ರಾಜ್ಯಾದ್ಯಂತ ರಣಬಿಸಿಲು ಹೆಚ್ಚಾಗುತ್ತಿದೆ. ಕಳೆದ ವರ್ಷವೇ ಬಿಸಿಲು ದಾಖಲೆ ಕಂಡಿತ್ತು. ಸುಡು ಬಿಸಿಲಿಗೆ ಜನರು ಕಂಗೆಟ್ಟು ಹೋಗಿದ್ದರು. ಇದೀಗ ಕಳೆದ ವರ್ಷಕ್ಕಿಂತ ಈ ವರ್ಷವೂ ಹೆಚ್ಚು ಬಿಸಿಲಿರುತ್ತದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.
ಚಳಿಗಾಲ ಪೂರ್ಣವಾಗಿ ಮುಗಿಯದಿದ್ದರೂ ಬಿಸಿಲಿನ ತಾಪಮಾನ ಗಣನೀಯ ಏರಿಕೆ ಕಂಡಿದೆ. ಬೆಳಿಗ್ಗೆ ಎಂಟು ಗಂಟೆಗೆಲ್ಲ ಬಿಸಿಲಿನ ತೀವ್ರತೆ ಹೆಚ್ಚಾಗುತ್ತಿದೆ. ಮಧ್ಯಾಹ್ನ 12 ಗಂಟೆ ಹೊತ್ತಿಗೆ ಹೊರಗೆ ನಡೆದಾಡಲೂ ಸಾಧ್ಯವಾಗದಷ್ಟು ಬಿಸಿಲಿನ ಉಷ್ಣತೆ ಹೆಚ್ಚಿರುತ್ತದೆ.
ಈ ವರ್ಷ ಫೆಬ್ರವರಿಯಲ್ಲಿ ವಾಡಿಕೆಗಿಂತ 2.5 ಡಿಗ್ರಿ ಸೆಲ್ಸಿಯಸ್ ಬಿಸಿಲು ಅಧಿಕವಾಗಿದೆ. ಇದು ಹೀಗೆ ಮುಂದುವರಿದು ಮಾರ್ಚ್ ನಲ್ಲಿ ತಾಪಮಾನ ದಾಖಲೆ ಮಟ್ಟಕ್ಕೆ ಮುಟ್ಟಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈ ಬಿಸಿಲಿನ ಜೊತೆಗೆ ಪೂರ್ವ ಮುಂಗಾರು ಋತುವಿನಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ.
ತೀವ್ರ ಬಿಸಿಲಿಗೆ ಗಾಳಿ ಬೀಸುವ ದಿಕ್ಕು ಕಾರಣ ಎನ್ನಲಾಗಿದೆ. ಚಳಿಗಾಲದಲ್ಲಿ ಗಾಳಿಯ ದಿಕ್ಕು ಉತ್ತರದಿಂದ ಬೀಸಿದರೆ ಚಳಿ ತೀವ್ರತೆ ಹೆಚ್ಚುತ್ತದೆ. ಪೂರ್ವ ದಿಕ್ಕಿನಿಂದ ಗಾಳಿ ಬೀಸಿದಾಗ ವಾತಾವರಣ ಉಷ್ಣದಿಂದ ಕೂಡಿರುತ್ತದೆ. ಮುಂದಿನ ದಿನಗಳಲ್ಲಿ ನೀರಿಗೂ ಹಾಹಾಕಾರ ಉಂಟಾಗಲಿದೆ ಎಂದು ತಜ್ಞರು ವರದಿ ನೀಡಿದ್ದಾರೆ. ಈಗಿನ ಬಿಸಿಲು ನೋಡಿದರೆ ಮುಂದಿನ 2-3 ತಿಂಗಳೂ ಹೇಗಪ್ಪ ಬದುಕು ಸಾಗಿಸೋದು ಅನ್ನೋ ಚಿಂತೆ ಜನರನ್ನು ಕಾಡುತ್ತಿದೆ. ಈಗಾಗಲೇ ವಾಡಿಕೆಗಿಂತ ಹೆಚ್ಚಿನ ಉಷ್ಣಾಂಶ ದಾಖಲಾಗಿದೆ. ಸದ್ಯಕ್ಕೆ ಮುಂದಿನ ಐದು ದಿನ ಇನ್ನಷ್ಟು ಉಷ್ಣಾಂಶ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಬಯಲುಸೀಮೆ , ಉತ್ತರ ಕರ್ನಾಟಕ ಮಾತ್ರವಲ್ಲದೆ, ಬೆಂಗಳೂರಲ್ಲೂ ಬಿಸಿಲಿನ ಬೇಗೆ ಹೆಚ್ಚಾಗಿದೆ. ಮಾರ್ಚ್ನಿಂದ ಬೇಸಿಗೆ ಆರಂಭಗೊಳ್ಳಲಿದ್ದು, ಈ ಬಾರಿ ಸಾಮಾನ್ಯಕ್ಕಿಂತ ಹೆಚ್ಚಿನ ಬಿಸಿಲು ಹಾಗೂ ಸೆಕೆ ಇರಲಿದೆ. ಬಹುತೇಕ ಜಿಲ್ಲೆಗಳಲ್ಲಿ ಫೆಬ್ರವರಿ ಮೊದಲ ವಾರವೇ 32ರಿಂದ 37 ಡಿಗ್ರಿಯವರೆಗೂ ತಾಪಮಾನ ದಾಖಲಾಗುತ್ತಿದ್ದು, ಬೇಸಿಗೆ ಕಾಲದಲ್ಲಿ ಅಂದರೆ ಮಾರ್ಚ್ ತಿಂಗಳಲ್ಲಿ ಇನ್ಯಾವ ಪರಿಸ್ಥಿತಿ ಇರುತ್ತೆ ಎನ್ನುವುದು ನೀವೇ ಊಹಿಸಿ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಸರ್ಕಾರಿ ಶಾಲೆಗೆ ಮಕ್ಕಳನ್ನು ಸೇರಿಸಿ ಎಂದು ಹೇಳುವ ಮುನ್ನ ಶಾಲೆಗಳ ಸ್ಥಿತಿ ಗಮನಿಸಿ ಸಚಿವರೇ
ಕರಾವಳಿ ಕರ್ನಾಟಕದಾದ್ಯಂತ ಗರಿಷ್ಠ ತಾಪಮಾನ 33-34 ಡಿಗ್ರಿ ಸೆಲ್ಸಿಯಸ್, ಉತ್ತರ ಒಳನಾಡಿನ ಕರ್ನಾಟಕದ ಪ್ರದೇಶಗಳಲ್ಲಿ 34 ರಿಂದ 37°C, ಆಗುಂಬೆ, ಬೆಂಗಳೂರು, ಚಿಕ್ಕಮಗಳೂರು, ಹಾಸನ, ಮೈಸೂರು, ಚಿಂತಾಮಣಿ ಮತ್ತು ಮಡಿಕೇರಿಗಳಲ್ಲಿ 31-33°C ಮತ್ತು ದಕ್ಷಿಣ ಒಳನಾಡಿನ ಚಾಮರಾಜನಗರ, ಚಿತ್ರದುರ್ಗ, ದಾವಣಗೆರೆ, ಮಂಡ್ಯ ಮತ್ತು ಶಿವಮೊಗ್ಗಗಳಲ್ಲಿ 34-37°C ನಷ್ಟು ದಾಖಲಾಗಿದೆ.
ಮುಂದಿನ ಒಂದು ವಾರದಲ್ಲಿ ಕರ್ನಾಟಕದ ಉತ್ತರ ಒಳನಾಡಿನಲ್ಲಿ ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 2-4°C ಮತ್ತು ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ 2-3°C ರಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಕರ್ನಾಟಕದ ಕರಾವಳಿ ಮತ್ತು ಉತ್ತರ ಒಳನಾಡಿನಲ್ಲಿ ಕನಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 2-3°C ರಷ್ಟು ಹೆಚ್ಚಾಗುವ ಮತ್ತು ದಕ್ಷಿಣ ಒಳನಾಡಿನಲ್ಲಿ ಸಾಮಾನ್ಯಕ್ಕಿಂತ 1-2°C ರಷ್ಟು ಕಡಿಮೆಯಾಗುವ ಸಾಧ್ಯತೆಯಿದೆ.
