ಈ ದಿನ ಸಂಪಾದಕೀಯ | ರೀಲ್ಸ್ ಹುಚ್ಚಿಗೆ ಬಲಿಯಾಗುತ್ತಿದೆ ಯುವಜನಾಂಗ; ಹುಸಿ ಲೈಕ್ಸ್ ಮುಂದೆ ಪ್ರಾಣಗಳೂ ಅಗ್ಗವಾದವೇ?

Date:

Advertisements

ಸಾಮಾಜಿಕ ಜಾಲತಾಣಗಳ ಖ್ಯಾತಿಯ ಬಗ್ಗೆ ಯುವಜನರು ಎಚ್ಚರ ವಹಿಸುವ ಅಗತ್ಯವಿದೆ. ಅದೊಂದು ಮೋಹಪಾಶವಷ್ಟೇ. ಅಲ್ಲಿ ಸ್ನೇಹ ಬೆಳೆಸಿ ಮೋಸ ಹೋದವರು, ವೈಯಕ್ತಿಕ ಬದುಕು ಹಾಳು ಮಾಡಿಕೊಂಡವರು, ಹಣ ಕಳೆದುಕೊಂಡವರು, ಆತ್ಮಹತ್ಯೆ ಮಾಡಿಕೊಂಡವರಿಗೆ ಲೆಕ್ಕವಿಲ್ಲ. ರೀಲ್ಸ್‌ ಹುಚ್ಚು ರಾತ್ರೋರಾತ್ರಿ ಖ್ಯಾತಿಯ ಭ್ರಮೆಗೆ ತಳ್ಳುತ್ತಿದೆ.

 

