ಬೆಳಗಾವಿ ಸುವರ್ಣಸೌಧದಲ್ಲಿ ಡಿಸೆಂಬರ್ 4ರಿಂದ ಅಧಿವೇಶನ ಆರಂಭವಾಗಲಿದೆ. ಸದನದಲ್ಲಿ ಉತ್ತರ ಕರ್ನಾಟಕದ ಜನರ ಸಮಸ್ಯೆಗಳು ಮತ್ತು ಸಂಕಷ್ಟಗಳ ಬಗ್ಗೆ ಚರ್ಚೆ ನಡೆಯುತ್ತದೆಯೇ? ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತದೆಯೇ ಎಂದು ಆ ಭಾಗದ ಜನರು ಎದುರು ನೋಡುತ್ತಿದ್ದಾರೆ.
ಬೆಳಗಾವಿಯಲ್ಲಿ ಕಳೆದ ವರ್ಷ ನಡೆದ ಅಧಿವೇಶನದಲ್ಲಿ ರಾಜಕೀಯ ಪ್ರತಿಭಟನೆಗಳು, ಆರೋಪ, ಪ್ರತ್ಯಾರೋಪಗಳಲ್ಲೇ ಇಡೀ ಸದನ ಮುಗಿದು ಹೋಗಿತ್ತು. ಯಾವುದೇ ಸಮಸ್ಯೆಗಳ ಬಗ್ಗೆ ಗಂಭೀರ ಚರ್ಚೆಗಳು ನಡೆದಿರಲಿಲ್ಲ. ಇದೀಗ, ಸರ್ಕಾರವೇ ಬದಲಾಗಿದ್ದು, ಹೊಸ ಸರ್ಕಾರ ತನ್ನ ಮೊದಲ ಚಳಿಗಾಲದ ಅಧಿವೇಶನವನ್ನು ಸುವರ್ಣಸೌಧದಲ್ಲಿ ನಡೆಸುತ್ತಿದೆ. ಈ ಬಾರಿಯಾದರೂ ಸದನದಲ್ಲಿ ಉತ್ತರ ಕರ್ನಾಟಕದ ವಿಷಯಗಳನ್ನು ಚರ್ಚೆಯಾಗಬಹುದೇ ಎಂದು ಹಲವು ಸಂಘಟನೆಗಳು ಪ್ರಶ್ನಿಸುತ್ತಿವೆ.
ಅಧಿವೇಶನದ ವೇಳೆ ಪ್ರತಿಭಟನೆ ನಡೆಸಲು ಮುಂದಾಗಿರುವ ಸಂಘಟನೆಗಳ ಪ್ರತಿನಿಧಿಗಳನ್ನು ಸದನದ ಆರಂಭಕ್ಕೂ ಮುನ್ನ ಭೇಟಿ ಮಾಡಿ, ಅಹವಾಲುಗಳನ್ನು ಆಲಿಸಿ, ಪ್ರತಿಭಟನೆಗಳನ್ನು ತಪ್ಪಿಸಿ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಸರ್ಕಾರಕ್ಕೆ ಸೂಚಿಸಿದ್ದಾರೆ.
ಈ ಬಾರಿ ಮಹತ್ವದ ವಿಚಾರಗಳು ಚರ್ಚೆಯಾಗಿ, ಪರಿಹಾರ ಸಿಗುವ ನಿರೀಕ್ಷೆಯಲ್ಲಿ ಜನರಿದ್ದಾರೆ. ಈ ವರ್ಷ ಬರ ಎದುರಾಗಿದ್ದು, ಅದರ ಮೇಲೆ ಸರ್ಕಾರ ಹೆಚ್ಚಿನ ಗಮನಹರಿಸಬೇಕು. ನೀರಾವರಿ ಯೋಜನೆಗಳಲ್ಲಿ ಬಾಕಿ ಉಳಿದಿರುವ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು. ಗ್ರಾಮೀಣ ಭಾಗಕ್ಕೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಬಗ್ಗೆ ಚರ್ಚೆಯಾಗಬೇಕು ಎಂದು ಜನರು ಬಯಸಿದ್ದಾರೆ.
ಈ ಸುದ್ದಿ ಓದಿದ್ದೀರಾ?: ಪ್ರತಿಕೃತಿ ಸುಟ್ಟು ’ಮಹಾಧರಣಿ’ ಸಮಾಪ್ತಿ; ಬಿಜೆಪಿ ಸೋಲಿಸಲು ನಿರ್ಧಾರ
ಕೃಷ್ಣಾ ಮೇಲ್ದಂಡೆ ಯೋಜನೆ (ಯುಕೆಪಿ) ಮೂರನೇ ಹಂತದ (ಆಲಮಟ್ಟಿ ಅಣೆಕಟ್ಟಿನ ಎತ್ತರವನ್ನು 519.6 ಮೀಟರ್ನಿಂದ 524 ಮೀಟರ್ಗೆ ಏರಿಸುವ ಯೋಜನೆ) ಬಗ್ಗೆ ಸರ್ಕಾರ ಯಾವ ಕ್ರಮಕ್ಕೂ ಮುಂದಾಗಿಲ್ಲ. ಯೋಜನೆ ಬಗ್ಗೆ ಚರ್ಚಿಸಿ, ಅನುಷ್ಠಾನಕ್ಕೆ ಅಗತ್ಯ ಇರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಬೇಕು. ಆದರೆ, ಈ ಬಗ್ಗೆ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹೆಚ್ಚು ಮಾತನಾಡುತ್ತಿಲ್ಲ. ಹೀಗಿದ್ದರೂ, ವಿರೋಧ ಪಕ್ಷಗಳು ಕೂಡ ಮೌನವಾಗಿವೆ.
ಐದು ಗ್ಯಾರಂಟಿಗಳ ಅನುಷ್ಠಾನದಲ್ಲಿಯೇ ಸರ್ಕಾರ ನಿರತವಾಗಿದೆ. ಇತರ ವಿಷಯಗಳ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಪ್ರತಿಪಕ್ಷ ಬಿಜೆಪಿ ಆಂತರಿಕ ಕಚ್ಚಾಟದಲ್ಲಿ ತೊಡಗಿದೆ. ಪ್ರತಿಪಕ್ಷದ ನಾಯಕ ಆರ್.ಅಶೋಕ್ ಉತ್ತರ ಕರ್ನಾಟಕಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಪ್ರಸ್ತಾಪಿಸಲು ಆಸಕ್ತಿ ತೋರುವರೇ ಎಂಬ ಅನುಮಾನಗಳಿವೆ ಎಂದು ಉತ್ತರ ಕರ್ನಾಟಕ ಭಾಗದ ಜನರು ಅನುಮಾನಿಸುತ್ತಿದ್ದಾರೆ.