ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ ಪದದ ಬಗ್ಗೆ ಈ ಕೆಳಗಿನ ಮಾದರಿಯಲ್ಲಿ ವಿವರಿಸಲಾಗುವುದು. ಈದಿನ ಓದುಗರಿಗಾಗಿ ಅಲ್ಲಮನ ಅರಿವು…
ಪ್ರಥಮ ಭಿತ್ತಿ
ಏನೂ ಏನೂ ಇಲ್ಲದ ಬಯಲೊಳಗೊಂದು ಬಗೆಗೊಳಗಾದ ಬಣ್ಣ ತಲೆದೋರಿತ್ತು.
ಆ ಬಣ್ಣವು ಆ ಬಯಲ ಶೃಂಗರಿಸಲು,
ಬಯಲು ಸ್ವರೂಪಗೊಂಡಿತ್ತು.
ಅಂತಪ್ಪ ಸ್ವರೂಪಿನ ಬೆಡಗು ತಾನೆ,
ನಮ್ಮ ಗುಹೇಶ್ವರಲಿಂಗದ ಪ್ರಥಮಭಿತ್ತಿ.
ಪದಾರ್ಥ:
ಬಯಲು = ಆಕಾಶ, ಸೃಷ್ಟಿ
ಬಣ್ಣ = ವರ್ಣ, ಅಕ್ಷರ
ಭಿತ್ತಿ = ಚಿತ್ರ ಬರೆಯಲು ಬಳಸುವ ಬಟ್ಟೆ
ವಚನಾರ್ಥ:
ಈ ಸೃಷ್ಟಿಯ ಪ್ರಥಮ ಅಕ್ಷರ ಓಂ ಎಂದು ಪ್ರತಿಪಾದಿಸಲು ಮತ್ತು ಪ್ರಣವ ಸ್ವರೂಪವಾದ ಓಂ ಪ್ರಭೆಯನ್ನು ಪರಿಣಾಮಕಾರಿಯಾಗಿ ಬಿಂಬಿಸಲು ಅಲ್ಲಮ ನಿಸರ್ಗದ ಚಿತ್ರಣವೊಂದನ್ನು ರೂಪಕವಾಗಿ ಬಳಸಿರುವುದು ಈ ಸುಂದರ ವಚನದಲ್ಲಿ ಕಂಡು ಬರುತ್ತದೆ. ಸೃಷ್ಟಿ ಪೂರ್ವದ ಶೂನ್ಯದಲ್ಲಿ ಒಂದು ವರ್ಣ ಓಂ ತಲೆದೋರಿತ್ತು. ಅದು ವಿಕಾಸವಾಗುತ್ತಾ ಹೋದಂತೆಲ್ಲ ಸೃಷ್ಟಿಯಲ್ಲಿ ಸಂಚಲನ ಮೂಡಿತು. ನೆಲ ಬಾನು ಮುಗಿಲು ಓಂಕಾರದ ನಾದ ಪ್ರಭಾವದಿಂದ ಸಿಂಗಾರಗೊಂಡವು. ಆ ಓಂ ಎಂಬ ನಾದವೇ ಸೃಷ್ಟಿಯ ಪ್ರಥಮ ಭಿತ್ತಿ. ಆ ಭಿತ್ತಿಯ ಮೇಲಿನ ಚಿತ್ರದಲ್ಲಿ ನಿಸರ್ಗದ ಎಲ್ಲಾ ಚಿತ್ತಾರಗಳೂ ಒಡಮೂಡುತ್ತವೆ.
