ಮನೆಯಲ್ಲಿದ್ದ ದಲಿತ ಯುವತಿಯನ್ನು ಬೆದರಿಸಿ, ಲೈಂಗಿಕ ಕಿರುಕುಳ ನೀಡಿ, ಅತ್ಯಾಚಾರ ಎಸಗಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ವಿಫಲರಾಗಿದ್ದಾರೆ ಎಂದು ಯುವತಿ ಪಾಲಕರು ಹಾಗೂ ದಲಿತಪರ ಸಂಘಟನೆಗಳು ಯಾದಗಿರಿ ಸುರಪುರ ತಾಲೂಕಿನ ಡಿವೈಎಸ್ಪಿ ಕಚೇರಿ ಎದುರು ಪ್ರತಿಭಟನಾ ಧರಣಿ ನಡೆಸಿದರು.
“ಜಿಲ್ಲೆಯ ಹುಣಸಗಿ ತಾಲೂಕಿನ ಕೊಡೆಕಲ್ಲ ಗ್ರಾಮದಲ್ಲಿ 15 ದಿನಗಳ ಹಿಂದೆ ದಲಿತ ಯುವತಿ ಮೇಲೆ ಲೈಂಗಿಕ ಕಿರುಕುಳ ಹಾಗೂ ದೌರ್ಜನ್ಯ ಎಸಗಿ ಪ್ರಕರಣ ದಾಖಲಿಸಿದ್ದರೂ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಹಿಂದೇಟು ಹಾಕುತ್ತಿದ್ದಾರೆ” ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
“ಯಲ್ಲಪ್ಪ, ಪರಸಪ್ಪ, ಅನ್ನಪ್ಪ ಮೂವರೂ ಅತ್ಯಾಚಾರ ಎಸಗಿದವರೆಂದು ಪ್ರಕರಣ ದಾಖಲಾಗಿದೆ. 15 ವರ್ಷದ ದಲಿತ ಯುವತಿ ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತೆ. ಐಶ್ವರ್ಯ ಆಗಸ್ಟ್ 4ರಂದು ಮನೆಯಲ್ಲಿ ಒಬ್ಬಳೇ ಇದ್ದಾಗ ಅದೇ ಗ್ರಾಮದ ಮೂವರು ಕಾಮುಕರು ಮನೆಗೆ ನುಗ್ಗಿ ಅತ್ಯಾಚಾರ ಎಸಗಿದ್ದಾರೆ. ಒತ್ತಾಯದಿಂದ ಆಕೆಯನ್ನು ಹಿಡಿದು, ಎಳೆದಾಡಿ ಅತ್ಯಾಚಾರಕ್ಕೆ ಮುಂದಾದರೆಂದು ಪ್ರಕರಣದಲ್ಲಿ ದಾಖಲಾಗಿದೆ. ಯುವತಿಯ ತಂದೆ ದೂರು ದಾಖಲಿಸಿದರೂ ಕೂಡ ದಲಿತರೆಂಬ ಕಾರಣಕ್ಕೆ ಪೊಲೀಸರು ಆರೋಪಿಗಳನ್ನು ಬಂಧಿಸಲು ನಿರ್ಲಕ್ಷ್ಯ ಮಾಡಿದ್ದು, ವಿಫಲರಾಗಿದ್ದಾರೆ” ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಸಂತ್ರಸ್ತೆಯ ತಂದೆ ಮಾತನಾಡಿ, “ಆ ದಿನ ಶಾಲೆಗೆ ಹೋಗಿ ಬಂದು ಮನೆಯಲ್ಲಿದ್ದಳು. ನಾವು ಕೆಲಸಕ್ಕೆ ಹೋದಾಗ ಅವಳೊಬ್ಬಳೆ ಇದ್ದದ್ದನ್ನು ಗಮನಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ನನ್ನ ಮಗಳು 15 ವರ್ಷದ ಹುಡುಗಿ. ಮೂವರು ಕಾಮುಕರು ಬಲವಂತಾಗಿ ಅವಳ ಮೇಲೆ ಅತ್ಯಾಚಾರ ಎಸಗಿದ್ದಾರೆ. ಮಗಳನ್ನು ಎಳೆದಾಡಿದಾಗ ಆಕೆ ಜೋರಾಗಿ ಕೂಗಿಕೊಂಡಿದ್ದಾಳೆ. ಆ ವೇಳೆ ಅಲ್ಲೇ ಪಕ್ಕದಲ್ಲಿದ್ದ ಬಸಪ್ಪ ಎಂಬುವವರು ಓಡಿಬಂದ ಕೂಡಲೇ ಕಾಮುಕರು ಓಡಿ ಹೋಗಿದ್ದಾರೆ” ಎಂದು ತಿಳಿಸಿದರು.
