- ಹೆಣ್ಣುಮಕ್ಕಳು ಇಲ್ಲದೇ ದೇಶದ ಆರ್ಥಿಕತೆಯೂ ಇಲ್ಲ: ದು ಸರಸ್ವತಿ
- ಶೋಷಿತ ಸಮುದಾಯಗಳ ಐಕ್ಯತೆಯ ಅಗತ್ಯವಿದೆ: ಬಿ ಟಿ ಲಲಿತಾ ನಾಯ್ಕ್
“ಚರಿತ್ರೆ ಮರೆತವರು ಚರಿತ್ರೆ ನಿರ್ಮಾಣ ಮಾಡಲಾರರು ಎಂದು ಡಾ. ಬಿ.ಆರ್.ಅಂಬೇಡ್ಕರ್ ಅವರು ಹೇಳುತ್ತಾರೆ. ಅಂಬೇಡ್ಕರ್ ಅವರು ಹೇಳಿದಂತೆ ನಾವು ಚರಿತ್ರೆಯನ್ನು ಮರೆತರೆ ನಾವು ಹೊಸ ದಿಕ್ಕಿನತ್ತ ಚಲಿಸಲು ಸಾಧ್ಯವಾಗುವುದಿಲ್ಲ” ಎಂದು ದಸಂಸ ಸಂಸ್ಥಾಪಕ ಮುಖಂಡ ಎನ್ ವೆಂಕಟೇಶ್ ಹೇಳಿದರು.
ಬೆಂಗಳೂರಿನ ಗಾಂಧಿಭವನದಲ್ಲಿ ಸೋಮವಾರ ನಡೆದ ಮಂಥನಾ ಸಮಾವೇಶದಲ್ಲಿ ಮಾತನಾಡಿದ ಅವರು, “ಮನುಧರ್ಮದ ಶಾಸ್ತ್ರದ ಮೂಲಕ ತಳಸಮುದಾಯದವರನ್ನು ದಮನ ಮಾಡಿದ್ದಾರೆ. ಈ ಬಗ್ಗೆ ಅಂಬೇಡ್ಕರ್ ಅವರು ತಮ್ಮ ಪುಸ್ತಕದಲ್ಲಿ ಸಮಗ್ರವಾಗಿ ತಿಳಿಸಿದ್ದಾರೆ. ತಳಸಮುದಾಯದವರು ನೋವನ್ನ ಅನುಭವಿಸಲು ಹಿಂದೂಧರ್ಮ ಕಾರಣ ಎಂದು ತಿಳಿಸಿದ್ದಾರೆ. ಈ ಹಿಂದೂಧರ್ಮದಲ್ಲಿ ತಳಸಮುದಾಯದವರನ್ನು ತುಳಿಯಲಾಗಿದೆ. ಇದರಿಂದ ತಳಸಮುದಾಯದವರು ಕುಂದಿದ್ದಾರೆ. ಅಂಬೇಡ್ಕರ್ ಅವರು ಬೌದ್ಧ ಧರ್ಮವನ್ನು ಪರಿಚಯಿಸಿದರು. ಅಂಬೇಡ್ಕರ್ ಅವರ ಎಲ್ಲ ಪುಸ್ತಕಗಳನ್ನ ನಾವು ಅಧ್ಯಯನ ಮಾಡುವ ಮೂಲಕ ಸ್ವಾಭಿಮಾನದ ಹಾದಿಯಲ್ಲಿ ನಡೆಯಬೇಕಾಗಿದೆ” ಎಂದು ಹೇಳಿದರು.
