“ರೈಲ್ವೆ ಇಲಾಖೆಯೂ ಸೇರಿದಂತೆ ಕೇಂದ್ರ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಕನ್ನಡ ಭಾಷೆಯಲ್ಲಿ ಬರೆಯಲು ಅವಕಾಶ ದೊರೆಯುವಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಅದರ ಅಧ್ಯಕ್ಷ ಟಿ.ಎ.ನಾರಾಯಣಗೌಡರ ಪಾತ್ರವು ದೊಡ್ಡದಿದೆ” ಎಂದು ಕೇಂದ್ರ ರೈಲ್ವೆ ಇಲಾಖೆ ರಾಜ್ಯ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.
ನಮ್ಮ ರಾಜ್ಯಕ್ಕೆ ಕರ್ನಾಟಕವೆಂಬ ಹೆಸರು ನಾಮಕರಣವಾಗಿ ಐದು ದಶಕವಾಗಿದೆ. ಈ ಮಹೋನ್ನತ ಘಳಿಗೆಯನ್ನು ಸ್ಮರಿಸಿಕೊಳ್ಳುವ, ಸಂಭ್ರಮಿಸುವ ಸಲುವಾಗಿ ಕರ್ನಾಟಕ ರಕ್ಷಣಾ ವೇದಿಕೆ ಡಿಸೆಂಬರ್ 28ರ ಶನಿವಾರ ಬೆಂಗಳೂರಿನ ಅರಮನೆ ಮೈದಾನದ ಗಾಯತ್ರಿವಿಹಾರ ಸಭಾಂಗಣದಲ್ಲಿ ’50ರ ಸಂಭ್ರಮ ಸಮಾವೇಶ ಮತ್ತು ಪ್ರತಿಜ್ಞಾ ಸ್ವೀಕಾರ’ ಸಮಾವೇಶ ಹಮ್ಮಿಕೊಂಡಿತ್ತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, “ಕೇಂದ್ರ ಮಟ್ಟದ ನೇಮಕಾತಿಗಳಿಗೆ ಕೇವಲ ಹಿಂದಿ ಭಾಷೆಯಲ್ಲಿ ಮಾತ್ರ ಪರೀಕ್ಷೆಗಳು ನಡೆಯುತ್ತಿದ್ದವು. ಇದರಿಂದ ಕನ್ನಡಿಗರಿಗೆ ಕೇಂದ್ರದಲ್ಲಿ ಉದ್ಯೋಗ ಮಾಡುವ ಅವಕಾಶ ಕ್ಷೀಣಿಸುತ್ತಿತ್ತು. ಕರ್ನಾಟಕ ರಕ್ಷಣಾ ವೇದಿಕೆಯು ನಿರಂತರ ಹೋರಾಟ, ಚಳವಳಿಗಳನ್ನು ಕೈಗೊಂಡಿದ್ದರ ಫಲವಾಗಿ ಕನ್ನಡ ಭಾಷೆಯಲ್ಲೂ ಪರೀಕ್ಷೆ ಬರೆಯುಲು ಅವಕಾಶ ಸಿಕ್ಕಂತಾಯಿತು” ಎಂದರು.
“ರೈಲ್ವೆ ಇಲಾಖೆಯ ರಾಜ್ಯ ಸಚಿವನಾಗಿ ನಾನು ಅಧಿಕಾರ ಸ್ವೀಕರಿಸಿದ ಮೇಲೆ ಕನ್ನಡ ಸೇರಿದಂತೆ ಪ್ರಾದೇಶಿಕ ಭಾಷೆಗಳಲ್ಲೂ ಪರೀಕ್ಷೆ ಬರೆಯಲು ಆದೇಶ ನೀಡಿದೆ. ಈ ಅವಕಾಶಕ್ಕೆ ಭಾರತ ಸರಕಾರದಷ್ಟೇ ಪ್ರಯತ್ನ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ.ನಾರಾಯಣಗೌಡ ಅವರೂ ಶ್ರಮವೂ ಇದೆ ಎನ್ನುವುದನ್ನು ಮರೆಯಬಾರದು. ಕನ್ನಡ, ಕರ್ನಾಟಕಕ್ಕಾಗಿ ಟಿ.ಎ.ನಾರಾಯಣಗೌಡರು ಮೂರು ದಶಕಗಳ ಕಾಲ ಹೋರಾಟ ಮಾಡುತ್ತಲೇ ಬಂದಿದ್ದಾರೆ. ಅವರ ಹೋರಾಟದ ಫಲವಾಗಿ ಅನೇಕ ಸವಲತ್ತುಗಳು ಕನ್ನಡಿಗರಿಗೆ ದಕ್ಕಿವೆ. ಅವರ ಅನೇಕ ಯೋಜನೆಗಳು ಮತ್ತು ಕನಸುಗಳು ಯಶಸ್ಸು ಕಂಡಿವೆ. ನಿಜಕ್ಕೂ ಟಿ.ಎ.ನಾರಾಯಣಗೌಡ ಅವರು ಕನ್ನಡಿಗರ ಆಸ್ತಿ ಎಂದರೆ ತಪ್ಪಾಗಲಾರದು” ಎಂದು ವಿ.ಸೋಮಣ್ಣ ಶ್ಲಾಘಿಸಿದ್ದಾರೆ.
