ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ ಪದದ ಬಗ್ಗೆ ಈ ಕೆಳಗಿನ ಮಾದರಿಯಲ್ಲಿ ವಿವರಿಸಲಾಗುವುದು. ಈದಿನ ಓದುಗರಿಗಾಗಿ ಅಲ್ಲಮನ ಅರಿವು…
ನೀರಲಾದ ನಿರ್ಮಿತಂಗಳು
ಆಯಿತ್ತೆ ಉದಯಮಾನ
ಹೋಯಿತ್ತೆ ಅಸ್ತಮಾನ
ಅಳಿದವಲ್ಲಾ ನೀರಲಾದ ನಿರ್ಮಿತಂಗಳೆಲ್ಲವೂ!
ಕತ್ತಲೆಗವಿಯಿತ್ತು ಮೂರುಲೋಕದೊಳಗೆ
ಇದರ ಅಚ್ಚುಗವೇನು ಹೇಳಾ ಗುಹೇಶ್ವರ
ಪದಾರ್ಥ:
ನೀರಲಾದ = ನೀರಿನಲ್ಲಿ ಉದಯಿಸಿದ
ನಿರ್ಮಿತಂಗಳು = ನೀರ್ಗುಳ್ಳೆ, ಅಲೆ, ತೆರೆ
ಅಚ್ಚುಗ = ಅದ್ಭುತ, ರಹಸ್ಯ
ವಚನಾರ್ಥ:
ಜಗತ್ತಿನಲ್ಲಿ ನಡೆಯುವ ನಿರಂತರವಾದ ನಿರ್ಮಾಣ ಕ್ರಿಯೆಯನ್ನು ಮತ್ತು ಅದರ ನಶ್ವರತೆಯನ್ನು ಪ್ರಚುರಪಡಿಸುವುದು ವಚನದ ಉದ್ದೇಶ. ಜೀವಜಗತ್ತಿನಲ್ಲಿ ಜೀವಿಗಳು ಸೃಷ್ಟಿಯಾಗುವ ಜನ್ಮ ತಳೆಯುವ ಪ್ರಕ್ರಿಯೆಯೇ ಉದಯ. ಆ ಜೀವಿಗಳು ತಮ್ಮ ರೂಪವನ್ನು ಕಳೆದುಕೊಂಡು ಮತ್ತದೇ ಜಗತ್ತಿನಲ್ಲಿ ಅಡಗಿಹೋಗುವ ಪ್ರಕ್ರಿಯೆಯೇ ಅಸ್ತಮಾನ ಅಂದರೆ ಅವಸಾನ. ಹೀಗೆ ಹುಟ್ಟುವ ಮತ್ತು ನಶಿಸಿಹೋಗುವ ನಿರಂತರ ಕ್ರಿಯೆಯನ್ನು ಅಲ್ಲಮ ನೀರಿನಲ್ಲಿ ಮೂಡಿಬರುವ ನೀರ್ಗುಳ್ಳೆ, ಅಲೆ, ತೆರೆಗಳಿಗೆ ಉದಹರಿಸಿದ್ದಾರೆ. ಅಲೆಗಳು ವಿವಿಧ ಆಕೃತಿಯಲ್ಲಿ ಮೂಡುತ್ತಲೇ ಮರುಕ್ಷಣದಲ್ಲಿ ಪತನಗೊಂಡು ಮತ್ತೆ ನೀರಾಗುತ್ತವೆ. ಇವೆಲ್ಲಾ ನೀರಲಾದ ನಿರ್ಮಿತಂಗಳು. ಈ ಸತ್ಯವನ್ನು ಅರಿಯದ ಜೀವಾತ್ಮನು ಜೀವಸೃಷ್ಟಿಯಾದಾಗ ಸಂಭ್ರಮಿಸುತ್ತಾನೆ. ನಾಶಹೊಂದಿದಾಗ ದುಃಖಿಸುತ್ತಾನೆ. ಇಂತಹ ಜೀವನ್ಮರಣಗಳ ಸುಳಿಗೆ ಸಿಕ್ಕು ಜೀವಾತ್ಮನು ಅಜ್ಞಾನದ ಕತ್ತಲೆಯಲ್ಲಿ ಬಳಲುತ್ತಾನೆ. ಇದೇನು ಅದ್ಭುತವೋ, ರಹಸ್ಯವೋ ಎಂಬುದು ಅಲ್ಲಮನ ಪ್ರಶ್ನೆ.