ಹಿರಿಯ ಹೋರಾಟಗಾರರಾದ ದು ಸರಸ್ವತಿ ಮಾತನಾಡಿ, “ಹೆಣ್ಣುಮಕ್ಕಳು ಇಲ್ಲದೇ ದೇಶದ ಆರ್ಥಿಕತೆಯೂ ಇಲ್ಲ. ಸಂಸಾರವೂ ಇಲ್ಲ. ಮಹಿಳೆಯರಿಗೆ ತಯಾರಿಸುವ ಉತ್ಪನ್ನಗಳಿಗೆ ಮಾರುಕಟ್ಟೆಯನ್ನ ಕಲ್ಪಿಸಬೇಕು. ಗಾರ್ಮೆಂಟ್ ಮಹಿಳೆಯರಿಗೆ ಘನತೆಯಿಂದ ಬದುಕುವ ವೇತನ ನೀಡಬೇಕು. ಸೂಕ್ತ ಸೌಲಭ್ಯ, ಆರೋಗ್ಯ ವಾತಾವರಣ ನಿರ್ಮಾಣವಾಗುವಂತೆ ಮಾಡಬೇಕು. ಮಹಿಳೆಯರಿಗೆ ರಾಜಕೀಯ ಪ್ರಾತಿನಿಧ್ಯ ಕೊಡಬೇಕು. ಬೀದಿಬದಿಯಲ್ಲಿ ಕೆಲಸ ಮಾಡುವ ಮಹಿಳೆಯರಿಗಾಗಿ ಕುಡಿಯುವ ನೀರು ಹಾಗೂ ಶೌಚಾಲಯ ವ್ಯವಸ್ಥೆಯನ್ನು ಸರ್ಕಾರ ಮಾಡಬೇಕು” ಎಂದರು.
“ಸ್ಲಂ ನಿವಾಸಿಗಳ ಸ್ಥಿತಿ ಅಧೋಗತಿಯಾಗುತ್ತಿದೆ. ಸ್ಲಂ ಜನರಿಗೆ ಸಿಗಬೇಕಾದ ಕನಿಷ್ಠ ಸೌಲಭ್ಯಗಳು ಕೂಡ ಸಿಗುತ್ತಿಲ್ಲ. ರಾಜಕಾರಣಿಗಳು ಪ್ರಮಾಣವಚನ ಸ್ವೀಕಾರ ಮಾಡುವಾಗ ಒಂದು ಮಾತು ಹೇಳುತ್ತಾರೆ, ನಂತರದಲ್ಲಿ ಅವರು ಮಾತನಾಡಿದ ಮಾತಿಗೂ ಆಡಳಿತಕ್ಕೂ ಸಂಬಂಧವೇ ಇರುವುದಿಲ್ಲ. ನಮ್ಮ ಬದುಕಿನ ಹಕ್ಕು ಕೂಡ ಅತಂತ್ರವಾಗುತ್ತಿದೆ” ಎಂದು ಕರ್ನಾಟಕ ಜನಾಂದೋಲನ ಸಂಘಟನೆಯ ರಾಜ್ಯಾಧ್ಯಕ್ಷ ಮರಿಯಪ್ಪ ಹೇಳಿದರು.
“ಒಂದು ಕಡೆ ಮೀಸಲಾತಿ ನಾಶವಾಗುತ್ತಿದೆ. ಮತ್ತೊಂದೆಡೆ ಖಾಸಗೀಕರಣ ಜಾಸ್ತಿಯಾಗಿ ಜನರು ಉದ್ಯೋಗಕ್ಕೆ ಅಲೆಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಮತ್ತೊಂದೆಡೆ ಜನರಿಗೆ ಭೂಮಿ ಸಿಗುವುದು ಕನಸಿನ ಮಾತಾಗಿದೆ. ವಸತಿಹೀನರಿಗೆ ವಸತಿ ಸಿಗಬೇಕು ಎಂಬ ಸತತ ಪ್ರಯತ್ನದಿಂದಾಗಿ ಕೆಲವಡೆ ಭೂಮಿ ಹಂಚಿಕೆ ಪ್ರಾರಂಭವಾಗಿದೆ. ಆದರೆ, ಇನ್ನು ಕೆಲವೆಡೆ ಇದು ನಿರಾಸೆಯಾಗಿದೆ. ಉಳುಮೆ ಮಾಡುತ್ತ ಅರ್ಜಿ ಹಾಕಿದ್ದ 97% ಜನರ ಅರ್ಜಿಗಳು ತಿರಸ್ಕಾರವಾಗುತ್ತಿವೆ. ಭೂಮಿ ಪಡೆದುಕೊಳ್ಳುವಲ್ಲಿ ನಮ್ಮದೇ ಸರ್ಕಾರದ ವಿರುದ್ಧ ನಾವು ಸಿಡಿದೇಳಬೇಕಾಗಿದೆ. ನಾವೆಲ್ಲಾ ಒಟ್ಟಾಗಿಲ್ಲ ಎಂದರೆ, ನಮ್ಮ ಭೂಮಿ ನಮಗೆ ಸಿಗಲ್ಲ” ಎಂದರು.