ಇದೇ ವೇಳೆ ಕಾರ್ಯಕ್ರಮದಲ್ಲಿ ಮಾತನಾಡಿದ ಕರವೇ ಅಧ್ಯಕ್ಷ ನಾರಾಯಣಗೌಡ, “2023ರ ಡಿಸೆಂಬರ್ 27 ಇಡೀ ಕರ್ನಾಟಕದಲ್ಲಿ ನಾಮಫಲಕದಲ್ಲಿ ಶೇ.60 ಭಾಗ ಕನ್ನಡ ಹಾಕಬೇಕು ಎಂದು ಹೇಳಿ ಕರವೇಯ ಕೆಚ್ಚೆದೆಯ ಹುಲಿಗಳು ಬೀದಿಗಿಳಿದ ಸಮಯ. ಇದಕ್ಕೋಸ್ಕರ ಹತ್ತಾರು ಕೇಸ್ಗಳನ್ನು ಹಾಕಿಸಿಕೊಂಡು, ನನ್ನನ್ನೂ ಸೇರಿದಂತೆ ಹಲವರು ಜೈಲಿನಲ್ಲಿದ್ದೆವು. ಕಳೆದ ವರ್ಷ ಈ ಸಮಯದಲ್ಲಿ ನಾವೆಲ್ಲರೂ ಜೈಲಿನಲ್ಲಿದ್ದೆವು. ಡಿಸೆಂಬರ್ 27 ಹೋರಾಟ, ಡಿಸೆಂಬರ್ 28 ಜೈಲುವಾಸ ಹಾಗೂ ನಾಳೆ ಅಂದರೆ ಡಿಸೆಂಬರ್ 29 ನಾಡಕವಿ ಕುವೆಂಪು ಅವರ ಜನ್ಮದಿನ. ಇವು ಮಹತ್ವದ ದಿನಗಳಾಗಿವೆ” ಎಂದಿದ್ದಾರೆ.
“ಡಿಸೆಂಬರ್ 27 ಕನ್ನಡಮಯವಾದ ದಿವಸ. ಕನ್ನಡಕ್ಕಾಗಿ ಡಿಸೆಂಬರ್ 28ರಂದು ಜೈಲಿನಲ್ಲಿದ್ದ ದಿವಸ, ವಿಧಾನಸೌಧದಲ್ಲಿರುವವರು ಬೇರೆ ಬೇರೆ ಕಾರಣಗಳಿಗಾಗಿ ಜೈಲಿಗೆ ತೆರಳುತ್ತಾರೆ. ಆದರೆ, ನಾವು ಕನ್ನಡಕ್ಕಾಗಿ ಜೈಲಿಗೆ ಹೋಗಿದ್ದೇವೆ. ಕಂಕಣ ಕಟ್ಟಿಂದೆ ಕನ್ನಡ ನಾಡೊಂದೆ ಎಂಬ ದೀಕ್ಷೆಯನ್ನ ತೆಗೆದುಕೊಳ್ಳಬೇಕಾಗಿದೆ. ಕನ್ನಡಿಗರ ಬದುಕಿಗಾಗಿ, ಗಡಿಯ ರಕ್ಷಣೆಗಾಗಿ ಹಗಲು ರಾತ್ರಿಯೆನ್ನದೇ, ಜೀವದ ಹಂಗನ್ನ ತೋರೆದು, ಹತ್ತಾರು ಬಾರಿ ಜೈಲುವಾಸು ಅನುಭವಿಸಿ, ನಾಡು–ನುಡಿಗಳ ಸಮಸ್ಯೆಗೆ ಬೀದಿಯಲ್ಲಿ ನಿಂತು ನನ್ನ ನಾಡು, ನನ್ನ ಜಲ, ನನ್ನ ಗಡಿ ಎಂಬ ಕಿಚ್ಚನ್ನ ತುಂಬಿಕೊಂಡಿರುವ ಎಲ್ಲರಿಗೂ ಅಭಿನಂದನೆ” ತಿಳಿಸಿದ್ದಾರೆ.
