ಅತ್ತಿಬೆಲೆ ಪಟಾಕಿ ದುರಂತ ಸಂಭವಿಸಿದ ನಂತರ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸಾಲು ಸಾಲು ಅಗ್ನಿ ಅವಘಡಗಳು ಸಂಭವಿಸಿ, ಅಪಾರ ಪ್ರಮಾಣದ ಹಾನಿ ಉಂಟಾಗಿದೆ. ಈ ಹಿನ್ನೆಲೆ, ಈ ವರ್ಷದ ಬೆಳಕಿನ ಹಬ್ಬಕ್ಕೆ ಪಟಾಕಿ ನಿಯಂತ್ರಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಹೊಸ ಮಾರ್ಗಸೂಚಿ ಪ್ರಕಟಿಸಿದೆ.
ದೀಪಾವಳಿ ಹಬ್ಬದ ಹಿನ್ನೆಲೆ, ರಾಜಧಾನಿಯಲ್ಲಿ ಎಲ್ಲೆಂದರಲ್ಲಿ ಪಟಾಕಿ ಮಳಿಗೆಗಳನ್ನು ತೆರೆಯುವ ಹಾಗಿಲ್ಲ. ಪಾಲಿಕೆ ಮಳಿಗೆ ತೆರೆಯಲು ಎಲ್ಲಿ ಅನುಮತಿ ನೀಡಿರುತ್ತದೆಯೋ ಅಲ್ಲಿ ಮಾತ್ರ ಪಟಾಕಿ ಮಳಿಗೆ ತೆರೆಯಲು ಸೂಚನೆ ನೀಡಲಾಗಿದೆ. ಜತೆಗೆ, ಜನವಸತಿ ಪ್ರದೇಶಗಳಲ್ಲಿ ಪಟಾಕಿ ಸಿಡಿಸಲು ಅವಕಾಶವಿಲ್ಲ ಎಂದು ತಿಳಿಸಲಾಗಿದೆ. ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಕೂಡ ಜಾಗೃತಿ ಕ್ರಮಗಳನ್ನು ಜಾರಿಗೊಳಿಸಿದೆ.
ಧಾರ್ಮಿಕ ಮೈದಾನಗಳು, ಶಾಲಾ ಕಾಲೇಜಿನ ಮೈದಾನಗಳು, ಕೇಂದ್ರ-ರಾಜ್ಯ ಸರ್ಕಾರದ ನಿಯಂತ್ರಣಕ್ಕೆ ಒಳಪಡುವ ಕಾರ್ಖಾನೆ, ರಕ್ಷಣಾ ಇಲಾಖೆ ಮೈದಾನಗಳು ಸೇರಿದಂತೆ ಖಾಸಗಿ ಮೈದಾನಗಳಲ್ಲೂ ಪಟಾಕಿ ಮಾರಾಟವನ್ನು ನಿರ್ಬಂಧಿಸಲಾಗಿದೆ.
ಬಿಬಿಎಂಪಿ ಗುರುತು ಮಾಡಿದ ಸ್ಥಳಗಳಲ್ಲಿ ಮಾತ್ರ ಪಟಾಕಿ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಒಂದು ವಲಯದಲ್ಲಿ 2 ಅಥವಾ 3 ಮೈದಾನದಲ್ಲಿ ಮಾತ್ರ ಪಟಾಕಿ ಮಾರಾಟಕ್ಕೆ ಅವಕಾಶ ನೀಡಲಾಗಿದ್ದು, ಒಂದು ಮೈದಾನದಲ್ಲಿ 10 ಮಳಿಗೆಗಳನ್ನು ತೆರೆಯಬೇಕು. ಜತೆಗೆ ಪ್ರತಿ ಮಳಿಗೆಯ ನಡುವೆ ಮೂರರಿಂದ 4 ಅಡಿ ಅಂತರವಿದ್ದು, ಬೆಂಕಿ ನಂದಿಸುವ ಉಪಕರಣ ಕೂಡ ಕಡ್ಡಾಯವಾಗಿ ಇರಬೇಕು. ಪಟಾಕಿ ಮಾರುವವರು ಮಳಿಗೆಯ ಪರವಾನಗಿ ಪ್ರದರ್ಶಿಸಬೇಕು. ಯಾರಾದರೂ ಅವಧಿ ಮುಗಿದ ಪಟಾಕಿ ಮಾರಾಟ ಮಾಡಿದರೆ ದಂಡ ವಿಧಿಸುವಂತೆ ಸೂಚಿಸಿದೆ.
ಈ ಸುದ್ದಿ ಓದಿದ್ದೀರಾ? ವಾರಕ್ಕೆ 70 ಗಂಟೆ ಕೆಲಸ ಮಾಡುವ ಅಗತ್ಯವಿಲ್ಲ, ಅದು ತಪ್ಪು ಕಲ್ಪನೆ : ನ್ಯಾಯಮೂರ್ತಿ ಸಂತೋಷ್ ಹೆಗ್ಡೆ
ದಕ್ಷಿಣ ವಲಯದ 9 ಮೈದಾನದಲ್ಲಿ 87 ಮಳಿಗೆ, ಮಹದೇವಪುರ ವಲಯದ 13 ಮೈದಾನ 50 ಮಳಿಗೆ, ಬೊಮ್ಮನಹಳ್ಳಿ ವಲಯದ 3 ಮೈದಾನ 6 ಮಳಿಗೆ, ಪಶ್ಚಿಮ ವಲಯದ 4 ಮೈದಾನ 63 ಮಳಿಗೆ, ಪೂರ್ವ ವಲಯದ 23 ಮೈದಾನ 101 ಮಳಿಗೆ, ದಾಸರಹಳ್ಳಿ ವಲಯದ 2 ಮೈದಾನ 18 ಮಳಿಗೆ ಜತೆಗೆ ಆರ್ ಆರ್ ನಗರ ವಲಯದಲ್ಲಿ 5 ಮೈದಾನವನ್ನು ಗುರುತಿಸಿ 62 ತಾತ್ಕಾಲಿಕ ಮಳಿಗೆಗೆ ಅವಕಾಶ ನೀಡಲಾಗಿದೆ.
ಪಾಲಿಕೆಯಿಂದ ಮುನ್ನೆಚ್ಚರಿಕೆಯಾಗಿ 70 ಮೈದಾನದಲ್ಲಿ 426 ಪಟಾಕಿ ಮಳಿಗೆಗೆ ಒಪ್ಪಿಗೆ ದೊರೆತಿದೆ. ಆಯಾ ವಲಯ ಆಯುಕ್ತರು ಮತ್ತು ಜಂಟಿ ಆಯುಕ್ತರಿಂದ ಸುರಕ್ಷತೆ ಪರಿಶೀಲನೆ ನಡೆಸಿ ಮಳಿಗೆ ಸ್ಥಾಪನೆಗೆ ಅವಕಾಶ ನೀಡಲಾಗಿದೆ.