ಪ್ರಜಾಪ್ರಭುತ್ವದ ಆಶಯಗಳಿಗೆ ವಿರೋಧವಾಗಿರುವ, ಅವಕಾಶ ವಂಚಿತರ ಸಮುದಾಯಗಳನ್ನು – ಬಡಮಕ್ಕಳನ್ನು ಶಿಕ್ಷಣದಿಂದ ದೂರ ಉಳಿಯುವಂತೆ ಮಾಡುತ್ತಿರುವ ಎನ್ಇಪಿ ವಿರುದ್ಧ ವಿದ್ಯಾರ್ಥಿಗಳ ಹೋರಾಟ ಮುಂದುವರೆಯಲಿ ಎಂದು ಪ್ರಗತಿಪರ ಚಿಂತಕ ದೊರೈರಾಜು ಹೇಳಿದರು.
ತುಮಕೂರಿನಲ್ಲಿ ನಡೆದ ಎಐಡಿಎಸ್ಒದ 8ನೇ ರಾಜ್ಯ ಮಟ್ಟದ ವಿದ್ಯಾರ್ಥಿ ಸಮ್ಮೇಳನದ ಬಹಿರಂಗ ಅಧಿವೇಶನ ಉದ್ಘಾಟಿಸಿ ಮಾತನಾಡಿದರು. “ಇಂದು ಸರ್ಕಾರಗಳು ಕಾರ್ಪೊರೇಟ್ ಬಂಡವಾಳಶಾಹಿಗಳ ಕೈಗೊಂಬೆಗಳಂತೆ ನೀತಿಗಳನ್ನು ಜಾರಿಗೆ ತರುತ್ತಿವೆ. ಹೋರಾಟಗಳಿಲ್ಲದೆ ಇದನ್ನು ಸರಿದಾರಿಗೆ ತರಲು ಸಾಧ್ಯವಿಲ್ಲ. ವಿದ್ಯಾರ್ಥಿ ಯುವಜನರೇ ಈ ಹೋರಾಟಗಳ ಜೀವಾಳ ಎಂಬುದನ್ನು ಇತಿಹಾಸವೇ ಸಾಬೀತು ಮಾಡಿದೆ” ಎಂದು ಅಭಿಪ್ರಾಯಪಟ್ಟರು.
ಸಂಘಟನೆಯ ಅಖಿಲ ಭಾರತ ಅಧ್ಯಕ್ಷ ವಿ ಎನ್ ರಾಜಶೇಖರ್ ಮಾತನಾಡಿ, “ಸಾರ್ವಜನಿಕ ಶಿಕ್ಷಣ ಉಳಿಸಿ ಎಂಬ ಘೋಷಣೆಯೊಂದಿಗೆ ಇಡೀ ರಾಜ್ಯಾದ್ಯಂತ ನಡೆದ ಬೃಹತ್ ಚಳುವಳಿಯ ಪ್ರತಿಫಲವಾಗಿ ಪ್ರಸ್ತುತ ರಾಜ್ಯ ಸರ್ಕಾರವು ಎನ್ಇಪಿಯನ್ನು ರದ್ದುಗೊಳಿಸಿದೆ. ಆದರೆ ಇದೇ ಸರ್ಕಾರ ಎನ್ಇಪಿ ಭಾಗವಾಗಿರುವ ಸರ್ಕಾರಿ ಶಾಲೆಗಳನ್ನು ವಿಲೀನಗೊಳಿಸುವ ಮೂಲಕ ಖಾಸಗಿಯವರಿಗೆ ದತ್ತು ನೀಡಬೇಕೆಂದು ಪ್ರಸ್ತಾಪಿಸಿರುವುದು ಆತಂಕಕಾರಿಯಾಗಿದೆ. ಇದರ ವಿರುದ್ದ ಮತ್ತೆ ವಿದ್ಯಾರ್ಥಿಗಳು ಒಗ್ಗಟ್ಟಾಗಿ ಬೃಹತ್ ಚಳವಳಿ ಕಟ್ಟುವ ತುರ್ತು ಅವಶ್ಯಕತೆ ಎದುರಾಗುತ್ತಿದೆ. ವಿದ್ಯಾರ್ಥಿಗಳು ಇದಕ್ಕೆ ಸಜ್ಜಾಗಬೇಕಾಗಿದೆ” ಎಂದು ಕರೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಬಳ್ಳಾರಿ | ಸರ್ಕಾರಿ ಶಾಲೆಗಳ ವಿಲೀನದ ಪ್ರಸ್ತಾಪ ಅಂಗೀಕರಿಸದಂತೆ ಎಐಡಿಎಸ್ಒ ಆಗ್ರಹ
ಎಐಡಿಎಸ್ಓ ರಾಜ್ಯ ಕಾರ್ಯದರ್ಶಿ ಅಜಯ್ ಕಾಮತ್ ಮಾತನಾಡಿ, “ಈ ದೇಶದ ಮಹಾನ್ ಕ್ರಾಂತಿಕಾರಿಗಳಾದ ಭಗತ್ ಸಿಂಗ್, ನೇತಾಜಿಯವರು ದೇಶದ ಸಾರ್ವಜನಿಕ ಶಿಕ್ಷಣ ವ್ಯವಸ್ಥೆ ಬಲಿಷ್ಠವಾಗಿರಬೇಕೆಂದು ಆಶಿಸಿದ್ದರು. ಅವರ ಈ ಕನಸನ್ನು ನನಸಾಗಿಸುವ ಸಂಕಲ್ಪವನ್ನು ತೆಗೆದುಕೊಳ್ಳುವುದೇ 75ನೇ ಸ್ವಾತಂತ್ರ್ಯ ವರ್ಷಾಚರಣೆಯ ಸಮಾರೋಪದ ನೈಜ ಆಶಯವಾಗಬೇಕಿದೆ” ಎಂದರು.
ಎಐಡಿಎಸ್ಒ ರಾಜ್ಯಾಧ್ಯಕ್ಷೆ ಅಶ್ವಿನಿ ಕೆ ಎಸ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಎಐಡಿಎಸ್ಒ ಅಖಿಲ ಭಾರತ ಪ್ರಧಾನ ಕಾರ್ಯದರ್ಶಿ ಸೌರವ್ ಘೋಷ್, ರಾಜ್ಯ ಸಮಿತಿಯ ಉಪಾಧ್ಯಕ್ಷ ಹಣಮಂತು, ಖಜಾಂಚಿ ಅಭಯಾ ದಿವಾಕರ್ ಹಾಗೂ ಬಳ್ಳಾರಿ ಜಿಲ್ಲೆಯ ನೂರಾರು ವಿದ್ಯಾರ್ಥಿಗಳು ಸೇರಿದಂತೆ ಹಲವು ಜಿಲ್ಲೆಗಳಿಂದ ಆಗಮಿಸಿದ್ದ ಸಾವಿರಾರು ವಿದ್ಯಾರ್ಥಿಗಳು ಇದ್ದರು.