ಅಲ್ಲಮನ ಅನನ್ಯ ಪದಪ್ರಯೋಗಗಳು | ಆಶಾಪಾಶ ವಿರಹಿತರು

Date:

Advertisements
ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ ಪದದ ಬಗ್ಗೆ ಈ ಕೆಳಗಿನ ಮಾದರಿಯಲ್ಲಿ ವಿವರಿಸಲಾಗುವುದು. ಈದಿನ ಓದುಗರಿಗಾಗಿ ಅಲ್ಲಮನ ಅರಿವು…

ಆಶಾಪಾಶವಿರಹಿತರು
ಮುಸುರೆಯ ಮಡಕೆಯ ನೊಣ ಮುತ್ತಿಕೊಂಡಿಪ್ಪಂತೆ,
ಕಸವುಳ್ಳ ಹೊಲದಲ್ಲಿ ಪಶುಗಳು ನೆರೆದಿಪ್ಪಂತೆ,
ಅನ್ನ ಉದಕ ಹೊನ್ನು ವಸ್ತ್ರವುಳ್ಳ
ದೊರೆಯ ಬಾಗಿಲಲ್ಲಿ ಬಹುಭಾಷೆಯ ಹಿರಿಯರುಗಳು ನೆರೆದುಕೊಂಡಿಪ್ಪರು.
ಗುಹೇಶ್ವರಾ, ನಿಮ್ಮ ಶರಣರು
ಆಶಾಪಾಶ ವಿರಹಿತರು

ವಚನಾರ್ಥ:
ಬಹುಭಾಷೆಯ ಹಿರಿಯರು ಅಂದರೆ ಸಕಲ ವಿದ್ಯಾ ಪಾರಂಗತರು. ಸಂಸ್ಕೃತವನ್ನೊಳಗೊಂಡಂತೆ ವಿವಿಧ ಭಾಷಾಶಾಸ್ತ್ರಗಳಲ್ಲಿ ಪರಿಣಿತರು. ಗುರು ಪರಂಪರೆಯಲ್ಲಿ ಹಿರಿಯ ಸ್ಥಾನದಲ್ಲಿರುವವರು. ಆದರೆ ಅವರು ಆಸೆಯ ಪಾಶದಲ್ಲಿ ಬಂಧಿಯಾದವರು. ಆ ಹಿರಿಯರು ಆಸೆಬುರುಕರು. ಪದವಿ ಪ್ರತಿಷ್ಠೆ ಪುರಸ್ಕಾರಗಳಿಗಾಗಿ ಆಳರಸರ ಅರಮನೆಯ ಬಾಗಿಲು ಕಾಯುತ್ತಿರುತ್ತಾರೆ. ಅದು ಹೇಗೆಂದರೆ
ಮುಸುರೆಯ ಮಡಕೆಗೆ ನೊಣ ಮುತ್ತಿಕೊಂಡಿರುವಂತೆ. ಕೃಷಿ ಮಾಡದೇ ಹಾಳು ಬಿದ್ದ ಹೊಲದಲ್ಲಿ ಬೆಳೆದ ಕಸದ ಹುಲ್ಲನ್ನು ತಿನ್ನಲು ದನಗಳು ನೆರೆದಿರುವಂತೆ. ಆದರೆ ಶರಣ ಸಜ್ಜನರು ಆ ಹಿರಿಯರಂತಲ್ಲ. ಆಸೆಗಳನ್ನು ತೊರೆದವರು. ಯಾವುದೇ ಪದವಿ ಪ್ರತಿಷ್ಠೆಗಳಿಗೆ ಆಶಿಸಿ ಆಳರಸರ ಅಂಗಲಾಚುವವರಲ್ಲ. ಶರಣರು ನಿತ್ಯ ತೃಪ್ತರು.

ಪದಪ್ರಯೋಗಾರ್ಥ:
ಆಸೆ ಎಂಬ ಪಾಶದಿಂದ ವಿರಹಿತನಾದವನು ಅಂದರೆ ಆಸೆಗಳನ್ನು ತೊರೆದವನು ಎಂದರ್ಥ.
ಶರಣರು ಆಶಾಪಾಶ ವಿರಹಿತರು ಎಂಬುದು ಅಲ್ಲಮನ ಖಡಾಖಂಡಿತವಾದ ಹೇಳಿಕೆ.
ಆಶೆಗಳ ಕೆಣಕದಿರು, ಪಾಶಗಳ ಬಿಗಿಯದಿರು
ಕ್ಲೇಶದ ಪರೀಕ್ಷೆಗಳಿಗೆನ್ನ ಕರೆಯದಿರು ಎನ್ನುತೀಶನನು ಬೇಡುತಿರು – ಮಂಕುತಿಮ್ಮ ಎಂಬ ಕಗ್ಗನುಡಿಯಿದೆ. ಇದೇ ಶರಣ ಪ್ರಾರ್ಥನೆ.

