ಪ್ರಸ್ತುತ ವರುಣನ ಕೃಪೆಯಿಂದ ಹಾಗೂ ಸರ್ಕಾರ ಕೈಗೊಂಡ ಮುನ್ನೆಚ್ಚರಿಕೆ ಕ್ರಮಗಳಿಂದ ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆ ಹೆಚ್ಚಾಗಿದ್ದು, ಜಲ ವಿದ್ಯುತ್, ಪವನ ಶಕ್ತಿ ಹಾಗೂ ಸೌರಶಕ್ತಿಯಂತ ವಿದ್ಯುತ್ ಉತ್ಪಾದನಾ ಕ್ರಮಗಳಿಂದ ರಾಜ್ಯವು ವಿದ್ಯುತ್ ಉತ್ಪಾದನೆಯಲ್ಲಿ ಮೊದಲನೆ ಸ್ಥಾನಕ್ಕೆ ಏರಲಿದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದರು.
ನಗರದ ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಗುರುವಾರ ನಡೆದ ಇಂಧನ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಬಳಿಕ ಅವರು ಮಾತನಾಡಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ “ಕುಸುಮ ಸೌರ ವಿದ್ಯುತ್ ಬಿ ಮತ್ತು ಸಿ ಯೋಜನೆ”ಯ ಅನುಷ್ಠಾನವು ನಮ್ಮ ರಾಜ್ಯದ ರೈತರ ವಿದ್ಯುತ್ ಬೇಡಿಕೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲಿದೆ. ಈ ಯೋಜನೆಯ ಯಶಸ್ವಿ ಅನುಷ್ಠಾನಕ್ಕಾಗಿ ನಮ್ಮ ಸರ್ಕಾರ ಸಹಾಯಧನವನ್ನು ಹೆಚ್ಚಿಸಿದೆ. ಈ ಯೋಜನೆಗೆ ಕೇಂದ್ರ ಸರ್ಕಾರ ಶೇ. 30 ರಷ್ಟು ಸಹಾಯಧನ ನೀಡುತ್ತಿದ್ದು, ಪ್ರಸ್ತುತ ರಾಜ್ಯದಲ್ಲಿ ಒಟ್ಟು ಶೇ. 80 ರಷ್ಟು ಸಹಾಯಧನವನ್ನು ಕುಸುಮ ಯೋಜನೆಯಡಿ ರೈತರ ನೀರಾವರಿ ಉದ್ದೇಶಗಳಿಗೆ ನೀಡಲು ಉದ್ದೇಶಿಸಲಾಗಿದೆ. ಇದರಿಂದ ವಿದ್ಯುತ್ ಕೊರತೆಯ ಸಂಕಷ್ಟಗಳನ್ನು ತಪ್ಪಿಸಬಹುದಾಗಿದೆ. ಆದ್ದರಿಂದ ರೈತರು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿ ಯೋಜನೆಯ ಸದುಪಯೋಗ ಪಡೆದುಕೊಳ್ಳಿ ಎಂದು ಮನವಿ ಮಾಡಿದರು.
ಕಳೆದ ವರ್ಷ ರಾಜ್ಯದಲ್ಲಿ ಬರಗಾಲ ಪರಿಸ್ಥಿತಿ ಎದುರಾಗಿದ್ದರಿಂದ ಬೇರೆ ರಾಜ್ಯಗಳಿಂದ ವಿದ್ಯುತ್ ಖರೀದಿಸಿ ವಿದ್ಯುತ್ ಪೂರೈಕೆ ಮಾಡುವಂತಹ ಪರಿಸ್ಥಿತಿ ಉಂಟಾಗಿತ್ತು, ಅಲ್ಲದೆ ಉತ್ತರ ಪ್ರದೇಶ ಮತ್ತು ಪಂಜಾಬ್ ರಾಜ್ಯಗಳಿಂದ ವಿದ್ಯುತ್ ಶಕ್ತಿಯನ್ನು ಬೇಸಿಗೆಯಲ್ಲಿ ಸಾಲವಾಗಿ ಪಡೆದು ಮರು ದಿನಗಳಲ್ಲಿ ವಾಪಸ್ಸು ಮಾಡುವ ಒಪ್ಪಂದದ ಮೇರೆಗೆ ವಿದ್ಯುತ್ ಪಡೆಯಲಾಗಿತ್ತು. ಅದರಂತೆ ಬೇರೆ ರಾಜ್ಯಗಳಿಗೆ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ ಎಂದು ಹೇಳಿದರು.
