ಉತ್ತರಾಖಂಡದ ಸಿಲ್ಕ್ಯಾರಾದಲ್ಲಿ ನಿರ್ಮಾಣ ಹಂತದಲ್ಲಿದ್ದ ಸುರಂಗ ಮಾರ್ಗ ಕಳೆದ 15 ದಿನಗಳ ಹಿಂದೆ ಕುಸಿದು ಬಿದ್ದು 41 ಕಾರ್ಮಿಕರು ಸಿಲುಕಿಕೊಂಡಿದ್ದು, ಕಾರ್ಮಿಕರನ್ನು ಹೊರತರುವ ರಕ್ಷಣಾ ಕಾರ್ಯಾಚರಣೆ ಇಲ್ಲಿಯವರೆಗೂ ಫಲಪ್ರದವಾಗಿಲ್ಲ.
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಕೂಡ ಯಾವುದೇ ಪ್ರಗತಿ ಕಂಡು ಬಂದಿಲ್ಲ ಎಂದು ತಿಳಿಸಿದೆ. ಈ ನಡುವೆ ಸಿಲ್ಕ್ಯಾರಾ ಸುರಂಗದೊಳಗೆ ಕಾರ್ಮಿಕರನ್ನು ತಲುಪಲು ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯುಂಟಾಗಿರುವ ಅವಶೇಷಗಳನ್ನು ಕೊರೆಯಲು ಹೈದರಾಬಾದ್ನಿಂದ ಪ್ಲಾಸ್ಮಾ ಕಟ್ಟರ್ ಯಂತ್ರವನ್ನು ತರಲಾಗಿದೆ.
ಈ ಯಂತ್ರದಿಂದ ಸುರಂಗದಲ್ಲಿ ಅಡ್ಡಿಯುಂಟಾಗಿರುವ ಕಲ್ಲುಮಣ್ಣುಗಳನ್ನು ಹೊರತೆಗೆಯಲು ಹಾಗೂ ಅವಶೇಷಗಳಡಿಯಲ್ಲಿ ಸಿಲುಕಿಕೊಂಡಿರುವ ಸುರಂಗ ಕೊರೆಯುವ ಆಗರ್ ಯಂತ್ರದ ಬ್ಲೇಡ್ಗಳನ್ನು ಹೊರತೆಗೆಯಲು ಸಹಾಯವಾಗುತ್ತದೆ. ಅಲ್ಲದೆ ಅವಶೇಷಗಳನ್ನು ಪೈಪ್ ಮೂಲಕ ಹೊರತಳ್ಳುವುದನ್ನು ಒಳಗೊಂಡಿರುತ್ತದೆ. ಜೊತೆಗೆ ಡ್ರಿಲ್ ಯಂತ್ರವನ್ನು ಸುರಂಗದ ಮೇಲೆ ಲಂಬವಾಗಿ ಕೊರೆಯುವಿಕೆಗಾಗಿ ಕಳುಹಿಸಲಾಗಿದೆ.
ಭಾರತೀಯ ಸೇನೆಯ ಇಂಜಿನಿಯರ್ ಗುಂಪಿನ ಸುರಂಗ ತೋಡುವವರು ರಕ್ಷಣಾ ಕಾರ್ಯಾಚರಣೆಯಲ್ಲಿ ಸಹಾಯ ಮಾಡಲು ಭಾನುವಾರ ಸ್ಥಳಕ್ಕೆ ಆಗಮಿಸಿದ್ದಾರೆ.
