ಬದುಕಿನಲ್ಲಿ ಸಂಕಷ್ಟ ಎದುರಿಸದ ಕುಟುಂಬಗಳು ಸಿಗುವುದು ತುಂಬಾ ಅಪರೂಪ. ಆದರೆ ಕಠಿಣ ಕಷ್ಟದ ದಿನಗಳಲ್ಲಿಯೂ ಎದೆಗುಂದದೆ ಎದುರಿಸಿದ ಬಹುತೇಕ ಕುಟುಂಬಗಳು ಕೂಡ ಬೀದಿಪಾಲಾದ ಉದಾಹರಣೆಗಳಿವೆ. ಆದರೆ ಇಲ್ಲೊಬ್ಬ ಮಹಿಳೆ ಲಾಕ್ ಡೌನ್ ಸಂಕಷ್ಟದ ದಿನಗಳಲ್ಲೇ ಸ್ವಯಂ ಉದ್ಯೋಗ ಸೃಷ್ಟಿಸಿಕೊಂಡು ಸ್ವಾವಲಂಬನೆ ಬದುಕು ರೂಪಿಸಿಕೊಂಡು ಸಮಾಜಕ್ಕೆ ಮಾದರಿಯಾಗಿದ್ದಾರೆ
ಬೀದರ್ ಜಿಲ್ಲೆ ಕಮಲನಗರ ತಾಲೂಕಿನ ಕೊರೆಕಲ್ ಗ್ರಾಮದ ಅಂಬಿಕಾ ವೆಂಕಟ್ ತೋರಣೆಕರ್ ಎಂಬ ದಂಪತಿ ಮನೆಯಲ್ಲೇ ಎಲ್.ಇ.ಡಿ. ಬಲ್ಬ್ ತಯಾರಿಸುವ ವಿಧಾನ ಕಲಿತು ಇದೀಗ ಉತ್ತಮ ಆದಾಯದ ನಿರೀಕ್ಷೆಯಲ್ಲಿದ್ದಾರೆ. ನೆಮ್ಮದಿಯ ಜೀವನ ಕಳೆಯುತ್ತಿದ್ದಾರೆ.
ಗೃಹ ಉದ್ಯಮಿ ಅಂಬಿಕಾ ಓದಿದ್ದು ಬಿಎ, ಪತಿ ವೆಂಕಟ್ ಐಟಿಐ ಮುಗಿಸಿದ್ದಾರೆ. ಊರಿನಲ್ಲಿ ವ್ಯವಸಾಯಕ್ಕೆ ಸ್ವಲ್ಪ ಜಮೀನಿದ್ದರೂ ಉದ್ಯೋಗಕ್ಕಾಗಿ ತೆಲಂಗಾಣದ ಹೈದ್ರಾಬಾದ್ ಗೆ ತೆರಳಿದ್ದರು. ವೃತ್ತಿಯಲ್ಲಿ ಟೇಲರ್ ಆಗಿರುವ ಅಂಬಿಕಾ, ಗಂಡ ವೆಂಕಟ್ ಆಟೋ ಓಡಿಸಿ ಬದುಕು ಸಾಗಿಸುತ್ತಿದ್ದರು. ಆದರೆ ಅನಿರೀಕ್ಷಿತ ಕೋವಿಡ್ ಹೊಡೆತದಿಂದಾಗಿ ಕೆಲಸವಿಲ್ಲದೆ ಬದುಕಿನ ನಿರ್ವಹಣೆ ಕಷ್ಟಕರವಾಗಿತ್ತು. ಅದಕ್ಕಿಂತ ಮುಖ್ಯವಾಗಿ ʼಬರೀ ಜೀವ ಉಳಿದರೆ ಸಾಕಪ್ಪಾʼ ಎಂಬ ಪರಿಸ್ಥಿತಿ ಎದುರಾದಾಗ ಊರಿಗೆ ವಾಪಸ್ ಬರುವುದು ಅನಿವಾರ್ಯವಾಗಿತ್ತು. ಇನ್ನು ಊರಿಗೆ ಬಂದ್ಮೇಲೆ ಜೀವನ ಹೇಗೆ ಮಾಡುವುದು? ಬದುಕಿಗೆ ಏನಾದರೂ ಮಾಡಬೇಕು, ನಾವು ಬದುಕುವ ಜೊತೆಗೆ ನಾಲ್ಕು ಜನರಿಗೆ ಕೆಲಸವೂ ಕೊಡಬೇಕು ಎಂದು ಯೋಚಿಸಿದ ಜೋಡಿಗೆ ದಾರಿ ತೋರಿದ್ದು ಯೂಟ್ಯೂಬ್ ಚಾನೆಲ್.