ಈ ಸುದ್ದಿ ಓದಿದ್ದೀರಾ? ದುಡಿವ ಮಹಿಳೆಯರಿಗೆ ಯಾವ ಪ್ರತಿಫಲವೂ ಸಿಗುತ್ತಿಲ್ಲ: ಪುರುಷೋತ್ತಮ ಬಿಳಿಮಲೆ
ಹಿರಿಯ ಪತ್ರಕರ್ತರು ನವೀನ್ ಸೂರಿಂಜೆ ಮಾತನಾಡಿ, “ಅತಿ ಹಿಂದುಳಿದ ಸಮುದಾಯಗಳು ಇಂದು ಬಲಪಂಥೀಯ ಸಂಘಟನೆಗಳ ಕಾಲಾಳುಗಳಾಗಿದ್ದಾರೆ. ಕರಾವಳಿಯ ಜೈಲುಗಳಲ್ಲಿ ಧರ್ಮದ ಕಾರಣಕ್ಕೆ ನಡೆದ ಗಲಭೆಗಳ ಕಾರಣಕ್ಕೆ ಬಂಧನಕ್ಕೊಳಗಾದವರೆಲ್ಲ ಮುಸ್ಲಿಮರು ಮತ್ತು ಅತಿ ಹಿಂದುಳಿದವರು. ಯಾವ ಬ್ರಾಹ್ಮಣರೂ ಜೈಲುಗಳಲ್ಲಿಲ್ಲ, ಬಂಧಿತರಾದವರೆಲ್ಲ ಬಿಲ್ಲವರು, ಮೊಗವೀರರು ಮೊದಲಾದ ಹಿಂದುಳಿದವರೇ. ಅತಿ ಹಿಂದುಳಿದ ಸಮುದಾಯಗಳ ಉನ್ನತಿಗಾಗಿ ಯೋಜನೆಗಳಿಲ್ಲ. ಇದ್ದರೂ ಕೂಡ ಅವು ಕಡಿತಗೊಳ್ಳುತ್ತಾ ಹೋಗಿವೆ. ಆದರೆ, ಸದಾ ಮೀಸಲಾತಿಯ ವಿರುದ್ಧ ಕಿಡಿಕಾರುವ ಬ್ರಾಹ್ಮಣ ಸಮುದಾಯದ ಏಳ್ಗೆಗೆ ಸುಮಾರು 26 ಯೋಜನೆಗಳು ಕರ್ನಾಟಕದಲ್ಲಿವೆ. ಉಪನಯನಕ್ಕೂ ಕೂಡಾ ಸರ್ಕಾರ ನೆರವು ಕೊಡುತ್ತದೆ. ಅಂದರೆ, ಉಳಿದವರಿಗಿಂತ ನಾನು ಶ್ರೇಷ್ಠ ಎಂಬ ಅಸ್ಪೃಶ್ಯತೆಯ ಆಚರಣೆಯನ್ನೂ ಸರ್ಕಾರ ಪೋಷಿಸುತ್ತಿದೆ. ಅತಿ ಹಿಂದುಳಿದ ಸಮುದಾಯಗಳು ಹಿಂದು ನಾವೆಲ್ಲ ಒಂದು ಎಂದು ಘೋಷಿಸಿದ ದಿನದಿಂದ ಅವರ ಪ್ರಾತಿನಿಧ್ಯ ಕಡಿಮೆಯಾಯಿತು. ಉನ್ನತ ಹಂತಗಳಲ್ಲಿ ಅವರ ದನಿ ಅಡಗಿತು” ಎಂದರು.
ಕಾರ್ಯಕ್ರಮದ ಸಮಾರೋಪಗೋಷ್ಠಿಯಲ್ಲಿ ಮಾತನಾಡಿದ ಪ್ರಗತಿಪರ ಚಿಂತಕಿ, ಮಾಜಿ ಸಚಿವೆ ಬಿ ಟಿ ಲಲಿತಾ ನಾಯಕ್ “ಈ ಎಲ್ಲ ಬಗೆಯ ಶೋಷಿತ ಸಮುದಾಯಗಳ ಐಕ್ಯತೆಯ ಅಗತ್ಯವಿದೆ” ಎಂದರು. ಇಡೀ ದಿನ ನಡೆದ ಕಾರ್ಯಕ್ರಮದಲ್ಲಿ ಹಲವಾರು ಹೋರಾಟಗಾರರು, ಸಾಮಾಜಿಕ ಕಾರ್ಯಕರ್ತರು ಉಪಸ್ಥಿತರಿದ್ದರು.