ಪದ ಪ್ರಯೋಗಾರ್ಥ:
ಈ ವಚನದಲ್ಲಿ ಅಲ್ಲಮ ಚಿತ್ರಿಸಿರುವ ದೃಶ್ಯವನ್ನು ಆಗ ತಾನೇ ಕತ್ತಲು ಕಳೆದು ಬೆಳಗು ಮೂಡುತ್ತಿರುವ ಆಕಾಶಕ್ಕೆ ಹೋಲಿಸಿ ನೋಡಬಹುದು. ರಾತ್ರಿಯ ಕತ್ತಲೆಯಲ್ಲಿ ಏನೂ ಏನೂ ಕಾಣದ ಬಾನ ಬಯಲಿನಲ್ಲಿ ಉಷೆ ಮೂಡುವ ಮೊದಲು ಒಂದು ಬಗೆಗೊಳಗಾದ ಬಣ್ಣ ತಲೆದೋರುತ್ತದೆ. ಆ ಬಣ್ಣ ಆ ಬಾನ ಬಯಲನ್ನು ಸಿಂಗರಿಸುತ್ತದೆ. ಹಾಗೆ ಸಿಂಗಾರಗೊಂಡ ಬಾನು ವಿವಿಧ ರೂಪಗಳನ್ನು ತಳೆದು ಹೊಮ್ಮುತ್ತಾ ಸ್ವರೂಪಗೊಳ್ಳುತ್ತದೆ. ಅದು ನಿಸರ್ಗದ ಬೆರಗು ಬೆಳಗು ಬೆಡಗು! ಅದು ಅನುದಿನವು ಆ ಕಲಾಕಾರನ ಕೈಯ ಕುಂಚಕ್ಕೆ ಅನುವಾಗಲು ಬಿಚ್ಚಿಕೊಳ್ಳುವ ಭಿತ್ತಿ. ಆ ದಿನದ ಪ್ರಥಮ ಭಿತ್ತಿ. ಶಾಂತಿರಸವೇ ಪ್ರೀತಿಯಿಂದ ಮೈದೋರಿತಣ್ಣಾ, ಇದು ಬರೀ ಬೆಳಗಲ್ಲೋ ಅಣ್ಣಾ ಅಂತ ಬೇಂದ್ರೆ ಅಂದದ್ದು ಅಲ್ಲಮನ ಧ್ವನಿಯಲ್ಲೇ. ಅಲ್ಲಮ ಕಂಡ ಓಂಕಾರದ ಪ್ರಥಮ ಭಿತ್ತಿಯನ್ನು ಬೇಂದ್ರೆ ದರ್ಶಿಸಿದ್ದು ಹೀಗೆ:
ಮೂಡಲ ಮನೆಯ ಮುತ್ತಿನ ನೀರಿನ
ಎರಕಾವ ಹೊಯ್ದ, ನುಣ್ಣನೆ ಎರಕಾವ ಹೊಯ್ದ
ಬಾಗಿಲು ತೆರೆದು ಬೆಳಕು ಹರಿದು ಜಗವೆಲ್ಲಾ ತೊಯ್ದ,
ದೇವನು ಜಗವೆಲ್ಲಾ ತೊಯ್ದ.
ಈ ಗೀತೆಯನ್ನು ಕಪ್ಪು ಬಿಳುಪು ಭಿತ್ತಿಯ ಮೇಲೆ ‘ಬೆಳ್ಳಿಮೋಡ’ ಚಲನಚಿತ್ರದಲ್ಲಿ ಪುಟ್ಟಣ್ಣ ಕಣಗಾಲ್ ಅದ್ಭುತವಾಗಿ ಚಿತ್ರೀಕರಿಸಿದ್ದಾರೆ.
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಅನುಪಮಸುಖಿ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ನೀರಲಾದ ನಿರ್ಮಿತಂಗಳು
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಹೊದಕುಳಿ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಅನುಪಮಸುಖಿ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಆಶಾಪಾಶ ವಿರಹಿತರು
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಮಡದಿಯರ ಒಲುಮೆ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಬಗೆದು ಬಿತ್ತಿದ ಬ್ರಹ್ಮಬೀಜ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ವಿಷಕ್ಕೆ ರುಚಿ

ಹರಿಹರ ಶಿವಕುಮಾರ್
ಲೇಖಕ, ವೃತ್ತಿಯಿಂದ ಚಾರ್ಟರ್ಡ್ ಅಕೌಂಟೆಂಟ್. ಲೆಕ್ಕಪರಿಶೋಧನೆ ಮತ್ತು ತೆರಿಗೆ ವಿಚಾರಗಳಲ್ಲಿ ಪರಿಣತಿ. ಕನ್ನಡದಲ್ಲಿ ಕಂಪ್ಯೂಟರ್ ಬಳಕೆ ಇವರ ಹವ್ಯಾಸ. ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಆಸಕ್ತರು. ಶಿವಮೊಗ್ಗ ಜಿಲ್ಲೆಯವರು, ಸದ್ಯ ಬೆಂಗಳೂರಿನಲ್ಲಿ ನೆಲೆ.