ಮುಂಬೈ ಮೂಲದ ಯೂಟ್ಯೂಬರ್‌ ಆನ್ವಿ ಕಾಮ್ದಾರ್ ಎಂಬ ಯುವತಿ ರೀಲ್ಸ್ ಮಾಡುವ ವೇಳೆ ಸುಮಾರು 300 ಅಡಿ ಜಲಪಾತಕ್ಕೆ ಬಿದ್ದು ಸಾವನ್ನಪ್ಪಿದ್ದಾರೆ. ಆಕೆ ತನ್ನ ಸ್ನೇಹಿತರ ತಂಡದೊಂದಿಗೆ ಜುಲೈ 16ರಂದು ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ಪ್ರಸಿದ್ಧ ಕುಂಭೆ ಜಲಪಾತಕ್ಕೆ ವಿಹಾರಕ್ಕೆ ತೆರಳಿದ್ದರು. ವಿಡಿಯೊ ಚಿತ್ರೀಕರಣ ಮಾಡುವಾಗ ಕಮರಿಗೆ ಜಾರಿ ಬಿದ್ದಿದ್ದಾರೆ.
ಮೊಬೈಲ್‌ನಲ್ಲಿ ಸೆಲ್ಫಿ ತೆಗೆಯುವ ವ್ಯವಸ್ಥೆ ಬಂದ ಹೊಸದರಲ್ಲಿ ಅಪಾಯಕಾರಿ ಸ್ಥಳದಲ್ಲಿ ನಿಂತು ಸೆಲ್ಫಿ ತೆಗೆಯಲು ಹೋಗಿ ಪ್ರಪಾತಕ್ಕೆ ಬೀಳುವುದು, ಚಲಿಸುತ್ತಿರುವ ರೈಲಿನಿಂದ ಬಿದ್ದಿರುವುದು, ಸಮುದ್ರಕ್ಕಿಳಿದು ಕೊಚ್ಚಿ ಹೋದ ಸುದ್ದಿಗಳು ಸಾಮಾನ್ಯವಾಗಿತ್ತು. ಇತ್ತೀಚೆಗೆ ಹಳ್ಳಿ ಹೈಕಳಿಂದ ಹಿಡಿದು ನಗರದ ಜನರವರೆಗೆ ಗಂಡು, ಹೆಣ್ಣು, ಮಕ್ಕಳು ಎಂಬ ಭೇದವಿಲ್ಲದೇ ಎಲ್ಲರೂ  ರೀಲ್ಸ್‌ ಮಾಡುವ ಹುಚ್ಚಿಗೆ ಬಲಿಯಾಗುತ್ತಿದ್ದಾರೆ. ಕೆಲವರಿಗೆ ತಮ್ಮ ಇಡೀ ದಿನಚರಿಯನ್ನು ರೀಲ್ಸ್‌ ಮಾಡಿ, ಇನ್‌ಸ್ಟಾಗ್ರಾಮ್‌ನಲ್ಲಿ ಹಾಕಿ ಲೈಕ್ಸ್‌, ಕಮೆಂಟ್ಸ್‌, ಫಾಲೋವರ್ಸ್‌ ಹೆಚ್ಚಿಸಿಕೊಳ್ಳುವ ಒಂದು ರೀತಿಯ ಚಟ. ಮುಂಬೈನ ಯುವತಿ ಜಲಪಾತದ ಅಂಚಿನಲ್ಲಿ ನಿಂತು ರೀಲ್ಸ್‌ ಮಾಡಲು ಹೋಗಿ ಪ್ರಪಾತಕ್ಕೆ ಬಿದ್ದು ಮೃತಪಟ್ಟಿದ್ದಾಳೆ. ತನ್ನ ಸಾಹಸವನ್ನು ರೀಲ್ಸ್‌ ಮೂಲಕ ತನ್ನ ಫಾಲೋವರ್ಸ್‌ಗೆ ತೋರಿಸಿ ಹೆಚ್ಚು ಲೈಕ್ಸ್‌ ಗಿಟ್ಟಿಸಿಕೊಳ್ಳುವ ಹುಚ್ಚು ಆಕೆಯ ಜೀವವನ್ನೇ ಬಲಿ ಪಡೆದಿದೆ. ಜೊತೆಗಿದ್ದವರೂ ಆಕೆಯನ್ನು ರಕ್ಷಣೆ ಮಾಡಲು ಸಾಧ್ಯವಾಗಿಲ್ಲ.
ಸಾಮಾಜಿಕ ಜಾಲತಾಣಗಳ ಖ್ಯಾತಿಯ ಬಗ್ಗೆ ಯುವಜನರು ಎಚ್ಚರ ವಹಿಸುವ ಅಗತ್ಯವಿದೆ. ಅದೊಂದು ಮೋಹಪಾಶವಷ್ಟೇ. ಅಲ್ಲಿ ಸ್ನೇಹ ಬೆಳೆಸಿ ಮೋಸ ಹೋದವರು, ವೈಯಕ್ತಿಕ ಬದುಕು ಹಾಳು ಮಾಡಿಕೊಂಡವರು, ಪ್ರೇಮಪಾಶದ ಸುಳಿಗೆ ಸಿಕ್ಕವರು, ಹಣ ಕಳೆದುಕೊಂಡವರು, ಆತ್ಮಹತ್ಯೆ ಮಾಡಿಕೊಂಡವರಿಗೆ ಲೆಕ್ಕವಿಲ್ಲ. ರೀಲ್ಸ್‌ ಹುಚ್ಚು ರಾತ್ರೋರಾತ್ರಿ ಖ್ಯಾತಿಯ ಭ್ರಮೆಗೆ ತಳ್ಳುತ್ತಿದೆ. ಸಾಮಾಜಿಕ ತಾಣಗಳು ಯುವಕರ ಮನಸ್ಸಿನಲ್ಲಿ ಭ್ರಮೆಯನ್ನು ಸೃಷ್ಟಿಸಿ ಅಲ್ಲೇ ಸಮಯ ಕಳೆಯುವಂತೆ ಮಾಡುತ್ತಿದೆ. ಇದು ಸಾಮಾಜಿಕ ಸಮಸ್ಯೆಯ ರೂಪ ತಳೆಯುತ್ತಿದೆ. ಇದರ ಬಗ್ಗೆ ಮನಶಾಸ್ತ್ರಜ್ಞರು ಎಚ್ಚರಿಸುತ್ತಲೇ ಇದ್ದಾರೆ.

