ಕೃಷಿ ಸಚಿವ ಚಲುವರಾಯಸ್ವಾಮಿ ಹಾಗೂ ಕಾಂಗ್ರೆಸ್ ಮುಖಂಡ ಕೀಲಾರಿ ಜಯರಾಮ ನಡುವೆ ಗಲಾಟೆ ವಿಚಾರ ಭಾರೀ ಚರ್ಚೆಗೆ ಗ್ರಾಸವಾಗಿದೆ. ವರ್ಗಾವಣೆ ಹಣ ಹಂಚಿಕೆ ಮಾಡುವ ವಿಚಾರಕ್ಕೆ ಚಲುವರಾಯಸ್ವಾಮಿ ಮೇಲೆ ಹಲ್ಲೆ ನಡೆದಿದೆ ಎಂದು ಕೇಂದ್ರ ಸಚಿವ ಎಚ್ಡಿ ಕುಮಾರಸ್ವಾಮಿ ಆರೋಪ ಮಾಡಿದ್ದಾರೆ. ಇದು ರಾಜ್ಯ ರಾಜಕಾರಣದಲ್ಲಿ ಸಂಚಲನಕ್ಕೆ ಕಾರಣವಾಗಿದೆ. ಇದರ ಬೆನ್ನಲ್ಲೇ ಇದಕ್ಕೆ ಸ್ವತಃ ಚಲುವರಾಯಸ್ವಾಮಿ ಪ್ರತಿಕ್ರಿಯಿಸಿದ್ದು, ನಾನು ಎಂಗೇಜ್ಮೆಂಟ್ ಹೋಗಿದ್ದೆ. ಅಲ್ಲೇನು ಗಲಾಟೆ ನಡೆದಿಲ್ಲ, ಜಯರಾಮ್ಗೆ ನೀವು ಕೇಳಿ. ಅಂತಹದ್ದೇನು ನಡೆದಿಲ್ಲ, ವರ್ಗಾವಣೆ ವಿಚಾರ ಇಟ್ಟುಕೊಂಡು ಅವರು ಬಂದಿಲ್ಲ. ಚಪಲಕ್ಕೆ ಹೇಳುತ್ತಾರೋ ಗೊತ್ತಿಲ್ಲ ಎಂದು ಎಚ್ಡಿಕೆಗೆ ಟಾಂಗ್ ಕೊಟ್ಟರು.
ರಾಮನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಚಲುವರಾಯಸ್ವಾಮಿ, ಅದೇನಾದರೂ ಇದ್ದರೆ ಕುಮಾರಸ್ವಾಮಿ ಸಾಕ್ಷ್ಯ ತೋರಿಸುವುದಕ್ಕೆ ಹೇಳಿ. ಚಪಲಕ್ಕೆ ಹೇಳ್ತಾರೋ ಗೊತ್ತಿಲ್ಲ. ಸಿದ್ದಲಿಂಗೇಗೌಡ ದುಡ್ಡಿನ ವಿಚಾರ ಹೇಳೋದಕ್ಕೆ ಹೇಳಿ ಮೊದಲು. ಕುಮಾರಸ್ವಾಮಿ ತನ್ನ ಮಗನ ಚುನಾವಣೆ ನಿಲ್ಲಿಸಿದ್ದರೂ ಚುನಾವಣೆ ಬಿಟ್ಟು ಚೆಲುವರಾಯಸ್ವಾಮಿ ಮೇಲೆ ಅವರ ಗಮನ. ಡಿ ಕೆ ಶಿವಕುಮಾರ್ ಹೇಳುವ ಹಾಗೆ ದಿನವಿಡೀ ಮಾತಾಡದೇ ಹೋದರೆ ನಿದ್ದೆ ಬರಲ್ಲ ಎಂದು ಕುಮಾರಸ್ವಾಮಿ ವಿರುದ್ಧ ಕಿರಿಕಾರಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಕೋವಿಡ್ ದುರಂತದಲ್ಲೂ ʼಹೆಣದ ಮೇಲೆ ಹಣʼ ಎತ್ತಿದವರ ಅಮಾನವೀಯತೆ
ಮೈಸೂರಿನಲ್ಲಿ ಆಗಿದ್ದೇನು?
