- ‘ಶರಣ ಸಂಸ್ಕೃತಿಯ ಆಶಯ ಸಿದ್ದರಾಮಯ್ಯ ಅವರ ಬದುಕಿನಲ್ಲಿದೆ’
- ‘ಹೀಗಾಗಿ ಬಸವ ಜಯಂತಿಯಂದೇ ಸಿಎಂ ಪ್ರಮಾಣವಚನ ಸ್ವೀಕರಿಸಿದರು’
ವಚನ ಕ್ರಾಂತಿ ಮತ್ತು ಶರಣ ಸಂಸ್ಕೃತಿಯ ಆಶಯಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬದುಕು ಹಾಗೂ ಆಚರಣೆಗಳಲ್ಲಿ ಎದ್ದು ಕಾಣುತ್ತದೆ. ದಾಸೋಹ ಸಂಸ್ಕಾರದ ಸಿದ್ದರಾಮಯ್ಯ ಅವರು ಸರ್ವರ ಮುಖ್ಯಮಂತ್ರಿ ಎಂದು ಸಮಾಜ ಕಲ್ಯಾಣ ಸಚಿವ ಹೆಚ್ ಸಿ ಮಹದೇವಪ್ಪ ಬಣ್ಣಿಸಿದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ, ವೀರಶೈವ-ಲಿಂಗಾಯತ ಸಂಘ ಸಂಸ್ಥೆಗಳು ಹಾಗೂ ಮೈಸೂರಿನ ಬಸವ ಬಳಗಗಳ ಒಕ್ಕೂಟ ಮೈಸೂರು ಕಲಾಮಂದಿರದಲ್ಲಿ ಶನಿವಾರ ಆಯೋಜಿಸಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
“ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶರಣ ಸಂಸ್ಕೃತಿಯನ್ನು ತಮ್ಮ ಬದುಕಿನ ಆಚರಣೆಯನ್ನಾಗಿಸಿಕೊಂಡಿದ್ದಾರೆ. ಈ ಕಾರಣಕ್ಕೆ ಬಸವ ಜಯಂತಿಯ ದಿನವನ್ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲು ಆಯ್ಕೆ ಮಾಡಿಕೊಂಡರು” ಎಂದರು.
ಈ ಸುದ್ದಿ ಓದಿದ್ದೀರಾ? ಶ್ಯಾಮನೂರು ಶಿವಶಂಕರಪ್ಪ ಪ್ರಶ್ನೆಗೆ ಸಿಎಂ ಉತ್ತರಿಸಲಿ : ಬೊಮ್ಮಾಯಿ ಆಗ್ರಹ
“ಶರಣ ಸಂಸ್ಕೃತಿಯ ಅನುಯಾಯಿಗಳಾದ ಸಿದ್ದರಾಮಯ್ಯ ಅವರು, ಮುಖ್ಯಮಂತ್ರಿಯಾದ ಬಳಿಕ ಮೊದಲಿಗೆ ಸಹಿ ಹಾಕಿದ್ದು ದಾಸೋಹ ಸಂಸ್ಕೃತಿಯ ಅನ್ನ ಭಾಗ್ಯ ಯೋಜನೆಗೆ. ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನವರ ಫೋಟೋವನ್ನು ಕಡ್ಡಾಯಗೊಳಿಸಿದ್ದು ಸಿದ್ದರಾಮಯ್ಯ ಅವರು” ಎಂದು ಹೇಳಿದರು.
ಸಚಿವ ಹೆಚ್.ಸಿ. ಮಹದೇವಪ್ಪ ಅವರು “12ನೇ ಶತಮಾನದ ಶರಣ ದಂಪತಿಗಳು” ಕೃತಿಯನ್ನು ಬಿಡುಗಡೆ ಮಾಡಿದರು. ಬಸವೇಶ್ವರ ಪುತ್ಥಳಿ ದಾನ ಮಾಡಿದ ನೈಸ್ ಸಂಸ್ಥೆಯ ಮುಖ್ಯಸ್ಥರಾದ ಅಶೋಕ್ ಖೇಣಿ, ಶಾಸಕರುಗಳಾದ ಮಾಜಿ ಸಚಿವ ತನ್ವೀರ್ ಸೇಠ್, ಕೆ.ಹರೀಶ್ ಗೌಡ, ದರ್ಶನ್ ಧ್ರುವನಾರಾಯಣ್, ಜಿ.ಡಿ.ಹರೀಶ್ ಗೌಡ, ಹೆಚ್.ಎಂ.ಗಣೇಶ್ ಪ್ರಸಾದ್, ಟಿ.ಎಸ್.ಶ್ರೀವತ್ಸ, ವಿಧಾನ ಪರಿಷತ್ ಸದಸ್ಯರಾದ ಮರಿತಿಬ್ಬೇಗೌಡ, ಡಾ. ತಿಮ್ಮಯ್ಯ ಸೇರಿ ಮಾಜಿ ಶಾಸಕರು ಹಾಗೂ ನಾಯಕರುಗಳು ಉಪಸ್ಥಿತರಿದ್ದರು