ವಿಜಯಪುರದಲ್ಲಿ ಎರಡು ಪ್ರದೇಶಗಳಲ್ಲಿ ನಾಯಿಗಳು ಮಕ್ಕಳ ಮೇಲೆ ದಾಳಿ ಮಾಡಿರುವ ಘಟನೆ ಸೋಮವಾರ ನಡೆದಿದೆ. ಘಟನೆಯಲ್ಲಿ ನಾಲ್ಕು ಬಾಲಕರು ಗಾಯಗೊಂಡಿದ್ದು, ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಮಕ್ಕಳು ಮನೆಯಾಚೆ ಬಂದಿದ್ದ ವೇಳೆ ನಾಯಿಗಳು ದಾಳಿಮಾಡಿ ಗಾಯಗೊಳಿಸಿವೆ. ನಗರದ ಬಡೀಕಮಾನ್ ಬಳಿ ನಾಯಿಗಳ ಪ್ರತ್ಯೇಕ ಎರಡು ದಾಳಿ ನಡೆದಿವೆ. ಮಕ್ಕಳು ಮನೆಯಿಂದ ಹೊರಗೆ ಬಂದಿದ್ದ ವೇಳೆ ಬಾಲಕರ ಮೇಲೆ ದಾಳಿ ಮಾಡಿ ಕಚ್ಚಿವೆ.
ನಗರದಲ್ಲಿ ಬೀದಿ ನಾಯಿಗಳ ಕಾಟ ಹೆಚ್ಚಾಗಿದ್ದು, ಜನರು ಬೇಸತ್ತಿದ್ದಾರೆ. ಹೀಗಾಗಿ ಬೀದಿ ನಾಯಿಗಳ ಹಾವಳಿ ತಡೆಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಮಹಾನಗರ ಪಾಲಿಕೆ ಅಧಿಕಾರಿಗಳನ್ನು ಜನರು ಒತ್ತಾಯಿಸುತ್ತಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಳ ಟೌನ್ನಲ್ಲಿ ಹುಚ್ಚು ನಾಯಿ ದಾಳಿಗೆ 12ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ನಾಯಿ ಸೆರೆ ಹಿಡಿಯಲು ಕಾರ್ಯಾಚರಣೆ ಆರಂಭಿಸುವಷ್ಟರಲ್ಲಿ ಸಾರ್ವಜನಿಕರು ಆ ನಾಯಿಯನ್ನು ಹೊಡೆದು ಕೊಂದು ಹಾಕಿದ್ದರು.