ಯ್ಯೂಟೂಬ್ ನಿಂದ ಕಲಿಕೆ
ಅಂಬಿಕಾ ಹಾಗೂ ವೆಂಕಟ್ ದಂಪತಿ ಲಾಕ್ ಡೌನ್ ದಿನಗಳಲ್ಲಿ ಮನೆಯಲ್ಲಿದ್ದು ಯ್ಯೂಟೂಬ್ ಮೂಲಕ ಎಲ್ಇಡಿ ದೀಪ ತಯಾರಿಸುವ ವಿಧಾನ ಕಲಿಯಲು ಶುರುಮಾಡಿದರು. ನಂತರ ಮಧ್ಯಪ್ರದೇಶದ ಸತ್ಯಂ ಎಂಬ ಎಲ್ಇಡಿ ದೀಪ ತಯಾರಕರ ಜೊತೆಗೆ ಆನ್ಲೈನ್ ತರಗತಿಯಲ್ಲಿ ಭಾಗವಹಿಸಿ ಕಲಿತರು. ಮಧ್ಯಪ್ರದೇಶದಿಂದ ಕಚ್ಚಾ ಸಾಮಗ್ರಿ ಖರೀದಿಸಿ ತಾವೇ ಮನೆಯಲ್ಲಿ ದೀಪ ತಯಾರಿಸಲು ಮುಂದಾಗಿ ಯಶಸ್ವಿಯೂ ಆಗಿದ್ದಾರೆ.
“ಮೊದ ಮೊದಲು ಬಲ್ಬ್ ತಯಾರಿಸುವಾಗ ಸುಮಾರು ಬಲ್ಬ್ ಹಾಳಾಗಿವೆ, ಆದರೂ ದೃತಿಗೆಡಲಿಲ್ಲ. ಹೊಸ ಸಾಹಸ ಮಾಡಿಯಾದರೂ ಕಲಿತು ಮತ್ತೊಬ್ಬರಿಗೆ ಕೆಲಸ ಕೊಡೋಣ ಎಂದು ಮುಂದುವರೆಸಿ ಕಲಿತಿದ್ದೇವೆ. ಮೂರು ವರ್ಷದ ಹಿಂದೆ ತಯಾರಿಸಿದ ಎಲ್ಇಡಿ ದೀಪ ಇಂದಿಗೂ ನಮ್ಮ ಮನೆಯಲ್ಲಿ ಬೆಳಗುತ್ತಿವೆ. ನಾವು 9 ವ್ಯಾಟ್, 12 ವ್ಯಾಟ್ ಹಾಗೂ 15 ವ್ಯಾಟ್ ದೀಪ ತಯಾರಿಸುತ್ತೇವೆ. 9 ವ್ಯಾಟ್ ನ ದೀಪ 70 ರೂ. 12 ವ್ಯಾಟ್ ನ ದೀಪ 100 ರೂ.ಗೆ ಮಾರಾಟ ಮಾಡುತ್ತೇವೆ. ಕೆಲವು ಗ್ರಾಹಕರು ಮನೆಗೆ ಬಂದು ಖರೀದಿಸುತ್ತಾರೆ. ಹೆಚ್ಚಿನ ಬೇಡಿಕೆಯಿದ್ದರೆ ನಾವೇ ಆಟೋದಲ್ಲಿ ಕೊಂಡೊಯ್ದು ಮನೆ-ಅಂಗಡಿಗಳಿಗೆ ಪೂರೈಸುತ್ತೇವೆ. ಉತ್ತಮ ಗುಣಮಟ್ಟದ ದೀಪ ತಯಾರಿಸುವ ನಾವು ಬಲ್ಬ್ ಗಳಿಗೆ ʼಗ್ಯಾರಂಟಿʼ ಆಧಾರದಲ್ಲಿ ಮಾರಾಟ ಮಾಡುತ್ತೇವೆ. ಹಾಳಾದರೂ ನಾವೇ ರಿಪೇರಿ ಮಾಡಿಕೊಡುತ್ತೇವೆ” ಎನ್ನುತ್ತಾರೆ ಅಂಬಿಕಾ ವೆಂಕಟ್ ಯುವ ದಂಪತಿ.
