ಬಿಎಂಐಸಿ ಯೋಜನೆಯಲ್ಲಿ ನೈಸ್ ಕಂಪನಿಯ ಹಗರಣ, ಭ್ರಷ್ಟಾಚಾರ, ಅಕ್ರಮ ಕುರಿತು ಟಿ ಬಿ ಜಯಚಂದ್ರ ಆಧ್ಯಕ್ಷತೆಯ ಸದನ ಸಮಿತಿ ವರದಿಯನ್ನು ಅಂಗೀಕರಿಸಿ ಎಂಟು ವರ್ಷಗಳಾಗಿವೆ. ಆದರೂ, ವರದಿಯನ್ನು ಜಾರಿ ಮಾಡಿಲ್ಲ ಯಾಕೆ ಎಂದು ಸುಪ್ರೀಂ ಕೋರ್ಟ್ ವಿಶ್ರಾಂತ ನ್ಯಾಯಾಧೀಶ ವಿ ಗೋಪಾಲಗೌಡ ಪ್ರಶ್ನಿಸಿದ್ದಾರೆ. ಕೂಡಲೇ ವರದಿ ಜಾರಿ ಮಾಡಬೇಕೆಂದು ಆಗ್ರಹಿಸಿದ್ದಾರೆ.
ಬೆಂಗಳೂರಿನಲ್ಲಿ ಕರ್ನಾಟಕ ಪ್ರಾಂತ ರೈತ ಸಂಘ (KPRS) ಹಾಗೂ ನೈಸ್ ಭೂ ಸಂತ್ರಸ್ಥ ರೈತರ ಹೋರಾಟ ಸಮಿತಿ ಆಯೋಜಿಸಿದ್ದ’ ಬೆಂಗಳೂರು ಜಿಲ್ಲಾ ಮಟ್ಟದ ‘ನೈಸ್ ಸಂತ್ರಸ್ಥ ರೈತರ ಬೃಹತ್ ಸಮಾವೇಶ’ದಲ್ಲಿ ಅವರು ಮಾತನಾಡಿದರು. “ಬಿಎಂಐಸಿ ಯೋಜನೆಗಾಗಿ ನೈಸ್ ಕಂಪನಿ ಜೊತೆ ಮಾಡಿಕೊಂಡ ಒಪ್ಪಂದ 27 ವರ್ಷಗಳಾದರೂ ಕಾರ್ಯಗತ ಆಗಿಲ್ಲ. ಪ್ರತಿಯೊಂದು ಹಂತದಲ್ಲಿಯೂ ಒಪ್ಪಂದಗಳನ್ನು ನೈಸ್ ಕಂಪನಿ ಉಲ್ಲಂಘಿಸಿದೆ. ಆದರೂ ನೈಸ್ ಕಂಪನಿ ಪರವಾಗಿ ಭೂ ಸ್ವಾಧೀನ ಪ್ರಕ್ರಿಯೆ ಮುಂದುವರೆಸುತ್ತಿರುವುದು ರೈತ ವಿರೋಧಿ ಹಾಗೂ ಜನ ವಿರೋಧಿ ಕ್ರಮ. ಈ ಕೂಡಲೇ ಭೂ ಸ್ವಾಧೀನ ರದ್ದುಪಡಿಸಿ, ರೈತರಿಗೆ ಜಮೀನು ವಾಪಸ್ಸು ಕೊಡಬೇಕು” ಎಂದು ಆಗ್ರಹಿಸಿದರು.
“ಭೂ ಸ್ವಾಧೀನದ ಅಕ್ರಮ ಮತ್ತು ಕಾನೂನು ಬಾಹಿರ ಕ್ರಮಗಳನ್ನು ಸಿಂಗೂರ್ ತೀರ್ಪಿನಲ್ಲಿ ವಿವರವಾಗಿ ಚರ್ಚಿಸಲಾಗಿದ್ದು, ಪರಿಹಾರ ಹಣ ಮರು ಪಾವತಿಸದೇ ಭೂಮಿ ವಾಪಸ್ಸು ಮಾಡುವ ತೀರ್ಪು ನೀಡಲಾಗಿದೆ. ಅದೇ ತೀರ್ಪಿನ ಆಧಾರದಲ್ಲಿ ಭೂ ಸ್ವಾಧೀನ ರದ್ದುಪಡಿಸಬಹುದು” ಎಂದು ವಿವರಿಸಿದರು.
