- ಪ್ರಯಾಣ ದರ ಹೆಚ್ಚಳ ಕುರಿತು ಆಯೋಗ ರಚಿಸಲು ವರದಿ
- ನಿತ್ಯ ಸರ್ಕಾರಿ ಬಸ್ಗಳಲ್ಲಿ 1.20 ಕೋಟಿ ಜನರು ಪ್ರಯಾಣ
ರಾಜ್ಯದಲ್ಲಿ ಸಾರಿಗೆ ಪ್ರಯಾಣ ದರ ಹೆಚ್ಚಳ ಕುರಿತಂತೆ ಆಯೋಗ ರಚನೆಗಾಗಿ ಮಾಜಿ ಐಎಎಸ್ ಅಧಿಕಾರಿ ಶ್ರೀನಿವಾಸ್ ಮೂರ್ತಿ ಅವರು ನಾಲ್ಕು ನಿಗಮಗಳಿಗೆ ಸೇರಿದಂತೆ 150 ಪುಟಗಳ ವರದಿ ನೀಡಿದ್ದಾರೆ. ಆದರೆ, ಪ್ರಯಾಣಿಕರ ಹಿತವನ್ನು ಗಮನದಲ್ಲಿಟ್ಟುಕೊಂಡು ಸದ್ಯಕ್ಕೆ ಬಸ್ ಪ್ರಯಾಣ ದರ ಏರಿಕೆ ಮಾಡುವ ಪ್ರಸ್ತಾಪವನ್ನು ಮಂದೂಡಲಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.
ದೇವನಹಳ್ಳಿ ಪಟ್ಟಣದ ಸಂತೆ ಮೈದಾನದ ಹಿಂಭಾಗದಲ್ಲಿರುವ ಬಿಎಂಟಿಸಿ ಬಸ್ ಡಿಪೊಗೆ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿ, “ಪ್ರತಿನಿತ್ಯ ಸರ್ಕಾರಿ ಬಸ್ಗಳನ್ನು 1.20 ಕೋಟಿ ಜನರು ಪ್ರಯಾಣ ಮಾಡುತ್ತಿದ್ದಾರೆ. ಆಯೋಗ ರಚನೆ ಮಾಡಿದರೆ ಪ್ರಯಾಣ ದರ ಹೆಚ್ಚು ಮಾಡಬೇಕಾಗುತ್ತದೆ” ಎಂದರು.
“ಪ್ರತಿ ವರ್ಷ ಕೃಷಿ, ಶಿಕ್ಷಣಕ್ಕಾಗಿ ಸಾವಿರಾರು ಕೋಟಿ ಸರ್ಕಾರ ಖರ್ಚು ಮಾಡುತ್ತದೆ. ಅದೇ ರೀತಿ ಸಾರಿಗೆಗೂ ವ್ಯಯ ಮಾಡುತ್ತೇವೆ. ಪ್ರಯಾಣ ದರವನ್ನು ಹೆಚ್ಚಳ ಮಾಡುವುದರಿಂದ ಶ್ರೀಸಾಮಾನ್ಯರಿಗೆ ತೊಂದರೆಯಾಗುತ್ತದೆ. ರಾಜ್ಯ ಸಾರಿಗೆ ಸಂಸ್ಥೆಯೂ ಸೇವಾ ಮನೋಭಾವದಿಂದ ನಡೆಯುತ್ತಿದ್ದು, ಲಾಭದ ಉದ್ದೇಶವಿಲ್ಲ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಮಂಗನಿಗೆ ಸಾರಾಯಿ ಕುಡಿಸಿದ ಹಾಗೆ ಯತ್ನಾಳ್ ಮಾತು: ಮುರುಗೇಶ್ ನಿರಾಣಿ ಕಿಡಿ
“ಬರ ಇರುವುದರಿಂದ ಈ ಬಾರಿ ದಸರಾವನ್ನು ಸರಳವಾಗಿ ಆಚರಣೆ ಮಾಡಲಾಗಿದೆ. ಹೀಗಾಗಿ ಟಿಪ್ಪು ಜಯಂತಿ ಆಚರಣೆ ಮಾಡಲಾಗುತ್ತಿಲ್ಲ” ಎಂದು ತಿಳಿಸಿದರು.
“ಯಾವ ಮಾಹಿತಿ ಆಧಾರದಲ್ಲಿ ಶಾಮನೂರು ಶಿವಶಂಕರಪ್ಪ ಜಾತಿ ಗಣತಿ ವರದಿ ಬಗ್ಗೆ ಪ್ರತಿಕ್ರಿಯಿಸಿದ್ದಾರೋ ಗೊತ್ತಿಲ್ಲ. ಈವರೆಗೂ ಜಾತಿ ಗಣತಿಯ ವರದಿ ರಾಜ್ಯ ಸರ್ಕಾರ ಮಂಡನೆ ಮಾಡಿಲ್ಲ. ವರದಿಯಲ್ಲಿ ಏನಿದೆ ಎಂಬುದು ನನಗೆ ತಿಳಿದಿಲ್ಲ” ಎಂದರು.