ಕರ್ನಾಟಕದ ಬಿಜೆಪಿ ನಾಯಕರು ತಮ್ಮ ಗುಂಪುಗಳನ್ನು ಪ್ರತಿಪಾದಿಸಿಕೊಳ್ಳಲು ಬೀದಿನಾಯಿಗಳ ರೀತಿಯಲ್ಲಿ ಕಿತ್ತಾಡಿಕೊಳ್ಳುತ್ತಿದ್ದು, ಬೀದಿ ಹೋರಾಟಕ್ಕೆ ಇಳಿದಿದ್ದಾರೆ ಎಂದು ಕೆಪಿಸಿಸಿಯ ಮಾಧ್ಯಮ ಮತ್ತು ಸಂವಹನ ವಿಭಾಗದ ಅಧ್ಯಕ್ಷರಾದ ರಮೇಶ್ ಬಾಬು ಟೀಕಿಸಿದ್ದಾರೆ.
ಕಾಂಗ್ರೆಸ್ ಸರ್ಕಾರದ ಕ್ರಾಂತಿಕಾರಿಕ ಯೋಜನೆಗಳ ಹತ್ತಿರ ಒಮ್ಮೆಯೂ ಸುಳಿಯಲಾಗದ ಬಿಜೆಪಿ, ರಾಜ್ಯದ ರೈತರನ್ನು ವಕ್ಫ್ ಹೆಸರಿನಲ್ಲಿ ಹಾದಿ ತಪ್ಪಿಸಲು ಹೊರಟಿದೆ. ಸೈದ್ಯಾಂತಿಕವಾಗಿ ದಿವಾಳಿಯಾಗಿರುವ, ಸೆಕ್ಸ್ ಹಗರಣಗಳನ್ನು ತಮ್ಮ ರಾಜಕೀಯ ವೃತ್ತಿ ಮಾಡಿಕೊಂಡಿದ್ದಾರೆ ಎಂದು ಹೇಳಿದರು.
ಬಿಜೆಪಿಯ ಎರಡು ಎರಡೂ ಗುಂಪುಗಳು ತಮ್ಮ ಸ್ವಾರ್ಥಕ್ಕಾಗಿ ರಾಜ್ಯದಲ್ಲಿ ವಕ್ಫ್ ಹೆಸರಿನಲ್ಲಿ ನಕಲಿ ಹೋರಾಟಕ್ಕೆ ಇಳಿದಿದ್ದು, ಕಾಂಗ್ರೆಸ್ ಪಕ್ಷವು ಬಿಜೆಪಿ ನಾಯಕರಿಗೆ ಕೆಲವು ಪ್ರಶ್ನೆಗಳನ್ನು ಕೇಳಲು ಬಯಸುತ್ತದೆ. ಬಾಯಿ ಚಪಲಕ್ಕಾಗಿ ವೈಯಕ್ತಿಕ ಲಾಭಕ್ಕಾಗಿ ಕರ್ನಾಟಕದ ಸಾಂಸ್ಕೃತಿಕ ನಾಯಕ ಸಾಮಾಜಿಕ ಹರಿಕಾರ ಬಸವಣ್ಣನವರನ್ನು ಟೀಕಿಸಿದ ಶಾಸಕ ಬಸನ ಗೌಡ ಯತ್ನಾಳ್ ಅವರ ದುರಹಂಕಾರದ ಹೇಳಿಕೆಯನ್ನು ಖಂಡಿಸಲು ತಾಕತ್ತಿಲ್ಲದೆ ರಾಜ್ಯ ಬಿಜೆಪಿ ನಾಯಕರು ನಪುಂಸಕರೇ? ಎಂದು ತರಾಟೆಗೆ ತೆಗೆದುಕೊಂಡರು.
ಜಾತಿ ಪದ್ಧತಿ ವಿರುದ್ಧ ಸಾಮಾಜಿಕ ಆಂದೋಲನ ಉಂಟು ಮಾಡಿದ ಶರಣ ಕ್ರಾಂತಿಕಾರಿ ಬಸವಣ್ಣರವರನ್ನು ಅವಹೇಳನ ಮಾಡಿ ಅವರನ್ನು ಹೇಡಿ ಎನ್ನುವ ರೀತಿಯಲ್ಲಿ ಟೀಕಿಸಿದ ಬಸವರಾಜ ಪಾಟೀಲ್ ಯತ್ನಾಳ್ ವಿರುದ್ಧ ಕ್ರಮ ಕೈಗೊಳ್ಳಲು ಭಾರತೀಯ ಜನತಾ ಪಕ್ಷಕ್ಕೆ ಏಕೆ ವಿಫಲವಾಯಿತು? ಯತ್ನಾಳ್ ವಿರುದ್ದ ಕ್ರಮ ಕೈಗೊಳ್ಳಲು ಬಿಜೆಪಿಗೆ ಶಕ್ತಿ ಇಲ್ಲವೇ ಅಥವಾ ಬಿಜೆಪಿ ನಾಯಕರ ಸೆಕ್ಸ್ ಮತ್ತು ಭ್ರಷ್ಟಾಚಾರದ ಆರೋಪಗಳು ಕಾರಣವೇ? ಎಂದು ಪ್ರಶ್ನಿಸಿದ್ದಾರೆ.