ʼನಾಗೋಬಾ ಸಂಜೀವಿನಿʼ ಬ್ರಾಂಡ್
“ಈ ಹಿಂದೆ ನಾವು ತಯಾರಿಸಿದ ದೀಪಗಳಿಗೆ ಬೇರೆ ಕಂಪನಿ ಹೆಸರಿನ ಕವರ್ ಹಾಕಿ ಮಾರಾಟ ಮಾಡುತ್ತಿದ್ದೆವು, ಇದೀಗ ನಮ್ಮದೇ ʼನಾಗೋಬಾ ಸಂಜೀವಿನಿʼ ಎಂಬ ಹೆಸರಿನ ಬ್ರಾಂಡ್ ನಿಂದ ಮಾರಾಟ ಮಾಡಲಾಗುತ್ತಿದೆ. ಒಬ್ಬರು ದಿನಕ್ಕೆ 50-100 ಬಲ್ಬ್ ತಯಾರಿಸುತ್ತೇವೆ, ಆದರೆ ಸದ್ಯಕ್ಕೆ ಹೆಚ್ಚಿನ ಬೇಡಿಕೆ ಬರ್ತಾ ಇಲ್ಲ. ಹೆಚ್ಚಿನ ಬೇಡಿಕೆಯಿದ್ದರೆ ಮಹಿಳೆಯರಿಗೆ ಕೆಲಸಕ್ಕೆ ಕೊಟ್ಟು ಸಿದ್ಧಪಡಿಸುತ್ತೇವೆ. ಇದೀಗ ಮೂವರು ಮಹಿಳೆಯರು ಕೆಲಸ ಮಾಡುತ್ತಿದ್ದಾರೆ. ಹೆಚ್ಚಿನ ಬೇಡಿಕೆಯಿದ್ದರೆ ಇನ್ನಷ್ಟು ಮಹಿಳೆಯರಿಗೆ ಕೆಲಸಕ್ಕೆ ತೆಗೆದುಕೊಳ್ಳಬಹುದು. ನಮಗೂ ಹೆಚ್ಚಿನ ಆದಾಯ ಗಳಿಸಲು ಸಾಧ್ಯ” ಎನ್ನುತ್ತಾರೆ ಅಂಬಿಕಾ. ಈ ಕೆಲಸದಿಂದ ನಮಗೆ ತೃಪ್ತಿಯಿದೆ, ಸ್ವಾವಲಂಬನೆ ಬದುಕಿಗೆ ಇದೊಂದು ಆಸರೆಯಾಗಿದೆ ಎಂದು ಖುಷಿ ಹಂಚಿಕೊಂಡಿದ್ದಾರೆ.