ಕುಸುಮ ಸೌರ ವಿದ್ಯುತ್ ಯೋಜನೆಯಡಿ ನೋಂದಾಯಿತ ರೈತರಿಗೆ ಕೊಳವೆ ಬಾವಿ ಮತ್ತು ನೀರು ಇದ್ದಲ್ಲಿ ಸೌರ ವಿದ್ಯುತ್ ಪಂಪ್ ಸೆಟ್ ಮತ್ತು ಪ್ಯಾನಲ್ ಬೋರ್ಡ್ ಸಹಿತ ಇತರ ಪರಿಕರಗಳನ್ನು ಸರ್ಕಾರ ನೀಡಲಿದೆ. ಅದಕ್ಕಾಗಿ ಅರ್ಹ ಹಾಗೂ ಮಾನ್ಯತೆ ಪಡೆದ ಗುತ್ತಿಗೆದಾರರನ್ನು ಗುರುತಿಸಲಾಗಿದೆ. ಜೊತೆಗೆ ಸ್ಥಳೀಯವಾಗಿ 4-5 ಮೆಗಾವ್ಯಾಟ್ ಸೌರ ವಿದ್ಯುತ್ ಉತ್ಪಾದಿಸಲು ವಿದ್ಯುತ್ ಉಪಕೇಂದ್ರಗಳನ್ನು ಸ್ಥಾಪಿಸಲು 20-30 ಎಕರೆ ಜಾಗವನ್ನು ತಾಲ್ಲೂಕುವಾರು ನೀಡುವಂತೆ ಎಲ್ಲಾ ಜಿಲ್ಲಾ ಉಸ್ತುವಾರಿ ಸಚಿವರಿಗೆ, ಜಿಲ್ಲಾಧಿಕಾರಿಗಳಿಗೆ ತಿಳಿಸಲಾಗಿದೆ. ಅದರಂತೆ ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ 871 ಎಕರೆ ಜಾಗವನ್ನು ಗುರ್ತಿಸಿ ನೀಡುವಂತೆ ತಿಳಿಸಲಾಗಿದೆ. ಈ ಪೈಕಿ ಈಗಾಗಲೇ 240 ಎಕರೆ ಜಾಗವನ್ನು ನೀಡಲಾಗಿದೆ. ಈ ಜಾಗದಲ್ಲಿ ಮೊದಲನೆ ಹಂತದಲ್ಲಿ 18 ಉಪ ಕೇಂದ್ರಗಳಿಂದ 137 ಮೆಗಾವ್ಯಾಟ್ ಹಾಗೂ 2ನೇ ಹಂತದಲ್ಲಿ 6 ಉಪಕೇಂದ್ರಗಳಿಂದ 37 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಿ ಜಿಲ್ಲೆಯಲ್ಲಿ ಒಟ್ಟು 174 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಲಾಗುವುದು. ಈ ರೀತಿ ಉತ್ಪಾದನೆಯಾದ ವಿದ್ಯುತ್ ನ್ನು ವಿದ್ಯುತ್ ಉಪ ಕೇಂದ್ರದಿಂದ 500 ಮೀಟರ್ ಅಂತರದ ಸ್ಥಳೀಯ ರೈತರಿಗೆ, ಸರ್ಕಾರಿ ಶಾಲೆ, ಅಂಗನವಾಡಿಗಳು ಹಾಗೂ ಇತರ ಸರ್ಕಾರಿ ಕಚೇರಿಗಳಿಗೆ ವಿದ್ಯುತ್ ಅನ್ನು ಪೂರೈಸಲಾಗುವುದು. ಉಳಿದ ವಿದ್ಯುತ್ ಅನ್ನು ಗಿಡ್ ಗಳ ಮೂಲಕ ಬೇರೆ ಉದ್ದೇಶಗಳಿಗೆ ಬಳಸಿಕೊಳ್ಳುವ ಗುರಿ ಹೊಂದಲಾಗಿದೆ ಎಂದು ಸವಿಸ್ತಾರವಾಗಿ ಮಾಹಿತಿ ನೀಡಿದರು.
