‘ಈ ದಿನ’ ಸಂಪಾದಕೀಯ | ಒಡಿಶಾ ರೈಲು ಅಪಘಾತ; ಪರಿಹಾರಕ್ಕೆ ಪರಮ ಆದ್ಯತೆಯಿರಲಿ

Date:

Advertisements
ಘಟನಾ ಸ್ಥಳಕ್ಕೆ ಪ್ರಧಾನಿ ಮೋದಿಯವರ ಭೇಟಿ ಮತ್ತು ರಾಜ್ಯದ ಪ್ರಯಾಣಿಕರಿಗೆ ಸಹಾಯ ಮಾಡಲೆಂದು ಕರ್ನಾಟಕ ಸರ್ಕಾರವು ಸಚಿವ ಸಂತೋಷ್ ಲಾಡ್ ಅವರನ್ನು ಕಳಿಸಿಕೊಟ್ಟಿರುವುದು ಸೂಕ್ತ ಬೆಳವಣಿಗೆ. ವಿಪತ್ತುಗಳನ್ನು ಎದುರಿಸಲು ಇಂತಹ ಸಂಘಟಿತ ಪ್ರಯತ್ನ ಅತ್ಯವಶ್ಯ

ಒಡಿಶಾ ರಾಜ್ಯದ ಬಾಹಾನ್‌ಗಾ ಬಾಜಾರ್ ರೈಲು ನಿಲ್ದಾಣದ ಬಳಿ ನಡೆದ ಭೀಕರ ಅಪಘಾತ ಅತ್ಯಂತ ಆಘಾತಕಾರಿ. ದುರಂತದಲ್ಲಿ 300ಕ್ಕೂ ಹೆಚ್ಚು ಮಂದಿ ಜೀವ ಕಳೆದುಕೊಂಡಿದ್ದು, ಸಾವಿರಕ್ಕೂ ಹೆಚ್ಚು ಮಂದಿ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗಳಿಗೆ ಸೇರಿಸಲಾಗಿದೆ. ಘಟನೆ ನಡೆದ ಜೂನ್ 2ರ ಶುಕ್ರವಾರ ಇಡೀ ರಾತ್ರಿ ಮತ್ತು ಜೂನ್ 3ರ ಶನಿವಾರ ಹಗಲಿಡೀ ರಕ್ಷಣಾ ಕಾರ್ಯಾಚರಣೆ ನಡೆದಿದ್ದು, ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚುವುದು ನಿಶ್ಚಿತ. ಈ ದಾರುಣ ದುರಂತದ ಸಂದರ್ಭವನ್ನು ನಿಭಾಯಿಸುವಲ್ಲಿ ಒಕ್ಕೂಟ ಸರ್ಕಾರ ಮತ್ತು ಸಂಬಂಧಿಸಿದ ರಾಜ್ಯ ಸರ್ಕಾರಗಳು ಪ್ರಾಮಾಣಿಕ ಕಾಳಜಿ ಮತ್ತು ಹೊಣೆಗಾರಿಕೆ ತೋರಬೇಕಿದೆ.

