ಭಾಲ್ಕಿ ಕ್ಷೇತ್ರ | ‘ಕೈ’ ಭ್ರದಕೋಟೆಯಲ್ಲಿ ‘ಕಮಲ’ ಕಮಾಲ್; ದಾಯಾದಿಗಳ ಕಾಳಗ

Date:

Advertisements
1962ರಿಂದ ಭಾಲ್ಕಿ ಕ್ಷೇತ್ರ ಖಂಡ್ರೆ ಪರಿವಾರದ ಹಿಡಿತದಲ್ಲಿದೆ. ಕ್ಷೇತ್ರದಲ್ಲಿ ಸ್ಪರ್ಧಿ-ಪ್ರತಿಸ್ಪರ್ಧಿ ಇಬ್ಬರೂ ಖಂಡ್ರೆ ಪರಿವಾರದವರೇ ಆಗಿದ್ದಾರೆ. ಭಾಲ್ಕಿಯಲ್ಲಿ ಖಂಡ್ರೆಗೆ ಖಂಡ್ರೆಯೇ ದಾಯಾದಿಯಾಗಿದ್ದಾರೆ ಎಂಬ ಮಾತು ಜನಜನಿತವಾಗಿದೆ. 

ಭಾಲ್ಕಿ ವಿಧಾನಸಭಾ ಕ್ಷೇತ್ರ ಪ್ರತಿ ಬಾರಿಯೂ ಜಿದ್ದಾಜಿದ್ದಿನ ಕ್ಷೇತ್ರವಾಗಿ ಗಮನ ಸೆಳೆಯುತ್ತದೆ. ಈ ಬಾರಿಯೂ ಭಾಲ್ಕಿ ಕ್ಷೇತ್ರದಲ್ಲಿ ಚುನಾವಣೆ ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಕಾಂಗ್ರೆಸ್ ಭ್ರದಕೋಟೆ ಭೇದಿಸಲು ಕಮಲ ಪಡೆ ಭಾರೀ ರಣತಂತ್ರ ಹೆಣೆಯುತ್ತಿದೆ.

ಭಾಲ್ಕಿ ಕ್ಷೇತ್ರ ಖಂಡ್ರೆ ಪರಿವಾರದ ಹಿಡಿತದಲ್ಲಿದೆ. ಪ್ರತಿ ಬಾರಿಯ ಚುನಾವಣೆ ಕಣದಲ್ಲಿ ಖಂಡ್ರೆ ಪರಿವಾರದ್ದೇ ದರ್ಬಾರ್, ಇಲ್ಲಿಯವರೆಗೆ ನಡೆದ ಒಟ್ಟು ಚುನಾವಣೆಯಲ್ಲಿ ಹೆಚ್ಚು ಬಾರಿ ಗೆಲುವು ಕಂಡಿದ್ದು ಕಾಂಗ್ರೆಸ್, ಅದರಲ್ಲಿ ಬಹುಪಾಲು ಅಧಿಕಾರ ಖಂಡ್ರೆ ಪರಿವಾರಕ್ಕೆ ದಕ್ಕಿರುವುದು ವಿಶೇಷ.

ಕ್ಷೇತ್ರದಲ್ಲಿ ಖಂಡ್ರೆ ಪರಿವಾರದಿಂದ ಮೊದಲ ಶಾಸಕರಾಗಿದ್ದ ಭೀಮಣ್ಣಾ ಖಂಡ್ರೆ ಅವರು ಕಟ್ಟಿದ ಕಾಂಗ್ರೆಸ್ ಕೋಟೆಯನ್ನು ಅವರ ಮಕ್ಕಳಾದ ವಿಜಯಕುಮಾರ್ ಖಂಡ್ರೆ, ಈಶ್ವರ ಖಂಡ್ರೆ ಇದೂವರೆಗೂ ಯಶಸ್ವಿಯಾಗಿ ಕಾಪಾಡಿಕೊಂಡು ಬಂದಿದ್ದಾರೆ. 2023ರ ಚುನಾವಣೆಯಲ್ಲಿ ಶಾಸಕ ಈಶ್ವರ ಖಂಡ್ರೆ ಅವರ ನಾಲ್ಕನೇ ಬಾರಿಯ ಗೆಲುವಿಗೆ ಲಗಾಮ ಹಾಕಲು ಬಿಜೆಪಿ ಭಾರೀ ಕಸರತ್ತು ನಡೆಸಿದೆ. ಬಿಜೆಪಿ ಮತ್ತೆ ತನ್ನ ಹಳೆ ಕಲಿಯನ್ನು ಅಖಾಡಕ್ಕಿಳಿಸಿ ಪ್ರತಿಷ್ಠೆಯ ಕಣವಾಗಿಸಿದೆ.