ಕುಸಿದ ಸುರಂಗದ ಅವಶೇಷಗಳ ಮೂಲಕ ಕೊರೆಯುವ ಆಗರ್ ಯಂತ್ರದ ಬ್ಲೇಡ್ಗಳು ಶುಕ್ರವಾರ ರಾತ್ರಿ ಶಿಲಾಖಂಡರಾಶಿಗಳಲ್ಲಿ ಸಿಲುಕಿಕೊಂಡವು. ಈ ಕಾರಣದಿಂದ ರಕ್ಷಣಾ ಕಾರ್ಯಾಚರಣೆಯನ್ನು ಹಲವು ದಿನಗಳವರೆಗೆ ತೆಗೆದುಕೊಂಡು ಹೋಗಲು ಸಾಧ್ಯವಾಯಿತು ಎಂದು ಅಧಿಕಾರಿಗಳು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ದುಡಿವ ಜನರ ಮಹಾಧರಣಿ: ಶುರುವಾಗಲಿ ಜನಪರ್ಯಾಯ
ರಕ್ಷಣಾ ಕಾರ್ಯಾಚರಣೆಯ ಯೋಜನಾ ತಂಡ ಇಂದು ಎರಡು ಪರ್ಯಾಯಗಳತ್ತ ಗಮನ ಹರಿಸಿದೆ. ಇದು ಗುರಿ ತಲುಪಲು ಉಳಿದ 10 ಹಾಗೂ 12 ಮೀಟರ್ ದೂರವನ್ನು ಹಸ್ತಚಾಲಿತ ಯಂತ್ರದ ಮುಖೇನ ಕೊರೆಯುವುದು ಹಾಗೂ ಮೇಲಿನಿಂದ 86 ಮೀಟರ್ ಕೆಳಗೆ ಕೊರೆಯುವುದನ್ನು ಒಳಗೊಂಡಿದೆ.
ಸುರಂಗದ ಒಳಗೆ ಸಿಲುಕಿರುವ ಕಾರ್ಮಿಕರ ಮನಸ್ಥಿತಿ ಹತೋಟಿಗೆ ತರಲು ಸುರಂಗದೊಳಗೆ ಸಿಲುಕಿರುವ ಕಾರ್ಮಿಕರಿಗೆ ಮೊಬೈಲ್ ಫೋನ್, ಲೂಡೋ ಗೇಮ್ಸ್ ಆಡಲು ಬೋರ್ಡ್ ಕಳುಹಿಸಿ ಕೊಟ್ಟಿದ್ದಾರೆ ಇದರಿಂದ ಕಾರ್ಮಿಕರು ಮಾನಸಿಕವಾಗಿ ಸ್ಥಿಮಿತದಲ್ಲಿರಲು ಸಹಕಾರಿಯಾಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ರಕ್ಷಣಾ ಕಾರ್ಯಾಚರಣೆ ವಿಳಂಬವಾದ ಹಿನ್ನೆಲೆಯಲ್ಲಿ ಕಾರ್ಮಿಕರು ಮಾನಸಿಕವಾಗಿ ಕುಗ್ಗದಂತೆ ಈ ನಿರ್ಧಾರಕ್ಕೆ ಬಂದಿದ್ದು, ಒಂದೆಡೆ ಕಾರ್ಯಾಚರಣೆ ಮುಂದುವರೆಸಲು ಬೇಕಾದ ವ್ಯವಸ್ಥೆಗಳನ್ನು ಮಾಡಿಕೊಳ್ಳುತ್ತಿದ್ದು ಇನ್ನೊಂದೆಡೆ ಕಾರ್ಮಿಕರ ಸುರಕ್ಷತೆಯ ದೃಷ್ಟಿಯಿಂದ ಅವರ ಮಾನಸಿಕ ನೆಮ್ಮದಿಗೆ ಬೇಕಾದ ಮೂಲ ಸೌಲಭ್ಯವನ್ನು ಒದಗಿಸುವತ್ತ ಅಧಿಕಾರಿಗಳು ಗಮನಹರಿಸಿದ್ದಾರೆ ಎನ್ನಲಾಗಿದೆ.
ನವೆಂಬರ್ 12 ರಂದು ಉತ್ತರಾಖಂಡ್ನ ಚಾರ್ ಧಾಮ್ ಮಾರ್ಗದಲ್ಲಿ ನಿರ್ಮಾಣ ಹಂತದಲ್ಲಿರುವ ಸುರಂಗದ ಒಂದು ಭಾಗವು ಭೂಕುಸಿತದಿಂದ ಬಿದ್ದ ನಂತರ ರಕ್ಷಣಾ ಪ್ರಯತ್ನ ಪ್ರಾರಂಭವಾಯಿತು.
ಕಾರ್ಮಿಕರಿಗೆ ಎರಡು ಕಿಮಿ ಸುರಂಗದೊಳಗೆ ಆರು ಇಂಚು ಅಗಲದ ಪೈಪ್ ಮೂಲಕ ಆಹಾರ, ಔಷಧ ಮತ್ತಿತರ ಅಗತ್ಯ ವಸ್ತುಗಳನ್ನು ಕಳುಹಿಸಲಾಗುತ್ತಿದೆ.