ಬಿಜೆಪಿ ಸರ್ಕಾರದ ಅವಧಿಯಲ್ಲಿ 2865 ಎಕರೆ ವಕ್ಫ್ ಆಸ್ತಿಯೆಂದು 2019-20ರ ಅವಧಿಯಲ್ಲಿ ಅಧಿಸೂಚನೆ ಹೊರಡಿಸಿರುವುದು ಸುಳ್ಳೆ? ವಕ್ಫ್ ಆಸ್ತಿ ಪರಬಾರೆ ಆಗದಂತೆ 4720 ಎಕರೆ ವಿಸ್ತೀರ್ಣ ಬಿಜೆಪಿ ಅವಧಿಯಲ್ಲಿ ಫ್ಲಾಗ್ ಆಫ್ ಮಾಡಿದ್ದು ಸುಳ್ಳೇ? ಬಿಜೆಪಿ ಸರ್ಕಾರದ ಅವಧಿಯಲ್ಲಿ ಕುಮಾರ್ ಬಂಗಾರಪ್ಪ ಅಧ್ಯಕ್ಷತೆಯ ವಿಧಾನ ಮಂಡಲದ ಸಮಿತಿ ಜಿಲ್ಲಾಧಿಕಾರಿಗಳ ಜೊತೆ ಸಾಲು ಸಾಲು ಸಭೆಗಳನ್ನು ನಡೆಸಿ ವಕ್ಫ್ ಆಸ್ತಿ ಸಂರಕ್ಷಣೆಗೆ ಸೂಚನೆ ನೀಡಿದ್ದು ಸುಳ್ಳೇ? ಎಂದು ರಮೇಶ್ ಬಾಬು ಪ್ರಶ್ನಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಚಂದ್ರಶೇಖರ ಸ್ವಾಮೀಜಿ ಬಾಯಿ ತಪ್ಪಲಿಲ್ಲ, ಮನಸಿನ ಮಾತೇ ಹೊರಬಿದ್ದಿದೆ
ಬೆಂಗಳೂರಿನ ಕೃಷ್ಣರಾಜ ಮಾರುಕಟ್ಟೆಯು ವಕ್ಫ್ ಆಸ್ತಿಯೆಂದು ಬಿಜೆಪಿ ಸರ್ಕಾರದ ಸಮಿತಿಯು ವರದಿ ನೀಡಿರುವುದು ಸುಳ್ಳೇ? ವಕ್ಫ್ ಆಸ್ತಿ ಒತ್ತುವರಿ ತೆರವುಗೊಳಿಸಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲು ಬಿಜೆಪಿ ಸರ್ಕಾರದ ಅವಧಿಯಲ್ಲಿ ವಿಧಾನಮಂಡಲದ ಸಮಿತಿ ವರದಿ ನೀಡಿರುವುದು ಸುಳ್ಳೇ? ವಕ್ಫ್ ಆಸ್ತಿಗಳ ಒತ್ತುವರಿ ತೆರವು ಮತ್ತು ಮರುವಶಕ್ಕೆ ಸಂಬಂಧಪಟ್ಟಂತೆ ಸುಮಾರು 2000 ಕ್ಕೂ ಹೆಚ್ಚು ನೋಟಿಸುಗಳನ್ನು ಬಿಜೆಪಿ ಅವಧಿಯಲ್ಲಿ ನೀಡಿರುವುದು ಸುಳ್ಳೇ? ಕಾಂಗ್ರೆಸ್ ಸರ್ಕಾರದ ಅವಧಿಗಿಂತ ಬಿಜೆಪಿ ಸರ್ಕಾರದ ಅವಧಿಯಲ್ಲಿ ಎರಡು ಪಟ್ಟು ನೋಟಿಸು ನೀಡಿಲ್ಲವೇ? ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಕ್ಫ್ ಕಾಯಿದೆಗೆ ಅನುಗುಣವಾಗಿ ವಕ್ಫ್ ಆಸ್ತಿಗಳನ್ನು ಸಂರಕ್ಷಣೆ ಮಾಡಲು ಬಿಜೆಪಿ ತನ್ನ ಸರ್ಕಾರದ ಅವಧಿಯಲ್ಲಿ ಕಾಂಗ್ರೆಸ್ಗಿಂತಲೂ ಹೆಚ್ಚು ಕ್ರಮಗಳನ್ನು ಕೈಗೊಂಡಿದೆ. ರೈತರ ದಾರಿ ತಪ್ಪಿಸಲು ಬೀದಿ ಹೋರಾಟದ ಮೂಲಕ ಸುಳ್ಳು ಹೇಳಿಕೆ ನೀಡುತ್ತಿರುವ ಬಿಜೆಪಿ ನಾಯಕರಿಗೆ ಆತ್ಮಸಾಕ್ಷಿ ಇದೆಯೇ ಅಥವಾ ಸುಳ್ಳು ನಿಮ್ಮ ಮನೆ ದೇವರು ಎಂಬುದನ್ನು ಒಪ್ಪಿಕೊಳ್ಳುವಿರಾ? ಕರ್ನಾಟಕದಲ್ಲಿ ಯಾವ ರೈತರಿಗೂ ಅನ್ಯಾಯ ಆಗಲು ಬಿಡುವುದಿಲ್ಲ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಯ ನಂತರವೂ ನಡೆಸುತ್ತಿರುವ ನಿಮ್ಮ ನಕಲಿ ಬೀದಿ ಹೋರಾಟ, ಬಿಜೆಪಿಯಲ್ಲಿ ನಿಮ್ಮ ನಿಮ್ಮ ಸ್ಥಾನಗಳನ್ನು ಉಳಿಸಿಕೊಳ್ಳುವ ಪ್ರಯತ್ನವಲ್ಲವೇ? ಎಂದರು.