ಜೂ. 30ರಂದು  ಮುಂಬೈನ ಲೋನಾವಾಲಾದಲ್ಲಿ ಉಕ್ಕಿ ಹರಿಯುತ್ತಿದ್ದ ಜಲಪಾತದ ಬಂಡೆಗಳ ಮಧ್ಯೆ ನಿಂತು ಪ್ರವಾಸದ ಖುಷಿ ಅನುಭವಿಸುತ್ತಿದ್ದ ಒಂದೇ ಕುಟುಂಬದ ಒಂಭತ್ತು ಮಂದಿ ರಭಸದಿಂದ ಬಂದ ನೀರಿನ ಸೆಳೆತಕ್ಕೆ ಸಿಕ್ಕಿ ಕೊಚ್ಚಿ ಹೋಗಿದ್ದರು. ಇಬ್ಬರು ಈಜಿ ದಡ ಸೇರಿದ್ದರೆ, ಏಳು ಮಂದಿ ಮೃತಪಟ್ಟಿದ್ದರು. ಮಕ್ಕಳು, ಮಹಿಳೆಯರು, ಪುರುಷರು ಪರಸ್ಪರ ಕೈಗಳನ್ನು ಬಿಗಿದು ಪ್ರವಾಹದ ಹೊಡೆತದಿಂದ ಬಚಾವ್‌ ಆಗಲು ಕೆಲ ನಿಮಿಷಗಳ ಕಾಲ ಸೆಣಸಿದ್ದರು. ಈ ಮನಕಲಕುವ ದೃಶ್ಯವನ್ನು ನೋಡಿದ ಜನ ಮರುಗಿದ್ದಾರೆ. ಈ ಎರಡು ಘಟನೆಗಳು ರೀಲ್ಸ್‌ ಹುಚ್ಚು ಮತ್ತು ಮಳೆಗಾಲದ ಅಪಾಯಗಳ ಬಗ್ಗೆ ಅರಿವು ಮೂಡಿಸಬೇಕಾದ ಘಟನೆಗಳು. ಇಂತಹ ಘಟನೆಗಳು ಇದೇ ಮೊದಲಲ್ಲ, ಇದೇ ಕೊನೆಯದೂ ಅಲ್ಲ. ಯಾಕೆಂದರೆ ಇಂತಹ ಲೆಕ್ಕವಿಲ್ಲದಷ್ಟು ಘಟನೆಗಳು ನಡೆದಿದ್ದರೂ ಜನ ಪಾಠ ಕಲಿಯುತ್ತಿಲ್ಲ.

ಇನ್ನು ಮಳೆಗಾಲದಲ್ಲಿ ನದಿ, ಜಲಪಾತಗಳು ಭೋರ್ಗರೆವುದು, ಉಕ್ಕಿ ಹರಿಯುವುದು ಸಹಜ. ಯುವಜನರು ಸಾಹಸ ಪ್ರವೃತ್ತಿಯನ್ನು ಪ್ರಕೃತಿಯ ಈ ಭೀಕರ, ರೌದ್ರಾವತಾರದ ಮೇಲೆ ತೋರಿಸುವುದೂ, ಮೃತ್ಯುವನ್ನು ಆಹ್ವಾನಿಸುವುದೂ ಒಂದೇ. ತುಂಬಿ ಹರಿಯುವ ನದಿ, ಜಲಪಾತಕ್ಕೆ ಗೊತ್ತೇ ನಮ್ಮ ಜೀವ ಅಮೂಲ್ಯ ಎಂದು! ಪ್ರವಾಸ ಹೋಗುವ ಯುವಜನರಿಗೆ ಪ್ರಕೃತಿ ಸೌಂದರ್ಯವನ್ನು ಅದರ ರಮಣೀಯತೆಯನ್ನು ಸವಿಯುವುದರ ಜೊತೆಗೆ, ಅದರ ರೌದ್ರದ ಅರಿವೂ ಇರಬೇಕು. ಕೆಲವು ಅಪಾಯಕಾರಿ ಸ್ಥಳಗಳಲ್ಲಿ ಮುನ್ನೆಚ್ಚರಿಕೆಯ ಫಲಕಗಳನ್ನು ಅಳವಡಿಸಿದ್ದರೂ ಅದನ್ನು ನಿರ್ಲಕ್ಷಿಸುವ ನಡವಳಿಕೆ ಸಲ್ಲದು. ಆಳವಿದೆ, ಒಳಸುಳಿ ಇದೆ ಎಂದು ಎಚ್ಚರಿಸಿದರೂ ಈಜುವ ಸಾಹಸಕ್ಕೆ ಇಳಿಯುವ ಮನಸ್ಥಿತಿ ಅಪಾಯಕಾರಿ. ಅಲ್ಲೊಂದು ಫೋಟೋ, ವಿಡಿಯೊ ಮಾಡಿ ಇನ್‌ಸ್ಟಾಗ್ರಾಮ್‌ಗೆ ಹಾಕಿ, ಅದನ್ನು ಜನ ಲೈಕಿಸಿದರೆ ಆಗುವ ಲಾಭವೇನು?

ಇದರ ಮಧ್ಯೆ ಮಳೆಗಾಲದಲ್ಲಿ ಟ್ರೆಕ್ಕಿಂಗ್‌ ಹೋಗುವ ಹವ್ಯಾಸಿಗಳು ಸಾಹಸದ ಹೆಸರಿನಲ್ಲಿ ಮೃತ್ಯುವಶವಾಗುತ್ತಿದ್ದಾರೆ. ಮಳೆಗಾಲದಲ್ಲಿ ನದಿಯ ಭೀಕರತೆ ಹೇಗಿರುತ್ತದೆ ಎಂದು ಅಂದಾಜು ಮಾಡಲು ಸಾಧ್ಯವಿಲ್ಲ. ಯಾವುದೋ ಊರಲ್ಲಿ ಹೆಚ್ಚು ಮಳೆ ಬಂದು ಆ ನೀರು ನದಿಗೆ ಸೇರಿ ರಭಸದಿಂದ ಹರಿದು ಬಂದು ಅಪಾಯಕಾರಿ ಸಂದರ್ಭ ಉಂಟಾಗುತ್ತದೆ. ಈ ಅರಿವು ನಗರದಿಂದ ಹೋದ ಪ್ರವಾಸಿಗರಿಗೆ ಇರುವುದಿಲ್ಲ.

