ತಮಿಳಿನ ಖ್ಯಾತ ನಿರ್ದೇಶಕ ಮಾರಿ ಸೆಲ್ವರಾಜ್ ನಿರ್ದೇಶನದ, ಉದಯನಿಧಿ ಸ್ಟಾಲಿನ್, ಫಹಾದ್ ಫಾಸಿಲ್ ಮತ್ತು ಕೀರ್ತಿ ಸುರೇಶ್ ಮುಖ್ಯಭೂಮಿಕೆಯ ಬಹುನಿರೀಕ್ಷಿತ ʼಮಾಮನ್ನನ್ʼ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಪ್ರಚಾರದ ಭಾಗವಾಗಿ ಚಿತ್ರತಂಡ ಶುಕ್ರವಾರ ಬಿಡುಗಡೆ ಮಾಡಿರುವ ʼರಾಜಾ ಕಣ್ಣುʼ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸದ್ದು ಮಾಡುತ್ತಿದ್ದು, ಚಿತ್ರದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟುಗೊಳಿಸಿದೆ.
ಬಿಡುಗಡೆಯಾದ 24 ಗಂಟೆಗಳಲ್ಲಿ ಸುಮಾರು 30 ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದಿರುವ ʼರಾಜಾ ಕಣ್ಣುʼ ಹಾಡಿಗೆ ತಮಿಳಿನ ಜನಪ್ರಿಯ ಹಾಸ್ಯನಟ ವಡಿವೇಲು ಧ್ವನಿಯಾಗಿರುವುದು ವಿಶೇಷ. ಕೇಳುಗರನ್ನು ಭಾವುಕರನ್ನಾಗಿಸುವ ಈ ಹಾಡಿಗೆ ಯುಗಭಾರತಿ ಅವರ ಸಾಹಿತ್ಯವಿದ್ದು, ದಿಗ್ಗಜ ಸಂಗೀತ ನಿರ್ದೇಶಕ ಎ.ಆರ್ ರೆಹಮಾನ್ ಅವರ ಹಿನ್ನೆಲೆ ಸಂಗೀತವಿದೆ.
ʼಪರಿಯೆರುಂ ಪೆರುಮಾಳ್ʼ ಮತ್ತು ಧನುಷ್ ನಟನೆಯ ʼಕರ್ಣನ್ʼ ಚಿತ್ರಗಳಿಗೆ ಆ್ಯಕ್ಷನ್ ಕಟ್ ಹೇಳುವ ಮೂಲಕ ತಮಿಳು ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಮಾರಿ ಸೆಲ್ವರಾಜ್, ರಾಜಕೀಯ ಹಿನ್ನೆಲೆಯುಳ್ಳ ಕಥಾಹಂದರವನ್ನು ಆಧರಿಸಿ ʼಮಾಮನ್ನನ್ʼ ಚಿತ್ರವನ್ನು ತೆರೆಗೆ ಅಳವಡಿಸಿದ್ದಾರೆ. ಈ ಹಿಂದೆ ಬಿಡುಗಡೆಯಾಗಿದ್ದ ಚಿತ್ರದ ಟೀಸರ್ ಕೂಡ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿತ್ತು. ರಾಜಕಾರಣ, ಹಳ್ಳಿಗರ ಸಂಘರ್ಷ, ಪೊಲೀಸ್ ದೌರ್ಜನ್ಯದ ಸುತ್ತ ಮೂಡಿಬಂದಿದೆ ಎಂಬುದನ್ನು ಟೀಸರ್ನಲ್ಲಿ ಸೂಚ್ಯವಾಗಿ ತೋರಿಸಲಾಗಿತ್ತು.
ವಡಿವೇಲು ಈ ಚಿತ್ರದ ಹಾಡಿಗೆ ಮಾತ್ರ ಧ್ವನಿಯಾಗಿಲ್ಲ, ಬದಲಿಗೆ ಬಹುಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ರವೀನಾ ರವಿ, ಕೌಶಿಕ್ ಮಹಾತಾ ಮುಂತಾದವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಮುಖ್ಯಭೂಮಿಕೆ ನಿಭಾಯಿಸಿರುವ ಉದಯನಿಧಿ ಸ್ಟಾಲಿನ್ ಅವರೇ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಸಿನಿಮಾ | ʼಪೂಚಂತೇʼಯ ಪ್ರಸ್ತುತತೆ ಸಾರುವ ʼಡೇರ್ಡೆವಿಲ್ ಮುಸ್ತಾಫಾʼ
ಸದ್ಯ ʼಮಾಮನ್ನನ್ʼ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗಿದ್ದು, ʼರಾಜಾ ಕಣ್ಣುʼ ಹಾಡಿನ ಮೂಲಕ ಪ್ರಚಾರ ಕಾರ್ಯವನ್ನು ಪ್ರಾರಂಭಿಸಿರುವ ಚಿತ್ರತಂಡ ಜೂನ್ ತಿಂಗಳಿನಲ್ಲಿ ಚಿತ್ರವನ್ನು ಬಿಡುಗಡೆ ಮಾಡಲು ತಯಾರಿ ನಡೆಸುತ್ತಿದೆ.