ಸಕಾಲ ಯೋಜನೆಯಡಿ ದಿನದಿಂದ ದಿನಕ್ಕೆ ಅರ್ಜಿ ಸಲ್ಲಿಕೆ ಮಾಡುವವರ ಸಂಖ್ಯೆ ಏರಿಕೆಯಾಗುತ್ತಿದೆ. ಹೀಗಾಗಿ, ಜನರಿಗೆ ಅನುಕೂಲವಾಗಲು ಸಕಾಲ ಮಿಷನ್ ಹೊಸ ಯೋಜನೆಗಳನ್ನು ಸೇರ್ಪಡೆಗೊಳಿಸುತ್ತಿದೆ. ಇದೀಗ, ನಾಗರಿಕರು ಸಲ್ಲಿಸುವ ಅರ್ಜಿಗಳು ತಿರಸ್ಕ್ರತಗೊಂಡರೆ, ಅಂತಹವರ ನೋಂದಾಯಿತ ಮೊಬೈಲ್ ಸಂಖ್ಯೆಗೆ ಪ್ರಥಮ ಮೇಲ್ಮನವಿ ಸಲ್ಲಿಸಲು ಅನುಕೂಲವಾಗುವಂತೆ ಲಿಂಕ್ ಕಳುಹಿಸುವ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ಮೂಲಕ ಮಾಹಿತಿ ನೀಡಿದ ಸಕಾಲ ಮಿಷನ್ ಹೆಚ್ಚುವರಿ ಯೋಜನಾ ನಿರ್ದೇಶಕಿ ಪಲ್ಲವಿ ಆಕುರಾತಿ, “ಸಕಾಲ ಮಿಷನ್ ರಾಜ್ಯದಲ್ಲಿ ಪ್ರಥಮ ಬಾರಿಗೆ ಎಸ್ಎಂಎಸ್ ಮೂಲಕ ಮೇಲ್ಮನವಿ ಸಲ್ಲಿಸಲು ಅವಕಾಶ ನೀಡಿದೆ. ತಿರಸ್ಕೃತಗೊಂಡ ಅರ್ಜಿಗಳಿಗೆ ಸಂಬಂಧಿಸಿದಂತೆ ಸ್ವಯಂಚಾಲಿತವಾಗಿ ಸಕ್ಷಮ ಪ್ರಾಧಿಕಾರಿಗೆ ಪ್ರಥಮ ಮೇಲ್ಮನವಿಯನ್ನು ಎಸ್ಎಂಎಸ್ ಮೂಲಕ ಕಳುಹಿಸುವ ಸೇವೆಯನ್ನು ಸೆಪ್ಟೆಂಬರ್ ತಿಂಗಳಿನಿಂದ ಜಾರಿಗೊಳಿಸಲಾಗಿದೆ” ಎಂದಿದ್ದಾರೆ.
“ನಾಗರಿಕರು ಈ ಅವಕಾಶವನ್ನು ಪರಿಣಾಮಕಾರಿಯಾಗಿ ಹಾಗೂ ಸುಲಭವಾಗಿ ಬಳಸಿಕೊಳ್ಳಲು ಅನುವು ಮಾಡಿಕೊಡುವ ಉದ್ದೇಶದಿಂದ ಅಪೀಲು ಹಾಕಲು ಲಿಂಕ್ನ್ನು ಎಸ್ಎಂಎಸ್ ಮೂಲಕ ಕಳುಹಿಸುವ ವ್ಯವಸ್ಥೆ ಮಾಡಲಾಗಿದೆ. ವಿದ್ಯುನ್ಮಾನ ನಾಗರಿಕ ಸೇವಾ ವಿತರಣಾ ನಿರ್ದೇಶನಾಲಯದಿಂದ ಇದುವರೆಗೆ ಒಟ್ಟು 3,18,420 ಎಸ್ಎಂಎಸ್ ಕಳುಹಿಸಲಾಗಿದೆ” ಎಂದು ಹೇಳಿದ್ದಾರೆ.