Advertisements

1999-2004ರಲ್ಲಿ ಬಿಜೆಪಿಯಿಂದ ಎರಡು ಬಾರಿ ಸತತವಾಗಿ ಗೆದಿದ್ದ ಪ್ರಕಾಶ್ ಖಂಡ್ರೆ ಅವರ ವರ್ಚಸ್ಸು ಕ್ಷೇತ್ರದಲ್ಲಿ ಇಂದಿಗೂ ಇದೆ. 2008ರಲ್ಲಿ ಈಶ್ವರ ಖಂಡ್ರೆ ವಿರುದ್ಧ ಸೋತ ಪ್ರಕಾಶ್ ಖಂಡ್ರೆ ಮತ್ತೆ ಗೆಲ್ಲಲು ಆಗಲೇ ಇಲ್ಲ. ಇದೀಗ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಇಳಿದಿರುವ ಪ್ರಕಾಶ್ ಖಂಡ್ರೆ, ಕಮಲ ಅರಳಿಸುವ ಹುಮ್ಮಸ್ಸಿನಲ್ಲಿದ್ದಾರೆ. ಸೋದರ ಸಂಬಂಧಿ ಈಶ್ವರ ಖಂಡ್ರೆ ಅವರನ್ನು ಸೋಲಿಸಲು ಪ್ರಕಾಶ್ ಖಂಡ್ರೆ ಅಬ್ಬರದ ಪ್ರಚಾರದಲ್ಲಿ ತೊಡಗಿದ್ದಾರೆ.

2008ರಿಂದ ನಿರಂತರವಾಗಿ ಗೆದ್ದು ಬರುತ್ತಿರುವ ಶಾಸಕ ಈಶ್ವರ ಖಂಡ್ರೆ ಕ್ಷೇತ್ರದಲ್ಲಿ ಕೈ ಪಡೆಯನ್ನು ಮತ್ತಷ್ಟು ಗಟ್ಟಿಗೊಳಿಸಿದ್ದಾರೆ. ಈ ಹಿಂದೆ ಬಿಜೆಪಿ, ಕೆಜೆಪಿಯಿಂದ ಸ್ಪರ್ಧಿಸಿದ್ದ ಪ್ರಕಾಶ್ ಖಂಡ್ರೆ ಹಾಗೂ ಡಿ.ಕೆ ಸಿದ್ರಾಮ್ ಅವರನ್ನು ಸತತವಾಗಿ ತಿರಸ್ಕರಿಸಿದ ಮತದಾರರು ಒಂದೇ ವ್ಯಕ್ತಿ, ಒಂದೇ ಪಕ್ಷವನ್ನು ಪುನರಾಯ್ಕೆ ಮಾಡಿದ್ದಾರೆ.