1960-61ರಲ್ಲಿ ವಾರ್ಷಿಕ 2,131ರಷ್ಟಿದ್ದ ರೈಲು ಅಪಘಾತಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತ, ಈಗ 100ರೊಳಕ್ಕೆ ಬಂದು ನಿಂತಿದೆ. ಇದರ ಸಂಪೂರ್ಣ ಶ್ರೇಯ ಭಾರತೀಯ ರೈಲ್ವೆಯ ತಾಂತ್ರಿಕ ವಿಭಾಗಕ್ಕೆ ಸಲ್ಲಬೇಕು. ರೈಲುಗಳಲ್ಲಿ ಅತ್ಯಂತ ಹೆಚ್ಚು ಮಂದಿ ಪ್ರಯಾಣಿಕರು ಸಂಚರಿಸುವ ಇಂಡಿಯಾದಂಥ ದೇಶದಲ್ಲಿ ರೈಲ್ವೆ ವ್ಯವಸ್ಥೆಯನ್ನು ತಾಂತ್ರಿಕವಾಗಿ ಸುಧಾರಿಸುವುದು ಬಹುದೊಡ್ಡ ಸಾಹಸವೇ ಸರಿ. ರೈಲುಮಾರ್ಗಗಳ ಸುಧಾರಣೆ, ಕಣ್ಗಾವಲು ವ್ಯವಸ್ಥೆಯ ಉನ್ನತೀಕರಣ, ಪ್ರಾಕೃತಿಕ ವಿಕೋಪಗಳು ರೈಲುಮಾರ್ಗಗಳ ಮೇಲೆ ಗಂಭೀರ ಪರಿಣಾಮ ಉಂಟುಮಾಡದಂತೆ ನೋಡಿಕೊಳ್ಳುವ ಮುನ್ನೆಚ್ಚರಿಕೆ ಮತ್ತು ಸಿದ್ಧತೆ, ತಾಂತ್ರಿಕ ದೋಷಗಳ ನಿವಾರಣೆ… ಮುಂತಾದ ಹಲವು ಸವಾಲುಗಳನ್ನು ರೈಲ್ವೆ ತಾಂತ್ರಿಕ ವಿಭಾಗ ಸಮರ್ಕಪವಾಗಿಯೇ ನಿಭಾಯಿಸುತ್ತ ಬಂದಿದೆ. ಆದರೂ, ಮಾನವನಿಂದ ಆಗುವ ಎಡವಟ್ಟುಗಳು (ಹ್ಯೂಮನ್ ಎರರ್ಸ್) ಮತ್ತು ತಾಂತ್ರಿಕ ದೋಷಗಳು ನಿರಂತರ ಸವಾಲೊಡ್ಡುತ್ತ ಬರುತ್ತಿವೆ.

ಈ ಸಂಪಾದಕೀಯ ಓದಿದ್ದೀರಾ?: ಕುಸ್ತಿಪಟುಗಳ ಕಣ್ಣೀರು ಮತ್ತು ಪ್ರಚಂಡ ಪ್ರಧಾನಿಯ ಮೌನ

Advertisements

ಇದೀಗ ಒಡಿಶಾ ರಾಜ್ಯದಲ್ಲಿ ನಡೆದಿರುವ ರೈಲು ದುರಂತವು, ಅಪಘಾತಗಳ ಸಂಖ್ಯೆ ಕಡಿಮೆ ಮಾಡಿದೆವೆಂಬ ಖುಷಿಯಲ್ಲಿ ಮೈಮರೆಯುವಂತಿಲ್ಲ ಎಂಬ ಎಚ್ಚರಿಕೆಯನ್ನು ರೈಲ್ವೆ ತಾಂತ್ರಿಕ ವಿಭಾಗಕ್ಕೆ ರವಾನಿಸಿದೆ. ಈ ಅಪಘಾತವು ಮೇಲ್ನೋಟಕ್ಕೆ ರೈಲ್ವೆ ಸಿಬ್ಬಂದಿಯ ಎಡವಟ್ಟಿನಿಂದ ಸಂಭವಿಸಿದಂತೆ ಕಾಣುತ್ತಿದ್ದು, ಸಂಪೂರ್ಣ ತನಿಖೆಯ ನಂತರ ಅಸಲು ಸಂಗತಿ  ಹೊರಬೀಳಲಿದೆ. ಸಿಬ್ಬಂದಿಯ ಎಡವಟ್ಟಿನಿಂದ ಈ ಅಪಘಾತ ಸಂಭವಿಸಿದೆ ಎಂದು ಸಾಬೀತಾದರೂ, ಅಪಘಾತದ ತೀವ್ರತೆಯನ್ನು ತಗ್ಗಿಸುವಲ್ಲಿ ಏನು ಮಾಡಬಹುದಿತ್ತು ಎಂಬ ಕುರಿತು ರೈಲ್ವೆ ತಾಂತ್ರಿಕ ವಿಭಾಗ ಗಂಭೀರವಾಗಿ ಆಲೋಚಿಸಲೇಬೇಕು.

