ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಚಚಡಿ ಗ್ರಾಮದಲ್ಲಿ ಕಲುಷಿತ ನೀರು ಕುಡಿದ ಪರಿಣಾಮ ಒಂದೇ ದಿನ 41 ಮಂದಿ ಅಸ್ವಸ್ಥಗೊಂಡ ಘಟನೆ ನಡೆದಿದೆ.
ಬೋರ್ ವೆಲ್ ಪೈಪಿನಲ್ಲಿ ಕಲುಷಿತ ನೀರು ಸೇರಿಕೊಂಡಿದ್ದರಿಂದ ವಾಂತಿ–ಭೇದಿ ಕಾಣಿಸಿಕೊಂಡಿದ್ದು, ಗ್ರಾಮದ 41 ಮಂದಿ ಅಸ್ವಸ್ಥರಾಗಿದ್ದು, ಮೂವರನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ, ಮೂವರನ್ನು ಬೈಲಹೊಂಗಲ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ಚಚಡಿ ಗ್ರಾಮದಲ್ಲಿ ಪಿಡಿಒ ನಿರ್ಲಕ್ಷ್ಯ ವಹಿಸಿದ್ದರಿಂದ ಈ ಸಮಸ್ಯೆ ಉಂಟಾಗಿರುವುದಾಗಿ ಗ್ರಾಮಸ್ಥರು ಆರೋಪಿಸಿದ್ದಾರೆ. ಗ್ರಾಮದಲ್ಲಿ ನೀರು ಶುದ್ಧೀಕರಣ ಘಟಕಗಳು ಇದ್ದರೂ ಸಹ ಅವುಗಳನ್ನು ಸರಿಯಾಗಿ ನಿರ್ವಹಣೆ ಮಾಡಿಲ್ಲ. ವಾಂತಿ ಭೇದಿ ಸಮಸ್ಯೆ ಕಂಡು ಬಂದಾಗ ಸಮಸ್ಯೆಗೆ ಸ್ಪಂದಿಸಿರಲಿಲ್ಲ. ಗ್ರಾಮ ಪಂಚಾಯತ್ ನ ನಿರ್ಲಕ್ಷ್ಯದಿಂದಾಗಿ ಜನರು ಅಸ್ವಸ್ಥರಾಗಿ ಆಸ್ಪತ್ರೆಗೆ ಸೇರಿದ್ದಾರೆ ಎಂದು ದೂರಿದ್ದಾರೆ.
ಈ ಘಟನೆಯಲ್ಲಿ ತೀವ್ರವಾಗಿ ಅಸ್ವಸ್ಥರಾಗಿದ್ದ ಈರವ್ವ ಗಾಳಿಮಠ (63) ಅವರನ್ನು ಜಿಲ್ಲಾಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ ಸೇರಿಸಲಾಗಿದೆ. ಇನ್ನಿಬ್ಬರು ಒಳರೋಗಿಗಳಾಗಿ ದಾಖಲಾಗಿದ್ದಾರೆ. ಉಳಿದವರು ಚಚಡಿ ಹಾಗೂ ಇಂಚಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಒಳರೋಗಿಗಳಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ವಿಷಯ ತಿಳಿದು ಗ್ರಾಮಕ್ಕೆ ಧಾವಿಸಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಹೇಶ ಕೋಣಿ ತುರ್ತು ಚಿಕಿತ್ಸೆಯ ವ್ಯವಸ್ಥೆ ಮಾಡಿದರು.
ಸವದತ್ತಿ ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಯಶವಂತಕುಮಾರ್ ಮಾತನಾಡಿ, ‘ಸಮಸ್ಯೆ ಉಲ್ಬಣವಾಗುತ್ತಿದ್ದಂತೆ ಎಚ್ಚರಿಕೆ ಕ್ರಮ ವಹಿಸಲಾಗಿದೆ. ಗ್ರಾಮದ ಬೋರ್ವೆಲ್ಗಳ ನೀರನ್ನು ತಪಾಸಣೆಗೆ ಕಳಿಸಲಾಗಿದೆ. ಸೋಮವಾರ ಗ್ರಾಮಕ್ಕೆ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಸಲಾಗಿದೆ. ಓವರ್ಹೆಡ್ ಟ್ಯಾಂಕಿನಿಂದ ನೀರು ಸ್ಥಗಿತ ಮಾಡಲಾಗಿದೆ’ ಎಂದರು.
ನೀರಿನ ಟ್ಯಾಂಕನ್ನು ಸಂಪೂರ್ಣ ಖಾಲಿ ಮಾಡಿ, ಒಣಗಿಸಿ ಮತ್ತೆ ನೀರು ಭರ್ತಿ ಮಾಡಲಾಗುವುದು. ಆ ನೀರನ್ನು ಕೂಡ ನಳಗಳ ಮೂಲಕ ಹರಿಬಿಟ್ಟು ಮತ್ತೆ ಟ್ಯಾಂಕ್ ಖಾಲಿ ಮಾಡಲಾಗುವುದು. ಇದರಿಂದ ಟ್ಯಾಂಕ್ ಅಥವಾ ನಳಗಳಲ್ಲಿ ಮಲಿನ ನೀರು ಸೇರಿಕೊಂಡಿದ್ದರೆ ಸ್ವಚ್ಛವಾಗುತ್ತದೆ. ಮತ್ತೊಮ್ಮೆ ತಪಾಸಣೆ ಮಾಡಿದ ಬಳಿಕ ನೀರು ಪೂರೈಸಲಾಗುವುದು ಎಂದು ತಿಳಿಸಿದ್ದಾರೆ.
ಪೈಪ್ಲೈನ್ಗೆ ಸೇರಿದ ಚರಂಡಿ ನೀರು ಗ್ರಾಮದ ಬೋರ್ವೆಲ್ಗಳ ಮೂಲಕ ಓವರ್ಹೆಡ್ ಟ್ಯಾಂಕಿಗೆ ನೀರು ತುಂಬಿಸಲಾಗುತ್ತದೆ. ಅಲ್ಲಿಂದ ಮನೆಮನೆಗೆ ನಳಗಳ ಮೂಲಕ ಹರಿಸಲಾಗುತ್ತದೆ. ಮನೆಗಳಿಗೆ ನೀರು ಸರಬರಾಜು ಮಾಡುವ ಪೈಪ್ಲೈನಿನಲ್ಲಿ ಚರಂಡಿ ನೀರು ಸೇರಿಕೊಂಡಿದ್ದರಿಂದ ಈಗ ಅವಘಡ ಸಂಭವಿಸಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಸದ್ಯ ವೀರಭದ್ರೇಶ್ವರ ದೇವಸ್ಥಾನದ ಸುತ್ತಲಿನ ಪ್ರದೇಶದಲ್ಲಿ ಸಮಸ್ಯೆ ಉಲ್ಬಣವಾಗಿದೆ. ಇಡೀ ಊರಿಗೆ ಹಬ್ಬುವ ಮುನ್ನವೇ ಕ್ರಮ ವಹಿಸಬೇಕು ಎಂದೂ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