ಕ್ಷೇತ್ರದಲ್ಲಿ ಬಿಜೆಪಿ-ಕಾಂಗ್ರೆಸ್ ಮಧ್ಯೆ ನೇರ ಪೈಪೋಟಿ ಒಡ್ಡುವುದು ನಿಶ್ಚಿತ. ಹೀಗಾಗಿ ಎರಡೂ ಪಕ್ಷಗಳ ನಾಯಕರು ಗೆಲುವಿಗೆ ಶಕ್ತಿ ಪ್ರದರ್ಶಿಸಲು ತಾ ಮುಂದು ನಾ ಮುಂದು ಎನ್ನುತ್ತಿದ್ದಾರೆ. ಶಾಸಕ ಈಶ್ವರ ಖಂಡ್ರೆ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಕರೆಸಿ ಶಕ್ತಿ ಪ್ರದರ್ಶಿಸಿದರೆ, ಬಿಜೆಪಿ ಅಭ್ಯರ್ಥಿ ಪ್ರಕಾಶ್ ಖಂಡ್ರೆ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮುಖಾಂತರ ನಾಮಪತ್ರ ಸಲ್ಲಿಸಿ ಬಹಿರಂಗ ಸಮಾವೇಶ ನಡೆಸಿದ್ದಾರೆ. ಅಲ್ಲದೆ, ಮೇ 3ರಂದು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೂ ಕ್ಷೇತ್ರದಲ್ಲಿ ಪ್ರಚಾರ ನಡೆಸಲಿದ್ದಾರೆ. ಇದರಿಂದ ಕ್ಷೇತ್ರದಲ್ಲಿ ಚುನಾವಣೆ ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದೆ.

ಖಂಡ್ರೆ ಭದ್ರಕೋಟೆ ಭೇದಿಸುವುದು ಸುಲಭವಲ್ಲ

1962ರಿಂದ ಖಂಡ್ರೆ ಪರಿವಾರದ ಹಿಡಿತದಲ್ಲಿರುವ ಭಾಲ್ಕಿ ಕ್ಷೇತ್ರದಲ್ಲಿ ಖಂಡ್ರೆ ಕುಟುಂಬವೇ 11 ಬಾರಿ ಜಯ ಗಳಿಸಿದೆ. ಕ್ಷೇತ್ರದಲ್ಲಿ ಸ್ಪರ್ಧಿ-ಪ್ರತಿಸ್ಪರ್ಧಿ ಇಬ್ಬರೂ ಖಂಡ್ರೆ ಪರಿವಾರದವರೇ ಆಗಿದ್ದಾರೆ. ಕಾಂಗ್ರೆಸ್, ಪಕ್ಷೇತರ ಹಾಗೂ ಬಿಜೆಪಿಯಿಂದ ಸ್ಪರ್ಧಿಸಿದ ಖಂಡ್ರೆ ಪರಿವಾರದವರಿಗೆ ಕ್ಷೇತ್ರದ ಜನ ಜೈ ಎಂದಿದ್ದಾರೆ. ಹೀಗಾಗಿ ಭಾಲ್ಕಿಯಲ್ಲಿ ಖಂಡ್ರೆಗೆ ಖಂಡ್ರೆಯೇ ದಾಯಾದಿಯಾಗಿದ್ದಾರೆ ಎಂಬ ಮಾತು ಜನಜನಿತವಾಗಿದೆ.

1967ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಜಯ ಗಳಿಸಿದ ಭೀಮಣ್ಣ ಖಂಡ್ರೆ ಕ್ಷೇತ್ರವನ್ನು ಕಾಂಗ್ರೆಸ್ ಭದ್ರಕೋಟೆಯನ್ನಾಗಿ ಮಾಡಿದ್ದರು. ನಂತರ ಸಚಿವರಾಗಿ ಕ್ಷೇತ್ರದಲ್ಲಿ ನಾನಾ ಕೆಲಸಗಳನ್ನು ಮಾಡುವ ಮೂಲಕ ಸಂಪೂರ್ಣ ಕಾಂಗ್ರೆಸ್ ತೆಕ್ಕೆಗೆ ತೆಗೆದುಕೊಂಡಿದ್ದರು. 1989ರಲ್ಲಿ ಭೀಮಣ್ಣ ಖಂಡ್ರೆ ಅವರು ತಮ್ಮ ಸುಪುತ್ರ ವಿಜಯಕುಮಾರ್ ಖಂಡ್ರೆ ಅವರನ್ನು ರಾಜಕೀಯಕ್ಕೆ ಪ್ರವೇಶ ಕೊಟ್ಟು ಕುಟುಂಬ ರಾಜಕಾರಣಕ್ಕೆ ಅಡಿಪಾಯ ಹಾಕಿದರು. ನಂತರ 2004ರಿಂದ ಅವರ ಇನ್ನೋರ್ವ ಪುತ್ರ ಈಶ್ವರ ಖಂಡ್ರೆ ಸಕ್ರಿಯ ರಾಜಕಾರಣದಲ್ಲಿ ತೊಡಗಿಸಿಕೊಂಡಿದ್ದಾರೆ.

