ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಬಗ್ಗೆ ಸುಳ್ಳು ಹೇಳಿಕೆಯನ್ನು ನೀಡಿದ್ದ ಸಾಮಾಜಿಕ ಕಾರ್ಯಕರ್ತ, ನಟ ಪ್ರಕಾಶ್ ಬೆಳವಾಡಿ ಕ್ಷಮೆ ಕೇಳಿದ್ದಾರೆ.
“ಡಾ.ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದೇ ಕಾನೂನುಬಾಹಿರ” ಎಂದು ಹೇಳಿಕೆ ನೀಡಿದ್ದ ಪ್ರಕಾಶ್ ಬೆಳವಾಡಿ ವಿರುದ್ಧ ಎಐಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನ ಪರಿಷತ್ ಸದಸ್ಯ ಬಿ ಕೆ ಹರಿಪ್ರಸಾದ್ ಹಾಗೂ ಕಾಂಗ್ರೆಸ್ ವಕ್ತಾರೆ ಲಾವಣ್ಯ ಬಳ್ಳಾಲ್ ಅವರು ಎಕ್ಸ್ ತಾಣದಲ್ಲಿ ಚಾಟಿ ಬೀಸಿದ್ದರು.
ಇದನ್ನು ಗಮನಿಸಿದ ಪ್ರಕಾಶ್ ಬೆಳವಾಡಿ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಮಾಧ್ಯಮ ವಕ್ತರ ಬ್ರಿಜೇಶ್ ಕಾಳಪ್ಪ ಅವರನ್ನು ಸಂಪರ್ಕಿಸಿ ಹರಿಪ್ರಸಾದ್ ಹಾಗೂ ಲಾವಣ್ಯ ಬಳ್ಳಾಲ್ ಜೈನ್ ಅವರ ಬಳಿ ಕ್ಷಮೆ ಕೇಳಿದ್ದಾರೆ. ಇದನ್ನು ಹರಿಪ್ರಸಾದ್ ಎಕ್ಸ್ ತಾಣದಲ್ಲಿ ತಿಳಿಸಿದ್ದಾರೆ.
ಹರಿಪ್ರಸಾದ್ ತಿಳಿಸಿದ್ದೇನು?
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಬಗ್ಗೆ ಸುಳ್ಳು ಹೇಳಿಕೆಯನ್ನು ನೀಡಿದ್ದ ಸಾಮಾಜಿಕ ಕಾರ್ಯಕರ್ತ ಪ್ರಕಾಶ್ ಬೆಳವಾಡಿ ತಾವು ಆಡಿರುವ ಮಾತುಗಳನ್ನು ಹಿಂದಕ್ಕೆ ಪಡೆದು,ಆಗಿರುವ ಪ್ರಮಾದದ ಬಗ್ಗೆ ವಿಷಾದ ವ್ಯಕ್ತಪಡಿಸಿರುವುದನ್ನು ಸ್ವಾಗತಿಸುತ್ತೇನೆ.
ಸಾಮಾನ್ಯವಾಗಿ ವಾಟ್ಸಪ್ ಯುನಿವರ್ಸಿಟಿಯ ಬಿಜೆಪಿಯ ಮಬ್ಭಕ್ತರು ಮಾಡುವ ಟ್ರೋಲ್ ಗಳಿಗೆ ಗಮನ ಹರಿಸುವುದಿಲ್ಲ. ಆದರೆ ಪ್ರಕಾಶ್ ಬೆಳವಾಡಿ ಸಾಮಾಜಿಕ ಕಾರ್ಯಕರ್ತರಾಗಿ, ನಟರೂ ಆಗಿರುವವರು ಸಾರ್ವಜನಿಕವಾಗಿ ಸುಳ್ಳನ್ನು ಹರಡಿಸುವುದನ್ನ ನಿರೀಕ್ಷಿಸಿರಲಿಲ್ಲ.
ತಮ್ಮ ಅಪಾರ ಜ್ಞಾನ, ತಿಳುವಳಿಕೆ ಹಾಗೂ ಅಧ್ಯಯನದಿಂದ ದೇಶವನ್ನು ಮುನ್ನೆಡಸಿದ ಆರ್ಥಿಕ ತಜ್ಞರನ್ನು ಹೀಯಾಳಿಸುವುದು ತರವಲ್ಲ, ಅದಾಗ್ಯೋ ಭೂಮಿಯ ಮೇಲೆ ಜೀವಂತವಿಲ್ಲದ, ಉದಾತ್ತ “ಆತ್ಮ”ವನ್ನು ಆರೋಪಿಸುವುದು ಒಪ್ಪುವಂತದ್ದಲ್ಲ.
1991ರ ಅಸ್ಸಾಂ ನಿವಾಸಿ ಕಾನೂನು ಹಾಗೂ 2003ರ ಜನತಾ ಪ್ರಾತಿನಿಧ್ಯ ತಿದ್ದುಪಡಿ ಕಾಯ್ದೆಯನ್ನು ತಪ್ಪಾಗಿ ಅರ್ಥೈಸಿಕೊಂಡು ಹೇಳಿಕೆ ನೀಡಿದ್ದೆ ಎಂದು ಬೆಳವಾಡಿಯವರನ್ನು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ನಮ್ಮ ಪಕ್ಷದ ರಾಷ್ಟ್ರೀಯ ಮಾಧ್ಯಮ ವಕ್ತರರಾದ ಬಿಜೇಶ್ ಕಾಳಪ್ಪ ಅವರನ್ನು ಸಂಪರ್ಕಿಸಿ ಅವರ ಮೂಲಕ ವಿಷಾದ ವ್ಯಕ್ತಪಡಿಸಿರುವ ಅವರ ವಿಶಾಲ ಹೃದಯವನ್ನು ನಾನು ಪ್ರಶಂಸಿಸುತ್ತೇನೆ. ನಿಜವಾಗಿಯೂ ಪ್ರಜಾಪ್ರಭುತ್ವವಾದಿಗಳು ಇರಬೇಕಾದ್ದೂ ಹೀಗಿಯೇ…! ಎಂದು ಹರಿಪ್ರಸಾದ್ ತಿಳಿಸಿದ್ದಾರೆ.
ಪ್ರಕಾಶ್ ಬೆಳವಾಡಿ ಕ್ಷಮೆ ಕೇಳಿದ ಬಗ್ಗೆ ಟ್ವೀಟ್ ಮಾಡಿರುವ ಲಾವಣ್ಯ ಬಳ್ಳಾಲ್, “ಪ್ರಕಾಶ್ ಬೆಳವಾಡಿ ಅವರು ಕ್ಷಮೆಯಾಚನೆ ಮಾಡಿದ್ದಕ್ಕೆ ಧನ್ಯವಾದಗಳು. ಪ್ರಸ್ತುತ ಈಗಿನ ಕಾಲದಲ್ಲಿ ಜನರು ತಮ್ಮ ತಪ್ಪುಗಳನ್ನು ಒಪ್ಪಿಕೊಳ್ಳುವುದಿಲ್ಲ. ಅದರ ಬದಲು ಆ ತಪ್ಪನ್ನೇ ಮುಂದುವರಿಸುತ್ತಾ ದ್ವಿಗುಣಗೊಳಿಸುತ್ತಾರೆ ಮತ್ತು ತಪ್ಪು ಮಾಹಿತಿಯನ್ನು ನೀಡುವುದನ್ನು ಮುಂದುವರಿಸುತ್ತಾರೆ” ಎಂದು ತಿಳಿಸಿದ್ದಾರೆ.
