ಕೇಂದ್ರ ಸರ್ಕಾರಕ್ಕೆ ರಾಜ್ಯದಿಂದ 4 ಲಕ್ಷ ಕೋಟಿ ತೆರಿಗೆ ಹಣ ಪಾವತಿಯಾಗುತ್ತಿದೆ. ರಾಜ್ಯದ ಪಾಲು ಕೇವಲ 30 ಸಾವಿರ ಕೋಟಿ ಬರುತ್ತಿದೆ. ನಾವು ಒಕ್ಕೂಟ ವ್ಯವಸ್ಥೆಯಲ್ಲಿ ಇದ್ದೇವೆ. ಬರ ಪರಿಹಾರ ನಮ್ಮ ಹಕ್ಕು. ನ್ಯಾಯ ಸಮ್ಮತವಾಗಿ ಕೇಂದ್ರ ಸರ್ಕಾರವು ನಮಗೆ ನೀಡಬೇಕಿದೆ ಎಂದು ಕೃಷಿ ಸಚಿವರಾದ ಎನ್ ಚಲುವರಾಯಸ್ವಾಮಿ ತಿಳಿಸಿದರು.
ಬಳ್ಳಾರಿ ಜಿಲ್ಲೆಯ ಬರ ಪೀಡಿತ ಬೆಳೆ ಹಾನಿ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬಳ್ಳಾರಿ, ವಿಜಯನಗರ ಜಿಲ್ಲಾ ಕೃಷಿ, ಜಲಾನಯನ ಇಲಾಖೆ ಪ್ರಗತಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು.
ಕೇಂದ್ರ ಸರ್ಕಾರ ಬರ ಪರಿಹಾರ ಅನುದಾನ ಶೀಘ್ರದಲ್ಲೇ ಒದಗಿಸುವ ನಿರೀಕ್ಷೆ ಇದೆ. ಕೇಂದ್ರ ಅನುದಾನ ನೀಡದಿದ್ದರೂ ರಾಜ್ಯ ಸರ್ಕಾರ ಕುಡಿಯುವ ನೀರು, ಮೇವಿನ ನಿರ್ವಹಣೆಗೆ ಈಗಾಗಲೇ ಹಣ ಬಿಡುಗಡೆ ಮಾಡಿದೆ. ಹಾಗೇ ರೈತರ ಹಿತವನ್ನು ರಾಜ್ಯ ಸರ್ಕಾರವು ಕಾಯುತ್ತದೆ ಎಂದರು.
‘ಪ್ರಿವೆಂಟಿವ್ ಸೋಯಿಂಗ್ ಇನ್ವೋಕ್ ಹಾಗೂ ಮಧ್ಯಂತರ ಬೆಳೆ ಹಾನಿ ಪರಿಹಾರಕ್ಕೆ ಈಗಾಗಲೇ 343 ಕೊಟಿ ಬಿಡುಗಡೆಯಾಗಿದೆ. ಅದೇ ರೀತಿ ಶೀಘ್ರ ಬರ ಪರಿಹಾರ ಹಣ ಕೂಡ ರೈತರ ಖಾತೆಗೆ ನೇರವಾಗಿ ಸೇರಲಿದೆ. ಅದಕ್ಕೆ ಪೂರಕವಾಗಿ ಶೇ 100ರಷ್ಟು ರೈತರ ವಿವರ ಫ್ರೂಟ್ಸ್ ಐಡಿಗೆ ದಾಖಲಿಸುವ, ಕೆ.ವೈ.ಸಿ ನೋಂದಾಯಿಸುವ ಕಾರ್ಯ ಅಭಿಯಾನದ ಸ್ವರೂಪದಲ್ಲಿ ಮಾಡಲಾಗುತ್ತಿದೆ’ ಎಂದು ಸಚಿವ ಚಲುವರಾಯಸ್ವಾಮಿ ತಿಳಿಸಿದರು.
ರಾಜ್ಯದಲ್ಲಿ ಕೃಷಿ ಹಾಗೂ ಜಲಾನಯನ ಇಲಾಖೆ ಮೂಲಕ 1.43 ಕೋಟಿ ರೈತರಿಗೆ ಒಟ್ಟಾರೆ ₹5,388 ಕೋಟಿ ರೂ ಸೌಲಭ್ಯ ತಲುಪಿದಂತಾಗುತ್ತದೆ. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಸೇರಿದಂತೆ ವಿವಿಧ ಯೋಜನೆಗಳ ಮೂಲ 75 ಸಾವಿರ ಕೋಟಿ ಆರ್ಥಿಕ ನೆರವು ರಾಜ್ಯದ ಜನ ಸಾಮಾನ್ಯರಿಗೆ ನೇರವಾಗಿ ತಲುಪುತ್ತಿದೆ. ಸಾಮಾಜಿಕ ಸಬಲೀಕರಣ ಸರ್ಕಾರದ ಮೂಲ ಆಶಯ ಎಂದು ಹೇಳಿದರು.
