ರಾಯಚೂರು ಜಿಲ್ಲೆಯನ್ನು ಬರಗಾಲ ಪ್ರದೇಶವೆಂದು ಘೋಷಿಸಬೇಕು ಮತ್ತು ಕಾಲುವೆಗಳಿಗೆ ನೀರು ಹರಿಸಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಘಟಕದಿಂದ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
“ಜಿಲ್ಲೆಯಲ್ಲಿ ಸಾಕಷ್ಟು ರೈತರು ಮಳೆ ನೀರನ್ನೇ ನಂಬಿ ಬಿತ್ತನೆ ಮಾಡಿದ್ದು, ಮಳೆಯಾಗದೆ ಬೆಳೆಗಳು ಒಣಗಿ ಹೋಗುತ್ತಿವೆ. ಸಮರ್ಪಕ ಮಳೆಯಾಗಿಲ್ಲ. ಜಿಲ್ಲೆಯನ್ನು ಬರಗಾಲ ಜಿಲ್ಲೆಯೆಂದು ಘೋಷಣೆ ಮಾಡಬೇಕು” ಎಂದು ಒತ್ತಾಯಿಸಿದರು.
“ತುಂಗಭದ್ರಾ ನದಿಯ ರಾಜಲಬಂಡಾದಲ್ಲಿ ನಿರ್ಮಿಸಿದ ಅಣೆಕಟ್ಟಿನಿಂದ ಕಾಲುವೆಗಳಿಗೆ ನೀರು ಹರಿಸಬೇಕು. ಜಿಲ್ಲೆಯಲ್ಲಿ ರೈತರಿಗೆ 12 ಗಂಟೆ ವಿದ್ಯುತ್ ಸರಬರಾಜು ಮಾಡಬೇಕು. ಚಂದ್ರಬಂಡಾದಿಂದ ಬಾಯಿದೊಡ್ಡಿ ಗ್ರಾಮದ ರಸ್ತೆ ಮಾರ್ಗದ ಬ್ರಿಜ್ ಕಡಿತಗೊಂಡಿದ್ದು, ಕೂಡಲೇ ಕ್ರಮ ವಹಿಸಬೇಕು. ತುಂಗಭದ್ರಾ ಎಡದಂಡೆ ಕಾಲುವೆಯ ಮಟಮಾರಿ, ಯರಗೇರಾ ವ್ಯಾಪ್ತಿಯ ಕಾಲುವೆಗಳಿಗೆ ನೀರು ಹರಿಸಬೇಕು” ಎಂದು ಒತ್ತಾಯಿಸಿದರು.
“ಕೃಷ್ಣಾ ನದಿಯ ನಾರಾಯಣಪೂರ ಬಲದಂಡೆ ಕಾಲುವೆಯ ಕೆಳ ಭಾಗದ ರೈತರಿಗೆ ನೀರು ಒದಗಿಸಿಕೊಡಬೇಕು. ಜಾನುವಾರುಗಳಿಗೆ ನೀರು ಒದಗಿಸಲು ಕೆರೆಗಳಿಗೆ ನೀರು ಹರಿಸಬೇಕು. ಫಸಲ್ ಬಿಮಾ ಯೋಜನೆಯ ಫಲಾನುಭವಗಳಿಗೆ ಹಣ ಪಾವತಿಸಬೇಕು. ತೋಟಗಾರಿಕೆ, ಕೃಷಿ ರೈತ ಸಂಪರ್ಕ ಕೇಂದ್ರಗಳಿಗೆ ಕೃಷಿ ಉಪಕರಣಗಳಾದ ಡ್ರಿಪ್ ಯಂತ್ರಗಳು ಸೇರಿದಂತೆ ಇತರೆ ಸಲಕರಣೆಗಳನ್ನು ಸರ್ಕಾರವೇ ಒದಗಿಸಬೇಕು” ಎಂದು ಮನವಿ ಮಾಡಿದರು.
ಈ ಸುದ್ದಿ ಓದಿದ್ದೀರಾ? ಚಲುವರಾಯಸ್ವಾಮಿ ವಿರುದ್ಧ ಲಂಚ ಆರೋಪದ ಪತ್ರ | ಕೃಷಿ ಇಲಾಖೆಯ ಜಂಟಿ ನಿರ್ದೇಶಕರ ಕೈವಾಡ ಬಯಲು
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಲಕ್ಷ್ಮಣಗೌಡ ಕಡಗಂದೊಡ್ಡಿ, ಗೌರವಾಧ್ಯಕ್ಷ ನರಸಿಂಗ್ ರಾವ್ ಕುಲಕರ್ಣಿ, ಮಜೀದ್ ಸಾಬ್, ಈರೇಶ, ರಮೇಶ, ನರಸರೆಡ್ಡಿ ಬಾಯಿದೊಡ್ಡಿ, ಶ್ರೀಧರ, ತಿಮ್ಮಪ್ಪ ಬಾಪೂರ, ದೇವಪ್ಪ ಜೇಗರಕಲ್, ನರಸಪ್ಪ ವಕ್ರಾಣ, ಖಾಸಿಮ್ ಮಮದಾಪೂರ ಸೇರಿದಂತೆ ಇತರರು ಇದ್ದರು.