Advertisements

ಅನ್ನ ಉದಕ ಹೊನ್ನು ವಸ್ತ್ರ ಅಧಿಕಾರವುಳ್ಳ ದೊರೆಯ ಬಾಗಿಲಲ್ಲಿ ಪದವಿ ಪುರಸ್ಕಾರಗಳಿಗಾಗಿ ಭಾಷಾ ಪಂಡಿತರು ಕವಿಗಳು ಸಾಹಿತಿಗಳು ಬಾಗಿಲು ಕಾಯ್ದುಕೊಂಡಿರುತ್ತಾರೆ ಎಂದು ಅಲ್ಲಮ ಹೇಳಿದ್ದು ಈ ಕಾಲಕ್ಕೂ ಅತ್ಯಂತ ಪ್ರಸ್ತುತವಾದದ್ದು. ವಿವಿಧ ಸಾಹಿತ್ಯ ಸಂಸ್ಕೃತಿ ಅಕಾಡೆಮಿಗಳ ಅಧ್ಯಕ್ಷತೆಗಾಗಿ, ಎಂಎಲ್‌ಸಿ ಪದವಿಗಾಗಿ, ರಾಜ್ಯೋತ್ಸವ ಪ್ರಶಸ್ತಿಗಾಗಿ ಮುಖ್ಯಮಂತ್ರಿಯ ಮನೆಯ ಮುಂದೆ ವಿಧಾನಸೌಧದ ಹೆಬ್ಬಾಗಿಲ ಕೆಳಗೆ ನಮ್ಮ ಬಹುಭಾಷಾ ಪಂಡಿತರು, ಸಾಹಿತಿಗಳು, ಕವಿಗಳು ನೆರೆದುಕೊಂಡಿಪ್ಪುದನ್ನು ಒಮ್ಮೆ ನೆನಪಿಸಿಕೊಳ್ಳಿ. ಬಹುಭಾಷೆಯ ಹಿರಿಯರು ಆಶಾಪಾಶಬಂಧಿತರು. ಶರಣರು ಆಶಾಪಾಶವಿರಹಿತರು.

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ದಾರಿದ್ರ್ಯವಿದ್ದಲ್ಲಿ ನಿದ್ರೆ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ನೀರಲಾದ ನಿರ್ಮಿತಂಗಳು

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಹೊದಕುಳಿ

ಶಿವಕುಮಾರ್
ಹರಿಹರ ಶಿವಕುಮಾರ್
+ posts

ಲೇಖಕ, ವೃತ್ತಿಯಿಂದ ಚಾರ್ಟರ್ಡ್ ಅಕೌಂಟೆಂಟ್. ಲೆಕ್ಕಪರಿಶೋಧನೆ ಮತ್ತು ತೆರಿಗೆ ವಿಚಾರಗಳಲ್ಲಿ ಪರಿಣತಿ. ಕನ್ನಡದಲ್ಲಿ ಕಂಪ್ಯೂಟರ್ ಬಳಕೆ ಇವರ ಹವ್ಯಾಸ. ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಆಸಕ್ತರು. ಶಿವಮೊಗ್ಗ ಜಿಲ್ಲೆಯವರು, ಸದ್ಯ ಬೆಂಗಳೂರಿನಲ್ಲಿ ನೆಲೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಹರಿಹರ ಶಿವಕುಮಾರ್
ಹರಿಹರ ಶಿವಕುಮಾರ್
ಲೇಖಕ, ವೃತ್ತಿಯಿಂದ ಚಾರ್ಟರ್ಡ್ ಅಕೌಂಟೆಂಟ್. ಲೆಕ್ಕಪರಿಶೋಧನೆ ಮತ್ತು ತೆರಿಗೆ ವಿಚಾರಗಳಲ್ಲಿ ಪರಿಣತಿ. ಕನ್ನಡದಲ್ಲಿ ಕಂಪ್ಯೂಟರ್ ಬಳಕೆ ಇವರ ಹವ್ಯಾಸ. ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಆಸಕ್ತರು. ಶಿವಮೊಗ್ಗ ಜಿಲ್ಲೆಯವರು, ಸದ್ಯ ಬೆಂಗಳೂರಿನಲ್ಲಿ ನೆಲೆ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಭೂಮ್ತಾಯಿ | ವಿಮಾ ರಕ್ಷಣೆಗೆ ಸವಾಲೆಸೆದ ಹವಾಮಾನ ವೈಪರೀತ್ಯ

ಹವಾಮಾನ ಬದಲಾವಣೆಯ ವೈಪರೀತ್ಯಗಳು ಇಂದು ಕೇವಲ ಭೂಮಿ, ಸಮುದ್ರ, ವಾಯುಮಂಡಲಕ್ಕೆ ಮಾತ್ರ...

ಅಲ್ಲಮನ ಅನನ್ಯ ಪದಪ್ರಯೋಗಗಳು | ಅಘಟಿತ ಘಟಿತ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ...

ಜೋಳಿಗೆ | ನಮ್ಮ ಹೊಸ ʻಪಕ್ಷʼ ಬೆಳೆಸುವ ಪ್ರಯತ್ನಗಳು – ಭಾಗ 2

ಆಗ ಸಾಕಷ್ಟು ಪ್ರಾಬಲ್ಯ ಹೊಂದಿದ್ದ ಸಿಪಿಐ ಪಕ್ಷಕ್ಕೆ ಸೇರಿದ ಎಐಟಿಯುಸಿ ಕಾರ್ಮಿಕ...

ನುಡಿಯಂಗಳ | ನುಡಿದಂತೆ ಬರೆವ, ಬರೆದಂತೆ ನುಡಿವ ಭಾಷೆ ʼಕನ್ನಡʼ

‘ನುಡಿದಂತೆ ಬರೆವ, ಬರೆದಂತೆ ನುಡಿವ’ ಕನ್ನಡ ಭಾಷೆಯ ಒಂದು ವಿಶಿಷ್ಟ ಸಮಸ್ಯೆ...

Download Eedina App Android / iOS

X