“ಭಾಷೆಯ ಆಧಾರದ ಮೇಲೆ ರಾಜ್ಯಗಳ ವಿಂಗಡಣೆಯಾಗಿದೆ. ಒಕ್ಕೂಟದ ಭಾರತದಲ್ಲಿ ಎಲ್ಲ ಭಾಷೆಗಳಲ್ಲಿಯೂ ಕೇಂದ್ರದ ಲೋಕಸಭೆ ಅಧಿವೇಶನದಲ್ಲಿ ಎಲ್ಲ ಭಾಷೆಗಳಲ್ಲಿಯೂ ಪ್ರಶ್ನೆಗಳನ್ನ ಕೇಳುವ ಅದೇ ಭಾಷೆಯಲ್ಲಿ ಉತ್ತರವನ್ನೂ ಪಡೆಯುವಂತೆ ಆಗಬೇಕು. ಏಕೆಂದರೆ, ಲೋಕಸಭೆಯಲ್ಲಿ ಹಿಂದಿ ಅಥವಾ ಇಂಗ್ಲಿಷ್ ಮಾತಾಡಬೇಕು ಎನ್ನುವುದು ಇಲ್ಲ. ಎಲ್ಲ ಪ್ರಾದೇಶಿಕ ಭಾಷೆಗಳಲ್ಲಿ ಪ್ರಶ್ನೆಗಳನ್ನೂ ಕೇಳುವ ಹಕ್ಕು ಇದೆ. ಹಾಗಾಗಿ, ಈ ಬಗ್ಗೆ ಸೋಮಣ್ಣ ಅವರು ಆದಷ್ಟು ಬೇಗ ತೀರ್ಮಾನ ತೆಗೆದುಕೊಳ್ಳಬೇಕು” ಎಂದು ಮನವಿ ಮಾಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಕಳೆದುಹೋದ ವರ್ಚಸ್ಸು ಮತ್ತು ಗೇಲಿಯ ಸರಕಾದ ‘ಹೈಡ್ರಾಮಾ’
“ಕರ್ನಾಟಕದ ರಕ್ಷಣಾ ವೇದಿಕೆ ಆಶ್ರಯದಲ್ಲಿ ಕರ್ನಾಟಕ 50 ವರ್ಷ ರಕ್ಷಣಾ ವೇದಿಕೆಗೆ 25 ಇವತ್ತಿನ ಈ ಸಡಗರದ ಕಾರ್ಯಕ್ರಮದಲ್ಲಿ ಬಹುತೇಕ ಬೀದರನಿಂದ ಹಿಡಿದು ಚಾಮರಾಜನಗರದವರೆಗೆ ದಕ್ಷಿಣ ಕನ್ನಡ ಜಿಲ್ಲೆಯಿಂದ ಹಿಡಿದು ಕೋಲಾರದವರೆಗೂ ಎಲ್ಲ ಮುಖಂಡರೂ ಬಂದಿದ್ದೀರಿ. ಬಂದಂತಹ ಎಲ್ಲರಿಗೂ ನನ್ನ ವಿಶೇಷ ಅಭಿನಂದನೆ” ಎಂದು ತಿಳಿಸಿದ್ದಾರೆ.
ಸಮಾರಂಭದಲ್ಲಿ ಗದಗದ ಡಾ ತೋಂಟದ ಸಿದ್ಧರಾಮ ಸ್ವಾಮೀಜಿ, ಚಿತ್ರದುರ್ಗ ಬೋವಿ ಗುರುಪೀಠದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ, ಗೌರಿಗದ್ದೆಯ ಸ್ವರ್ಣ ಪೀಠಿಕಾಪುರದ ವಿನಯ್ ಗುರೂಜಿ, ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಡಾ.ಆರ್.ಕೆ.ನಲ್ಲೂರು ಪ್ರಸಾದ್ ಮಾತನಾಡಿದರು.