ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರ ವರ್ತನೆ, ನಡವಳಿಕೆಯಿಂದ ಸಮಾಜದ ಜನರು ಬೇಸತ್ತಿದ್ದಾರೆ. ಅವರನ್ನು ಮಠ ಬಿಟ್ಟು ಹೋಗಿ ಎಂದು ನಾವಾಗಿಯೇ ಹೇಳುವುದಿಲ್ಲ. ಅವರಾಗಿಯೇ ಮಠ ತೊರೆದರೆ ಸಂತೋಷ ಎಂದು ಕಾಂಗ್ರೆಸ್ ಶಾಸಕ ಮತ್ತು ಅಖಿಲ ಭಾರತ ಲಿಂಗಯತ ಪಂಚಮಸಾಲಿ ಸಮಾಜದ ಟ್ರಸ್ಟ್ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ಹೇಳಿದರು.
ಹುಬ್ಬಳ್ಳಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, “ಸಮಾಜದ ಮುಖಂಡರು ಕೂಡಲಸಂಗಮ ಪಂಚಮಸಾಲಿ ಪೀಠಕ್ಕೆ ಪರ್ಯಾಯ ಗುರುಗಳ ನೇಮಕದ ಬಗ್ಗೆ ಚರ್ಚಿಸಿದ್ದಾರೆ. ಆ ಕುರಿತು ವ್ಯವಸ್ಥೆ ಸಹ ನಡೆಯುತ್ತಿದೆ” ಎಂದರು.
“ಟ್ರಸ್ಟ್ ಬೈಲಾ ಪ್ರಕಾರ ಸ್ವಾಮೀಜಿ ಸ್ವಂತ ಆಸ್ತಿ ಹೊಂದುವಂತಿಲ್ಲ. ಅದರೆ ಬೆಳಗಾವಿಯಲ್ಲಿ ಎರಡು ಮನೆ, ಹುಬ್ಬಳ್ಳಿ-ಬೆಂಗಳೂರಲ್ಲಿ ತಲಾ ಒಂದೊಂದು ಮನೆ ಅವರ ಹೆಸರಲ್ಲಿ ಇವೆ. 2019ರಲ್ಲಿ ಸ್ವಾಮೀಜಿ ಟ್ರಸ್ಟ್ ವಿರುದ್ಧವಾಗಿ ನಡೆದುಕೊಂಡಾಗ ನೋಟಿಸ್ ನೀಡಲಾಗಿತ್ತು. ತಪ್ಪು ತಿದ್ದಿಕೊಂಡು ಮುನ್ನಡೆಯುತ್ತೇನೆ ಎಂದು ಅವರು ಪತ್ರ ಕೊಟ್ಟಿದ್ದರು. ಆದರೂ, ಅವರು ಮಠದಲ್ಲಿ ಸರಿಯಾಗಿ ಇರದೆ, ಸಂಚಾರದಲ್ಲಿ ನಿರತರಾಗುತ್ತಿದ್ದರು” ಎಂದು ತಿಳಿಸಿದರು.
“2008ರಲ್ಲಿ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರನ್ನು ಲಿಂಗಾಯತ ಪಂಚಮಸಾಲಿ ಮಠಕ್ಕೆ ಪೀಠಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು. ಬಸವತತ್ವ ಪ್ರಚಾರ ಹಾಗೂ ಸಮಾಜದ ಏಳಿಗೆಗೆ ಶ್ರಮಿಸಬೇಕಿದ್ದ ಸ್ವಾಮೀಜಿ ನಡುವಳಿಕೆಯಲ್ಲಿ ತೀವ್ರ ಬದಲಾವಣೆಗಳು ಕಂಡುಬಂದವು. ಮಠದಲ್ಲಿ ಇದ್ದು ಬಸವತತ್ವ ಪ್ರಚಾರ ಮಾಡದೆ, ಊರೂರು ಅಡ್ಡಾಡುತ್ತ, ರಾಜಕೀಯ ಪ್ರಚಾರದ ಹಿಂದೆ ಬಿದ್ದಿದ್ದರು” ಎಂದು ಆರೋಪಿಸಿದರು.
“ಮೂಲ ಉದ್ದೇಶ ಮರೆತು, ರಾಜಕೀಯ ಪಕ್ಷದ ಬ್ಯಾನರ್ ಅಡಿ ಕುಳ್ಳುವುದು, ವರ್ಗಾವಣೆಗೆ ಶಿಫಾರಸ್ಸು ಮಾಡುವುದು, ಯಾವುದೋ ಒಬ್ಬ ವ್ಯಕ್ತಿ ಪರ ಮಾತನಾಡುವುದು ಮಾಡುತ್ತಿದ್ದಾರೆ. ಭಕ್ತರಿಗೆ ಸ್ವಾಮೀಜಿ ದರ್ಶನವಾಗುತ್ತಿರಲಿಲ್ಲ. ಆಗಾಗ, ಮಠಕ್ಕೆ ಕೆಲವು ನರಿ, ನಾಯಿಗಳು ಬರುತ್ತಿದ್ದವು. ಅನೈತಿಕ ಚಟುವಟಿಕೆಗಳು ನಡೆಯುತ್ತಿದ್ದವು. ಟ್ರಸ್ಟ್ ಅಧ್ಯಕ್ಷನಾಗಿ ಮಠದ ರಕ್ಷಣೆಗೆ ಹಿರಿಯರೊಂದಿಗೆ ಚರ್ಚಿಸಿ ನಾನೇ ಗೇಟ್ ನಿರ್ಮಿಸಿ, ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದೆ” ಎಂದು ತಿಳಿಸಿದರು.
‘ಸ್ವಾಮೀಜಿ ಅನಾರೋಗ್ಯದಿಂದ ಆಸ್ಪತ್ರೆ ಸೇರಿದ್ದಾರೆ ಎನ್ನುವುದಕ್ಕಿಂತ, ಅದು ಸಹ ಪ್ರಚಾರದ ಒಂದು ಗಿಮ್ಮಿಕ್ಕು ಆಗಿರಬಹುದು’ ಎಂದು ವ್ಯಂಗ್ಯವಾಡಿದರು.