ಮುಖ್ಯಮಂತ್ರಿಗಳ ಬದಲಾವಣೆಯ ವಿಷಯ ಮಾಧ್ಯಮಗಳ ಸೃಷ್ಟಿ. ಊಹಾಪೋಹಗಳಿಗೆ ಆಸ್ಪದವಿಲ್ಲ. ಕರ್ನಾಟಕದಲ್ಲಿ ಸಿಎಂ ಹುದ್ದೆ ಖಾಲಿ ಇಲ್ಲ. ರಾಜ್ಯದ ಮುಖ್ಯಮಂತ್ರಿ ನಾನೇ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ರಾಜ್ಯದಲ್ಲಿ ಮುಖ್ಯಮಂತ್ರಿಗಳ ಅಧಿಕಾರ ಹಸ್ತಾಂತರಕ್ಕೆ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲೇ ಅವರು ಇಂದು (ಜು.10) ನವದೆಹಲಿಯ ಕರ್ನಾಟಕ ಭವನದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಈ ವಿಚಾರವನ್ನು ಮತ್ತೆ ಸ್ಪಷ್ಟಪಡಿಸಿದರು.
“ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಅವರು ರಾಜ್ಯದಲ್ಲಿ ಶಾಸಕರನ್ನು ಭೇಟಿ ಮಾಡುತ್ತಿರುವ ಉದ್ದೇಶ ಮುಖ್ಯಮಂತ್ರಿಗಳ ಬದಲಾವಣೆಯ ವಿಷಯವಲ್ಲ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿಯಾದವರೇ ಮುಖ್ಯಮಂತ್ರಿಗಳ ಬದಲಾವಣೆಯ ಪ್ರಶ್ನೆಯನ್ನು ಅಲ್ಲಗೆಳೆದ ಮೇಲೆ, ಈ ವಿಷಯದ ಬಗ್ಗೆ ಊಹಾಪೋಹಗಳಿಗೆ ಆಸ್ಪದವಿಲ್ಲ. ಈ ಊಹಾಪೋಹಗಳನ್ನು ಮಾಧ್ಯಮಗಳ ಸೃಷ್ಟಿಯಾಗಿರುವುದೇ ಹೊರತು, ಕಾಂಗ್ರೆಸ್ ವಲಯದಲ್ಲಿ ಮುಖ್ಯಮಂತ್ರಿಗಳ ಬದಲಾವಣೆಯ ವಿಷಯ ಚರ್ಚೆಯೇ ಆಗಿಲ್ಲ” ಎಂದರು.
ಅಧಿಕಾರ ಹಸ್ತಾಂತರದ ಬಗ್ಗೆ ಯಾವುದೇ ಒಪ್ಪಂದವಾಗಿಲ್ಲ
“ಈ ವಿಷಯದ ಬಗ್ಗೆ ಪಕ್ಷದ ವರಿಷ್ಠರ ತೀರ್ಮಾನವನ್ನು ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳು ಸಹಮತಿಸಬೇಕೆಂದು ಸ್ಪಷ್ಟ ಸೂಚನೆ ನೀಡಿದ್ದು, ವರಿಷ್ಠರ ತೀರ್ಮಾನಕ್ಕೆ ತಲೆಬಾಗುವುದಾಗಿ ನಾವಿಬ್ಬರೂ ಹಲವು ಬಾರಿ ತಿಳಿಸಿದ್ದೇನೆ. ಸರ್ಕಾರಕ್ಕೆ ಎರಡೂವರೆ ವರ್ಷವಾಗಿರುವ ಸಂದರ್ಭದಲ್ಲಿ ಅಧಿಕಾರ ಹಸ್ತಾಂತರದ ವಿಷಯವೇಳುವುದು ಸಹಜ. ಆದರೆ ಈ ಬಗ್ಗೆ ಯಾವುದೇ ಒಪ್ಪಂದವಾಗಿಲ್ಲ. ಇತ್ತೀಚೆಗಷ್ಟೇ ‘ಐದು ವರ್ಷವೂ ನಾನೇ ಸಿಎಂ ಆಗಿ ಮುಂದುವರಿಯಲಿದ್ದೇನೆ’ ಎಂದು ಸ್ಪಷ್ಟಪಡಿಸಿದ ಮೇಲೆ ಮಾಧ್ಯಮಗಳಲ್ಲಿ ಇಂತಹ ಗಾಳಿಸುದ್ದಿಗಳು ಏಕೆ ಹಬ್ಬಿಸಲಾಗುತ್ತಿದೆ” ಎಂದು ಮರು ಪ್ರಶ್ನಿಸಿದರು.
“ಖುದ್ದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೇ ಮುಖ್ಯಮಂತ್ರಿಗಳ ಸ್ಥಾನ ಖಾಲಿಯಿಲ್ಲವೇಂದು ಅವರೇ ತಿಳಿಸಿದ್ದಾರೆ. ಕೆಲವು ಶಾಸಕರು ತಮ್ಮ ವೈಯಕ್ತಿಕ ಅಭಿಪ್ರಾಯಗಳನ್ನು ತಿಳಿಸುತ್ತಿದ್ದಾರೆಯೇ ಹೊರತು, ಇದು ಪಕ್ಷದ ತೀರ್ಮಾನವಲ್ಲ. ಅಧಿಕಾರ ಹಸ್ತಾಂತರದ ಊಹೆಗೆ ಯಾವುದೇ ಅರ್ಥವಿಲ್ಲ” ಎಂದರು.