ದಿಬ್ಬೂರು ಮತ್ತು ಕೇತೇನಹಳ್ಳಿ ಮಾರ್ಗದಲ್ಲಿ ವಿದ್ಯುತ್ ವ್ಯತ್ಯಯದ ಸಮಸ್ಯೆಯು ಹೆಚ್ಚಿರುವುದು ಗಮನಕ್ಕೆ ಬಂದಿದೆ. ಈ ತಿಂಗಳ 31ನೇ ತಾರೀಖಿನ ಒಳಗಾಗಿ ಆ ಸಮಸ್ಯೆಯನ್ನು ಪರಿಹರಿಸಿ ನಿರಂತರವಾಗಿ ವಿದ್ಯುತ್ ಪೂರೈಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಜೊತೆಗೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಇಂಧನ ಇಲಾಖೆಯ ವೃತ್ತ ಕಚೇರಿಯನ್ನು ತೆರೆಯುವಂತೆ ಹಾಗೂ ಗೌರಿಬಿದನೂರಿನಲ್ಲಿ ವಿಭಾಗೀಯ ಕಚೇರಿಯನ್ನು ಮತ್ತು 220 ಕೆ.ವಿ. ಸಾಮರ್ತ್ಯದ ವಿದ್ಯುತ್ ಉಪಕೇಂದ್ರ ತೆರೆಯಲು ಸ್ಥಳೀಯ ಜನಪ್ರತಿನಿಧಿಗಳು, ಸಚಿವರು, ಶಾಸಕರು ಮನವಿ ಮಾಡಿದ್ದಾರೆ. ಆ ಎಲ್ಲಾ ಮನವಿಗಳನ್ನು ಪರಿಶೀಲಿಸಿ ಸೂಕ್ತ ಕ್ರಮವಹಿಸುವುದಾಗಿ ಇಂಧನ ಸಚಿವರು ಭರವಸೆ ನೀಡಿದರು.
ಕಬ್ಬಿಣದ ವಿದ್ಯುತ್ ಕಂಬಗಳನ್ನು, ಹಾಳಾದ ವಿದ್ಯುತ್ ಕಂಬಗಳನ್ನು ತೆರವುಗೊಳಿಸಬೇಕು. ಆ ಕಂಬಗಳನ್ನು ಸೂಕ್ತ ವಿಲೆವಾರಿ ಮಾಡಿ ಹಣವನ್ನು ಸರ್ಕಾರಕ್ಕೆ ಜಮೆ ಮಾಡಬೇಕು. ವಿದ್ಯುತ್ ಪರಿವರ್ತಕಗಳು ಸುಟ್ಟು ಹೋದರೆ ಅಥವಾ ದುರಸ್ತಿಗೆ ಬಂದಿದ್ದರೆ ನಗರ ಪ್ರದೇಶಗಳಲ್ಲಿ 24 ಗಂಟೆಗಳಲ್ಲಿ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ 48 ತಾಸುಗಳ ಒಳಗೆ ಬದಲಾಯಿಸಬೇಕು. ಒಟ್ಟಾರೆ 72 ಗಂಟೆಯ ಒಳಗೆ ವಿದ್ಯುತ್ ಪೂರೈಕೆ ಸಮಸ್ಯೆಗಳನ್ನು ಪರಿಹರಿಸಲು ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಸಚಿವರು ತಿಳಿಸಿದರು.
ಸಭೆಯಲ್ಲಿ ಉನ್ನತ ಶಿಕ್ಷಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್, ಚಿಕ್ಕಬಳ್ಳಾಪುರ ನಗರ ಶಾಸಕ ಪಿ.ಇ.ಪ್ರದೀಪ್ ಈಶ್ವರ್, ಗೌರಿಬಿದನೂರು ಶಾಸಕ ಕೆ.ಹೆಚ್.ಪುಟ್ಟಸ್ವಾಮಿ ಗೌಡ, ಇಂಧನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ, ಕ.ವಿ.ಪ್ರ.ನಿ.ನಿಗಮದ ವ್ಯವಸ್ಥಾಪಕ ನಿರ್ದೇಶಕ ಪಂಕಜ್ ಕುಮಾರ್ ಪಾಂಡೆ, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ್ ಬಿಳಗಿ, ಬೆ.ವಿ.ಕಂ (ತಾಂತ್ರಿಕ) ನಿರ್ದೇಶಕ ಹೆಚ್.ಜೆ.ರಮೇಶ್, ಜಿಲ್ಲಾಧಿಕಾರಿ ಪಿ.ಎನ್ ರವೀಂದ್ರ, ಜಿಪಂ ಸಿಇಒ ಪ್ರಕಾಶ್ ಜಿ.ಟಿ.ನಿಟ್ಟಾಲಿ, ಎಸ್ಪಿ ಕುಶಲ್ ಚೌಕ್ಸೆ, ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಬಿ.ಆರ್.ರಮೇಶ್, ಅಪರ ಜಿಲ್ಲಾಧಿಕಾರಿ ಡಾ.ಎನ್.ಭಾಸ್ಕರ್, ಉಪವಿಭಾಗಾಧಿಕಾರಿ ಅಪೂರ್ವ ಬಿದರಿ, ಬೆಂಗಳೂರಿನ ಮುಖ್ಯ ಇಂಜಿನಿಯರ್ ಕೆ.ವಿ.ಗೋವಿಂದಪ್ಪ, ತಹಸೀಲ್ದಾರರು, ಬೆಸ್ಕಾಂ ಅಧಿಕಾರಿಗಳು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.