“ನಮ್ಮ ಕೆಲಸ ಮೆಚ್ಚಿ ರಿಲಿಯನ್ಸ್ ಫೌಂಡೆಶನ್ ಹಾಗೂ ಡಿಸಿಸಿ ಬ್ಯಾಂಕ್ ಸಾಲದ ನೆರವು ನೀಡಿದೆ. ಹೆಚ್ಚಿನ ಬೇಡಿಕೆಯಿದ್ದರೆ ನಾವು ಎಷ್ಟು ಬೇಕಾದರೂ ಬಲ್ಬ್ ತಯಾರಿಸಬಹುದು. ಆದರೆ ಇನ್ನೂ ನಮ್ಮ ಬ್ರಾಂಡ್ ಗೆ ಹೆಚ್ಚಿನ ಪ್ರಚಾರದ ಅಗತ್ಯವಿದೆ. ಈ ಬಗ್ಗೆ ಜಿಪಂ ಸಿಇಒ ಅವರಿಗೆ ಭೇಟಿಯಾಗಿ ಎಲ್ಲಾ ಗ್ರಾಮದ ಬೀದಿ ದೀಪಕ್ಕೆ ನಮ್ಮದೇ ಬ್ರಾಂಡ್ ಬಳಸುವಂತೆ ತಿಳಿಸಲಾಗಿದೆ. ಗ್ರಾಪಂಗಳೊಂದಿಗೆ ಚರ್ಚಿಸಿ ತಿಳಿಸುವೆ ಎಂದಿದ್ದಾರೆ. ಸ್ಥಳಿಯ ಶಾಸಕ ಪ್ರಭು ಚವ್ಹಾಣ ಅವರು ನಮ್ಮ ಉದ್ಯಮಕ್ಕೆ ಸಹಕರಿಸಿದರೆ ನಮ್ಮ ಕೆಲಸಕ್ಕೆ ಇನ್ನಷ್ಟು ಹುಮ್ಮಸ್ಸು ದೊರೆಯುತ್ತದೆ” ಎಂದು ವೆಂಕಟ್ ಹೇಳುತ್ತಾರೆ.

ಈ ಬಗ್ಗೆ ಕೊರೆಕಲ್ ಗ್ರಾಮ ಪಂಚಾಯತ್ ಪಿಡಿಒ ಈದಿನ.ಕಾಮ್ ದೊಂದಿಗೆ ಮಾತನಾಡಿ, “ಎರಡು ದಿನಗಳ ಹಿಂದೆ ಗ್ರಾಪಂ ಸಾಮನ್ಯ ಸಭೆಗೆ ದೀಪ ತಯಾರಿಸುವ ಅಂಬಿಕಾ ವೆಂಕಟ್ ದಂಪತಿಗೆ ಕರೆಸಿ ಚರ್ಚಿಸಲಾಗಿದೆ. ಮೊದಲು ಕೊರೆಕಲ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಗ್ರಾಮಗಳ ಬೀದಿ ಕಂಬಗಳಿಗೆ ನಿಮ್ಮ ಬ್ರಾಂಡ್ ದೀಪ ಬಳಸೋಣ, ಅವುಗಳ ಗುಣಮಟ್ಟ ಪರಿಶೀಲಿಸಿ ನಂತರ ಇತರೆ ಪಂಚಾಯತ್ ಗಳಿಗೂ ಸಂಪರ್ಕಿಸಿ ಇದೇ ಬಲ್ಬ್ ಬಳಸುವಂತೆ ಹೇಳಲಾಗಿದೆ. ಈ ಸಂಬಂಧ ತಾಲೂಕು ಪಂಚಾಯತ್ ಸಭೆಯಲ್ಲಿ ಚರ್ಚಿಸುವೆ” ಎಂದಿದ್ದಾರೆ.
