ಕಳೆದ ವರ್ಷ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ನೀಡಿದ್ದ ಶೆ.10ರಷ್ಟು ಹೆಚ್ಚುವರಿ ಗ್ರೇಸ್ ಅಂಕವನ್ನು ಈ ವರ್ಷ ಮಾರ್ಕ್ಸ್ ರದ್ದು ಮಾಡಲಾಗಿದೆ. ಹಾಗಾಗಿ, ಈ ವರ್ಷ ವಿದ್ಯಾರ್ಥಿಗಳಿಗೆ ಗ್ರೇಸ್ ಅಂಕ ನೀಡಲಾಗುವುದಿಲ್ಲ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಅವರು, “ಎಸ್ಎಸ್ಎಲ್ಸಿ ಪರೀಕ್ಷೆ ಶೀಘ್ರವೇ ಬರಲಿದೆ. ಕಳೆದ ವರ್ಷ ವೆಬ್ಕಾಸ್ಟ್ ಮಾಡುವುದರಿಂದ ಕಡಿಮೆ ಫಲಿತಾಂಶ ಬಂದಿತ್ತು. ಈ ಹಿನ್ನೆಲೆಯಲ್ಲಿ ಫಲಿತಾಂಶ ವೃದ್ಧಿಗೆ ಏನು ಮಾಡಬೇಕು ಅಂತ ಚರ್ಚೆ ಮಾಡಿದ್ದೇವೆ. ಈ ನಿಟ್ಟಿನಲ್ಲಿ ಇಲಾಖೆ ಕೆಲಸ ಮಾಡಿದೆ. ಪ್ರತಿ ಜಿಲ್ಲೆಯ ಸಿಇಒಗಳು ಈ ಬಾರಿ ನಮಗೆ ಹೆಚ್ಚು ಸಹಕಾರ ಕೊಟ್ಟಿದ್ದಾರೆ. ಮಕ್ಕಳಿಗೆ ಪರೀಕ್ಷಾ ಸಿದ್ಧತೆಗೆ ನಾವು ಮಾರ್ಗೋಪಾಯಗಳನ್ನು ಸಿದ್ಧ ಮಾಡಿದ್ದೇವೆ” ಎಂದು ತಿಳಿಸಿದ್ದಾರೆ.
ಮೂರು ರೀತಿಯ ಪರೀಕ್ಷಾ ಪದ್ಧತಿ ಈಗ ಮಕ್ಕಳಿಗೆ ಅರ್ಥವಾಗಿದೆ. ಒಂದು ವೇಳೆ ಅನುತ್ತೀರ್ಣರಾದರೆ ಮತ್ತೆ ಶಾಲೆಗೆ ಸೇರುವ ವ್ಯವಸ್ಥೆಯೂ ಕೂಡಾ ಈಗ ಮಕ್ಕಳಿಗೆ ಅರ್ಥವಾಗಿದೆ. ವಿದ್ಯಾರ್ಥಿಗಳಿಗೆ ಇರುವ ಸಮಸ್ಯೆ ಬಗ್ಗೆ ಇವತ್ತು ವಿಮರ್ಶೆ ನಡೆಸಲು ಸಭೆ ಮಾಡಿದ್ದೇವೆ. ಎಲ್ಲ ಜಿಲ್ಲೆಯ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತ್ ಸಿಇಓಗಳ ಜೊತೆ ಚರ್ಚೆ ಮಾಡಿದ್ದೇವೆ ಎಂದು ತಿಳಿಸಿದರು.