ಈ ಸುದ್ದಿ ಓದಿದ್ದೀರಾ?: ಬಸವಕಲ್ಯಾಣ ಕ್ಷೇತ್ರ | ‘ಕಲ್ಯಾಣ’ ಕದನದಲ್ಲಿ ಪಕ್ಷಾಂತರ ಪರ್ವ; ಬಿಜೆಪಿ ಮಣಿಸಲು ‘ಕೈ’ ತಂತ್ರ

ಭೀಮಣ್ಣ ಖಂಡ್ರೆ ಕುಟುಂಬ ಕಾಂಗ್ರೆಸ್‌ನ ನಿಷ್ಠಾವಂತರಾಗಿದ್ದಾರೆ. ಆದರೆ, ಅವರ ಸೋದರ ಸಂಬಂಧಿ ಪ್ರಕಾಶ್ ಖಂಡ್ರೆ ಬಿಜೆಪಿಯಲ್ಲಿ ಗುರುತಿಸಿಕೊಂಡು ರಾಜಕೀಯ ಪ್ರವೇಶಿಸಿದರು. 1999 ಮತ್ತು 2004ರಲ್ಲಿ ಎರಡು ಬಾರಿ ಬಿಜೆಪಿಯಿಂದ ಜಯ ಗಳಿಸಿದ್ದರು. 2008ರ ಬಳಿಕ ಕ್ಷೇತ್ರವನ್ನು ಕಾಂಗ್ರೆಸ್‌ ಮತ್ತೆ ತನ್ನ ತೆಕ್ಕೆಗೆ ತೆದುಕೊಂಡಿತು.

ಕಾಂಗ್ರೆಸಿಗೆ ಪ್ರತಿಷ್ಠೆ, ಬಿಜೆಪಿಗೆ ಸವಾಲಿನ ಕ್ಷೇತ್ರ

ನಿರಂತರವಾಗಿ ಮೂರು ಅವಧಿಗೆ ಆಯ್ಕೆಯಾಗಿ ಮಂತ್ರಿಯೂ ಆಗಿದ್ದ ಈಶ್ವರ ಖಂಡ್ರೆ, ಪ್ರಸ್ತುತ ಕೆಪಿಸಿಸಿ ಕಾರ್ಯಾಧ್ಯಕ್ಷರೂ ಆಗಿದ್ದಾರೆ. ಕ್ಷೇತ್ರ ಅಷ್ಟೇ ಅಲ್ಲದೆ ರಾಜ್ಯ ರಾಜಕಾರಣದಲ್ಲಿ ತಮ್ಮ ಛಾಪನ್ನು ವಿಸ್ತರಿಸಿಕೊಂಡಿದ್ದಾರೆ. ಹೀಗಾಗಿ ನಾಲ್ಕನೇ ಅವಧಿಗೆ ಶತಾಯಗತಾಯ ಗೆಲ್ಲಲೇಬೇಕು ಎಂಬುದು ಅವರಿಗೆ ಪ್ರತಿಷ್ಠೆ ಎನ್ನುವಂತಾಗಿದೆ.

2008ರಿಂದ ನಂತರ ಸತತವಾಗಿ ಸೋಲುತ್ತಿರುವ ಬಿಜೆಪಿ, ಈ ಬಾರಿ ಕಾಂಗ್ರೆಸ್ ಮಣಿಸಲು ಶತಪ್ರಯತ್ನ ನಡೆಸುತ್ತಿದೆ. ರಾಜ್ಯದ ಘಟಾನುಘಟಿ ನಾಯಕರನ್ನು ಕರೆಸುವ ತಂತ್ರಗಾರಿಕೆ ಹೆಣೆದಿದೆ. ಅಲ್ಲದೆ ಪ್ರಧಾನಿ ನರೇಂದ್ರ ಮೋದಿ ಅವರೂ ಇಂದು (ಎಪ್ರಿಲ್ 29) ಬೀದರ್‌ ಜಿಲ್ಲೆಯ ಹುಮ್ನಾಬಾದ್‌ನಲ್ಲಿ ಪ್ರಚಾರ ನಡೆಸಿದ್ದಾರೆ.