ನಮ್ಮ ಗ್ರಾಮದ ಯುವ ಜೋಡಿಯೊಂದು ಎಲ್ಇಡಿ ಬಲ್ಬ್ ತಯಾರಿಸುವ ಉದ್ಯಮ ನಡೆಸುತ್ತಿರುವುದು ಖುಷಿಯ ವಿಷಯ. ಬದುಕಿನಲ್ಲಿ ಛಲವಿದ್ದರೆ ಏನು ಬೇಕಾದರೂ ಸಾಧಿಸಬಹುದು ಎನ್ನುವುದಕ್ಕೆ ಅಂಬಿಕಾ ವೆಂಕಟ್ ದಂಪತಿಯೇ ತಾಜಾ ಉದಾಹರಣೆ. ಇವರು ಸಿದ್ಧಪಡಿಸಿದ ಬಲ್ಬ್ ಉತ್ತಮ ಗುಣಮಟ್ಟದಾಗಿವೆ. ಬೇರೆ ಕಂಪನಿಗಳ ದೀಪ ಬಳಸುವ ಬದಲು ನಮ್ಮ ಭಾಗದ ನಮ್ಮ ಊರಿನವರೇ ತಯಾರಿಸಿದ ದೀಪ ಖರೀದಿಸಿ ಬಳಸಿದರೆ ಅವರಿಗೂ ಆರ್ಥಿಕವಾಗಿ ಲಾಭವಾಗಲು ಸಾಧ್ಯ. ಈ ಬಗ್ಗೆ ಸಂಬಂಧಪಟ್ಟ ಗ್ರಾಪಂ, ತಾಪಂ ಅಧಿಕಾರಿಗಳಿಗೆ ತಿಳಿಸಿ ತಾಲೂಕಿನ ಎಲ್ಲಾ ಪಂಚಾಯತ್ ವ್ಯಾಪ್ತಿಯ ಗ್ರಾಮಗಳಲ್ಲಿ ಖರೀಸುವಂತೆ ತಿಳಿಸುವೆ” ಎಂದು ಗ್ರಾಮ ಪಂಚಾಯತ್ ಸದಸ್ಯ ಶಿವಪ್ರತಾಪ ಬಿರಾದರ ಈದಿನ.ಕಾಮ್ ದೊಂದಿಗೆ ಮಾತನಾಡಿ ಹೇಳಿದರು.
ಈ ಸುದ್ದಿ ಓದಿದ್ದೀರಾ ? ಬೀದರ್ | ಅಪ್ರಾಪ್ತ ಮಕ್ಕಳ ಕೈಗೆ ವಾಹನ ನೀಡಿದವರಿಗೆ 25 ಸಾವಿರ ರೂ. ದಂಡ
ಲಾಕ್ ಡೌನ್ ನಲ್ಲಿ ಕೆಲಸ ಕಳೆದುಕೊಂಡ ಅದೆಷ್ಟೋ ಜನರು ಚಿಂತೆಗೀಡಾಗಿದ್ದರು. ಹಲವು ಕುಟುಂಬಗಳು ಆರ್ಥಿಕ ಹೊಡೆತದಿಂದ ದಿಕ್ಕು ತೋಚದೆ ಹೈರಾಣಾಗಿದ್ದವು. ಆದರೆ ಗ್ರಾಮೀಣ ಭಾಗದ ಅಂಬಿಕಾ ವೆಂಕಟ್ ದಂಪತಿ ಆ ಸಂಕಟದ ದಿನಗಳನ್ನೇ ಸವಾಲಾಗಿ ಸ್ವೀಕರಿಸಿ ಸ್ವಂತ ಉದ್ಯಮ ಶುರು ಮಾಡಿ ನಿರುದ್ಯೋಗ ಯುವಕ-ಯುವತಿಯರಿಗೆ ಕೆಲಸ ಕೊಡಲು ಆಲೋಚಿಸಿದ್ದು ಮೆಚ್ಚುವಂಥ ಕಾರ್ಯ. ಎಲೆಮರೆ ಕಾಯಿಯಂತೆ ಸ್ವಂತ ಶ್ರಮದೊಂದಿದೆ ಗೃಹ ಉದ್ಯೋಗ ನಡೆಸುವ ಯುವ ಸಮೂಹಕ್ಕೆ ಸರ್ಕಾರ, ಸಂಘ-ಸಂಸ್ಥೆಗಳು ಆರ್ಥಿಕ ಸಹಕಾರ ನೀಡಲು ಕೈಜೋಡಿಸಬೇಕು. ಸ್ವಯಂ ಉದ್ಯೋಗಿಗಳ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿಕೊಟ್ಟರೆ ದೀರ್ಘಕಾಲ ಜೀವಂತವಾಗಿ ಉಳಿಯಬಹುದು ಎನ್ನುವುದು ಪ್ರಜ್ಞಾವಂತರ ಒತ್ತಾಸೆ.

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.