ಈ ಬಾರಿ ಎಸ್ಎಸ್ಎಲ್ಸಿ ಫಲಿತಾಂಶ ಜಾಸ್ತಿಯಾಗಲಿದೆ. ಮಕ್ಕಳಿಗೆ ಒತ್ತಡ ಹಾಕಬಾರದು ಎಂದು ಸ್ಪಷ್ಟವಾದ ಸೂಚನೆ ನೀಡಿದ್ದೇನೆ. ಗ್ರೇಸ್ ಅಂಕ ಕೊಡುವ ವಿಚಾರದಲ್ಲಿ ಈ ಹಿಂದೆ ನಡೆಸಿದ್ದ ಸಭೆಯಲ್ಲಿ ಸಿಎಂ ಅವರು ಸಭೆಯಲ್ಲಿ ಕೋಪಗೊಂಡಿದ್ದರು. ಗ್ರೇಸ್ ಅಂಕ ಕೊಡಬಾರದಿತ್ತು ಅಂತ ಹೇಳಿದ್ದರು. ಈ ಬಾರಿ ಯಾವುದೇ ಕಾರಣಕ್ಕೂ ಗ್ರೇಸ್ ಅಂಕ ಕೊಡುವುದಿಲ್ಲ. ಕೋವಿಡ್ ಹಿನ್ನೆಲೆಯಲ್ಲಿ ಕೊಟ್ಟಿದ್ದ 10% ಗ್ರೇಸ್ ಅಂಕದ ಬಗ್ಗೆ ಪರಿಶೀಲನೆ ಮಾಡುತ್ತೇವೆ. ಆದರೆ ನಾವು ಕಳೆದ ಬಾರಿ ವೆಬ್ಕಾಸ್ಟಿಂಗ್ ಹಿನ್ನೆಲೆಯಲ್ಲಿ ಕೊಟ್ಟಿದ್ದ 10% ಗ್ರೇಸ್ ಅಂಕ ಈ ಬಾರಿ ಕೊಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಎಸ್ಎಸ್ಎಲ್ಸಿ ಫಲಿತಾಂಶ ವೃದ್ಧಿಗೆ ಅನೇಕ ಕಾರ್ಯಕ್ರಮ ಮಾಡುತ್ತಿದ್ದೇವೆ. ಒಂದು ದಿನಕ್ಕೆ ಒಂದು ಅಂಕ ಎಂಬ ಕಾರ್ಯಕ್ರಮ ಇದಾಗಿದೆ. ಮಕ್ಕಳಿಗೆ ಬೆಳಗ್ಗೆ ಫೋನ್ ಮಾಡಿ ಏಳಿಸಿ ಓದಿಸುವ ಕಾರ್ಯಕ್ರಮ. ವಿಶೇಷ ತರಗತಿಗಳನ್ನು ಮಾಡುವ ಮೂಲಕ ಅಭ್ಯಾಸ ಮಾಡುವ ಕಾರ್ಯಕ್ರಮ ಮಾಡಿದ್ದೇವೆ. ಕಿರು ಪರೀಕ್ಷೆಗಳು, ಪೂರ್ವ ಸಿದ್ಧತಾ ಪರೀಕ್ಷೆಗಳು ಮಾಡುವ ಕೆಲಸ ಮಾಡಿದ್ದಾರೆ. ಸಿಇಒಗಳೇ ಪ್ರಶ್ನೆ ಪತ್ರಿಕೆ ಸಿದ್ಧ ಮಾಡಿ ಪರೀಕ್ಷೆ ಮಾಡಿದ್ದಾರೆ. 2-3 ಶಾಲೆಗಳಿಗೆ ಒಬ್ಬ ಅಧಿಕಾರಿಗಳ ನೇತೃತ್ವಗಳನ್ನು ನೇಮಕ ಮಾಡಿ ಕಲಿಕೆ ಅಭಿವೃದ್ಧಿ ಮಾಡುವ ಕೆಲಸ ಮಾಡಿದ್ದೇವೆ. ಗುಂಪು ಅಧ್ಯಯನ ಮಾಡುವ ಕಾರ್ಯಕ್ರಮ ಮಾಡುತ್ತಿದ್ದೇವೆ ಎಂದು ಸಚಿವರು ಹೇಳಿದರು.
ಕಳೆದ ಬಾರಿ ಶೇ. 10 ಕೃಪಾಂಕ ಅಂಕ ಶಿಕ್ಷಣ ಇಲಾಖೆ ಕೊಟ್ಟಿತ್ತು. ಕೋವಿಡ್ ಹಿನ್ನೆಲೆ ಮೊದಲೇ ಶೇ.10 ಕೃಪಾಂಕ ಅಂಕ ಇತ್ತು. ಅದರ ಜೊತೆಗೆ ಮತ್ತೆ ಶೇ. 10 ಕೃಪಾಂಕ ಅಂಕ ಕೊಡಲಾಗಿತ್ತು. ಒಟ್ಟು ಶೇ. 20 ಕೃಪಾಂಕ ಅಂಕ ಕೊಟ್ಟಿದ್ದು ಬಾರಿ ವಿವಾದ ಆಗಿತ್ತು. ಈ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಕೊಟ್ಟಿದ್ದ ಶೇ. 10 ಕೃಪಾಂಕ ಅಂಕ ರದ್ದು ಮಾಡಿದ್ದೇವೆ ಎಂದು ಶಿಕ್ಷಣ ಸಚಿವರು ತಿಳಿಸಿದರು.