ಕ್ಷೇತ್ರದ ಮತದಾರರು ಮತ್ತು ಜಾತಿಬಲ

ಜಿಲ್ಲೆಯ ಮಧ್ಯಭಾಗದ ಭಾಲ್ಕಿ ಕ್ಷೇತ್ರ ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿದೆ. ಲಿಂಗಾಯತ ಸಮುದಾಯದ ಸಂಖ್ಯಾಬಲ ಅಧಿಕವಿದ್ದರೂ ಮರಾಠ, ಎಸ್ಸಿ, ಎಸ್ಟಿ ಮತಗಳು ನಿರ್ಣಾಯಕ ಪಾತ್ರವಹಿಸುತ್ತವೆ. ಕ್ಷೇತ್ರದಲ್ಲಿ ಅಂದಾಜು 60 ಸಾವಿರ ಲಿಂಗಾಯತ, 45 ಸಾವಿರ ಮರಾಠಾ , 43 ಸಾವಿರ ಪರಿಶಿಷ್ಟಜಾತಿ , 22 ಸಾವಿರ ಪರಿಶಿಷ್ಟ ಪಂಗಡ ಹಾಗೂ 27 ಸಾವಿರ ಮುಸ್ಲಿಂ ಮತಗಳು ಸೇರಿದಂತೆ ಇತರೆ ಸಮುದಾಯದ ಮತದಾರರಿದ್ದಾರೆ. ಪ್ರಸ್ತುತ ಕ್ಷೇತ್ರದಲ್ಲಿ ಒಟ್ಟು 222472 ಮತದಾರರಲ್ಲಿ 116904 ಪುರುಷರು,105560 ಮಹಿಳೆಯರು ಹಾಗೂ 08 ತೃತೀಯ ಲಿಂಗಿಗಳು ಇದ್ದಾರೆ.

ಜಿಲ್ಲೆಯ ಪ್ರತಿಷ್ಠಿತ ರಾಜಕೀಯ ಕುಟುಂಬಗಳಲ್ಲಿ ಖಂಡ್ರೆ ಪರಿವಾರವೂ ಒಂದು. ಬಿಜೆಪಿ ಕಾಂಗ್ರೆಸ್ ನಡುವೆ ನೇರ ಪೈಪೋಟಿ ಇಲ್ಲಿ ನಿಶ್ಚಿತ ಎನ್ನುವಂತಿದೆ. ಆದರೆ ಯಾವುದೇ ಪಕ್ಷದವರು ಗೆದ್ದರೂ ಭಾಲ್ಕಿ ಮತ್ತೆ ಖಂಡ್ರೆ ಪರಿವಾರದ ಹಿಡಿತದಲ್ಲಿರುತ್ತದೆ‌ ಎಂಬುದು ಮತದಾರರ ಅಭಿಪ್ರಾಯ. ಇದೀಗ ಖಂಡ್ರೆ ಪರಿವಾರದ ಹಳೆ ಕಲಿಗಳೇ ಮತ್ತೆ ಕಣದಲ್ಲಿ ಇರುವ ಕಾರಣ ಭಾಲ್ಕಿ ವಿಧಾನಸಭಾ ಕ್ಷೇತ್ರ ಸಹಜವಾಗಿ ಜಿಲ್ಲೆಯಾದ್ಯಂತ ತೀವ್ರ ಕುತೂಹಲ ಮೂಡಿಸಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.

1 COMMENT

  1. ಮನೆ ಒಡೆಯುವುದು ಹೇಗೆಂದರೆ, ಹೀಗೇ ಪದ್ಧತಿ ಚೆನ್ನಾಗಿದೆಯಲ್ಲ, ಯಾರಮನೆ ಹೊಡೆದರೇನು, ನಮ್ಮ ಪಕ್ಷ ಗೆಲ್ಲಬೇಕು ಅಷ್ಟೇ ಅಲ್ವಾ, ಇದು ರಾಜಕೀಯ /ಅಧಿಕಾರ ನಡೆದು ಬಂದ ದಾರಿ 🙏

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X