ಸರಕು ಸಾಗಾಟದ ದರ ಹೆಚ್ಚಿಸಬೇಕು, ಸ್ಥಳೀಯ ಲಾರಿಗಳಿಗೆ ಆದ್ಯತೆ ನೀಡಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಬಳ್ಳಾರಿ ಲಾರಿ ಮಾಲೀಕರ ಸಂಘದ ವತಿಯಿಂದ ನಡೆಯುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ.
ಬಳ್ಳಾರಿ ನಗರದ ಶಿಡಿಗಿನ ಮೊಳ ಬಳಿಯ ಹಲಕುಂದಿ ಬಳಿಯ ಜಾನಕಿ, ಬಸಾಯಿ ಸ್ಪಾಂಜ್ ಕಾರ್ಖಾನೆ ಎದುರು ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸಲಾಗುತ್ತಿದೆ.
ಲಾರಿ ಸಂಘದ ಮುಖಂಡ ಅಧ್ಯಕ್ಷ ವಿ ಶ್ರೀನಿವಾಸ್ ಮಾತನಾಡಿ, “ಲಾರಿ ಸರಕು ಸಾಗಾಟದ ದರ ಹೆಚ್ಚಿಸಬೇಕು. ಸ್ಥಳೀಯ ಲಾರಿಗಳಿಗೆ ಆದ್ಯತೆ ನೀಡಬೇಕು. ಓವರ್ ಲೋಡ್ ಲಾರಿಗಳನ್ನು ನಿಷೇಧಿಸಬೇಕು. ಕ್ರಮಸಂಖ್ಯೆಯ ಪ್ರಕಾರವಾಗಿ ಸ್ಥಳೀಯ ಲಾರಿಗಳಿಗೆ ಸರಕು ಸಾಗಣೆಗೆ ಅವಕಾಶ ನೀಡಬೇಕೆಂಬುದು ಎಂದು ಪ್ರತಿಭಟಿಸುತ್ತಿದ್ದೇವೆ” ಎಂದು ತಿಳಿಸಿದರು.
ಸ್ಥಳೀಯವಾಗಿ ಅಂದಾಜು ಸಾವಿರದ ಐದುನೂರು ಲಾರಿಗಳು ಇದ್ದು, ನೂರಾರು ಲಾರಿಗಳಿಗೆ ಸರಕು ಸಾಗಣೆ ಸಿಗದೇ ಲಾರಿ ಮಾಲೀಕರು ಭಾರೀ ಪ್ರಮಾಣದ ನಷ್ಟ ಎದುರಿಸುತ್ತಿದ್ದಾರೆ. ಲಾರಿಗಳ ಮಾಸಿಕ ಕಂತು ಕಟ್ಟಲಾಗದೇ, ಆರ್ಥಿಕ ಸಂಕಷ್ಟದಿಂದಾಗಿ ಈಗಾಗಲೇ ಹಲವು ಜನ ಮಾಲೀಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದರು.
ಕಳೆದ ತಿಂಗಳು ಸಂಘದ ವತಿಯಿಂದ ಐದು ದಿನಗಳ ಕಾಲ ಹಗಲು ರಾತ್ರಿ ಶಾಂತಿಯುತ ಮುಷ್ಕರ ನಡೆಸಿ, ಸ್ಪಾಂಜ್ ಕಾರ್ಖಾನೆಗಳಿಗೆ ಒಳಹೊರ ಹೋಗುವ ಲಾರಿಗಳನ್ನು ನಿಲ್ಲಿಸಲಾಗಿತ್ತು. ಆಗ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಸೂಚನೆಯಂತೆ, ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರೀಸ್ನ ಅಧ್ಯಕ್ಷರ ಮಧ್ಯಸ್ಥಿಕೆಯಲ್ಲಿ ಮಾತುಕತೆಯಲ್ಲಿ ನಮ್ಮ ಬೇಡಿಕೆ ಈಡೇರಿಸುತ್ತೇವೆ ಎಂದು ಹೇಳಿದ್ದರು. ತದನಂತರ ಮಾತು ಬದಲಿಸಿ, ಈಗ ಏನಾದರೂ ಮಾಡಿಕೊಳ್ಳಿ ಎನ್ನುತ್ತಿದ್ದಾರೆ. ಹೀಗಾಗಿ ನಮಗೆ ಅನ್ಯಾಯವಾಗಿದ್ದು, ಹೋರಾಟ ಮುಂದುವರೆಸಿದ್ದೇವೆ. ಬೇಡಿಕೆಗಳು ಈಡೇರದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಮಿಂಚು ಶ್ರೀನಿವಾಸ್, ನೂರ್ ಮೊಹಮ್ಮದ್, ಮೆಹಬೂಬ ಬಾಷ, ಪ್ರವೀಣಕುಮಾರ್, ಎಂ.ಡಿ. ಫಯಾಜ್, ನಾಗರಾಜ, ಪೂಜಾದೇವಿ ಶ್ರೀನಿವಾಸುಲು, ರಾಮ್ ಕುಮಾರ್ ಸೇರಿದಂತೆ ಹಲವರು ಹಾಜರಿದ್ದರು.
ವರದಿ : ರಾಧಾಕೃಷ್ಣ, ಸಿಟಿಝನ್ ಜರ್ನಲಿಸ್ಟ್