“ಸುಪ್ರೀಂ ಕೋರ್ಟ್ ತೀರ್ಪು ಉಲ್ಲಂಘಿಸಿ, ಕೆಐಎಡಿಬಿ ಭೂ ಸ್ವಾಧೀನ ಮಾಡಿಕೊಂಡ ಭೂಮಿಯನ್ನು ಮೂಲ ಒಪ್ಪಂದಕ್ಕೆ ವಿರುದ್ಧವಾಗಿ ನೈಸ್ ಸಂಸ್ಥೆ ವಸತಿ-ಅಪಾರ್ಟ್ಮೆಂಟ್ ನಿರ್ಮಿಸಿ ಮಾರಾಟ ಮಾಡುತ್ತಿದೆ. ಸಂಸ್ಥೆಯ ಅಕ್ರಮಕ್ಕೆ ಸರ್ಕಾರಗಳು ಕಡಿವಾಣ ಹಾಕಬೇಕು” ಎಂದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಕೆಪಿಆರ್ಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ ಯಶವಂತ, “ರಸ್ತೆ ನಿರ್ಮಾಣದ ಹೆಸರಿನಲ್ಲಿ ಬೃಹತ್ ಪ್ರಮಾಣದ ಭ್ರಷ್ಟಾಚಾರ, ಹಗರಣ, ಅಕ್ರಮ ನಡೆಸಿರುವ ನೈಸ್ ಕಂಪನಿಯನ್ನು ಕಪ್ಪು ಪಟ್ಟಿಗೆ ಸೇರಿಸಬೇಕು. ರೈತರ ಒಪ್ಪಿಗೆ ಇಲ್ಲದೇ ರೈತರ ಗಮನಕ್ಕೆ ಬಾರದಂತೆ ಭೂಸ್ವಾಧೀನ ಮಾಡಿರುವ ಎಲ್ಲ ಪ್ರಕರಣಗಳನ್ನು ರದ್ದುಪಡಿಸಬೇಕು. ವರ್ಷಕ್ಕೆ ಹತ್ತು ರೂ.ನಂತೆ ಮೂವತ್ತು ವರ್ಷಗಳಿಗೆ ಗುತ್ತಿಗೆ ಪಡೆದಿರುವ ಸರ್ಕಾರಿ ಭೂಮಿಯನ್ನು ಸರ್ಕಾರ ವಾಪಸ್ಸು ಪಡೆಯಬೇಕು. ಯಾವುದೇ ಕಾರಣಕ್ಕೂ ಗುತ್ತಿಗೆ ನವೀಕರಣ ಮಾಡಬಾರದು. ಮೂವತ್ತು ವರ್ಷಗಳ ಹಿಂದಿನ ಭೂ ಸ್ವಾಧೀನ ಪ್ರಕಟಣೆಯ ಆಧಾರದಲ್ಲಿ ಭೂಮಿ ಕಿತ್ತುಕೊಳ್ಳಲು ಅವಕಾಶ ನೀಡಬಾರದು” ಎಂದು ಒತ್ತಾಯಿಸಿದರು.
“ಎಟಿ ರಾಮಸ್ವಾಮಿ ಸಮಿತಿ, ಟಿಬಿ ಜಯಚಂದ್ರ ಸಮಿತಿ ಹಾಗೂ ಹಲವಾರು ಹೈಕೋರ್ಟ್, ಸುಪ್ರೀಂ ಕೋರ್ಟ್ ತೀರ್ಪುಗಳಲ್ಲಿ ಒಪ್ಪಂದಕ್ಕೆ ಹೊರತಾದ ಹೆಚ್ಚುವರಿ ಭೂ ಕಬಳಿಕೆ ವಶಕ್ಕೆ ಪಡೆಯಲು ಸ್ಪಷ್ಟವಾಗಿ ಹೇಳಿದ್ದರೂ ವಾಪಸ್ಸು ಪಡೆಯಲು ಮೀನಮೇಷ ಎಣಿಸಲಾಗುತ್ತಿದೆ .ಈಗಾಗಲೇ ಭ್ರಷ್ಟ ರಾಜಕಾರಣಿಗಳು, ಉನ್ನತ ಅಧಿಕಾರಿಗಳ ಭ್ರಷ್ಟ ಬೆಂಬಲದ ಮೇಲೆ ಕೆಐಎಡಿಬಿ, ಪಿ ಡಬ್ಲ್ಯೂ ಡಿ ಮುಂತಾದ ಇಲಾಖೆಗಳನ್ನು ದಾಳವಾಗಿ ಬಳಸಿ ನಡೆಸಿದ ಕಾನೂನು ಬಾಹಿರ, ಅಕ್ರಮಗಳ ವಿರುದ್ಧ ತಮ್ಮ ಭೂಮಿ ರಕ್ಷಿಸಿಕೊಳ್ಳಲು ಕೋರ್ಟ್ ಗಳಿಗೆ ಅಲೆದಾಡಿ ಲಕ್ಷಾಂತರ ರೂ. ಕಳೆದುಕೊಂಡಿದ್ದಾರೆ. ಇಂತಹ ರೈತ ರನ್ನು ಭೂ ಕಬಳಿಕೆಯಿಂದ ಕಾಪಾಡಬೇಕಾದ ಸರ್ಕಾರಗಳು ನೈಸ್ ತಾಳಕ್ಕೆ ತಕ್ಕಂತೆ ಕುಣಿಯುತ್ತಿವೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಮಾವೇಶದ ಅಧ್ಯಕ್ಷತೆಯನ್ನು ನೈಸ್ ಭೂ ಸಂತ್ರಸ್ಥ ರೈತರ ಹೋರಾಟ ಸಮಿತಿ ಅಧ್ಯಕ್ಷ ಎನ್ ವೆಂಕಟಾಚಲಯ್ಯ ವಹಿಸಿದ್ದರು. ನೈಸ್ ಹೋರಾಟ ಸಮಿತಿಯ ಮುಖಂಡರಾದ ವೆಂಕಟಚಲಪತಿ, ಸತ್ಯನಾರಾಯಣ, ಯೋಗನರಸಿಂಹಮೂರ್ತಿ, ಸ್ವಾಮಿರಾಜ್, ಸಣ್ಣರಂಗಯ್ಯ, ಅಣ್ಣಯ್ಯ, ಚಂದ್ರಣ್ಣ, ಚನ್ನೇಗೌಡ, ಶ್ರೀನಿವಾಸ ಮುಂತಾದವರು ಇದ್ದರು.