ಸೂಕ್ಷ್ಮ ನೀರಾವರಿ ಯೋಜನೆಯಡಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದವರಿಗೆ 90% ಸಹಾಯಧನದಲ್ಲಿ ಹನಿ ನೀರಾವರಿ ಅಥವಾ ಸ್ಪಿಂಕ್ಲೇರ್ ಸಾಧನ ವಿತರಿಸಲಾಗುತ್ತಿದ್ದ ಅರ್ಜಿ ಸಲ್ಲಿಸಿದ 48 ಗಂಟೆಗಳಲ್ಲಿ ಮಂಜೂರು ಮಾಡಲಾಗುವುದು. ಈಗಾಗಲೇ ಎಲ್ಲ ಅರ್ಹರಿಗೆ ಎಸ್ಎಂಎಸ್ ಸಂದೇಶ ರವಾನಿಸಲಾಗಿದೆ ಎಂದರು.
ಕಾಲಮಿತಿಯೊಳಗೆ ಯೋಜನೆ ಅನುಷ್ಠಾನಕ್ಕೆ ಸೂಚನೆ
ಕೃಷಿ ಮತ್ತು ಜಲಾನಯನ ಇಲಾಖೆ ಯೋಜನೆಗಳನ್ನು ಕಾಲಮಿತಿಯೊಳಗೆ ಅನುಷ್ಠಾನ ರೈತರ ಆರ್ಥಿಕ ಮಟ್ಟ ಸುಧಾರಣೆಗೆ ಶ್ರಮಿಸಿ ಎಂದು ಕೃಷಿ ಸಚಿವರು ಇದೇ ವೇಳೆ ಅಧಿಕಾರಿಗಳಿಗೆ ಸೂಚಿಸಿದರು.
ಬಳ್ಳಾರಿ ಜಿಲ್ಲೆಯಲ್ಲಿ ಬೆಳೆ ವಿಮೆ ನೋಂದಣಿ ತುಂಬಾ ಕಡಿಮೆ ಇದ್ದು, ಇನ್ನು ಮುಂದೆ ಬೆಳೆ ವಿಮೆ ಅನುಕೂಲಗಳ ಬಗ್ಗೆ ಪ್ರತಿ ಗ್ರಾಮದಲ್ಲಿ ಜಾಗೃತಿ ಮೂಡಿಸಿ ನೋಂದಣಿ ಹೆಚ್ಚಿಸಿ ಎಂದರು.
ರಾಜ್ಯದಲ್ಲಿ ಈ ಬಾರಿ 200 ಕೋಟಿ ವೆಚ್ಚದಲ್ಲಿ 32,000 ಕೃಷಿ ಹೊಂಡ ನಿರ್ಮಾಣ ಮಾಡಲಾಗುವುದು. ಟೈ ಲ್ಯಾಂಡ್ ಗಳಲ್ಲಿ ಕೃಷಿ ಹೊಂಡ ನಿರ್ಮಾಣಕ್ಕೆ ಆದ್ಯತೆ ನೀಡಿ ಅಲ್ಲದೆ ಇಂತಹ ಪ್ರದೇಶಗಳ ರೈತರಿಗೂ ಬೆಳೆ ಪರಿಹಾರ ಒದಗಿಸಲು ಇರುವ ತೊಡಕು ಬಗೆ ಹರಿಸಿ ಎಂದು ಸಚಿವರು ಸೂಚನೆ ನೀಡಿದರು
ತಪಾಸಣೆ ಹೆಚ್ಚಿಸಬೇಕು. ನಕಲಿ ಬೀಜ, ರಸಗೊಬ್ಬರ ಮಾರಾಟದ ಪತ್ತೆ ಹಚ್ಚಿ ಪ್ರಕರಣ ದಾಖಲಿಸಿಕೊಳ್ಳಬೇಕು ಎಂದು ಇದೇ ವೇಳೆ ತಿಳಿಸಿದ ಕೃಷಿ ಸಚಿವರು, ಕೃಷಿ ನವೋದ್ಯಮ ಪ್ರೋತ್ಸಾಹ ಮಾಡಿ, ಹಾರ್ವೆಸ್ಟ್ ಹಬ್ ಸ್ಥಾಪನೆಗೂ ಆದ್ಯತೆ ನೀಡಿ ಎಂದು ತಿಳಿಸಿದರು.
ಕ್ರೀಡಾ ಮತ್ತು ಯುವ ಸಬಲಿಕರಣ ಸಚಿವ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಬಿ ನಾಗೇಂದ್ರ, ಕಂಪ್ಲಿ ಶಾಸಕರಾದ ಗಣೇಶ್, ಶಿರಗುಪ್ಪ ಶಾಸಕರಾದ ನಾಗರಾಜು, ಬಳ್ಳಾರಿ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಸೇರಿದಂತೆ ಹಿರಿಯ ಅಧಿಕಾರಿಗಳು ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿದ್ದರು.