ಬೆಂಗಳೂರು ನಗರಕ್ಕೂ ಕೂಡ ಹವಾಮಾನ ಇಲಾಕೆ ಅಲರ್ಟ್ ನೀಡಿದ್ದು, ಬೆಳಿಗ್ಗೆ ಹೆಚ್ಚಿನ ಚಳಿ ಇರುತ್ತೆ ಬೆಳಗ್ಗೆ 10 ಗಂಟೆಯ ನಂತರ ಬಿಸಿಲ ತಾಪ ಹೆಚ್ಚಿರುತ್ತೆ ಎಂದು ಸೂಚಿಸಿಲಾಗಿದೆ. ಶಿವರಾತ್ರಿ ಸಮೀಪಿಸುತ್ತಿದ್ದು ಬೇಸಿಗೆ ಆರಂಭದಲ್ಲಿಯೇ ಬಯಲು ಸೀಮೆ ಜಿಲ್ಲೆಗಳಲ್ಲಿ ತಾಪಮಾನ ಏರುತ್ತಿದೆ.
ಬಿಸಿಲೂರುಗಳು ಎಂದು ಹೆಸರಾದ ಮಧ್ಯ ಕರ್ನಾಟಕದ ದಾವಣಗೆರೆ, ಚಿತ್ರದುರ್ಗ, ಬಳ್ಳಾರಿ, ರಾಯಚೂರು ಜಿಲ್ಲೆಗಳಲ್ಲಿ ಕಳೆದು ಒಂದು ವಾರದಿಂದ ತಾಪಮಾನ ಏರುಗತಿಯಲ್ಲಿದೆ. ದಾವಣಗೆರೆಯಲ್ಲಿ ಕಳೆದ ವಾರ 32, 33 ಡಿಗ್ರಿ ಇದ್ದ ತಾಪಮಾನ ಈ ವಾರಾಂತ್ಯ ಶನಿವಾರಕ್ಕೆ 35 ಡಿಗ್ರಿ ಮುಟ್ಟಿದ್ದು, ಸೂರ್ಯ ಧಗಧಗ ಉರಿಯುತ್ತಿದ್ದಾನೆ. ಮುಂದಿನ ನಾಲ್ಕು ದಿನ 36 ರಿಂದ 37 ಡಿಗ್ರಿಗೆ ಏರಿಕೆ ಆಗಲಿದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ.
ತಂಪು ಪಾನೀಯ ಮೊರೆ
ಬೇಸಿಗೆ ಬಿಸಿಲಿಗೆ ದಾಹ ಹೆಚ್ಚುವುದರ ಜತೆ ಬೆವರು ಬಸಿಯುತ್ತದೆ. ಹಾಗಾಗಿ ಈಗಾಗಲೇ ಜನ ತಂಪು ಪಾನೀಯ, ಎಳನೀರು ಮೊರೆ ಹೋಗುತ್ತಿದ್ದಾರೆ. ಇನ್ನು ಫ್ಯಾನ್, ಎಸಿ, ಕೂಲರ್ ಬಳಕೆಯೂ ಹೆಚ್ಚುತ್ತಿದೆ. ವಿದ್ಯುತ್ಗೂ ಬೇಡಿಕೆ ಹೆಚ್ಚಲಿದೆ. ಜತೆಗೆ ಬಿಸಿಲು ಹೆಚ್ಚಾದರೆ ವಾಂತಿ, ಬೇಧಿ ಪ್ರಕರಣಗಳು, ಸನ್ ಸ್ಟ್ರೋಕ್ ಮುಂತಾದ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಹಾಗಾಗಿ ಜನತೆ ತಮ್ಮ ಆರೋಗ್ಯದ ಕಡೆಗೂ ಗಮನ ಹರಿಸಬೇಕಿದೆ ಎಂದು ವೈದ್ಯರು ಸಲಹೆ ನೀಡಿದ್ದಾರೆ.
