂಕಟೇಶ್, ಮಂಜುನಾಥ್, ಉಮೇಶ್, ಮಹಾಲಕ್ಷ್ಮಮ್ಮ ಅವರ ಮೇಲೆ ದೊಣ್ಣೆ, ಕಲ್ಲುಗಳನ್ನು ಬಳಸಿ ದಾಳಿ ನಡೆಸಿದ ಪರಿಣಾಮ ಅವರು ಗಂಭೀರವಾಗಿ ಗಾಯಗೊಂಡಿದ್ದರು.
ಅದೇ ದಿನ ಪ್ರಕರಣದ ಬಗ್ಗೆ ದಂಡಿನಶಿವರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಹನ್ನೊಂದು ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 143, 147, 148, 324, 149 ಹಾಗೂ 1989ರ ಎಸ್ಸಿ ಎಸ್ಟಿ (ದೌರ್ಜನ್ಯ ತಡೆ) ಕಾಯಿದೆಯ ಸೆಕ್ಷನ್ 3 (10)ರ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.
ಪ್ರಕರಣದಲ್ಲಿ ದೋಷಿ ಎಂದು ಪರಿಗಣಿಸಲಾಗಿರುವವರಲ್ಲಿ ಒಬ್ಬರಾದ ಸುದೀಪ್ ಎಂಬವರು ಸಂತ್ರಸ್ತರ ಪೈಕಿ ಲಕ್ಷ್ಮಮ್ಮ ಎಂಬವರ ವಿರುದ್ಧ ಸಿಟ್ಟಾಗಿದ್ದರು. ಸಿವಿಲ್ ಪ್ರಕರಣವೊಂದಕ್ಕೆ ಸಂಬಂಧಿಸಿ ಲಕ್ಷ್ಮಮ್ಮ ತಮ್ಮ ವಿರುದ್ಧ ಪೊಲೀಸ್ ದೂರು ನೀಡಲು ಮುಂದಾಗಿದ್ದೇ ಸುದೀಪ್ ಸಿಟ್ಟಿಗೆ ಕಾರಣವಾಗಿತ್ತು. ಇದೇ ಕಾರಣ ಮುಂದಿಟ್ಟುಕೊಂಡು ಗ್ರಾಮದ 2008ರ ಆಗಸ್ಟ್ 14ರಂದು ದಲಿತ ಕಾಲೋನಿಗೆ ನುಗ್ಗಿದ್ದ ಮೇಲ್ವರ್ಗದವರು, ಅವರ ಮೇಲೆ ಜಾತಿ ನಿಂದನೆ ಮಾಡಿ ಹಲ್ಲೆ ಮಾಡಿದ್ದರು.
ಪ್ರಕರಣ ಸಂಬಂಧ ತುಮಕೂರಿನ ನ್ಯಾಯಾಲಯದಲ್ಲಿ ವಿಚಾರಣೆ ನಡೆದು, 2011ರಲ್ಲಿ ಆರೋಪಿಗಳನ್ನು ಖುಲಾಸೆಗೊಳಿಸಲಾಗಿತ್ತು. ಬಳಿಕ ಸಂತ್ರಸ್ತೆ ಲಕ್ಷ್ಮಮ್ಮ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿದಾರರ ಪರ ವಕೀಲರಾದ ಕ್ಲಿಫ್ಟನ್ ಡಿ ರೊಝಾರಿಯೊ, ಮೈತ್ರೇಯಿ ಕೃಷ್ಣನ್ ವಾದಿಸಿದ್ದರು.