ಈ ಬಗ್ಗೆ ಸಾಮಾಜಿಕ ಹೋರಾಟಗಾರ ಹೈದರ್ ಪಲಕನಮರಡಿ ಮಾತನಾಡಿ, “ಆರೋಪಿಗಳು ಅತ್ಯಾಚಾರ ಎಸಗಿದ್ದರೂ ಕೂಡಾ ಗ್ರಾಮದಲ್ಲಿ ರಾಜಾರೋಷವಾಗಿ ತಿರುಗಾಡುತ್ತಿದ್ದಾರೆ. ಮತ್ತೆ ಯುವತಿಯ ಕುಟುಂಬದವರು ಅವರನ್ನು ಕೇಳೋಕೆ ಹೋದರು. ಅವರಿಗೆ ಬೆದರಿಕೆ ಹಾಕಿ ನೀವು ಎಲ್ಲಿ ಹೋದರೂ ಪೊಲೀಸರು ನಮ್ಮನ್ನು ಬಂಧಿಸುವುದಿಲ್ಲವೆಂದು ಉಡಾಫೆ ಮಾತನಾಡುತ್ತಾರೆ. ಈ ಬಗ್ಗೆ ಆಗಸ್ಟ್ 6ರಂದು ಪ್ರಕರಣ ದಾಖಲಿಸಿದರೂ ಕೂಡಾ ಆರೋಪಿಗಳ ಬಂಧನಕ್ಕೆ ಪೊಲೀಸರು ಹಿಂದೇಟು ಹಾಕಿದ್ದಾರೆ” ಎಂದರು.
“ಕೊಡೇಕಲ್ ಗ್ರಾಮದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಹಲವು ದಿನಗಳು ಕಳೆದರೂ ಕೂಡಾ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ವಿಫಲರಾಗಿದ್ದಾರೆ. ಕಾಮುಕರು ರಾಜಕೀಯ ಬಲ, ಹಣಬಲ, ಭುಜಬಲದಿಂದ ಹಾಗೂ ಪೊಲೀಸರ ಜತೆಗೆ ಹೆಚ್ಚು ನಂಟಿಟ್ಟುಕೊಂಡಿದ್ದು, ಪೊಲೀಸರಿಗೂ ಮಾಮೂಲಿ(ಲಂಚ) ಹೋಗುತ್ತಿದೆಂಬುದು ಮೇಲ್ನೋಟಕ್ಕೆ ಎದ್ದು ಕಾಣುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಪೊಲೀಸ್ ಇಲಾಖೆಯ ವೈಫಲ್ಯದಿಂದಲೇ ರಾಜ್ಯ ಮತ್ತು ದೇಶದಲ್ಲಿ ಅತ್ಯಾಚಾರ(ರೇಪ್) ಪ್ರಕರಣಗಳು, ಲೈಂಗಿಕ ದೌರ್ಜನ್ಯಗಳು ಹೆಚ್ಚಾಗುತ್ತಿವೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಪ್ರಭಾವಿಗಳು, ಉಳ್ಳವರು ಏನಾದರೂ ಮಾಡಿ ರಕ್ಷಿಸಿಕೊಳ್ಳುವ ತಾಕತ್ತು ಹೊಂದಿದ್ದಾರೆಂಬುದು ಕಾಣಿಸುತ್ತಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ಬೆಳಗಾವಿ | ವಿದ್ಯಾರ್ಥಿಗಳ ಮೇಲೆ ಹರಿದ ಸಾರಿಗೆ ಬಸ್; ಓರ್ವ ಬಾಲಕ ಸಾವು, ಹಲವರಿಗೆ ಗಾಯ
“ಆರೋಪಿಗಳನ್ನು ಕೂಡಲೇ ಬಂಧಿಸಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಹೋರಾಟ ಮಾಡಲಾಗುವುದು” ಎಂದು ಎಚ್ಚರಿಕೆ ನೀಡಿದರು.
ಡಿವೈಎಸ್ಪಿ ಮಧ್ಯ ಪ್ರವೇಶಿಸಿ ಮೂರು ದಿನಗಳ ಕಾಲ ಸಮಯ ಕೊಡಿ, ಆರೋಪಿಗಳನ್ನು ಬಂಧಿಸುತ್ತೇವೆ” ಎಂದು ಭರವಸೆ ನೀಡಿದರು.