ಕೆಲವು ಅಪಾಯಕಾರಿ ಪ್ರವಾಸಿ ತಾಣಗಳಿಗೆ, ಅದರಲ್ಲೂ ನದಿಗಳಲ್ಲಿ ಸಾಹಸಕ್ರೀಡೆ, ಜಲಪಾತದ ತೀರಾ ಸಮೀಪಕ್ಕೆ ಹೋಗುವುದನ್ನು, ಅಪಾಯಕಾರಿ ಟ್ರೆಕ್ಕಿಂಗ್‌ಗಳಿಗೆ ಈ ಬಿರುಸಿನಿಂದ ಮಳೆ ಸುರಿಯುತ್ತಿರುವ ಸಮಯದಲ್ಲಾದರೂ ಸ್ಥಳೀಯ ಆಡಳಿತ, ಪ್ರವಾಸೋದ್ಯಮ ಇಲಾಖೆ ನಿಷೇಧ ಹೇರಬೇಕು. ನಿಯಮ ಉಲ್ಲಂಘನೆ ಮಾಡಿಯೂ ಅಂತಹ ಕಡೆಗಳಿಗೆ ಹೋದವರ ಬಗ್ಗೆ, ರೀಲ್ಸ್‌ ಮಾಡಿದವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಪ್ರವಾಸಿ ತಾಣಗಳನ್ನು ನಿರ್ವಹಣೆ ಮಾಡುವವರೂ ನಿಗಾವಹಿಸಬೇಕು. ಮೊನ್ನೆಯಷ್ಟೇ ಮಂಗಳೂರಿನ ಪೊಲೀಸ್‌ ಅಧಿಕಾರಿಯೊಬ್ಬರು, ಅಪಾಯದ ಸೂಚನೆಯನ್ನು ಉಲ್ಲಂಘಿಸಿ ಸಮುದ್ರಕ್ಕೆ ಇಳಿದ ಪ್ರವಾಸಿಗರಿಗೆ ಲಾಠಿ ರುಚಿ ತೋರಿಸಿದ್ದ ವಿಡಿಯೊ ಹರಿದಾಡಿತ್ತು.

ಸರ್ಕಾರದ ಪ್ರವಾಸೋದ್ಯಮ ಅಭಿವೃದ್ಧಿ ಎಂಬ ಹೆಸರಿನಲ್ಲಿ ಪ್ರಾಕೃತಿಕ ಸೌಂದರ್ಯವನ್ನು ಹಾಳುಗೆಡಹುವ ರೀತಿಯಲ್ಲಿ ರಸ್ತೆ, ಹೋಟೆಲುಗಳನ್ನು ಕಟ್ಟಿ ಮೋಜಿನ ಜಾಗಗಳನ್ನಾಗಿ ಮಾಡಿರುವ ಪರಿಣಾಮ ಯುವಜನರು ವೀಕೆಂಡ್‌ ಪಾರ್ಟಿ ಹೆಸರಿನಲ್ಲಿ ಅಂತಹ ಜಾಗಗಳಲ್ಲಿ ಸೇರುತ್ತಿದ್ದಾರೆ. ವಾರಾಂತ್ಯದಲ್ಲಿ ಬೆಂಗಳೂರಿನಿಂದ ನಂದಿ ಬೆಟ್ಟ, ಮೈಸೂರಿನಿಂದ ಚಾಮುಂಡಿ ಬೆಟ್ಟಕ್ಕೆ ಹೋಗುವ ರಸ್ತೆಗಳಲ್ಲಿ ನಗರದಂತೆ ಟ್ರಾಫಿಕ್‌ ಜಾಮ್‌ ಆಗುತ್ತಿದೆ ! ಇದು ಪ್ರವಾಸಿ ತಾಣಗಳು ಮೋಜಿನ ತಾಣಗಳಾಗಿರುವುದರ ಕೆಟ್ಟ ಪರಿಣಾಮ. ಪ್ರವಾಸಿ ತಾಣಗಳು ಜೀವ ಕಳೆಯುವ ಜಾಗಗಳಾಗದಂತೆ ತಡೆಯುವುದು ಎಲ್ಲರ ಜವಾಬ್ದಾರಿ.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X