ಮಕ್ಕಳು ಸ್ಮಾರ್ಟ್ ಕ್ಲಾಸ್ ಬೇಕು ಅಂತ ಕೇಳುತ್ತಿದ್ದಾರೆ. ಇಂಟರ್ನೆಟ್ ವ್ಯವಸ್ಥೆ ಬೇಕು ಅಂತ ವಿದ್ಯಾರ್ಥಿಗಳು ಕೇಳಿದ್ದಾರೆ. ಇದರ ವ್ಯವಸ್ಥೆ ಶಿಕ್ಷಣ ಇಲಾಖೆ ಮಾಡಲಿದೆ. ಕೌಶಲ್ಯ ವಿಷಯಗಳನ್ನು ಕಲಿಸುವ ಕಾರ್ಯಕ್ರಮ ಶೀಘ್ರವೇ ಪ್ರಾರಂಭ ಮಾಡಲಿದ್ದೇವೆ ಎಂದು ಮಧು ಬಂಗಾರಪ್ಪ ಹೇಳಿದರು.
ಇದನ್ನು ಓದಿದ್ದೀರಾ?: ಸಿದ್ಧಲಿಂಗಯ್ಯನವರ ಕಾವ್ಯ: ಸಾಮಾಜಿಕ ಕ್ರೋಧದ ನೆಲೆಯಿಂದ ಆಧ್ಯಾತ್ಮಿಕ ಅನ್ವೇಷಣೆಯ ಕಡೆಗೆ
ಅನಧಿಕೃತ ಶಾಲೆಗಳ ಪಟ್ಟಿ ಆಗುತ್ತಿದೆ. ಅಂತಿಮ ಮಾಡುತ್ತಿದ್ದೇವೆ. ಶಾಲೆ ಮಾನ್ಯತೆ ನವೀಕರಣ ವಿಚಾರದಲ್ಲಿ ನಿಯಮಗಳ ಸಡಿಲದ ಬಗ್ಗೆ ಚರ್ಚೆ ಮಾಡುತ್ತಿದ್ದೇವೆ. ಕಟ್ಟಡ ಕನ್ವರ್ಷನ್, ನವೀಕರಣ, ಅಗ್ನಿಶಾಮಕ ಸೇರಿ ಇರುವ ಗೊಂದಲ ನಿವಾರಣೆಗೆ ಸೂಚನೆ ನೀಡಿದ್ದೇನೆ. ಶಾಲೆಯಿರುವ ಜಮೀನನಲ್ಲಿ ಮನೆ ಕಟ್ಟಿಕೊಂಡಿದ್ದರೆ ಏನು ಮಾಡಬೇಕು ಕೆಳುವವರ ಬಗ್ಗೆ ಮಾಲೀಕರ ಬಗ್ಗೆ ಚರ್ಚೆ ಆಗುತ್ತಿದೆ. ಅನಧಿಕೃತ ಶಾಲೆ ವಿಚಾರದಲ್ಲಿ ಏಕಾಏಕಿ ನಿರ್ಧಾರ ಮಾಡಿದರೆ ಮಕ್ಕಳ ಮೇಲೆ ಪರಿಣಾಮ ಆಗುತ್ತದೆ. ದೊಡ್ಡ ದೊಡ್ಡ ಶಾಲೆಗಳೇ ತಪ್ಪು ಮಾಡಿವೆ. ಅವುಗಳನ್ನು ಸರಿ ಮಾಡೋ ಕೆಲಸ ಮಾಡುತ್ತಿದ್ದೇವೆ ಎಂದು ಶಿಕ್ಷಣ ಸಚಿವರು ತಿಳಿಸಿದರು.
ಪರೀಕ್ಷೆಗೆ ಹಿಜಾಬ್ ಅನುಮತಿ ನೀಡುವ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವರು, ಈ ವಿಷಯ ಕೋರ್ಟ್ನಲ್ಲಿದೆ. ಈ ಬಗ್ಗೆ ಮಾತಾಡುವುದಿಲ್ಲ. ಅನುಮತಿ ಕೊಡುವ ಬಗ್ಗೆ ಗೃಹ ಸಚಿವರ ಜೊತೆ ಚರ್ಚೆ ಮಾಡಿ ನಿರ್ಧಾರ ಮಾಡುತ್ತೇವೆ ಎಂದರು.