ಪದಪ್ರಯೋಗಾರ್ಥ:
ನೀರಲಾದ ನಿರ್ಮಿತಂಗಳು ಎಂಬುದು ಅನನ್ಯವಾದ ಪದಪ್ರಯೋಗ. ನೀರ್ಗುಳ್ಳೆಗಳು, ಅಲೆಗಳು, ತೆರೆಗಳು ಹರಿವ ನೀರಿನಲ್ಲಿ ಉದ್ಭವಿಸುವ ವಿವಿಧ ಆಕೃತಿಗಳು. ಅವೇ ನಿರ್ಮಿತಂಗಳು. ಅವು ನೀರಿಗಿಂತ ಭಿನ್ನವಲ್ಲ. ನೀರಿನಲ್ಲಿ ಉದಿಸಿ, ನೀರಿನಲ್ಲಿ ವಿಸರ್ಜನೆಯಾಗಿ ನೀರಿನಲ್ಲೇ ಒಂದಾಗುವ ಕ್ಷಣ ಕಾಲದ ಕ್ಷಣಿಕ ಕೃತಿಗಳು. ಇದನ್ನು ಜೀವಿಯ ಜೀವಿತದ ಕ್ಷಣಿಕತ್ವದ ಬಗ್ಗೆ ವಿವರಿಸಲು ನೀರಲಾದ ನಿರ್ಮಿತಂಗಳು ಎಂದು ಅಲ್ಲಮ ಪದಪ್ರಯೋಗ ಮಾಡಿದ್ದಾರೆ. ಇಂತಹುದೇ ಪದಪ್ರಯೋಗದ ಮುಂದುವರಿಕೆಯಾಗಿ ಬೇಂದ್ರೆಯವರು ‘ಸಖೀಗೀತ’ದ 25ನೇ ಖಂಡದಲ್ಲಿ ‘ಹರಿವ ನೀರಿನ ಮೇಲೆ ಹರಗೋಲ ಮನೆ ಕಟ್ಟಿ ಗೊತ್ತಿಲ್ಲವೇ ನಲ್ಲೆ ಹೊರಟಿಹೆವು?’ ಎಂದು ಪ್ರಶ್ನಿಸುತ್ತಾರೆ. ಗಿರೀಶ ಕಾರ್ನಾಡರು ತಮ್ಮ ಹಯವದನ ನಾಟಕದಲ್ಲಿನ ರಂಗಗೀತೆಯಲ್ಲಿ ‘ನೀರಿನ ಮೇಲೆ ಚಿತ್ರ ಕೆತ್ತಲಿಕ್ಕಾಗೋದಿಲ್ಲ’ ಎಂದು ಹೇಳಿರುವುದು ಸಹಾ ನೀರಲಾದ ನಿರ್ಮಿತಂಗಳ ನಿದರ್ಶನದಲ್ಲೇ.
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಹೊದಕುಳಿ

ಹರಿಹರ ಶಿವಕುಮಾರ್
ಲೇಖಕ, ವೃತ್ತಿಯಿಂದ ಚಾರ್ಟರ್ಡ್ ಅಕೌಂಟೆಂಟ್. ಲೆಕ್ಕಪರಿಶೋಧನೆ ಮತ್ತು ತೆರಿಗೆ ವಿಚಾರಗಳಲ್ಲಿ ಪರಿಣತಿ. ಕನ್ನಡದಲ್ಲಿ ಕಂಪ್ಯೂಟರ್ ಬಳಕೆ ಇವರ ಹವ್ಯಾಸ. ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಆಸಕ್ತರು. ಶಿವಮೊಗ್ಗ ಜಿಲ್ಲೆಯವರು, ಸದ್ಯ ಬೆಂಗಳೂರಿನಲ್ಲಿ ನೆಲೆ.