ಅಪಘಾತ ಸಂಭವಿಸಿದ ಮರುಕ್ಷಣದಿಂದಲೇ ರಕ್ಷಣಾ ಕಾರ್ಯಾಚರಣೆ ಆರಂಭಿಸಿ, ಹಲವರ ಜೀವ ಕಾಪಾಡಿದ ಬಾಹಾನ್‌ಗಾ ಮತ್ತು ಸುತ್ತಮುತ್ತಲ ಊರುಗಳ ಜನರ ಧೈರ್ಯ ಮತ್ತು ಮಾನವೀಯತೆಗೆ ಸಲಾಂ ಹೇಳಲೇಬೇಕು. ಸಮಯಕ್ಕೆ ಸರಿಯಾಗಿ ಸ್ಪಂದಿಸಿ ಸಹಾಯವಾಣಿಗಳನ್ನು ತೆರೆದ ಬಾಲಾಸೋರ್ ಜಿಲ್ಲಾಡಳಿತದ ಕಾರ್ಯ, ಒಡಿಶಾ ಸರ್ಕಾರದ ತುರ್ತು ಕ್ರಮ ಕೂಡ ಶ್ಲಾಘನೀಯ. ಘಟನಾ ಸ್ಥಳಕ್ಕೆ ಪ್ರಧಾನಿ ಮೋದಿಯವರ ಭೇಟಿ ಮತ್ತು ರಾಜ್ಯದ ಪ್ರಯಾಣಿಕರಿಗೆ ಸಹಾಯ ಮಾಡಲೆಂದು ಕರ್ನಾಟಕ ಸರ್ಕಾರವು ಸಚಿವ ಸಂತೋಷ್ ಲಾಡ್ ಅವರನ್ನು ಕಳಿಸಿಕೊಟ್ಟಿರುವುದು ಸೂಕ್ತ ಬೆಳವಣಿಗೆ. ವಿಪತ್ತುಗಳನ್ನು ಎದುರಿಸಲು ಇಂತಹ ಸಂಘಟಿತ ಪ್ರಯತ್ನಗಳು ಅತ್ಯವಶ್ಯ. ಅಲ್ಲದೆ, ಭೀಕರ ರೈಲು ಅಪಘಾತಗಳು ಪ್ರಯಾಣಿಕರ ಮೇಲೆ ಮಾನಸಿಕ ದುಷ್ಪರಿಣಾಮ ಬೀರದಂತೆ ತಡೆಯುವಲ್ಲಿ ಕೂಡ ಅತ್ಯಂತ ಪರಿಣಾಮಕಾರಿ. ಕೊರೊನಾದಿಂದ ಕಂಗೆಟ್ಟು, ಇತ್ತೀಚೆಗಷ್ಟೇ ಸಹಜ ಸ್ಥಿತಿಗೆ ಮರಳಿದ್ದ ರೈಲ್ವೆ ವ್ಯವಸ್ಥೆಗೆ ಈ ಅಪಘಾತವು ದೊಡ್ಡ ಹಿನ್ನಡೆ ಆಗದಂತೆ ಕಾಯಬೇಕಾದದ್ದು ಒಕ್ಕೂಟ ಸರ್ಕಾರ ಮತ್ತು ಸಂಬಂಧಿಸಿದ ರಾಜ್ಯ ಸರ್ಕಾರಗಳ ಜವಾಬ್ದಾರಿ. ಅಪಘಾತದಲ್ಲಿ ನೊಂದವರಿಗೆ ಪರಿಹಾರ ಕಾರ್ಯಕ್ರಮಗಳನ್ನು ಯಾವ ಲೋಪವೂ ಇಲ್ಲದಂತೆ ಜರುಗಿಸಲು ಪರಮ ಆದ್ಯತೆ ನೀಡಬೇಕಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X