ಪಕ್ಷದೊಳಗಿನ ನಿಮ್ಮ ನಿಮ್ಮ ಬೀದಿ ನಾಯಿ ರೀತಿಯ ಜಗಳವನ್ನು ವಕ್ಫ್ ಹೆಸರಿನಲ್ಲಿ ಬೀದಿಗೆ ತಂದು, ಶರಣ ಬಸವಣ್ಣನವರ ಹೆಸರನ್ನು ನಿಮ್ಮ ಬೀದಿ ಜಗಳಕ್ಕೆ ಬಳಸಿಕೊಳ್ಳುತ್ತಿರುವುದು ಬಿಜೆಪಿ ಪಕ್ಷದ ದಿವಾಳಿತನವಲ್ಲವೇ ಮತ್ತು ಕ್ರಾಂತಿಕಾರಿ ಬಸವಣ್ಣರವರ ಹೆಸರಿಗೆ ಮಾಡಿದ ಅಪಚಾರವಲ್ಲವೇ? ತಮ್ಮ ಸ್ವಾರ್ಥಕ್ಕಾಗಿ ಶರಣ ಬಸವಣ್ಣರವರನ್ನು ರಾಜಕೀಯವಾಗಿ ಎಳೆದುತಂದಿರುವ ಬಿಜೆಪಿ ನಾಯಕರು ತಮ್ಮ ನಕಲಿ ಹೋರಾಟಗಳ ಮುಖಾಂತರ ಜನರ ಅಪಹಾಸ್ಯಕ್ಕೆ ಒಳಗಾಗಿರುವುದು ನಿಜವಲ್ಲವೇ ? ಉಪಚುನಾವಣೆಯ ಫಲಿತಾಂಶದಿಂದ ವಿಚಲಿತರಾಗಿರುವ ರಾಜ್ಯ ಬಿಜೆಪಿ ನಾಯಕರು ತರ್ಕವಿಲ್ಲದ ಹೋರಾಟಗಳಿಗೆ ಮುಂದಾಗಿರುವುದು ವಾಸ್ತವ ಅಲ್ಲವೇ? ಎಂದು ಪ್ರಶ್ನಿಸಿದರು.
ಪೋಕ್ಸೋ ಕೇಸುಗಳನ್ನು ಹಾಕಿಸಿಕೊಂಡು ಸೆಕ್ಸ್ ಹಗರಣಗಳಿಗೆ ನ್ಯಾಯಾಲಯದ ಮಧ್ಯಂತರ ಆದೇಶಗಳನ್ನು ಪಡೆದುಕೊಂಡು ತಮ್ಮ ಅಸ್ತಿತ್ವಕ್ಕಾಗಿ ಪರದಾಡುತ್ತಿರುವ ಬಿಜೆಪಿ ನಾಯಕರು ಒಂದು ಕಡೆಯಾದರೆ, ಭ್ರಷ್ಟರ ಮತ್ತು ಅಪರಾಧಿಗಳ ಪಡೆಯಿಂದ ಬಿಜೆಪಿಯನ್ನು ಮುಕ್ತಗೊಳಿಸುವ ಹೆಸರಿನಲ್ಲಿ ಶರಣ ಬಸವಣ್ಣನವರ ಚಾರಿತ್ರ್ಯ ವಧೆ ಮಾಡುತ್ತಿರುವ ಬಿಜೆಪಿ ಖಳನಾಯಕರ ಗುಂಪು ಇನ್ನೊಂದು ಕಡೆ. ಇಂತಹ ಗುಂಪುಗಾರಿಕೆಯ ಬಿಜೆಪಿ ನಾಯಕರು ರಾಜ್ಯದ ರೈತರ ಮೇಲಿನ ಅಥವಾ ಪರವಾದ ಬೀದಿ ಹೋರಾಟ ಎಂಬುದು ಮನರಂಜನೆ ನೀಡುವ ನಾಟಕ ಕಂಪನಿಯ ಕೆಲಸವೇ ಹೊರತು ರೈತರ ರಕ್ಷಣೆಯ ಯಾವುದೇ ಪ್ರಯತ್ನವಲ್ಲ ಎಂದು ರಮೇಶ್ ಬಾಬು ಹೇಳಿದ್ದಾರೆ.
