ಇಂಡಿ ತಾಲೂಕಿನ ಬಬಲಾದ ಗ್ರಾಮದಲ್ಲಿ ಸಾರಾಯಿ ಅಂಗಡಿಗಳು ಹೆಚ್ಚಾಗಿದ್ದು, ಕೂಡಲೇ ಎಲ್ಲ ಅಂಗಡಿಗಳನ್ನು ಬಂದ್ ಮಾಡಬೇಕೆಂದು ಆಗ್ರಹಿಸಿ ಗ್ರಾಮದ ಮಹಿಳಾ ಸಂಘಟನೆಯ ಕಾರ್ಯಕರ್ತರು ಅಬಕಾರಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಮಹಿಳೆಯರು, ಅಕ್ರಮ ಸರಾಯಿ ಮಾರಾಟದಿಂದ ಗ್ರಾಮದ ಹಲವು ಜನರು ಕುಡಿತಕ್ಕೆ ಒಳಗಾಗಿ, ಕುಟುಂಬಗಳನ್ನು ಬೀದಿಗೆ ತಳ್ಳುತ್ತಿದ್ದಾರೆ. ಯುವಕರು ಶಿಕ್ಷಣದ ಬಗ್ಗೆ ಗಮನ ಹರಿಸದೆ ಕುಡಿತದ ದಾಸರಾಗಿದ್ದಾರೆ. ಮಹಿಳೆಯರು, ವೃದ್ಧರು ಎನ್ನದೇ ಸಾರಾಯಿ ಅಮಲಿನಲ್ಲಿ ಅಸಹ್ಯಕರವಾಗಿ ನಡೆದುಕೊಳ್ಳುತ್ತಿದ್ದಾರೆ. ಕುಡುಕರು ಅಂಬೇಡ್ಕರ್ ಭವನದ ಮುಂದೆ ಮೂತ್ರ ವಿಸರ್ಜನೆ ಮಾಡುವುದು, ಸಾರಾಯಿ ಬಾಟಲಿಗಳನ್ನು ಎಸೆಯುವುದು ಮಾಡುತ್ತಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಗಲೀಜು ಮಾಡಿದ್ದರ ಬಗ್ಗೆ ಕೇಳಿದರೆ ಜಗಳಕ್ಕೆ ಬರುತ್ತಾರೆ. ಅಕ್ರಮ ಸಾರಾಯಿ ಅಂಗಡಿಗಳಿಂದ ಗ್ರಾಮದಲ್ಲಿ ಅಶಾಂತತೆ ವಾತಾವರಣ ನಿರ್ಮಾಣವಾಗಿದೆ. ಮಹಿಳೆಯರಿಗೆ ಗ್ರಾಮದಲ್ಲಿ ರಕ್ಷಣೆ ಇಲ್ಲದಂತಾಗಿದೆ. ನಶೆಯಲ್ಲಿ ಮಹಿಳೆಯರಿಗೆ ಅಸಭ್ಯವಾಗಿ ಬಯ್ಯುತ್ತಿದ್ದಾರೆ. ಬಬಲಾದ ಗ್ರಾಮ ಮಾದರಿ ಗ್ರಾಮವಾಗಿ ಬದಲಾಗುವಂತಾಗಲು ಸಾರಾಯಿ ಅಂಗಡಿಗಳನ್ನು ಬಂದ್ ಮಾಡಿ ಎಂದು ಮಹಿಳೆಯರು ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಐ.ಎಸ್. ಹೊಸಮನಿ, ಮಹಾದೇವಿ ಶಿವಶರಣ, ಸುರೇಖಾ ಶಿವಶರಣ, ಯಲ್ಲಭಾಯಿ ಉಕಲಿ, ಇಂದು ಹೊಸಮನಿ, ಡಾ. ಭುವನೇಶ್ವರಿ, ನೀಲಾಬಾಯಿ ಬನಸೋಡೆ, ಲಲಿತಾ ದಶವಂತ್, ಕನ್ನಾಬಾಯಿ ಹರಿಜನ್ ಇತರರು ಇದ್ದರು.