ಮೈಸೂರಿನ ಹೋಟೆಲ್ವೊಂದರಲ್ಲಿ ರಾಜ್ಯದ ಸಚಿವ, ಶಾಸಕರು, ಮುಖಂಡರು ಶುಕ್ರವಾರ ರಾತ್ರಿ ಸಭೆ ಸೇರಿದ್ದರು ಎನ್ನಲಾಗಿದೆ. ಮೇಲ್ಮನೆ ಚುನಾವಣೆ ವೇಳೆ ಮುಖಂಡರೊಬ್ಬರಿಗೆ ಹಣದ ಭರವಸೆ ಕೊಡಲಾಗಿತ್ತು. ಆದರೆ ಪೂರ್ತಿ ಕೊಟ್ಟಿರಲಿಲ್ಲ ಎಂದು ಹೇಳಲಾಗಿದೆ. ಶುಕ್ರವಾರದ ಸಭೆ ವೇಳೆ ಆ ವ್ಯಕ್ತಿ ಹಣಕ್ಕೆ ಬೇಡಿಕೆ ಇಟ್ಟಾಗ ಮಾತಿನ ಚಕಮಕಿ ನಡೆದು ಸಚಿವರಿಂದ ಕಪಾಳಮೋಕ್ಷ ನಡೆಯಿತೆನ್ನಲಾಗಿದೆ. ಕೆರಳಿದ ಮುಖಂಡ ಕೂಡ ಸಚಿವರ ಕೆನ್ನೆಗೆ ನಾಲ್ಕು ಬಾರಿಸಿದಾಗ ಶಾಸಕರು, ಇತರರು ಸೇರಿ ಆ ವ್ಯಕ್ತಿಗೆ ಥಳಿಸಿದರು ಎಂದು ಹೇಳಲಾಗಿದೆ. ಈ ವೇಳೆ ಕೆಲವರು ಮೊಬೈಲ್ನಲ್ಲಿ ದೃಶ್ಯ ಚಿತ್ರೀಕರಣ ಮಾಡಿಕೊಂಡಿದ್ದಾರೆ. ಅದನ್ನು ಬಳಿಕ ಮುಖಂಡರು ಸೇರಿ ಅಳಿಸಿ ಹಾಕಿಸಿದರು ಎನ್ನಲಾಗಿದೆ.
ಕುಮಾರಸ್ವಾಮಿ ಆರೋಪಿಸಿದ್ದೇನು?
ಈ ವಿಚಾರ ಕುಮಾರಸ್ವಾಮಿಗೆ ಗೊತ್ತಾಗಿ ಅದನ್ನು ಅವರು ಮಾಧ್ಯಮಗಳ ಎದುರು ಬಹಿರಂಗವಾಗಿ ಹೇಳಿದ್ದಾರೆ. ಈ ಸರ್ಕಾರದಲ್ಲಿ ವರ್ಗಾವಣೆ ದಂಧೆ ನಡೆಯುತ್ತಿದೆ. ಈ ದಂಧೆ ವಿಚಾರವಾಗಿಯೇ ಮೈಸೂರಿನಲ್ಲಿ ಸಚಿವರು, ಮತ್ತಿತರರು ಹೊಡೆದಾಡಿಕೊಂಡಿದ್ದಾರೆ ಎನ್ನುವ ಮಾಹಿತಿ ಇದೆ. ಒಬ್ಬ ಸಚಿವರನ್ನು ಬಹಿರಂಗವಾಗಿ ಹೊಡೆದಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದರು. ಕುಮಾರಸ್ವಾಮಿ ಅವರು ಪ್ರಸ್ತಾಪಿಸಿದ್ದ ಈ ವಿಚಾರ ರಾಜ್ಯ ರಾಜಕೀಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.
