ಕೊಪ್ಪಳ ತಾಲ್ಲೂಕಿನ ಕಿನ್ನಾಳ ಗ್ರಾಮದಲ್ಲಿ ಏಪ್ರಿಲ್ನಲ್ಲಿ ನಡೆದಿದ್ದ 7 ವರ್ಷದ ಅನುಶ್ರೀ ಮಡಿವಾಳರ ಎಂಬ ಬಾಲಕಿಯ ಕೊಲೆ ಪ್ರಕರಣ ಭೇದಿಸಿದ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಿ ಭಾನುವಾರ ಬಂಧಿಸಿದ್ದಾರೆ.
ಗ್ರಾಮದ ಸಿದ್ದಲಿಂಗಯ್ಯ ನಾಯ್ಕಲ್ ಎಂಬಾತ ಆರೋಪಿ ಬಾಲಕಿಯ ಮನೆ ಪಕ್ಕದಲ್ಲಿಯೇ ವಾಸವಾಗಿದ್ದ. ಗ್ರಾಮದ ರಾಘವೇಂದ್ರ ಮಡಿವಾಳರ ಅವರ ಪುತ್ರಿ ಅನುಶ್ರೀ ಏಪ್ರಿಲ್ 19ರಂದು ಮಧ್ಯಾಹ್ನ ಕಾಣೆಯಾಗಿದ್ದಳು. ಎರಡು ದಿನಗಳ ಬಳಿಕ ಶವವಾಗಿ ಪತ್ತೆಯಾಗಿದ್ದಳು. ಗುಟ್ಕಾ ತಂದುಕೊಡದ ಕಾರಣಕ್ಕೆ ಆರೋಪಿ ಕೃತ್ಯ ಎಸಗಿದ್ದಾನೆ ಎನ್ನುವ ಮಾಹಿತಿ ತನಿಖೆಯಿಂದ ಗೊತ್ತಾಗಿದೆ.
“ಆರೋಪಿ ಸಿದ್ದಲಿಂಗಯ್ಯ ಘಟನೆ ನಡೆದ ಬೆಳಿಗ್ಗೆ ಒಂದು ಸಲ ಅನುಶ್ರೀಗೆ ಹೇಳಿ ಗುಟ್ಕಾ ತರಿಸಿಕೊಂಡಿದ್ದ. ಅದೇ ದಿನ ಮತ್ತೊಂದು ಸಲ ಗುಟ್ಕಾ ತಂದುಕೊಡುವಂತೆ ಹೇಳಿದಾಗ ಇದಕ್ಕೆ ಅನುಶ್ರೀ ಒಪ್ಪಲಿಲ್ಲ. ಇದೇ ಸಿಟ್ಟಿಗೆ ಆರೋಪಿ ಪಕ್ಕದಲ್ಲಿದ್ದ ಕಟ್ಟಿಗೆಯಿಂದ ಬಾಲಕಿಯ ತಲೆಗೆ ಜೋರಾಗಿ ಹೊಡೆದಿದ್ದರಿಂದ ಅನುಶ್ರೀ ಮೃತಪಟ್ಟಿದ್ದಾಳೆ” ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಜನನಿಬಿಡ ಪ್ರದೇಶದಲ್ಲಿಯೇ ಈ ಘಟನೆ ನಡೆದಿದ್ದರೂ ಆರೋಪಿಯನ್ನು ಪತ್ತೆ ಹಚ್ಚುವುದು ಪೊಲೀಸರಿಗೆ ಸವಾಲಿನ ಕೆಲಸವಾಗಿತ್ತು. ಇದಕ್ಕಾಗಿ ವಿಶೇಷ ತಂಡವನ್ನೂ ರಚಿಸಲಾಗಿತ್ತು.

ಈ ಸುದ್ದಿ ಓದಿದ್ದೀರಾ? ಚುನಾವಣಾ ಫಲಿತಾಂಶಕ್ಕೂ ಪೆಟ್ರೋಲ್, ಡೀಸೆಲ್ ದರ ಏರಿಕೆಗೂ ಸಂಬಂಧವಿಲ್ಲ: ಸಿಎಂ ಸಿದ್ದರಾಮಯ್ಯ
ಕಾರ್ಯಾಚರಣೆಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಹೇಮಂತಕುಮಾರ್ ಆರ್., ಡಿವೈಎಸ್ಪಿ ಮುತ್ತಣ್ಣ ಸರವಗೋಳ, ಮಹಿಳಾ ಠಾಣೆ ಪೊಲೀಸ್ ಇನ್ಸ್ಪೆಕ್ಟರ್ ಆಂಜನೇಯ ಡಿ.ಎಸ್., ಯಲಬುರ್ಗಾ ವೃತ್ತದ ಸಿಪಿಐ ಮೌನೇಶ್ವರ ಪಾಟೀಲ, ಕೊಪ್ಪಳ ಗ್ರಾಮೀಣ ಸಿಪಿಐ ಸುರೇಶ ಡಿ. ತನಿಖೆ ವೇಳೆ ಗ್ರಾಮೀಣ ಠಾಣೆಯ ಪಿಎಸ್ಐ ಡಾಕೇಶ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.