“ಸಾರಿಗೆ ಇಲಾಖೆಯಲ್ಲಿ ಅರ್ಜಿಗಳ ಮಾಹಿತಿಯನ್ನು ಸಕಾಲ ತಂತ್ರಾಂಶಕ್ಕೆ ಮ್ಯಾನುಯಲ್ ಆಗಿ ಪುಶ್ ಮಾಡಲಾಗುತ್ತಿದ್ದು, ಇದನ್ನು ಆಟೋಪುಷ್ಗೆ ಬದಲಾಯಿಸಲಾಗಿದೆ. ಹಾಗಾಗಿ, ಸಕಾಲದಲ್ಲಿ ಬಾಕಿ ಇದ್ದ ಅರ್ಜಿಗಳ ಸಂಖ್ಯೆಯು ಗಣನೀಯವಾಗಿ ಇಳಿಕೆಗೊಂಡಿದೆ. 9,691 ರಿಂದ 2,682 ಗಳಿಗೆ ಸಂಖ್ಯೆ ಇಳಿಕೆಯಾಗಿದೆ” ಎಂದು ತಿಳಿಸಿದ್ದಾರೆ.
“ಕಳೆದ ಮೂರು ತಿಂಗಳ ಅವಧಿಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಅಸ್ತಿತ್ವದಲ್ಲಿರುವ ದೂರ ಸಂಪರ್ಕ ಮೂಲಸೌಕರ್ಯ, ಗೋಪುರಕ್ಕೆ ಅನುಮತಿ, ನಿಯಮಿತಗೊಳಿಸುವಿಕೆ, ಹೊಸ, ಅಸ್ತಿತ್ವದಲ್ಲಿರುವ ಓವರ್ಗ್ರೌಂಡ್ ಕೇಬಲ್ ಮೂಲಸೌಕರ್ಯ, ಭೂಗತ ಕೇಬಲ್ ಮೂಲಸೌಕರ್ಯಕ್ಕಾಗಿ ಅನುಮತಿ, ನಿಯಮಿತಗೊಳಿಸುವಿಕೆಗಳಿಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ” ಎಂದು ಹೇಳಿದ್ದಾರೆ.
“ಅಲ್ಪ ಸಂಖ್ಯಾತರ ಇಲಾಖೆಯಿಂದ ರಾಷ್ಟ್ರೀಯ ವಿದೇಶಿ ವಿದ್ಯಾರ್ಥಿ ವೇತನ ಯೋಜನೆ, ಎಂಫಿಲ್ ಮತ್ತು ಪಿಹೆಚ್ಡಿ ಫೆಲೋಶಿಪ್ ಯೋಜನೆ ಹಾಗೂ ಐಐಟಿ, ಐಐಎಂ, ಐಐಎಸ್ಸಿ ಸಂಸ್ಥೆಗಳಲ್ಲಿ ಪ್ರವೇಶ ಪಡೆದಿರುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಉತ್ತೇಜನ ನೀಡುವ ಯೋಜನೆಗಳನ್ನು ಸಹ ಸಕಾಲದ ಅಡಿಯಲ್ಲಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಇದೆ” ಎಂದು ಮಾಹಿತಿ ನೀಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ರಾಜ್ಯದಲ್ಲಿ ಮುಂದಿನ ಐದು ದಿನ ಮಳೆ ಸಾಧ್ಯತೆ: ಹವಾಮಾನ ಇಲಾಖೆ
“ಮಾಹಿತಿ ತಂತ್ರಜ್ಞಾನ ಇಲಾಖೆಯಿಂದ ಸ್ಟಾರ್ಟ್ ಅಪ್ ನೋಂದಣಿ ಮತ್ತು ಗೃಹ ಇಲಾಖೆಯಿಂದ ಬಾಡಿಗೆದಾರರ ಪೂರ್ವಾಪರ ಪರಿಶೀಲನೆ ಸೇರಿದಂತೆ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯಿಂದ ಉದ್ಯೋಗಾಕಾಂಕ್ಷಿಯ ನೋಂದಣಿ ದಾಖಲೆಯ ವರ್ಗಾವಣೆ, ಉದ್ಯೋಗಾಕಾಂಕ್ಷಿಗಳ ನೋಂದಣಿ, ಉದ್ಯೋಗಾಕಾಂಕ್ಷಿಗಳ ಮರು ನೋಂದಣಿ ಹಾಗೂ ಉದ್ಯೋಗಾಕಾಂಕ್ಷಿಗಳ ನೋಂದಣಿ ಪತ್ರದ ನವೀಕರಣ ಯೋಜನೆಗಳನ್ನು ಸಹ ಸಕಾಲ ವ್ಯಾಪ್ತಿಗೆ ತರಲಾಗಿದೆ” ಎಂದು ತಿಳಿಸಿದ್ದಾರೆ.