‘ಕರ್ನಾಟಕದ ಜನ ನರೇಂದ್ರ ಮೋದಿಯವರ ಆಶೀರ್ವಾದದಿಂದ ವಂಚಿತರಾಗಬಾರದು’ ಎಂದಿರುವ ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ, ರಾಜ್ಯದ ಜನರಿಗೆ ಬೆದರಿಕೆ ಹಾಕುತ್ತಿದ್ದಾರೆ. ನಡ್ಡಾ ಅವರ ಮಾತುಗಳು ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಮೇಲಿನ ಆಕ್ರಮಣವಾಗಿದೆ. ಅವರು ದೇಶದ ಜನರಲ್ಲಿ ಕ್ಷಮೆ ಕೇಳಬೇಕು ಎಂದು ರಾಜ್ಯದ ಪ್ರಜ್ಞಾವಂತರು ಆಗ್ರಹಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಪ್ರಜ್ಞಾವಂತರ ತಂಡ, “ಶಿಗ್ಗಾಂವಿಯಲ್ಲಿ ಭಾಷಣ ಮಾಡಿದ್ದ ನಡ್ಡಾ ಅವರು ʼಕರ್ನಾಟಕದಲ್ಲಿ ಅಭಿವೃದ್ಧಿಯು ನಿರಂತರವಾಗಿ ಹರಿಯಲು ನಿಮಗೆ ಮೋದೀಜಿಯವರ ಆಶೀರ್ವಾದ ಬೇಕು. ಆದ್ದರಿಂದ ರಾಜ್ಯವು ಮೋದಿಜಿ ಅವರ ಆಶೀರ್ವಾದದಿಂದ ದೂರವಿರಬಾರದುʼ ಎಂಬ ಮಾತನ್ನು ಹೇಳಿದ್ದಾರೆ. ಈ ಮಾತಿನ ಮೂಲಕ ನಡ್ಡಾ ಅವರು ʼಬಿಜೆಪಿಗೆ ಮತ ಹಾಕದಿದ್ದರೆ ಕರ್ನಾಟಕ ಅಭಿವೃದ್ಧಿ ಹೊಂದುವುದಿಲ್ಲʼ ಎಂಬ ಬೆದರಿಕೆಯನ್ನು ಮತದಾರರಿಗೆ ಹಾಕುತ್ತಿದ್ದಾರೆ. ಜೊತೆಗೆ ಪಕ್ಷ ರಾಜಕಾರಣದಿಂದ ಹೊರಗೆ ಇರಬೇಕಾಗಿರುವ ಪ್ರಧಾನಿ ಹುದ್ದೆಯ ಘನತೆಯನ್ನು ಸಂಕುಚಿತಗೊಳಿಸಿದ್ದಾರೆ” ಎಂದು ಕಿಡಿಕಾರಿದ್ದಾರೆ.
“ಕರ್ನಾಟಕವೂ ಸೇರಿದಂತೆ ದೇಶದ ಯಾವ ರಾಜ್ಯವಾದರೂ ತನಗೆ ಬೇಕಾದ ಪಕ್ಷವನ್ನು ಚುನಾವಣೆಯ ಮೂಲಕ ಅಧಿಕಾರಕ್ಕೆ ತರುವ ಹಕ್ಕನ್ನು ಸಂವಿಧಾನವು ಮತದಾರರಿಗೆ ನೀಡಿದೆ. ಮತದಾರರ ಆಯ್ಕೆಯನ್ನು ಕೇಂದ್ರ ಸರ್ಕಾರ ಗೌರವಿಸಬೇಕು. ಸಂವಿಧಾನದ ಪರಿಚ್ಛೇದ 11 – ಅಧಿಕಾರವನ್ನು ರಾಜ್ಯ ಮತ್ತು ಕೇಂದ್ರಗಳ ನಡುವೆ ಹಂಚಿಕೊಟ್ಟಿದೆ. ಹಾಗಾಗಿಯೇ, ಭಾರತವು ಒಂದು ಒಕ್ಕೂಟ ರಾಷ್ಟ್ರವಾಗಿದೆ. ಇಲ್ಲಿ ಒಂದು ಇನ್ನೊಂದನ್ನು ದುರ್ಬಲಗೊಳಿಸುವುದಿಲ್ಲ, ಬದಲಾಗಿ ಬಲಗೊಳಿಸುತ್ತದೆ. ಆದರೆ ನಡ್ಡಾ ಅವರ ಮಾತುಗಳು ಒಕ್ಕೂಟ ವ್ಯವಸ್ಥೆಯ ಮೂಲ ತತ್ವಗಳಿಗೆ ವಿರೋಧವಾಗಿದ್ದು, ರಾಜ್ಯಗಳ ಅಧಿಕಾರವನ್ನು ಮೊಟಕುಗೊಳಿಸುತ್ತದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ?: ‘ಕರ್ನಾಟಕಕ್ಕೆ ಕೇಂದ್ರದ ಮೋಸ’ ಮೋದಿಯ ಆಶೀರ್ವಾದವೇ, ಶಾಪವೇ: ಸಿದ್ದರಾಮಯ್ಯ
“ಕೇಂದ್ರದಲ್ಲಿರುವ ಎನ್ಡಿಎ ಸರ್ಕಾರವು ಹಂತ ಹಂತವಾಗಿ ರಾಜ್ಯ ಸರ್ಕಾರಗಳ ಹಕ್ಕುಗಳನ್ನು ಮೊಟಕುಗೊಳಿಸುತ್ತಲೇ ಬರುತ್ತಿದೆ. ಇದಕ್ಕೆ ಪೂರಕವಾಗಿಯೇ ನಡ್ಡಾ ಅವರ ಮಾತುಗಳು ಬಂದಿವೆ. ಇದು ಅಂತಿಮವಾಗಿ ಭಾರತದ ಬಹುತ್ವವನ್ನು ನಾಶ ಮಾಡುತ್ತದೆ. ಕಾರಣ, ಸಂವಿಧಾನ ವಿರೋಧಿ ಮಾತುಗಳನ್ನಾಡಿದ ಜೆ.ಪಿ ನಡ್ಡಾ ಅವರು ಕೂಡಲೇ ಭಾರತದ ಮತದಾರರ ಕ್ಷಮೆಯಾಚಿಸಬೇಕು ಮತ್ತು ತಮ್ಮ ಮುಂದಿನ ಭಾಷಣಗಳಲ್ಲಿ ಒಕ್ಕೂಟ ವ್ಯವಸ್ಥೆಯ ಮೌಲ್ಯಗಳನ್ನು ಎತ್ತಿ ಹಿಡಿಯಬೇಕು” ಎಂದು ಆಗ್ರಹಿಸಿದ್ದಾರೆ.
ನಡ್ಡಾ ಹೇಳಿಕೆ ವಿರೋಧಿಸಿ ನಾಡಿನ ಪ್ರಜ್ಞಾವಂತರು ಬಿಡುಗಡೆ ಮಾಡಿರುವ ಪತ್ರಿಕಾ ಹೇಳಿಕೆಗೆ ಬೆಂಗಳೂರಿನ ನಿವೃತ್ತ ಪ್ರಾಧ್ಯಾಪಕ ಡಾ. ಕೆ. ಮರುಳಸಿದ್ದಪ್ಪ, ಲೇಖಕಿ ಡಾ. ವಿಜಯಾ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಪೂರ್ವಾಧ್ಯಕ್ಷ ಪ್ರೊ. ಎಸ್ ಜಿ ಸಿದ್ದರಾಮಯ್ಯ, ಲೇಖಕ ಪ್ರೊ. ಕಾಶೀನಾಥ ಅಂಬಲಗಿ, ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು, ಕಲಾವಿದ ಗಿರಿಧರ ಕಾರ್ಕಳ, ಜೆಎನ್ಯು ನಿವೃತ್ತ ಪ್ರಾಧ್ಯಾಪಕ ಪುರುಷೋತ್ತಮ ಬಿಳಿಮಲೆ, ಅಂಕಣಕಾರ ಶ್ರೀನಿವಾಸ ಕಾರ್ಕಳ ಸಮ್ಮತಿ ಸೂಚಿಸಿದ್ದಾರೆ.